
ಗದಗ: ಮನೆಯ ಹಿಂದಿನ ಬಾಗಿಲು ಬೀಗ ಒಡೆದು ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಗದಗ ಜಿಲ್ಲೆ ಮುಂಡರಗಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧನ ಮಾಡಿದ್ದಾರೆ. ಕಳ್ಳತನ ನಡೆದ 72 ಗಂಟೆಯಲ್ಲಿ ಆರೋಪಿ ಬಂಧಿಸಿ ಪೊಲೀಸರು ಸಾಹಸ ಮೆರೆದಿದ್ದಾರೆ.
ಬಂಧಿತನನ್ನು ಮುಂಡರಗಿ ಪಟ್ಟಣದ ಹುಡೇದ ಓಣಿಯ ನಿವಾಸಿ ಕಾರ್ತಿಕ್ ಕೊಂಪಿ ಎಂದು ಗುರ್ತಿಸಲಾಗಿದೆ. ಬಂಧಿತನಿಂದ 4 ಲಕ್ಷದ 20 ಸಾವಿರ ಮೌಲ್ಯದ ಚಿನ್ನಾಭರಣ ಹಾಗು 6 ಸಾವಿರ ನಗದು ಜಪ್ತಿ ಮಾಡಲಾಗಿದೆ. ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಸ್ವಾಮಿ ವಿವೇಕಾನಂದ ನಗರದ ಲಕ್ಷ್ಮೀ ಅಂಗಡಿಯವರ ಮನೆಯಲ್ಲಿ ಕಳ್ಳತನ ಮಾಡಿದ್ದ.

ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆ ಕಳ್ಳತನ ನಡೆದಿತ್ತು. ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಕಳ್ಳತನ ಪ್ರಕರಣದಲ್ಲಿ ಕಳೆದ ಒಂದೂವರೆ ವರ್ಷ ಜೈಲಿನಲ್ಲಿದ್ದ ಕಾರ್ತಿಕ್, ಒಂದು ತಿಂಗಳ ಹಿಂದಷ್ಟೇ ಜೈಲಿನಿಂದ ಹೊರಗೆ ಬಂದಿದ್ದ ಎನ್ನಲಾಗಿದೆ.
ಜೈಲಿನಿಂದ ಹೊರಗೆ ಬಂದ ತಕ್ಷಣ ಮತ್ತೆ ಕಳ್ಳತನ ಶುರು ಮಾಡಿಕೊಂಡಿದ್ದ. ಕಳ್ಳತನ ಮಾಡಿದ 72 ಗಂಟೆಯಲ್ಲಿ ಮುಂಡರಗಿ ಪೊಲೀಸರು ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೃಷ್ಣಮಣಿ