20,000 ಕೋಟಿ ರೂ.ಗಳ ‘ಕೇಂದ್ರ ವಿಸ್ಟಾ ಬ್ಯುಟಿಫಿಕೇಷನ್’ ಯೋಜನೆಯನ್ನು ತಾತ್ಕಾಲಿಕ ರದ್ದುಗೊಳಿಸುವಂತೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯ ಗಾಂಧಿ ಶಿಫಾರಸು ಮಾಡಿದ್ದಾರೆ. ಮಾಧ್ಯಮ ಜಾಹೀರಾತುಗಳನ್ನು ನಿಲ್ಲಿಸಿ, ಕೋವಿಡ್ -19 ಗಾಗಿ ಶುರು ಮಾಡಿದ ಪಿಎಂ ಕೇರ್ಸ್ಗೆ ಆ ನಿಧಿಯನ್ನು ವರ್ಗಾಯಿಸಿ ಎಂದು ಸೋನಿಯಾ ಗಾಂಧಿ ಮೋದಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಸರ್ಕಾರವು ತನ್ನ ವೆಚ್ಚವನ್ನು ಕಡಿತಗೊಳಿಸಲು ಮತ್ತು ಕರೋನ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಹಣವನ್ನು ವಿನಿಯೋಗಿಸಲು ಐದು ಸಲಹೆಗಳನ್ನು ನೀಡಿದ್ದಾರೆ.
ಕೋವಿಡ್ -19 ರ ಕುರಿತ ಜಾಹಿರಾತುಗಳನ್ನು ಹೊರತುಪಡಿಸಿ ಉಳಿದ ಸರಕಾರಿ ಜಾಹಿರಾತುಗಳನ್ನು ಎರಡು ವರ್ಷಗಳ ಕಾಲ ಸಂಪೂರ್ಣ ನಿಷೇಧಿಸಬೇಕು. ಸರ್ಕಾರವು ಪ್ರಸ್ತುತ ವರ್ಷಕ್ಕೆ 1,250 ಕೋಟಿ ರೂ. ಜಾಹಿರಾತುಗಳಿಗೆ ಖರ್ಚು ಮಾಡುತ್ತದೆ. ಇದು ಕೋವಿಡ್ -19ರ ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟದ ಪ್ರಭಾವವನ್ನು ನಿವಾರಿಸಲು ಗಣನೀಯ ಮೊತ್ತವಾಗಬಲ್ಲದು ಎಂದು ಬರೆದಿದ್ದಾರೆ.
ದಕ್ಷತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಪಿಎಂ ಕೇರ್ಸ್ ನಿಧಿಗೆ ನೀಡಿದ ದೇಣಿಗೆಗಳನ್ನು ಮೊದಲೇ ಅಸ್ತಿತ್ವದಲ್ಲಿದ್ದ ‘ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ’ ವರ್ಗಾಯಿಸಬೇಕು. “ದೇಣಿಗೆ ನಿಧಿ ಸಂಗ್ರಹಿಸಲು ಎರಡು ಪ್ರತ್ಯೇಕ ಟ್ರಸ್ಟ್ಗಳಿರುವುದು ಮತ್ತು ಸಂಭಾಳಿಸುವುದು ಸಂಪನ್ಮೂಲಗಳ ವ್ಯರ್ಥವಾದಂತೆ ತೋರುತ್ತದೆ” ಎಂದು ಅವರು ಬರೆದಿದ್ದಾರೆ.
20,000 ಕೋಟಿ ರೂ.ಗಳ ಸೆಂಟ್ರಲ್ ವಿಸ್ಟಾ ಬ್ಯುಟಿಫಿಕೇಷನ್ ಮತ್ತು ನಿರ್ಮಾಣ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಪ್ರಧಾನಿಯನ್ನು ಒತ್ತಾಯಿಸಿದರು. “ಅಸ್ತಿತ್ವದಲ್ಲಿರುವ ಐತಿಹಾಸಿಕ ಕಟ್ಟಡಗಳಲ್ಲಿ ಸಂಸತ್ತು ಆರಾಮವಾಗಿ ಕಾರ್ಯನಿರ್ವಹಿಸಬಲ್ಲದು ಎಂದು ನನಗೆ ಖಚಿತವಾಗಿದೆ” ಎಂದು ಅವರು ಬರೆದಿದ್ದಾರೆ. ವೇತನ, ಪಿಂಚಣಿ ಮತ್ತು ಕೇಂದ್ರ ವಲಯದ ಯೋಜನೆಗಳನ್ನು ಹೊರತುಪಡಿಸಿ ಉಳಿದ ಬಜೆಟ್ ಖರ್ಚಿನಲ್ಲಿ 30% ಕಡಿತಗೊಳಿಸಿ ಎಂದು ಗಾಂಧಿ ಹೇಳಿದರು. ಹೀಗೆ ಕಡಿತಗೊಳಿಸಿದ 30% ಬಜೆಟ್ ಅಂದರೆ ಅಂದಾಜು 2.5 ಲಕ್ಷ ಕೋಟಿ ರೂಪಾಯಿಗಳನ್ನು ವಲಸೆ ಕಾರ್ಮಿಕರು, ರೈತರು, ಎಂಎಸ್ಎಂಇಗಳು ಮತ್ತು ಅಸಂಘಟಿತ ವಲಯದಲ್ಲಿರುವವರಿಗೆ ಆರ್ಥಿಕ ಸುರಕ್ಷತಾ ಜಾಲವನ್ನು ಸ್ಥಾಪಿಸಲು ವಿನಿಯೋಗಿಸಬಹುದುಎಂದು ಅವರು ಬರೆದಿದ್ದಾರೆ.
ಅಧ್ಯಕ್ಷ, ಪ್ರಧಾನಿ ಸೇರಿದಂತೆ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರು ಮತ್ತು ಅಧಿಕಾರಿಗಳ ಎಲ್ಲಾ ವಿದೇಶಿ ಪ್ರಯಾಣಗಳನ್ನು ಸರಕಾರ ತಡೆಹಿಡಿಯಬೇಕು ಎಂದು ಗಾಂಧಿ ತಮ್ಮ ಪತ್ರದಲ್ಲಿ ಸೂಚಿಸಿದ್ದಾರೆ.
ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ತಮ್ಮ ಪಕ್ಷವು ಸರಕಾರದೊಡನೆ ನಿಲ್ಲುವುದಾಗಿಯೂ, ಸರಕಾರಕ್ಕೆ ತಮ್ಮ ಬೆಂಬಲವಿರುವುದಾಗಿ ಪ್ರಧಾನಮಂತ್ರಿಗೆ ಬರೆದ ಪತ್ರದಲ್ಲಿ ಭರವಸೆ ನೀಡಿದ್ದಾರೆ.
ಕರೋನವೈರಸ್ ಸಾಂಕ್ರಾಮಿಕ ಮತ್ತು ಆರ್ಥಿಕತೆಯ ಮೇಲೆ ಅದರ ದುಷ್ಪರಿಣಾಮದ ವಿರುದ್ಧ ಹೋರಾಡಲು ಸರ್ಕಾರಕ್ಕೆ ಸಹಾಯ ಮಾಡಲು ಕ್ಯಾಬಿನೆಟ್ ಮಂತ್ರಿಗಳು ಸೇರಿದಂತೆ ಎಲ್ಲಾ ಸಂಸದರು ಒಂದು ವರ್ಷದವರೆಗೆ ವೇತನದಲ್ಲಿ 30% ಕಡಿತಗೊಳಿಸುವುದಾಗಿ ಕೇಂದ್ರ ಸುಗ್ರೀವಾಜ್ಞೆ ಹೊರಡಿಸಿತ್ತು. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಎಲ್ಲಾ ರಾಜ್ಯಪಾಲರು ತಮ್ಮ ಸಂಬಳದ 30% ಅನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಡುವುದಾಗಿ ತಮ್ಮ ನಿರ್ಧಾರ ತಿಳಿಸಿದ್ದರು.
ಕೃಪೆ: Scroll.in