ಪಂಚರಾಜ್ಯಗಳ ಚುನಾವಣೆಯಿಂದ ತೀವ್ರ ಮುಜುಗರಕ್ಕೆ ತುತ್ತಾಗಿರುವ ಕಾಂಗ್ರೆಸ್ನಲ್ಲಿ ಆಡಳಿತಾತ್ಮಕ ಸರ್ಜರಿ ನಡೆಸಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಈ ನಡುವೆ, ‘ಬಲಿಷ್ಠ ನಾಯಕತ್ವ’ಕ್ಕಾಗಿ ಹಿಂದಿನಿಂದಲೂ ಆಗ್ರಹಿಸುತ್ತಾ ಬಂದಿರುವ ಜಿ-23 ನಾಯಕರು, ಚುನಾವಣೆಯ ಸೋಲಿನ ಕುರಿತು ಸಭೆ ನಡೆಸಿದ್ದಾರೆ. ಈ ಸಭೆಯ ಪ್ರಮುಖಾಂಶಗಳ ಕುರಿತು ಚರ್ಚೆ ನಡೆಸಲು ಹಾಗೂ ದೇಶದ ಅತ್ಯಂತ ಹಿರಿಯ ರಾಜಕೀಯ ಪಕ್ಷವನ್ನು ಮತ್ತೆ ಬಲಿಷ್ಟವಾಗಿ ಕಟ್ಟುವ ಸಲುವಾಗಿ ಜಿ-23 ಗುಂಪಿನ ಪ್ರತಿನಿಧಿಯಾಗಿ ಕಾಂಗ್ರೆಸ್ ಹಿರಿಯ ಸದಸ್ಯ, ಮಾಜಿ ರಾಜ್ಯಸಭಾ ಸಂಸದ ಗುಲಾಂ ನಬಿ ಆಝಾದ್ ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ.
ಸದ್ಯಕ್ಕೆ ಪಕ್ಷವನ್ನು ಒಡೆಯುವ ನಿರ್ಧಾರವನ್ನು ಕೈಬಿಟ್ಟಿರುವ ಜಿ-23 ನಾಯಕರು, ಪಕ್ಷ ಒಡೆದಲ್ಲಿ ಅದನ್ನು ತಡೆದುಕೊಳ್ಳುವ ಶಕ್ತಿ ನಾಯಕರಿಗೆ ಇಲ್ಲ. ಪಕ್ಷವು ಮತ್ತಷ್ಟು ಪಾತಾಳಕ್ಕೆ ಇಳಿಯುವುದು ಖಚಿತವೆಂದು ‘ನಂಬಿರುವ’ ಇವರು, ಸಂಘಟಿತ ಹಾಗೂ ಎಲ್ಲರನ್ನೂ ಒಳಗೊಂಡ ನಾಯಕತ್ವ ಮತ್ತು ದೃಢ ನಿರ್ಧಾರ ಕೈಗೊಳ್ಳುವಿಕೆಯ ಪ್ರಸ್ತಾಪವನ್ನು ಸೋನಿಯಾ ಗಾಂಧಿ ಮುಂದಿಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ಬೇಡಿಕೆಗಳಲ್ಲಿ ರಾಷ್ಟ್ರೀಯ ನಾಯಕತ್ವದ ಬದಲಾವಣೆಯ ಪ್ರಸ್ತಾಪವನ್ನೂ ಕೈಬಿಟ್ಟಿರುವ ಸಾಧ್ಯತೆಗಳಿವೆ.
ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಿನ ಕುರಿತು ಪರಾಮರ್ಶೆ ನಡೆಸಲು ಕರೆದ ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಅವರ ಈ ‘ತ್ಯಾಗ’ವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ‘ಸರ್ವಾನುಮತದಿಂದ’ ತಿರಸ್ಕರಿಸಲಾಯಿತು, ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಸಭೆಯ ಬಳಿಕ ಹೇಳಿದ್ದರು.
Also Read : ಕಾಂಗ್ರೆಸ್ ಸೋಲನ್ನೇ ಕಾಯುತ್ತಿದ್ದ ‘ಜಿ-23’ ನಾಯಕರ ಗ್ಯಾಂಗ್ ಅಪ್
ರಾಜಿನಾಮೆ ಬದಲಾಗಿ, ಕಾಂಗ್ರೆಸ್ ಪಕ್ಷದೊಳಗೆ ಕೆಲವು ಬದಲಾವಣೆಗಳನ್ನು ತರಲು ನಿರ್ಧಾರ ಕೈಗೊಳ್ಳುವಂತೆ ಸೋನಿಯಾ ಗಾಂಧಿಯವರಿಗೆ ಸಿಡಬ್ಲ್ಯೂಸಿ ಸಭೆಯಲ್ಲಿ ಇತರ ಸದಸ್ಯರು ಮನವಿ ಮಾಡಿಕೊಂಡಿದ್ದರು. ಇದರ ಫಲವಾಗಿ, ಪಂಚರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ರಾಜಿನಾಮೆಯನ್ನು ಕೇಳಲಾಯಿತು. ಮುಂದುವರೆದು, ಇತರ ಬದಲಾವಣೆಗಳನ್ನು ಪಟ್ಟಿಮಾಡಲು ಜೈರಾಂ ರಮೇಶ್, ಅಜಯ್ ಮಾಕೆನ್, ಅವಿನಾಶ್ ಪಾಂಡೆ ಮತ್ತು ಜೀತೆಂದ್ರ ಸಿಂಗ್ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು. ಇವರೆಲ್ಲರೂ ಹಿಂದಿನಿಂದಲೂ ಗಾಂಧಿ ಪರಿವಾರದೊಂದಿಗೆ ಗುರುತಿಸಿಕೊಂಡವರು.
ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಿರುವ ಜಿ-23 ನಾಯಕರು, ಕಾಂಗ್ರೆಸ್ ಪಕ್ಷದ ಆಯಕಟ್ಟಿನ ಸ್ಥಾನಗಳಿಗೆ ‘ಗಾಂಧಿ ಪರಿವಾರ’ಕ್ಕೆ ನಿಷ್ಠರಾಗಿರುವವರನ್ನು ಮಾತ್ರ ನೇಮಿಸುವುದನ್ನು ಟೀಕಿಸಿದೆ. ಗಾಂಧಿ ಪರಿವಾರಕ್ಕೆ ನಿಷ್ಠೆ ತೋರಿಸುವ ಸಲುವಾಗಿ, ರಾಷ್ಟ್ರ ನಾಯಕರನ್ನು ಎಲ್ಲಾ ತಪ್ಪುಗಳಿಂದಲೂ ದೂರವಿಟ್ಟು, ನಾಮ್ ಕೆ ವಾಸ್ತೆ ಬದಲಾವಣೆಗಳನ್ನು ಮಾತ್ರ ಸೂಚಿಸುವ ಅಪಾಯವಿದೆ ಎಂದು ಜಿ-23 ನಾಯಕರು ಆರೋಪಿಸಿದ್ದಾರೆ.
ಈ ಬಾರಿಯ ಜಿ-23 ಸಭೆಯಲ್ಲಿ ಹಳೆಯ ನಾಯಕರ ಜತೆ, ಗಾಂಧಿ ಪರಿವಾರದ ಆಪ್ತರಾಗಿದ್ದ ಮಣಿಶಂಕರ್ ಅಯ್ಯರ್ ಅವರು ಕೂಡಾ ಗುರುತಿಸಿಕೊಂಡಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ಇನ್ನುಳಿದಂತೆ ಈ ಸಭೆಯಲ್ಲಿ ಕಪಿಲ್ ಸಿಬಲ್, ಮನೀಶ್ ತಿವಾರಿ, ಆನಂದ್ ಶರ್ಮಾ, ಫೃಥ್ವಿರಾಜ್ ಚವ್ಹಾಣ್, ಭೂಪಿಂದರ್ ಹೂಡಾ, ರಾಜ್ ಬಬ್ಬರ್ ಹಾಗೂ ಶಂಕರ್ ಸಿಂಗ್ ವಘೇಲಾ ಅವರೂ ಹಾಜದ್ದರು.
ಈ ಹಿಂದೆ ಜಿ-23 ನಾಯಕರೊಂದಿಗೆ ಗುರುತಿಸಿಕೊಂಡಿದ್ದ ಶಶಿ ತರೂರ್, ಈ ಬಾರಿ ಜಿ-23ಯಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಗುರುತಿಸಿಕೊಂಡಿದ್ದರು.