ರಾಜ್ಯಸಭೆಗೆ ರಾಷ್ಟ್ರಪತಿಗಳಿಂದ ನಾಮನಿರ್ದೇಶಿತರಾಗಿ ಆಯ್ಕೆಯಾಗುವವರು ತಮ್ಮ ಆಸ್ತಿ ಪಾಸ್ತಿಗಳ ಕುರಿತು ವಿವರ ನೀಡುವ ಅಗತ್ಯವಿಲ್ಲ ಎಂಬ ಮಾಹಿತಿ ಆರ್ಟಿಐನಲ್ಲಿ ಬಹಿರಂಗಗೊಂಡಿದೆ.
ರಾಜ್ಯಸಭಾ ಸದಸ್ಯರು ಆಸ್ತಿ ವಿವರ ಘೋಷಣೆ ಮಾಡಲು ಇರುವಂತಹ ನಿಯಮ ಮೂರರ ಪ್ರಕಾರ ಪ್ರತಿಯೊಬ್ಬ ಸದಸ್ಯರು ಕೂಡಾ ತಾವು ಆಯ್ಕೆಯಾದ 90 ದಿನಗಳ ಒಳಗಾಗಿ ತಮ್ಮ ಆಸ್ತಿಯ ಕುರಿತಾದ ಸಂಪೂರ್ಣ ವಿವರವನ್ನು ಸಲ್ಲಿಸಬೇಕಾಗಿದೆ. ಆದರೆ, ಆರ್ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಈ ನಿಯಮದ ಆಧಾರದ ಮೇಲೆ ತಮ್ಮ ಪ್ರಶ್ನೆಯನ್ನು ಮುಂದಿಟ್ಟಿದ್ದರು.
Also Read: ರಂಜನ್ ಗೊಗಾಯ್ರಿಗೆ ರಾಜ್ಯಸಭೆ ಸದಸ್ಯರಾಗಲು ಅರ್ಹತೆ ಇಲ್ಲ- ಸುಪ್ರೀಂ ನಿವೃತ್ತ ನ್ಯಾಯಾಧೀಶ ವಿ ಗೋಪಾಲ ಗೌಡ
ರಾಜ್ಯಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರಾಗಿರುವಂತಹ ಸ್ವಪಣ್ ದಾಸ್ಗುಪ್ತಾ, ರೂಪಾ ಗಂಗೂಲಿ, ಮೇರಿ ಕಾಮ್, ಸೋನಲ್ ಮಾನ್ಸಿಂಗ್, ರಘುನಾಥ್ ಮೊಹಪಾತ್ರ, ರಾಮ್ ಶಕಾಲ್, ರಾಕೇಶ್ ಸಿನ್ಹಾ, ಸುರೇಶ್ ಗೋಪಿ ಹಾಗೂ ಸುಬ್ರಹ್ಮಣ್ಯನ್ ಸ್ವಾಮಿಯವರ ಆಸ್ತಿ ವಿವರಗಳನ್ನು ಆರ್ಟಿಐ ಅಡಿಯಲ್ಲಿ ಕೇಳಲಾಗಿತ್ತು. ಅಂದಹಾಗೇ, ಇದೇ ಸಾಲಿನಲ್ಲಿ ಸುಪ್ರಿಂಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಂಜನ್ ಗೊಗಾಯ್ ಅವರು ಕೂಡಾ ನಿಲ್ಲುತ್ತಾರೆ.
Also Read: ರಂಜನ್ ಗೋಗಯ್ ಪ್ರಕರಣ: ಕಟಕಟೆಯಲ್ಲಿರುವ ವಿಶ್ವಾಸಾರ್ಹತೆ, ತೀರ್ಪು ನೀಡಬೇಕಿರುವ ಆತ್ಮಸಾಕ್ಷಿ
ಆರ್ಟಿಐ ಪ್ರಶ್ನೆಗೆ ಉತ್ತರಿಸಿರುವ ರಾಜ್ಯಸಭೆ ಕಾರ್ಯಾಲಯವು, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವಂತಹ ಅಭ್ಯರ್ಥಿಗಳು ಮಾತ್ರ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿದರೆ ಸಾಕು, ರಾಷ್ಟ್ರಪತಿಯಿಂದ ನಾಮನಿರ್ದೇಶನಗೊಳ್ಳುವಂತಹ ಅಭ್ಯರ್ಥಿಗಳು ವಿವರಗಳನ್ನು ನೀಡುವಂತಹ ಅಗತ್ಯವಿಲ್ಲ ಎಂದು ಹೇಳಿದೆ.
Also Read: ಮಾನ-ಮರ್ಯಾದೆಯೇ ಆಸ್ತಿ ಎಂದಿದ್ದ ಗೊಗಾಯಿ ಘನತೆ ಎಲ್ಲಿಗೆ ಬಂತು?
ಹೀಗಾಗಿ, ರಾಜ್ಯಸಭೆಯಲ್ಲಿರುವಂತಹ ಒಟ್ಟು 245 ಸದಸ್ಯರಲ್ಲಿ 233 ಸದಸ್ಯರು ಮಾತ್ರ ಆಸ್ತಿ ವಿವರಗಳನ್ನು ಸಲ್ಲಿಸಿದರೆ ಸಾಕು ಎಂಬಂತಹ ಉತ್ತರ ದೊರಕಿದೆ. ಈ ಕುರಿತಾಗಿ ಪ್ರಶ್ನಿಸಿರುವ ಆರ್ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಸರ್ಕಾರವೇ ಆಯ್ಕೆ ಮಾಡುವಂತಹ ಉಳಿದ 12 ಸದಸ್ಯರಿಗೇಕೆ ಈ ವಿನಾಯಿತಿ ಎಂದು ಪ್ರಶ್ನೆ ಮಾಡಿದ್ದಾರೆ.