ಕರ್ನಾಟಕದ ಬಹು ವಿವಾದಿತ ಯಲಹಂಕ ಮೇಲ್ಸೇತುವೆ ಕಡೆಗೂ ಸರ್ಕಾರ ತನ್ನ ಹಠದಂತೆ ದಾಮೋದರ ಸಾವರ್ಕರ್ ನಾಮಕರಣ ಮಾಡಿ ಉದ್ಘಾಟನೆಗೊಳಿಸಿದೆ. ಕನ್ನಡ ಹೋರಾಟಗಾರರ ಪ್ರತಿಭಟನೆ, ವಿರೋಧಗಳ ಹೊರತಾಗಿಯೂ ಮರಾಠಿ ಮೂಲದ ಸಾವರ್ಕರ್ ಹೆಸರನ್ನು ಅಂತಿಮಗೊಳಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಕುರಿತಂತೆ ಸಾಮಾಜಿಕ ಹೋರಾಟಗಾರ, ಕನ್ನಡ ನಟ ಚೇತನ್ ಪ್ರತಿಕ್ರಿಯಿಸಿದ್ದು, “ನಿನ್ನೆ ಯಲಹಂಕದಲ್ಲಿ ಕರ್ನಾಟಕ ಸರ್ಕಾರ ಸಾವರ್ಕರ್ ಫ್ಲೈಓವರ್ ಅನ್ನು ಉದ್ಘಾಟಿಸಿತು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಭಾಷಣದಲ್ಲಿ ಸಾವರ್ಕರ್ ಅವರನ್ನು ‘ಮಹಾನ್ ದೇಶಭಕ್ತ’ ಎಂದು ಕರೆದರು. ಐತಿಹಾಸಿಕವಾಗಿ, ಸಾವರ್ಕರ್ ಕೋಮು ದ್ವೇಷವನ್ನು ಹೆಚ್ಚಿಸಿದರು, ಬ್ರಿಟಿಷ್ ವಸಾಹತುಶಾಹಿ ಆಡಳಿತವನ್ನು ಬೆಂಬಲಿಸಿದರು, ಮತ್ತು ಗಾಂಧಿಯವರ ಹತ್ಯೆಗೆ ಸಂಬಂಧ ಹೊಂದಿದ್ದರು. ನನ್ನ ದೃಷ್ಟಿಯಲ್ಲಿ, ಸಾವರ್ಕರ್ ‘ಮಹಾನ್’ ಅಲ್ಲ, ‘ದೇಶಭಕ್ತ’ ಅಲ್ಲ” ಎಂದು ಹೇಳಿದ್ದಾರೆ.
— Chetan Kumar / ಚೇತನ್ (@ChetanAhimsa) September 9, 2020
ಕರ್ನಾಟಕದ ಯೋಜನೆಗಳಿಗೆ ಕನ್ನಡದ ಐತಿಹಾಸಿಕ ವ್ಯಕ್ತಿತ್ವಗಳ ನಾಮಕರಣ ಮಾಡುವಂತೆ ಈ ಹಿಂದಿನಿಂದಲೂ ಕೂಗು ಕೇಳಿ ಬರುತ್ತಿತ್ತು. ಅದರಂತೆ ಯಲಹಂಕ ಮೇಲ್ಸೇತುವೆಗೆ ರಾಣಿ ಚೆನ್ನಮ್ಮಾ, ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ ಮೊದಲಾದ ಯಾವುದಾದರೂ ಕನ್ನಡದವರ ಹೆಸರು ಇಡುವಂತೆ ಬೇಡಿಕೆ ಬಂದಿದ್ದವು. ಆದರೆ ಕಡೆಗೂ ಬಿ ಎಸ್ ಯಡಿಯೂರಪ್ಪ ಸರ್ಕಾರ ಸಾವರ್ಕರ್ ಹೆಸರನ್ನೇ ಇಟ್ಟಿದೆ.

ಬ್ರಿಟೀಷರಲ್ಲಿ ಕ್ಷಮೆ ಕೇಳಿ ಸ್ವತಂತ್ರ ಹೋರಾಟದಿಂದ ಹಿಂದೆ ಸರಿದಿರುವ ಸಾವರ್ಕರ್ರನ್ನು ಸ್ವತಂತ್ರ ಹೋರಾಟಗಾರ ಹೌದೋ, ಅಲ್ಲವೋ ಎಂದು ಇನ್ನೂ ಚರ್ಚೆಗಳು ನಡೆಯುತ್ತಿವೆ. ಈ ಹೊತ್ತಿನಲ್ಲಿ ಬಿಜೆಪಿ ಸರ್ಕಾರ ಹಿಂದುತ್ವ ಪ್ರತಿಪಾದಕ ಸಾವರ್ಕರ್ ಹೆಸರನ್ನು ಮೇಲ್ಸೇತುವೆಗೆ ಇಟ್ಟಿರುವುದು, ಪ್ರತಿಪಕ್ಷಗಳ ಕಣ್ಣು ಕೆಂಪಾಗಿಸಿತ್ತು.