• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಲಾಕ್‌ಡೌನ್ ಅಗತ್ಯ ನಿಜ; ಆದರೆ, ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ತೋರದ ಮೋದಿ ಸರಕಾರ !

by
March 27, 2020
in ದೇಶ
0
ಲಾಕ್‌ಡೌನ್ ಅಗತ್ಯ ನಿಜ; ಆದರೆ
Share on WhatsAppShare on FacebookShare on Telegram

“ಅಗತ್ಯ ವಸ್ತುಗಳನ್ನು ತರಲು ನೀವು ಹೊರಗೆ ಹೋಗಬೇಡಿ; ಕೆಲಸದವರನ್ನು ಕಳಿಸಿ” ಎಂದು ಖ್ಯಾತ ಮಲಯಾಳಂ ನಟ ಮೋಹನ್ ಲಾಲ್ ಹೇಳಿದ್ದಾರೆ ಎಂಬ ಸುದ್ದಿ ಕೆಲದಿನಗಳ ಹಿಂದೆ ವ್ಯಾಪಕವಾಗಿ ಹರಡಿತ್ತು. ಇದು ಎಷ್ಟರ ಮಟ್ಟಿಗೆ ನಿಜ, ಅಥವಾ ಸುಳ್ಳು ಎಂಬುದು ಇಲ್ಲಿ ಅಪ್ರಸ್ತುತ. ಇಂತಹಾ ಒಂದು ಅಸೂಕ್ಷ್ಮ, ಅಷ್ಟೇ ಏಕೆ, ಕ್ರೂರ ಮನೋಭಾವ ಶತಮಾನಗಳಿಂದ ಭಾರತದಲ್ಲಿ ಬೇರೂರಿದೆ. ಬೇರೆ ದೇಶಗಳಲ್ಲಿ ಮೇಲ್ವರ್ಗ-ಕೆಳವರ್ಗಗಳ ಭೇದಗಳಿದ್ದರೆ, ಭಾರತದಲ್ಲಿ ಸಾವಿರಾರು ಮೇಲ್ಜಾತಿಗಳು-ಕೆಳಜಾತಿಗಳು ಎಂಬ ಶೋಷಕ ವ್ಯವಸ್ಥೆಯೂ ಇದರ ಜೊತೆ ಸೇರಿಕೊಂಡು, ನಮ್ಮ ಸಮಾಜವನ್ನು ಇನ್ನಷ್ಟು ಸಂಕೀರ್ಣ ಮತ್ತು ಅಮಾನವೀಯಗೊಳಿಸಿದೆ.

ADVERTISEMENT

ತಾವು ದೈವಿಕ ಹಕ್ಕಿನಿಂದ ಬದುಕಲು ಅರ್ಹರು, ಉಳಿದವರು ತಮ್ಮ ಚಾಕರಿ ಮಾಡಲೆಂದೇ ಹುಟ್ಟಿದವರು; ಅವರು ಬದುಕಿದ್ದರೆ ಅದು ನಮ್ಮ ಕೃಪೆ; ಅವರು ಪಡೆಯುತ್ತಿರುವುದು, ನಾವು ನೀಡುತ್ತಿರುವುದು ನಮ್ಮ ಔದಾರ್ಯವೇ ಹೊರತು, ಅದವರ ಹಕ್ಕಲ್ಲ ಎಂದು ಭಾವಿಸುವ ಜನವರ್ಗವೊಂದು ಭಾರತದ ಬಹುಸಂಖ್ಯಾತ ಜನರನ್ನು ಧರ್ಮ, ಸಂಪ್ರದಾಯ, ಕರ್ಮ, ಕರ್ತವ್ಯ ಇತ್ಯಾದಿಯಾಗಿ ಹಲವಾರು ಬಣ್ಣದ ಹೆಸರುಗಳಿಂದ ವಂಚಿಸುತ್ತಲೇ ಬಂದಿದೆ. ಈ ಜನರೂ ಕುರಿಗಳಂತೆ ವಂಚನೆಗೆ ಒಳಗಾಗುತ್ತಲೇ ಬಂದಿದ್ದಾರೆ. ದೇಶದ ಅಲ್ಪಸಂಖ್ಯಾತರ ಮಟ್ಟಿಗೂ ಇದು ನಿಜ.

ನೋವೆಲ್ ಕರೋನಾ ಅಥವಾ ಕೋವಿಡ್-19 ವೈರಸ್ ಮಾರಕ ಸಾಂಕ್ರಾಮಿಕ ರೋಗವನ್ನು ಹರಡುತ್ತಿರುವುದು ಮಾತ್ರವಲ್ಲ, ಭಾರತದ ಮೇಲ್ಜಾತಿ, ಮೇಲ್ವರ್ಗಗಳಲ್ಲಿ-ಪಕ್ಷ ಭೇದವಿಲ್ಲದೆ- ಅಂತರ್ಗತವಾಗಿರುವ ಕರೋನಾಕ್ಕಿಂತಲೂ ಭೀಕರ ರೋಗವನ್ನು ಮತ್ತೊಮ್ಮೆ ಮೇಲ್ಮೈಗೆ ತಂದಿದೆ. ಅದೆಂದರೆ ಬಡವರ, ಕೆಳಜಾತಿಯವರ ಕುರಿತು ಒಂದು ಜನವರ್ಗಕ್ಕೆ, ಸರಕಾರಗಳಿಗೆ ಇರುವ ಅಸಡ್ಡೆ, ತಾತ್ಸಾರ ಮತ್ತು ಮೇಲೆ ವಿವರಿಸಿದಂತಹ ಅಹಂಕಾರಿ ಮನೋಭಾವ.

ಪ್ರಧಾನಿ ನರೇಂದ್ರ ಮೋದಿ ಮಾಡಿದ “ಚಪ್ಪಾಳೆ -ಜಾಗಟೆ ಭಾಷಣ” ಮತ್ತು “ಲಾಕ್‌ಡೌನ್ ಭಾಷಣ”ಗಳು ಇದೇ ಮನೋಭಾವವನ್ನು ಪ್ರತಿಫಲಿಸಿದ್ದರಲ್ಲಿ ಅಚ್ಚರಿಯೇನಿಲ್ಲ. ಏಕೆಂದರೆ, ಅವರ ಪಕ್ಷವಾದ ಬಿಜೆಪಿ ಮತ್ತು ಅದರ ಧಣಿಯಾಗಿರುವ ಆರೆಸ್ಸೆಸ್, ದಶಕಗಳಿಂದ ಇದೇ ಮನೋಭಾವವನ್ನು ಕೆಲವೊಮ್ಮೆ ಬಹಿರಂಗವಾಗಿ, ಹೆಚ್ಚಿನ ಸಲ ಚಾಣಾಕ್ಷ ತಂತ್ರ-ಕುತಂತ್ರಗಳ ಮೂಲಕ ಪೋಷಿಸುತ್ತಲೇ ಬಂದಿದೆ. ನಮ್ಮ ಸಂವಿಧಾನವು ಜಾತಿ, ಮತ, ಧರ್ಮ, ವರ್ಗ ಭೇದವಿಲ್ಲದೆ ಸಮಾನ ನ್ಯಾಯ ಮತ್ತು ಅವಕಾಶಗಳ ಹಕ್ಕುಗಳನ್ನು ನೀಡಿದೆ. ಆದುದರಿಂದಲೇ, ಮೋಹನ್ ಲಾಲ್ ನೀಡಿದ್ದಾರೆನ್ನಲಾದ ಬೇಜವಾಬ್ದಾರಿ ಹೇಳಿಕೆಗಿಂತಲೂ, ಸಂವಿಧಾನವನ್ನು ರಕ್ಷಿಸುವ ಹೊಣೆಗಾರಿಕೆ ಇರುವ ಸರಕಾದ ಮುಖ್ಯಸ್ಥ ನರೇಂದ್ರ ಮೋದಿಯವರ ಬೇಜವಾಬ್ದಾರಿ ಮಾತುಗಳು ಹೆಚ್ಚು ಆತಂಕಕಾರಿ ಮತ್ತು ಟೀಕೆಗೆ ಅರ್ಹವಾಗುತ್ತವೆ. ಇಬ್ಬರ ಮಾತುಗಳ ನಡುವಿನ ವ್ಯತ್ಯಾಸವೆಂದರೆ, ಇಂತಹಾ ಮಾತುಗಳನ್ನು ಸಕ್ಕರೆ ಗುಳಿಗೆಯ ಒಳಗಿಟ್ಟು ನುಂಗಿಸಿ ಮರುಳು ಮಾಡುವ ಮಾರ್ಕೆಟಿಂಗ್ ಚಾಕಚಕ್ಯತೆ ಮೋದಿಗಿದೆ.

ಮೊದಲಿಗೆ ಪ್ರಧಾನಿಯ ಭಾಷಣಗಳನ್ನು ಗಮನಿಸೋಣ. ಬಹುತೇಕ ದಲಿತರೇ ಇರುವ ಸ್ವಚ್ಛತಾ ಕಾರ್ಮಿಕರು ತಮ್ಮ ಜೀವವನ್ನೇ ಪಣಕ್ಕಿಟ್ಟು ದುಡಿಯುತ್ತಿದ್ದಾರೆ. ಅವರಿಗೆ ಬದುಕಬಹುದಾದಷ್ಟು ಸಂಬಳ, ಸುರಕ್ಷಾ ಸಾಧನಗಳು, ಕಾನೂನು ರಕ್ಷಣೆ ಒದಗಿಸಿ ಅವರು ಉಸಿರುಗಟ್ಟಿಸುವ ಗಟಾರಗಳಿಗಿಳಿದು ದಯನೀಯವಾಗಿ ಸಾಯುವುದನ್ನು ತಪ್ಪಿಸುವ ಬದಲು, ನಮ್ಮ ಪ್ರಧಾನಿ ಜನರಿಗೆ ಮನೆಯ ಸುರಕ್ಷೆಯ ಒಳಗೆ ನಿಂತು ಅವರಿಗಾಗಿ ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿ ಎಂದು ಹೇಳುತ್ತಾರೆ! ಕಂಡಕಂಡವರ ಮಕ್ಕಳನ್ನು ಬಾವಿಗಿಳಿಸಿ ಆಳ ನೋಡುವ ಬುದ್ಧಿಯಲ್ಲವೆ ಇದು? ಅದೇ ರೀತಿಯಲ್ಲಿ ಕಳೆದ ಕೆಲವು ದಿನಗಳಿಂದ ಆರೋಗ್ಯ ಕಾರ್ಯಕರ್ತರು ನೀಡುತ್ತಿರುವ ಹೇಳಿಕೆಗಳು ಮತ್ತು ಆ ಕುರಿತ ವರದಿಗಳು, ಸರಕಾರ ನಮ್ಮ ಕಾಲದ ಅತ್ಯಂತ ದೊಡ್ಡ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸರಿಯಾದ ಸಿದ್ಧತೆ ನಡೆಸಿರಲಿಲ್ಲ ಎಂಬುದನ್ನು ತೋರಿಸುತ್ತದೆ. ಸೂಕ್ತವಾದ ಸುರಕ್ಷಾ ಸಾಧನಗಳೂ ಇಲ್ಲದೆ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿರುವ ವೈದ್ಯಕೀಯ ಸಿಬ್ಬಂದಿ ತಮ್ಮ ಜೀವವನ್ನೇ ಪಣಕ್ಕಿಡುತ್ತಿದ್ದಾರೆ.

ಮೊದಲಿನಿಂದಲೂ ಮೋದಿ ಸರಕಾರ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಕುರಿತು ತೀರಾ ಅಸಡ್ಡೆ ತೋರುತ್ತಾ ಬಂದಿದೆ. 2014ಕ್ಕೆ ಮೊದಲು ಭಾರತದ ಆರೋಗ್ಯ ಬಜೆಟ್ ಜಿಡಿಪಿಯ ಶೇಕಡಾ 2.5 ಆಸುಪಾಸು ಇತ್ತು. ಅದನ್ನು ಕನಿಷ್ಟ ನಾಲ್ಕು ಶೇಕಡಾಕ್ಕಾದರೂ ಏರಿಸಬೇಕು ಎಂದು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಬಂದಿರುವ ಎನ್‌ಜಿಓಗಳು ಮನವಿ ಮಾಡಿದ್ದರು. ಆದರೆ, ಮೋದಿ ಸರಕಾರ ಮಾಡಿದ್ದೆಂದರೆ, ಅದನ್ನು ಇನ್ನಷ್ಟು ಇಳಿಸಿದ್ದು. ಅದೀಗ ಅನೇಕ ಬಡ ರಾಷ್ಟ್ರಗಳಿಗಿಂತಲೂ ಕೆಳಮಟ್ಟದಲ್ಲಿ ಅಂದರೆ, ಕೇವಲ ಒಂದು ಶೇಕಡಾಕ್ಕಿಂತ ಸ್ವಲ್ಪ ಮೇಲ್ಮಟ್ಟದಲ್ಲಿದೆ. ಇದರಿಂದಾಗಿ ದೇಶದಾದ್ಯಂತ ಆರೋಗ್ಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಂತಹಾ ಸಂದರ್ಭದಲ್ಲಿಯೇ ಕರೋನಾವೈರಸ್ ಬಂದಿದೆ. ಇದೇ ಹೊತ್ತಿಗೆ, ಬಹುಸಂಖ್ಯಾತ ಜನರ ಕೈಗೆಟುಕದ ಖಾಸಗಿ ಆರೋಗ್ಯ ಕ್ಷೇತ್ರವನ್ನು ನಿಯಂತ್ರಿಸುವವರೇ ಇಲ್ಲವಾಗಿದೆ. ಇದರಿಂದಲೇ ಮೋದಿಗೆ ಬಡಜನರ ಬಗ್ಗೆ ಎಷ್ಟು ಕಾಳಜಿಯಿದೆ, ಶ್ರೀಮಂತರ ಮೇಲೆ ಎಂತಹಾ ಮೋಹವಿದೆ ಎಂದು ಗೊತ್ತಾಗುತ್ತದೆ.

ಒಂದು ನಾಗರಿಕ ಸಮಾಜವು ತನ್ನ ಕಾರ್ಮಿಕರಿಗೆ ಸಲ್ಲಿಸುವ ಕೃತಜ್ಞತೆಯೆಂದರೆ ಅವರಿಗೆ ಉತ್ತಮ ವೇತನ, ಕೆಲಸದ ವಾತಾವರಣ, ಅರೋಗ್ಯ, ಸುರಕ್ಷತೆ ಒದಗಿಸುವುದು. ಆದರೆ, ಮೋದಿ ಸರಕಾರ ಅವರಿಗಾಗಿ ಮಾಡಿದ್ದೇನು? ಚಪ್ಪಾಳೆ ತಟ್ಟಿ ಎಂದದ್ದು. ಇದರ ಅರ್ಥ “ಚಪ್ಪಾಳೆ ತೆಗೆದುಕೊಳ್ಳಿ, ಜೀವ ಕಳೆದುಕೊಳ್ಳಿ- ಅದು ನಿಮ್ಮ ಕರ್ತವ್ಯ”. ಇದಕ್ಕೆ ಪ್ರತಿಕ್ರಿಯೆಯಾಗಿ ಅವರ ಕುರುಡು ಅಭಿಮಾನಿಗಳು ಗುಂಪುಗುಂಪಾಗಿ ಬೀದಿಗಿಳಿದು ಚಪ್ಪಾಳೆ ತಟ್ಟಿ, ಶಂಖ ಊದಿ, ಜಾಗಟೆ ಬಾರಿಸಿ, ಅದರ ಸದ್ದಿಗೇ ವೈರಸ್ ಓಡಿ ಹೋಗುತ್ತದೆ ಎಂದು ನಂಬುವುದರ ಮೂಲಕ ಮತ್ತು ಮೋದಿಗೆ ಹೆದರಿ ವೈರಸ್ ಓಡಿಹೋಗುತ್ತದೆ ಎಂದು ನಂಬುವುದರ ಮೂಲಕ ನಮ್ಮದು ಎಂತಹಾ ಅನಾಗರಿಕ ಮತ್ತು ಮೂರ್ಖ ಸಮಾಜ ಎಂಬುದನ್ನು ಜಗತ್ತಿಗೇ ತೋರಿಸಿಕೊಟ್ಟರು ಮಾತ್ರವಲ್ಲ, ಸಾಮಾಜಿಕ ಅಂತರ (social distancing) ಕಾಯ್ದುಕೊಳ್ಳುವ ಮೂಲ ಉದ್ದೇಶಕ್ಕೇ ಭಂಗ ತಂದು, ಜಾಗತಿಕವಾಗಿ ಭಾರತವನ್ನು ನಗೆಪಾಟಲಾಗಿಸಿದರು. ಇದರ ಪರಿಣಾಮ ಕೆಲದಿನಗಳಲ್ಲಿ ಗೊತ್ತಾದೀತು.

ಆದರೆ, ನರೇಂದ್ರ ಮೋದಿಗೆ ಈ ಕುರಿತು ಆತಂಕ ಇದ್ದಂತಿಲ್ಲ. ಅದನ್ನು ಅವರು ಖಂಡಿಸಲೂ ಇಲ್ಲ. ಅವರ ಆಸಕ್ತಿಯೆಲ್ಲಾ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಬಾಡಿಗೆ ಕೋಡಂಗಿಗಳು ಪ್ರಕಟಿಸಿದ, ಪ್ರಸಾರ ಮಾಡಿದ ಅತಿರಂಜಿತ ವರದಿಗಳು ಮತ್ತು ಅವು ನೀಡುವ ಪ್ರಚಾರದ ಮೇಲೆಯೇ ಇದ್ದಂತಿತ್ತು. ಅವರು ನಂತರ ಮಾಡಿದ ಲಾಕ್‌ಡೌನ್ ಭಾಷಣದಲ್ಲಿ ಇದು ವ್ಯಕ್ತವಾಗುತ್ತದೆ. ಅವರು ಯಾವುದೇ ಪಶ್ಚಾತ್ತಾಪ ಇಲ್ಲದೇ, ಅದೇ ಭಾಷೆ ಅದೇ ವರಸೆ ಬಳಸಿದ್ದಾರೆ.

ಜನರು ಮನೆಬಿಟ್ಟು ಹೊರಬಾರದು ಎಂದವರು ಈ ಭಾಷಣದಲ್ಲಿ “ಎಚ್ಚರಿಕೆ” ನೀಡಿದ್ದಾರೆ. ಆತ ಆಸ್ಪತ್ರೆಗಳಿಗೆ, ಆರೋಗ್ಯ ಕಾರ್ಯಕರ್ತರಿಗೆ ಮೂಲಭೂತ ಸುರಕ್ಷಾ ಸೌಲಭ್ಯಗಳನ್ನು ಒದಗಿಸಲು ಯಕಶ್ಚಿತ್ 15,000 ಕೋಟಿ ರೂ.ಗಳನ್ನು ನೀಡುವುದಾಗಿ ಹೇಳಿದಾಗ, ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ, ಕೈಯಲ್ಲಿ ಹಣವಿಲ್ಲದೆ, ಮನೆಯಲ್ಲಿ ಒಂದು ಚೂರು ಕಾಳೂ ಇಲ್ಲದೆ , ಕೊನೆಗೊಂದು ಸೂರೂ ಇಲ್ಲದೆ ಮನೆಯಿಂದ ನೂರಾರು ಮೈಲಿ ದೂರವಿದ್ದು ನರಳಾಡಬೇಕಾದ ಬಹುಸಂಖ್ಯಾತ ಬಡವರಿಗೆ ನೀಡಿದ್ದು ಅಸ್ಪಷ್ಟ ಭರವಸೆಗಳನ್ನು ಮಾತ್ರ! “ಕೇಂದ್ರ ಸರಕಾರವು ರಾಜ್ಯ ಸರಕಾರಗಳು ಮತ್ತು ಸಾಮಾಜಿಕ ಗುಂಪುಗಳ ಜೊತೆ ಬಡವರ ಕಷ್ಟಗಳನ್ನು ಕಡಿಮೆ ಮಾಡಲು ಕೆಲಸ ಮಾಡುತ್ತಿದೆ ” ಎಂದು ಅವರು ಹೇಳಿದಾಗ ಅವರು ತಮ್ಮ ಕರ್ತವ್ಯವನ್ನು ಮಾಡುತ್ತಿಲ್ಲ; ಬದಲಾಗಿ ಯಾವುದೋ ದಾನಧರ್ಮ ಮಾಡುತ್ತಿದ್ದಾರೆ ಎಂಬಂತಹ ಅಹಂಕಾರ ಎದ್ದುಕಾಣುತ್ತಿತ್ತು. ಆದರೂ ಯಾವುದೇ ನಿರ್ದಿಷ್ಟ ಕಾರ್ಯಕ್ರಮವನ್ನು ಅವರು ಘೋಷಿಸಲಿಲ್ಲ.

ದೇಶದ ಕೆಲವೆಡೆ ಪೊಲೀಸ್ ರಾಜ್ಯ ಇದ್ದಂತಿದೆ. ಒಂದೊಂದು ಕಡೆ ಒಂದೊಂದು ನಿಯಮ. ಯಾವುದೇ ರೀತಿಯ ಸಮನ್ವಯ ಇಲ್ಲ. ಕೆಲವು ಕಡೆ ಆಹಾರದ ಕೊರತೆ ಇದೆ. ಕೊರತೆ ಇಲ್ಲದಿದ್ದರೂ ಜನರ ಕೈಯಲ್ಲಿ ಹಣವಿಲ್ಲ. ಉಳ್ಳವರು ತಮಗೆ ಬೇಕಾಗಿರುವುದಕ್ಕಿಂತ ಹೆಚ್ಚು ದಾಸ್ತಾನಿರಿಸಿಕೊಂಡು ಮನೆಯಲ್ಲಿ ಕುಳಿತು ಉಳಿದವರಿಗೆ ಬುದ್ಧಿ ಹೇಳುತ್ತಾ, ಕರೋನಾ ಹರಡುವುದಕ್ಕೆ ಬಡವರನ್ನು ದೂರುತ್ತಿದ್ದಾರೆ. ಕೆಲವು ಕಡೆ ಪೊಲೀಸರು ದಿನಸಿ, ತರಕಾರಿ, ಔಷಧಿ ಇತ್ಯಾದಿ ಆವಶ್ಯಕ ವಸ್ತುಗಳನ್ನು ಕೊಳ್ಳಲು ಹೋದವರ ಮೇಲೂ ಲಾಠಿ ಬೀಸಿ, ಸಾರ್ವಜನಿಕ ಧ್ವನಿವರ್ಧಕಗಳಲ್ಲಿ ಕೆಟ್ಟ ಭಾಷೆ ಬಳಸಿ, ಕಾನೂನು ಬಾಹಿರವಾಗಿ ಕಸಗುಡಿಸುವುದು ಇತ್ಯಾದಿ ಸ್ವಯಂ ಶಿಕ್ಷೆ ನೀಡಿ ದಬ್ಬಾಳಿಕೆ ಮೆರೆಯುತ್ತಿದ್ದಾರೆ. ಹೊರಗೆ ಬಂದವರಿಗೆ ಗುಂಡು ಹೊಡೆಯಿರಿ ಎಂದಂತಹ ಹೊಟ್ಟೆ ತುಂಬಿದ ನಿಷ್ಕರುಣಿಗಳೂ ನಮ್ಮಲ್ಲಿದ್ದಾರೆ. ಅಲ್ಲಲ್ಲಿ ಸಿಕ್ಕಿಬಿದ್ದಿರುವ ವಲಸೆ ಕಾರ್ಮಿಕರು ಮನೆಗೆ ಮರಳಲು ಸಾವಿರಾರು ಮೈಲಿ ನಡೆಯಲು ಮುಂದಾಗಿರುವ ದೃಶ್ಯಗಳು ಮನಕಲಕುತ್ತವೆ. ಶ್ರೀಮಂತರು ವಿದೇಶಗಳಲ್ಲಿ ಸಿಕ್ಕಿಬಿದ್ದರೆ ವಿಮಾನ ಕಳುಹಿಸುವ ನಾವು, ಈ ಬಡ ಜನರನ್ನು ಮನೆ ತಲುಪಿಸುವ ವ್ಯವಸ್ಥೆಯನ್ನೂ ಮಾಡದೆ, ಮನೆಯಿಂದ ಹೊರಬರಬೇಡಿ ಎಂದು ಅರಚುತ್ತಿದ್ದೇವೆ. ಎಲ್ಲಿ ಕರುಣೆ, ವಿನಯ ಇರಬೇಕಿತ್ತೋ ಅಲ್ಲಿ ಕ್ರೌರ್ಯ, ದಬ್ಬಾಳಿಕೆ ಮೆರೆಯುತ್ತಿದ್ದು, ಕರೋನಾ, ಭಾರತದ ಒಂದು ಉಚ್ಛ ಜನವರ್ಗದ ನಿಜಗುಣವನ್ನು ಬಯಲಾಗಿಸಿದೆ.

ಇಂತಹಾ ಸಂದರ್ಭದಲ್ಲಿ ಕೇರಳದಂತಹ ಕೆಲವೇ ರಾಜ್ಯಗಳು ಮಾಡಿರುವಂತೆ ಅಗತ್ಯ ಇರುವವರ ಮನೆಮನೆಗಳಿಗೆ ಆವಶ್ಯಕ ವಸ್ತುಗಳನ್ನು ಮುಟ್ಟಿಸಿ ನಂತರ ಮನೆಯಿಂದ ಹೊರಬರಬೇಡಿ ಎಂದರೆ ಅದು ಮಾನವೀಯ ಎನಿಸಬಹುದಿತ್ತು. ಆದರೆ, ಮೋದಿ ಇಂತಹಾ ಯಾವುದೇ ಮಾತನ್ನೂ ಆಡದೆ, ನಿರ್ದಿಷ್ಟವಾಗಿ ಯಾವುದೇ ಕಾರ್ಯಯೋಜನೆಯನ್ನು ವಿವರಿಸದೆ, ದೇಶ, ಸೇವೆ, ಕರ್ತವ್ಯ, ತ್ಯಾಗ ಇತ್ಯಾದಿ ಸವಕಲು ಮಾತುಗಳನ್ನೇ ಬಣ್ಣ ಹಚ್ಚಿ ಹಸಿದವರ, ಸಂಕಷ್ಟದಲ್ಲಿರುವವರ ಮುಂದೆ ಆಡುತ್ತಾರೆ. ವಾಸ್ತವಿಕವಾಗಿ ಹಸಿವಿನ ಮುಂದೆ ಇವು ಯಾವುವೂ ಲೆಕ್ಕಕ್ಕಿಲ್ಲ ಎಂದು ಅವರು ತಿಳಿದಂತಿಲ್ಲ. ಅಥವಾ ಅವರಿಗೆ ಅದಾನಿ, ಅಂಬಾನಿಗಳ ಮೇಲಿರುವ ಕಾಳಜಿಯ ಸೂಜಿಮೊನೆಯಷ್ಟು ಕಾಳಜಿ ಅವರಿಗೆ ಇದ್ದಂತಿಲ್ಲ. ಆದರೂ ಇದೇ ಜನರು ಮೋದಿಗೆ ಜೈ ಎನ್ನುತ್ತಾರೆ!

Tags: BJPCorona OutbreakLockdownmohan lalPM ModiRSSಆರ್‌ಎಸ್‌ಎಸ್‌ಕರೋನಾ ವೈರಸ್‌ಪ್ರಧಾನಿ ಮೋದಿಬಿಜೆಪಿಮೋಹನ್‌ ಲಾಲ್‌ಲಾಕ್ ಡೌನ್
Previous Post

ಟಾಲಿವುಡ್‌ ಸ್ಟಾರ್‌ಗಳ ʼರಿಮೇಕ್‌ʼ ಮಾಡಲು ಸ್ಯಾಂಡಲ್‌ವುಡ್‌ ಗೆ ಇದು ಸಕಾಲ..

Next Post

ಇದು ಪ್ರಧಾನಿ ಸೋಲಬೇಕಾದ ಸಂದರ್ಭವಲ್ಲ, ಅವರೂ ಗೆದ್ದು ದೇಶವೂ ಗೆಲ್ಲಬೇಕು!

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
Next Post
ಇದು ಪ್ರಧಾನಿ ಸೋಲಬೇಕಾದ ಸಂದರ್ಭವಲ್ಲ

ಇದು ಪ್ರಧಾನಿ ಸೋಲಬೇಕಾದ ಸಂದರ್ಭವಲ್ಲ, ಅವರೂ ಗೆದ್ದು ದೇಶವೂ ಗೆಲ್ಲಬೇಕು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada