ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಂಸತ್ ಅಧಿವೇಶನ ಇತ್ತೀಚೆಗಷ್ಟೇ ಮುಗಿಯಿತು. ಸಂಸತ್ ಅಧಿವೇಶನದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದ್ದವು. ಪೆಗಸಸ್, ರೈತರ ಪ್ರತಿಭಟನೆ, ಡೀಸೆಲ್-ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಒಗ್ಗಟ್ಟಿನಿಂದ ಧ್ವನಿ ಎತ್ತಿದ್ದವು. ಇದಾದ ಬಳಿಕವೂ ಕಾಂಗ್ರೆಸ್ ವಿರೋಧ ಪಕ್ಷಗಳಲ್ಲಿ ಒಗ್ಗಟ್ಟು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ.
ಇದಕ್ಕಾಗಿ ಆಗಸ್ಟ್ 20ನೇ ತಾರೀಕಿನಂದು ವಿರೋಧ ಪಕ್ಷಗಳ ನಾಯಕರ ವರ್ಚ್ಯುವಲ್ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಈ ವರ್ಚ್ಯುವಲ್ ಸಭೆಯಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಶಿವಸೇನೆಯ ಉದ್ಧವ್ ಠಾಕ್ರೆ, ಜೆಎಂಎಂನ ಹೇಮಂತ್ ಸೋರೆನ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
ಸಂಸತ್ನಲ್ಲಿ ಈ ಬಾರಿ ಸೋನಿಯಾ ಗಾಂಧಿ ಹೆಚ್ಚಾಗಿ ಕಾಣಿಸಿಕೊಳ್ಳದೇ ಹೋದರೂ ವಿರೋಧ ಪಕ್ಷಗಳನ್ನು ಕೇಂದ್ರದ ವಿರುದ್ಧ ಎತ್ತಿಕಟ್ಟುವಲ್ಲಿ ಸಫಲರಾಗಿದ್ದರು. ಇದರ ಪರಿಣಾಮವಾಗಿ ಸಂಸತ್ನ ಉಭಯ ಸದನಗಳ ಕಲಾಪ ವ್ಯರ್ಥವಾಗಿದೆ. ಸಂಸತ್ ಅಧಿವೇಶನದಲ್ಲಿ 14 ವಿರೋಧ ಪಕ್ಷಗಳು ಒಗ್ಗೂಡಿ ಗದ್ದಲ ಎಬ್ಬಿಸಲು ಸೋನಿಯಾ ಗಾಂಧಿ ಪ್ರಮುಖ ಪಾತ್ರವಹಿಸಿದ್ದರು. ಸಂಸತ್ ಅಧಿವೇಶನದ ನಂತರ ಈಗ ಮೋದಿ ವಿರೋಧಿ ಕ್ಯಾಂಪ್ನ ನಾಯಕಿಯಾಗಿ ಮತ್ತೆ ಸೋನಿಯಾ ಗಾಂಧಿ ನೇತೃತ್ವ ವಹಿಸುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದರೆ, ವಿರೋಧ ಪಕ್ಷಗಳು ಪ್ರಬಲವಾಗಿರುತ್ತವೆ ಎಂಬ ಅಭಿಪ್ರಾಯವೂ ಇವರದ್ದಾಗಿದೆ.
ಇತ್ತೀಚೆಗಿನ ಸಂಸತ್ ಅಧಿವೇಶನದ ವೇಳೆ ವಿರೋಧ ಪಕ್ಷಗಳಿಂದ ಒಗ್ಗಟ್ಟು ವ್ಯಕ್ತವಾಯಿತು. ಈ ಒಗ್ಗಟ್ಟು ಕಾಪಾಡಿಕೊಳ್ಳಲು ಕಾಂಗ್ರೆಸ್ ಪಕ್ಷ ಮುಂದಾಗಿದೆ. ಇದಕ್ಕಾಗಿಯೇ ಆಗಸ್ಟ್ 20ರಂದು ಸೋನಿಯಾ ಗಾಂಧಿ ವಿರೋಧ ಪಕ್ಷಗಳ ನಾಯಕರ ವರ್ಚ್ಯವಲ್ ಸಭೆ ಕರೆದಿದ್ದಾರೆ.
ಇನ್ನು, ಸಭೆಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ, ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಸೇರಿದಂತೆ 14 ವಿರೋಧ ಪಕ್ಷಗಳ ಪ್ರಮುಖ ನಾಯಕರು ಹಾಜಾರಗಲಿದ್ದಾರೆ. ಇಲ್ಲಿ ದೇಶದ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹೇಗೆ ಧ್ವನಿ ಎತ್ತಬೇಕು. ವಿರೋಧ ಪಕ್ಷಗಳ ಒಗ್ಗಟ್ಟಿನಿಂದ ಹೇಗೆ ಹೋರಾಟ ಮಾಡಬೇಕು ಎಂಬ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಪೆಗಾಸಸ್ ಸ್ಪೈವೇರ್ ಬಳಕೆ, ಕೃಷಿ ಕಾಯ್ದೆ ಜಾರಿ, ಕೋವಿಡ್ ನಿರ್ವಹಣೆ, ಲಸಿಕೆಯ ಕೊರತೆ ವಿರುದ್ಧ ಹೋರಾಟ ರೂಪಿಸುವುದರ ಬಗ್ಗೆಯೂ ಮಾತುಕತೆ ನಡೆಯಲಿದೆ.
ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಯತ್ನಿಸುತ್ತಿರುವ ಕಾಂಗ್ರೆಸ್, ಮುಂದಿನ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಇದಕ್ಕಾಗಿಯೇ ಕಾಂಗ್ರೆಸ್ ವಿರೋಧ ಪಕ್ಷಗಳನ್ನು ಮುನ್ನಡೆಸಲು ಪ್ರಯತ್ನಿಸುತ್ತಿದೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿದೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಕೇಂದ್ರದ ವಿರುದ್ಧ ಸಕ್ರಿಯವಾಗಿ ಕಾಂಗ್ರೆಸ್ ಹೋರಾಟಗಳನ್ನು ನಡೆಸುತ್ತಿದೆ. ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಮನೆಯಲ್ಲೂ ಎಸ್ಪಿ, ಬಿಎಸ್ಪಿ, ನ್ಯಾಷನಲ್ ಕಾನ್ಫರೆನ್ಸ್, ಆಪ್, ಎನ್ಸಿಪಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಭೋಜನಕೂಟಕ್ಕೆ ಸೇರಿ ಚರ್ಚೆ ನಡೆಸಿದ್ದರು. ಇದೆಲ್ಲವೂ ಮುಂದಿನ ಚುನಾವಣೆ ತಯಾರಿ ಎಂಬ ಮಾತುಗಳು ಕೇಳಿ ಬರುತ್ತಿವೆ.