ವ್ಯಕ್ತಿ ಚಿತ್ರಣಕ್ಕೆ ಬಹಳಷ್ಟು ಪ್ರಾಮುಖ್ಯತೆ ಕೊಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ, ಈಗ ಅಂತರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಛೀಮಾರಿ ಹಾಕುತ್ತಿವೆ. ಭಾರತದಲ್ಲಿ ಕೋವಿಡ್ ನಿರ್ವಹಣೆ ಮಾಡವಲ್ಲಿ ಪದೇ ಪದೇ ಎಡವುತ್ತಿರುವ ಕೇಂದ್ರ ಸರ್ಕಾರದ ಇಇಮೇಜ್ʼ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಳಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ʼವಿಶ್ವ ಗುರುʼ ಸ್ಥಾನದಿಂದ ಭಾರತದ ಕೋವಿಡ್ ಸಂಕಷ್ಟದ ಖಳನಾಯಕನಂತೆ ಪ್ರಧಾನಿ ಮೋದಿ ಬಿಂಬಿತರಾಗಿರುವುದು ಬಿಜೆಪಿಯ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
Modi leads India out of lockdown and into a Covid apocalypse, ‘This Is Hell.’ Prime Minister Modi’s Failure to Lead Is Deepening India’s COVID-19 Crisis, World’s Biggest Covid Crisis Threatens Modi’s Grip on India, Modi leads India into Viral Apocalypse ಮುಂತಾದ ತಲೆಬರಹಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿಯವರ ಕಾರ್ಯಕ್ಷಮತೆ ಹಾಗೂ ಕೋವಿಡ್ ನಿರ್ವಹಣೆಯ ತಂತ್ರಗಾರಿಕೆಯನ್ನು ಪ್ರಶ್ನಿಸಿವೆ.
ಲಂಡನ್ ಮೂಲದ ಖ್ಯಾತ ಮಾಧ್ಯಮ ಸಂಸ್ಥೆ The Times ವರದಿಗೆ, Modi flounders in India’s gigantic second wave ಎಂದು ತಲೆಬರಹ ನೀಡಲಾಗಿದೆ. ಭಾರತದಲ್ಲಿ ಪ್ರತಿದಿನ ಯಾವ ರೀತಿ ಮೂರು ಲಕ್ಷಕ್ಕೂ ಮಿಕ್ಕಿ ಪ್ರಕರಣಗಳು ದಾಖಲಾಗುತ್ತಿವೆ ಎಂಬ ಕುರಿತಾಗಿ ವಿಸ್ತೃತವಾಗಿ ಪ್ರಕಟಿಸಲಾಗಿದೆ. ಇದರೊಂದಿಗೆ ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಸರ್ಕಾರ ಸ್ಪಂದಿಸಿದ ರೀತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಢಿದೆ.
The system has collapsed: India’s descent into Covid hell, ಎಂದು The Guardian ವರದಿ ಮಾಡಿದೆ. ಭಾರತದ ಚಿತಾಗಾರಗಳ ಪ್ರಸ್ತುತ ಪರಿಸ್ಥಿತಿಯ ಚಿತ್ರದೊಂದಿಗೆ ಪ್ರಕಟವಾದ ಈ ವರದಿಯು, ಭಾರತದ ಬಹುತೇಕರು ಕೋವಿಡ್ ವಿರುದ್ದ ಜಯ ಸಾಧಿಸಿದ ಭ್ರಮೆಯಲ್ಲಿ ಇದ್ದರು ಎಂದು ಹೇಳಿದೆ. “ಆಸ್ಪತ್ರೆಗಳಲ್ಲಿ ಆಕ್ಸಿಜನ್ ಖಾಲಿಯಾಗುತ್ತಿದ್ದರೆ, ಶವಾಗಾರಗಳಲ್ಲಿ ಮೃತದೇಹಗಳ ಸಂಖ್ಯೆ ಹೆಚ್ಚಾಗುತ್ತಿದೆ,” ಎಂದಿದೆ.
ಇನ್ನು ʼThe Australianʼನಲ್ಲಿ ಬಂದಿರುವಂತಹ ವರದಿಯನ್ನು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ, ಅಂತರಾಷ್ಟ್ರೀಯ ಮಾಧ್ಯಮಗಳು ಹೊಗಳದಾಗ ಪ್ರಧಾನ ಮಂತ್ರಿಯವರ ಕಾರ್ಯಲಯ ಶ್ರದ್ದೆಯಿಂದ ಅವುಗಳನ್ನು ರೀಟ್ವೀಟ್ ಮಾಡಿತ್ತು. ಈಗ ಆಸ್ಟ್ರೇಲಿಯಾದವರು ಹೇಳುತ್ತಿರುವಂತೆ ಅಂತರಾಷ್ಟ್ರೀಯ ಮಾಧ್ಯಮಗಳು ಹೇಳುತ್ತಿವೆ. ಇದು ವಾಸ್ತಾವಿಕ ಸತ್ಯ, ಎಂದು ಬರೆದುಕೊಂಡಿದ್ದಾರೆ.
ದೇಶದಲ್ಲಿ ಕರೋನಾ ಸೋಂಕು ತನ್ನ ನಾಗಾಲೋಟ ಮುಂದುವರೆಸಿದ ಕಾರಣಕ್ಕೆ ಸಂಪೂರ್ಣ ಪ್ರಪಂಚದ ದೃಷ್ಟಿ ಭಾರತದ ಮೇಲೆ ಬಿದ್ದಿತ್ತು. ದಿನದಿಂದ ದಿನಕ್ಕೆ ದಾಖಲೆ ಪ್ರಮಾಣದ ಹೊಸ ಪ್ರಕರಣಗಳು ದಾಖಲಾಗುತ್ತಿರುವುದು ಕೇವಲ ಭಾರತೀಯರಿಗೆ ಅಷ್ಟೇ ಅಲ್ಲ, ವಿಶ್ವಕ್ಕೇ ಆತಂಕದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಸರ್ಕಾರದ ವೈಫಲ್ಯಕ್ಕೆ ಹಾಗೂ ಪ್ರಚಾರಪ್ರಿಯ ನಾಯಕರ ಅಧಿಕಾರದ ತೆವಲಿಗೆ ದೇಶದ ಜನರು ಬಲಿಯಾಗುತ್ತಿದ್ದಾರೆ.
ಈ ಹಿಂದೆ ಬ್ರೆಜಿಲ್ನಲ್ಲಿ ಕರೋನಾ ಸೋಂಕು ಉಲ್ಬಣಗೊಂಡಾಗ, ಅಂತರಾಷ್ಟ್ರೀಯ ಮಾಧ್ಯಮಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದವು. ಈಗ ಅದೇ ಪರಿಸ್ಥಿತಿ ಭಾರತಕ್ಕೆ ಬಂದಿದೆ. ಅನೇಕ ದೇಶಗಳು ಭಾರತದ ವಿಮಾನ ಸೇವೆಗಳನ್ನು ನಿರ್ಬಂಧಿಸಿವೆ. ಭಾರತೀಯರನ್ನು ದೇಶದ ಒಳಗೆ ಸೇರಿಸುವುದಿಲ್ಲ ಎಂದು ಹೇಳಿವೆ. ಕೆಲವು ರಾಷ್ಟ್ರಗಳು ಭಾರತಕ್ಕೆ ಪ್ರವಾಸ ಕೈಗೊಳ್ಳಬೇಡಿ ಎಂದು ಹೇಳಿದೆ.
ಇದರೊಂದಿಗೆ, ಇಂತಹ ಸಂಕಷ್ಟದ ಸಮಯದಲ್ಲಿ ಕುಂಭ ಮೇಳದ ಆಯೋಜನೆಯನ್ನು ಕೂಡಾ ಟೀಕಿಸಿರುವ ಮಾಧ್ಯಮಗಳು, ಲಕ್ಷಾಂತರ ಜನರು ಮಾಸ್ಕ್ಗಳಿಲ್ಲದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಕುಂಭ ಮೇಳದಲ್ಲಿ ಪಾಲ್ಗೊಂಡ ಚಿತ್ರಗಳು ಪ್ರಕಟವಾಗಿದ್ದವು. ಇಂತಹ ಧಾರ್ಮಿಕ ಮೇಳವನ್ನು ರದ್ದುಪಡಿಸಲು ಸಾಧ್ಯವಾಗದ ಸರ್ಕಾರದ ಹೇಡಿತನವನ್ನು ಪ್ರಶ್ನಿಸಿದ್ದವು.
ಭಾರತದಿಂದ ವಿಶೇಷ ವರದಿಗಳನ್ನು ಪ್ರಕಟಿಸುತ್ತಿರುವ Sky News ವರದಿಗಾರ್ತಿ ಅಲೆಕ್ಸ್ ಕ್ರೋವ್ಫೋರ್ಡ್ ಅವರು, ದೆಹಲಿಯಲ್ಲಿ ರೋಗಿಗಳು ಆಕ್ಸಿಜನ್ಗಾಗಿ ಬೇಡುತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ.
“ನಾವು ಇಲ್ಲಿ ಬಂದ ಕೆಲವು ಗಂಟೆಗಲು ಮಾತ್ರವಾಗಿವೆ, ಈಗಾಗಲೇ ಅರ್ಧ ಡಜನ್ ಜನರು ಚಿಕಿತ್ಸೆಗಾಗಿ ಕಾಯುತ್ತಲೇ ಪ್ರಾಣ ಕಳೆದುಕೊಂಡಿದ್ದಾರೆ,” ಎಂದಿದ್ದಾರೆ.
ಒಟ್ಟಿನಲ್ಲಿ, ದೇಶದಲ್ಲಿ ಕೋವಿಡ್ ತನ್ನ ಕಬಂಧ ಬಾಹುಗಳನ್ನು ಮತ್ತಷ್ಟು ಬಿಗಿಗೊಳಿಸುತ್ತಿದ್ದ ಸಂದರ್ಭದಲ್ಲಿ ನಮ್ಮ ದೇಶದ ನಾಯಕರು ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಈಗ ಪರಿಸ್ಥಿತಿ ಕೈಮೀರಿದ ನಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ದೋಷಾರೋಪಣೆಯ ಕೆಸರೆರಚಾಟ ನಡೆಯುತ್ತಿದೆ. ಆಕ್ಸಿಜನ್ ಕೊರತೆ, ಕೋವಿಡ್ ಲಸಿಕೆಗಳ ಕೊರತೆ, ರೆಮ್ಡೆಸಿವೀರ್ ಔಷಧಿಯ ಕೊರತೆ, ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆಯಿಂದ ಜನರು ಸಾವನ್ನಪ್ಪುತ್ತಿದ್ದಾರೆ. ಕರ್ನಾಟಕದಲ್ಲಿ ಹೊಸ ಸ್ಮಶಾನಗಳನ್ನು ಉದ್ಘಾಟಿಸುವ ಕೆಲಸ ನಡೆಯುತ್ತಿದೆ. ಈ ಮೊದಲೇ ಹೊಸ ಆಸ್ಪತ್ರೆಗಳ ಉದಘಾಟನೆಯನ್ನು ಮಾಡಿದ್ದರೆ, ಇಂದು ಈ ಪರಿಸ್ಥಿತಿ ಖಂಡಿತವಾಗಿಯೂ ಬರುತ್ತಿರಲಿಲ್ಲ.