ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸಲು ಸೋಮವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅದರಂತೆ ಮುಂದಿನ 14 ದಿನಗಳ ಕಾಲ ರಾಜ್ಯದಲ್ಲಿ ಕೋವಿಡ್ ಕರ್ಫ್ಯೂ ಇರಲಿದೆ.
ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸರ್ಕಾರಿ ಆಸ್ಪತ್ರೆಗಳಲ್ಲಿ 18 -45 ವಯಸ್ಸಿನ ಎಲ್ಲರಿಗೂ ಉಚಿತ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. 45 ರಿಂದ ಮೇಲ್ಪಟ್ಟವರಗೆ ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡುತ್ತಿತ್ತು. 18 ರಿಂದ 45 ವಯಸ್ಸಿನೊಳಗಿನವರಿಗೆ ರಾಜ್ಯ ಸರ್ಕಾರ ಉಚಿತ ಲಸಿಕೆ ನೀಡಲಿದೆಯೆಂದು ತಿಳಿಸಿದ್ದಾರೆ.
ಮುಂದಿನ ಎರಡು ವಾರಗಳ ಕಾಲ ಬೆಳಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಉಳಿದೆಲ್ಲಾ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಅದಾಗ್ಯೂ, ಗಾರ್ಮೆಂಟ್ ಫ್ಯಾಕ್ಟರಿ ಹೊರತು ಪಡಿಸಿ, ಉಳಿದೆಲ್ಲಾ ಕಾರ್ಖಾನೆಗಳೂ ಕಾರ್ಯಾಚರಿಸಬಹುದು ಎಂದು ಸರ್ಕಾರ ಹೇಳಿದೆ.
ಕೃಷಿ ಹಾಗೂ ಕನ್ಸ್ಟ್ರಕ್ಷನ್ ವಲಯದಲ್ಲಿ ಯಾವುದೇ ನಿರ್ಬಂಧವಿಲ್ಲ, ಅಗತ್ಯ ಮೆಡಿಕಲ್ ಸಾಮಾಗ್ರಿಗಳು ದೊರೆಯಲಿವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ತಾಲೂಕ್ ಆಫೀಸರ್ ನೋಡಲ್ ಅಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಳ್ಳಬೇಕು. ಇನ್ನುಮಂದೆ ಆಮ್ಲಜನಕ ಕೊರತೆ ಇರುವುದಿಲ್ಲ.ʼ300 ರಿಂದ 800 ಮೆಟ್ರಿಕ್ ಟನ್ ಆಮ್ಲಜನಕ ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ರೆಮಿಡಿಸನ್ ಔಷಧ 50 ಸಾವಿರದಿಂದ 1.20 ಲಕ್ಷದವರೆಗೆ ಏರಿಕೆ, ಹಾಗಾಗಿ ಔಷಧ ಕೊರತೆಯು ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಂತಾರಾಜ್ಯ ಗೂಡ್ಸ್ ಟ್ರಾನ್ಸ್ಪೋರ್ಟ್ಗೆ ಯಾವುದೇ ತೊಂದರೆ ಇರಲ್ಲ. ಆದರೆ, ಸಾರಿಗೆ ಬಸ್ಗಳಿರಲ್ಲ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಎರಡು ವಾರದಲ್ಲಿ ಕರೋನಾ ನಿಯಂತ್ರಣಕ್ಕೆ ಬಂದಿಲ್ಲದಿದ್ದರೆ ಬಿಗಿ ಕ್ರಮಗಳು ಮುಂದುವರೆಯಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಲಾಕ್ಡೌನ್ ಅಲ್ಲ ಕೋವಿಡ್ ಕರ್ಫ್ಯೂ?
ಸರ್ಕಾರದ ಈ ಕ್ರಮಗಳು ಕಳೆದ ವರ್ಷ ಹೇರಿದ ಲಾಕ್ಡೌನ್ ನಂತೆ ಇದ್ದರೂ ಸರ್ಕಾರ ಇದನ್ನು ಲಾಕ್ಡೌನ್ ಎಂದು ಕರೆಯುತ್ತಿಲ್ಲ. ಲಾಕ್ಡೌನ್ ಎಂದು ಘೋಷಿಸಲು ಸರ್ಕಾರ ಹಿಂಜರಿಯುತ್ತಿದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿಎಂ ಗರಂ ಆಗಿದ್ದಾರೆ. ಹೆಸರು ಮುಖ್ಯ ಅಲ್ಲ ಕ್ರಮ ಮುಖ್ಯ ಎಂದು ಅವರು ಹೇಳಿದ್ದಾರೆ. ಈ ವೇಳೆ ಮಾತನಾಡಿದ ಗೃಹ ಸಚಿವ ಬೊಮ್ಮಾಯಿ, ಇದು ಲಾಕ್ಡೌನ್ ಅಲ್ಲ ʼಕೋವಿಡ್ ಕರ್ಫ್ಯೂʼ ಎಂದು ಸಮಜಾಯಿಷಿ ನೀಡಿದ್ದಾರೆ.