ಬಿಬಿಎಂಪಿ ಮೇಲೆ ಗುತ್ತಿಗೆದಾರರು 50% ಕಮಿಷಿನ್ ಆರೋಪ ಮಾಡಿದ್ದರು. ಇದಕ್ಕೆ ಬಿಬಿಎಂಪಿ ಸರಿಯಾಗಿ ಟಕ್ಕರ್ ಕೊಡಲು ಮುಂದಾಗಿದೆ. ಗುತ್ತಿಗೆದಾರ ಕಾಮಗಾರಿ ಮೇಲೆ ಅತೃಪ್ತಿ, ದೂರು, ತನಿಖೆ ಇದ್ದರೆ ಕೂಡಲೇ ಬಿಲ್ ಸ್ಟಾಪ್ ಮಾಡಲು ಆದೇಶ ನೀಡಲಾಗಿದೆ. ಈ ಮೂಲಕ ಕೊನೆಗೂ ಒಂದೊಳ್ಳೆ ಕೆಲಸಕ್ಕೆ ಬಿಬಿಎಂಪಿ ಮುಂದಾಗಿದೆ.
ಕಾಮಗಾರಿ ಗುಣಮಟ್ಟ ಹಾಗೂ ಬಿಲ್ ಪಾವತಿಯ ಸುಧಾರಣೆಗೆ ಮತ್ತಷ್ಟು ಕಠಿಣ ಕ್ರಮಗಳ ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ. ಕಾಮಗಾರಿ ಬಗ್ಗೆ ದೂರು ಅಥವಾ ತನಿಖೆಗಳಿದ್ದರೆ ಕೂಡಲೇ ಹಣ ಬಿಡುಗಡೆ ಬ್ಲಾಕ್ ಮಾಡುವ (ತಡೆಹಿಡಿಯುವ) ಹೊಸ ಸಂಪ್ರಾದಾಯಕ್ಕೆ ನಾಂದಿ ಹಾಡಿದೆ. ಇಂಟಿಗ್ರೇಟೆಡ್ ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ಸಿಸ್ಟಮ್ (IFMC) ಮೂಲಕ ಕಾಮಗಾರಿ ಬಿಲ್ ಪಾವತಿ ಮಾಡಲಾಗುತ್ತದೆ.
ಬಿಬಿಎಂಪಿಯಿಂದ ಕೈಗೊಳ್ಳಲಾಗುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಿಲ್ ಪಾವತಿಗೂ ಮುನ್ನ ನಿರ್ದಿಷ್ಟ ಕಾಮಗಾರಿಗೆ ಬಗ್ಗೆ ದೂರು ಸಲ್ಲಿಕೆಯಾದರೆ, ತನಿಖೆ ನಡೆಯುತ್ತಿದ್ದರೆ, ಮುಖ್ಯ ಆಯುಕ್ತರು ಮತ್ತು ವಲಯ ಆಯುಕ್ತರುಗಳು ಸ್ಥಳ ಪರಿಶೀಲನೆ ವೇಳೆ ಕಾಮಗಾರಿ ಕುರಿತು ಅತೃಪ್ತಿ ಇದ್ದರೆ, ಕೂಡಲೇ ಆ ಕಾಮಗಾರಿಯ ಬಿಲ್ ಪಾವತಿಯನ್ನು ಐಎಫ್ಎಂಸಿ ನಲ್ಲಿ ಬ್ಲಾಕ್ ಮಾಡುವ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಈ ರೀತಿ ಬ್ಲಾಕ್ ಮಾಡಲಾದ ಕಾಮಗಾರಿಯ ಬಿಲ್ ಪಾವತಿ ಆಗಬೇಕಾದರೆ ಸಂಬಂಧಪಟ್ಟ ವಲಯ ಆಯುಕ್ತರು ಅಥವಾ ಮುಖ್ಯ ಆಯುಕ್ತರ ಅನುಮೋದನೆ ಕಡ್ಡಾಯವಾಗಿದೆ. ಅವರೇ ಖುದ್ದಾಗಿ ಐಎಫ್ಎಂಸಿ ತಂತ್ರಾಂಶದಲ್ಲಿ ಮಾಡಲಾದ ಬ್ಲಾಕ್ ಅನ್ನು ಅನ್ ಬ್ಲಾಕ್ ಮಾಡಿದರೆ ಮಾತ್ರ ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗಲಿದೆ. ಒಂದು ವೇಳೆ ಯಾವುದೇ ದೂರುಗಳು ಇಲ್ಲದಿದ್ದರೆ, ಜೇಷ್ಠತೆಯ ಆಧಾರದ ಮೇಲೆ ಬಿಲ್ ಪಾವತಿಗೆ ಅನುಮೋದನೆ ದೊರೆಯಲಿದೆ.
2% ರಿಂದ 25% ರಷ್ಟು ತಪಾಸಣೆ ಪ್ರಮಾಣ ಹೆಚ್ಚಳವಾಗಿದೆ. ಇದುವರೆಗೆ ಕಾಮಗಾರಿಯ 10% ರಷ್ಟು ಮಾತ್ರ ಕಾಮಗಾರಿ ಪರಿಶೀಲನೆ ನಡೆಯುತ್ತಿತ್ತು. ಇನ್ಮುಂದೆ 1 ಕೋಟಿ ರೂಪಾಯಿವರೆಗೆ 2% ರಷ್ಟು, 1 ರಿಂದ. 3 ಕೋಟಿ ವರೆಗೆ 5% ರಷ್ಟು, 3 ರಿಂದ 10 ಕೋಟಿ ರೂಪಾಯಿವರೆಗೆ 10% ರಷ್ಟು, 10 ಕೋಟಿ ಗಿಂತ ಮೇಲ್ಪಟ್ಟ ಕಾಮಗಾರಿಯ 25% ರಷ್ಟು ತಪಾಸಣೆ ನಡೆಸಲು ಬಿಬಿಎಂಪಿ ನಿರ್ಧರಿಸಿದೆ.
ಕಾಮಗಾರಿ ಬಿಲ್ ಗಾಗಿ 40% ರಿಂದ 50% ರಷ್ಟು ಕಮಿಷನ್ ನೀಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಬಿಎಂಪಿಯ ಗುತ್ತಿಗೆದಾರರ ಸಂಘ ಈ ಹಿಂದೆ ಆರೋಪಿಸಿತ್ತು. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಮುಖ್ಯ ಆಯುಕ್ತರು ಹೊಸ ಆದೇಶ ಹೊರಡಿಸಿರುವುದು ಗುತ್ತಿಗೆದಾರರಿಗೆ ನುಂಗಲಾರದ ತುತ್ತಾದ್ರೆ ಜನಸಾಮಾನ್ಯರಿಗೆ ಪಾರದರ್ಶಕತೆ ಮೆರೆಯಬಹುದೇ ಎಂಬ ಆಶಾ ಭಾವನೆಯಲ್ಲಿದ್ದಾರೆ.