“ಚಿಂತಕರ ಚಾವಡಿ” ಎಂದೇ ಪ್ರಸಿದ್ಧವಾದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆ ಸಾಧಿಸಿದ್ದು, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಲೋಕಸಭೆಯಲ್ಲಿ ಒಪ್ಪಿಗೆ ಪಡೆದ ಮಸೂದೆಗಳನ್ನು ಕಾಯ್ದೆಯಾಗಿ ರೂಪಿಸಲು ರಾಜ್ಯಸಭೆಯ ಒಪ್ಪಿಗೆ ಅವಶ್ಯ. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಬಹುಮತ ಪಡೆಯುವುದು ಯಾವುದೇ ಪಕ್ಷಕ್ಕೆ ಅತ್ಯಗತ್ಯ. ಸತತ ಎರಡನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸಿರುವ ಬಿಜೆಪಿಗೆ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಇನ್ನೂ ಸ್ಪಷ್ಟ ಬಹುಮತವಿಲ್ಲ. ಇದರಿಂದ ಬಿಜೆಪಿಯ ಸೈದ್ಧಾಂತಿಕ ನಿಲುವಿಗೆ ಪೂರಕವಾದ ವಿವಾದಾತ್ಮಕ ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಲು ನರೇಂದ್ರ ಮೋದಿ ಸರ್ಕಾರಕ್ಕೆ ತೊಡಕಾಗಿದೆ. ಈ ಕೊರತೆಯ ನಡುವೆಯೂ ಸಮಾನ ಮನಸ್ಕ ಪಕ್ಷಗಳ ನೆರವು, ರಾಜಕೀಯ ತಂತ್ರಗಾರಿಕೆ, ವ್ಯವಸ್ಥೆಯ ಲೋಪ, ಸೋಗಲಾಡಿ ವಿಪಕ್ಷಗಳ ಅನುಕೂಲಸಿಂಧು ರಾಜಕಾರಣದ ಲಾಭ ಪಡೆದ ಬಿಜೆಪಿಯು ವಿವಾದಾತ್ಮಕವಾದ ತ್ರಿವಳಿ ತಲಾಕ್, ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ಕಲ್ಪಿಸಲಾಗಿದ್ದ ವಿಶೇಷ ಸ್ಥಾನಮಾನದ ರದ್ದತಿ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಗಳನ್ನು ಜಾರಿಗೆ ತಂದಿದೆ.
ಮೊದಲ ಅವಧಿಯಲ್ಲಿ ಲೋಕಸಭೆಯಲ್ಲಿ ಸ್ಪಷ್ಟ ಬಹುಮತವಿದ್ದರೂ ರಾಜ್ಯಸಭೆಯಲ್ಲಿ ಸಂಖ್ಯಾಬಲದ ಕೊರತೆಯ ಹಿನ್ನೆಲೆಯಲ್ಲಿ ಬಿಜೆಪಿ ಭಾರಿ ಹಿನ್ನಡೆ ಅನುಭವಿಸಿತ್ತು. ರಾಜ್ಯಸಭೆಯಲ್ಲಿನ ಹಿನ್ನಡೆಯಿಂದ ಪಾರಾಗಲು ಸಂವಿಧಾನ ವಿರೋಧಿ ನಿಲುವು ತಳೆದಿದ್ದ ಮೋದಿ ಸರ್ಕಾರವು ಹಲವಾರು ವಿವಾದಾತ್ಮಕ ಮಸೂದೆಗಳನ್ನು ಹಣಕಾಸು ಮಸೂದೆ ಎಂದು ಮಂಡಿಸಿ ಜಾರಿಗೊಳಿಸಿದೆ. ಹಣಕಾಸು ಮಸೂದೆ ಎಂದು ಮಂಡಿಸಿದರೆ ಅವುಗಳಿಗೆ ರಾಜ್ಯಸಭೆಯ ಒಪ್ಪಿಗೆ ಅಗತ್ಯವಿರುವುದಿಲ್ಲ. ಈ ಹಣಕಾಸು ಮಸೂದೆ ಎಂದು ಮಂಡಿಸಲ್ಪಟ್ಟ ಕಾನೂನುಗಳ ಸಿಂಧುತ್ವ ಪ್ರಶ್ನಿಸಿ ಹಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಇವುಗಳು ಸಂವಿಧಾನ ವಿರೋಧಿ ಎಂದು ಕೋರ್ಟ್ ತೀರ್ಪು ನೀಡಿದಲ್ಲಿ ಸರ್ಕಾರಕ್ಕೆ ಭಾರಿ ಮುಖಭಂಗವಾಗಲಿದೆ.
ಜೂನ್ 19ರಂದು ದೇಶದ 10 ವಿವಿಧ ರಾಜ್ಯಗಳಲ್ಲಿ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಈ ಪೈಕಿ ಮೂವರು ಅವಿರೋಧವಾಗಿ ಆಯ್ಕೆಯಾದ ಸದಸ್ಯರೂ ಸೇರಿದಂತೆ ಬಿಜೆಪಿಯು 11 ಸ್ಥಾನಗಳಲ್ಲಿ ವಿಜಯ ಸಾಧಿಸಿತ್ತು. ಈ ಮೂಲಕ ರಾಜ್ಯಸಭೆಯಲ್ಲಿ ಬಿಜೆಪಿಯ ಸದಸ್ಯ ಬಲವು 86ಕ್ಕೆ ಏರಿಕೆಯಾಗಿದೆ. 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಯಾವುದೇ ಮಸೂದೆಗೆ ಕಾನೂನಿನ ಮುದ್ರೆ ಬೀಳಲು 123 ಸದಸ್ಯರ ಬೆಂಬಲ ಅತ್ಯಗತ್ಯ. ಜೂನ್ 19ರ ಚುನಾವಣಾ ಫಲಿತಾಂಶವು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತೀಯ ಒಕ್ಕೂಟದ (ಎನ್ಡಿಎ) ಬಲವು 101ಕ್ಕೆ ಏರಿದೆ. ಕಾಂಗ್ರೆಸ್ ನೇತೃತ್ವದ ಸಮಗ್ರ ಪ್ರಜಾಸತ್ತೀಯ ಒಕ್ಕೂಟದ (ಯುಪಿಎ) ಬಲವು 65 ಸದಸ್ಯರ ಸಂಖ್ಯೆಗೆ ಕುಸಿದಿದೆ. ಇಷ್ಟಾದರೂ ಎನ್ಡಿಎ ಸ್ಪಷ್ಟ ಬಹುಮತಕ್ಕೆ ಇನ್ನೂ 22 ಸದಸ್ಯರ ಬೆಂಬಲ ಅಗತ್ಯವಿದೆ. ಈ ಮಧ್ಯೆ, ಆಂಧ್ರಪ್ರದೇಶದ ಜಗನ್ಮೋಹನ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್, ತಮಿಳುನಾಡಿನ ಎಐಎಡಿಎಂಕೆ, ತೆಲಂಗಾಣದ ಟಿಆರ್ ಎಸ್, ಒಡಿಶಾದ ಬಿಜೆಡಿಯಂಥ ಪ್ರಾದೇಶಿಕ ಪಕ್ಷಗಳು ಬಿಜೆಪಿ ಬೆಂಬಲಕ್ಕೆ ತುದಿಗಾಲಲ್ಲಿ ನಿಂತಿವೆ. ಮುಂದಿನ ತಿಂಗಳು ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ರಾಜ್ಯಸಭಾ ಸದಸ್ಯತ್ವಕ್ಕೆ ಚುನಾವಣೆ ನಡೆಯಲಿದ್ದು, ಅಲ್ಲಿಯೂ ಬಿಜೆಪಿ ಮೇಲುಗೈ ಸಾಧಿಸುವ ಮೂಲಕ ಮೇಲ್ಮನೆಯಲ್ಲಿ ತನ್ನ ಸಂಖ್ಯಾಬಲವನ್ನು ವೃದ್ಧಿಸಿಕೊಳ್ಳುವುದು ಸ್ಪಷ್ಟವಾಗಿದೆ.
ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ವಿರೋಧ ಪಕ್ಷಗಳ ಸದಸ್ಯರನ್ನು ರಾಜೀನಾಮೆ ಕೊಡಿಸಿ ಚುನಾವಣೆಗೆ ನಿಲ್ಲಿಸುವುದು, ವಿಧಾನಸಭಾ ಸದಸ್ಯರನ್ನು ಖರೀದಿಸುವ ಮೂಲಕ ರಾಜ್ಯ ಸರ್ಕಾರಗಳನ್ನು ಉರುಳಿಸುವುದು ಸಾಮಾನ್ಯವಾಗಿದೆ. ಮಣಿಪುರ, ಗೋವಾ, ಮಧ್ಯಪ್ರದೇಶ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ವಿವಿಧ ಪ್ರಾದೇಶಿಕ ಪಕ್ಷಗಳ ವಿಧಾನಸಭಾ ಸದಸ್ಯರನ್ನು ಸಾಲಾಗಿ ರಾಜೀನಾಮೆ ಕೊಡಿಸಿ ಸರ್ಕಾರಗಳನ್ನು ರಾತ್ರೋರಾತ್ರಿ ಪತನಗೊಳಿಸುವ ಸಂವಿಧಾನ ವಿರೋಧಿ ಕೆಲಸವನ್ನು ಬಿಜೆಪಿ ಮಾಡಿದೆ.
ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ವಿಪಕ್ಷಗಳ ಸದಸ್ಯರಿಗೆ ಹಣ, ಅಧಿಕಾರದ ಆಸೆ ತೋರಿಸಿ ತನ್ನ ಪರವಾಗಿ ಮತಚಲಾಯಿಸುವಂತೆ ನೋಡಿಕೊಳ್ಳುವ ಕುತಂತ್ರ ನಡೆಸಿದೆ. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ವಿಪಕ್ಷಗಳ ರಾಜ್ಯಸಭಾ ಸದಸ್ಯರನ್ನು ರಾಜೀನಾಮೆ ಕೊಡಿಸಿ ಬಿಜೆಪಿ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದೆ. ಕಳೆದ ವರ್ಷ ಚಂದ್ರಬಾಬು ನಾಯ್ದು ನೇತೃತ್ವದ ಟಿಡಿಪಿಯ ನಾಲ್ವರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ರಾಜ್ಯಸಭಾ ಸದಸ್ಯರನ್ನು ಬಿಜೆಪಿಗೆ ಸೆಳೆದು ಅವರನ್ನು ತಮ್ಮ ಪಕ್ಷದ ಸದಸ್ಯರನ್ನಾಗಿಸಿಕೊಂಡಿತ್ತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮಾಜಿ ನಾಯಕ ನಾರಾಯಣ ರಾಣೆ ಅವರನ್ನು ಪಕ್ಷಕ್ಕೆ ಸೆಳೆದು ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿಸಿತ್ತು. ಈ ಮೂಲಕ ಬಿಜೆಪಿಯ ಸಂಘಟನೆಗೆ ಒತ್ತು ನೀಡಲಾಗಿತ್ತು. ಹೀಗೆ ಬಿಜೆಪಿಯ ಸದಸ್ಯರೆನಿಸಿಕೊಂಡ ಹಲವರ ಪೂರ್ವಾಪರ ಕೆದಕಿದರೆ ಅವರೆಲ್ಲರೂ ವಿಪಕ್ಷಗಳ ಹಿನ್ನೆಲೆ ಹೊಂದಿರುವುದನ್ನು ಕಾಣಬಹುದು.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಪತನಗೊಳಿಸಿದ ಬಿಜೆಪಿಯು ತನ್ನ ಸರ್ಕಾರ ಸ್ಥಾಪಿಸಿತ್ತು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನ ಪ್ರಮುಖ ನಾಯಕ ಹಾಗೂ ಗ್ವಾಲಿಯರ್ ಯುವರಾಜ ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನು ಸೆಳೆದ ಬಿಜೆಪಿಯು ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕೆಡವಿತ್ತು. ಇದೇ ತಂತ್ರವನ್ನು ರಾಜಸ್ಥಾನದಲ್ಲಿ ಅನುಸರಿಸಲು ಬಿಜೆಪಿ ಮುಂದಾಗಿತ್ತು. ಆದರೆ, ಪ್ರತಿತಂತ್ರ ಹೆಣೆದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಬಿಜೆಪಿಯ ದುಸ್ಸಾಹಸವನ್ನು ವಿಫಲಗೊಳಿಸಿದ್ದನ್ನು ಇಲ್ಲಿ ನೆನೆಯಬಹುದು.
ರಾಜ್ಯಸಭೆಯನ್ನು ಚಿಂತಕರ ಚಾವಡಿ, ಹಿರಿಯರ ಸದನ ಎನ್ನಲಾಗುತ್ತದೆ. ಜನಸ್ನೇಹಿಯಾದ ಕಾನೂನುಗಳನ್ನು ರೂಪಿಸುವ ಮೂಲಕ ದೇಶದ ಭವಿಷ್ಯವನ್ನು ನಿರ್ಮಿಸುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿರುತ್ತದೆ. ಅದರಲ್ಲೂ ರಾಜ್ಯಸಭೆ ಪ್ರವೇಸಿಸುವವರಿಗೆ ವಿಶೇಷವಾದ ಮಾನ್ಯತೆ ಇರುತ್ತದೆ. ಸೈದ್ಧಾಂತಿಕ ಬದ್ಧತೆ, ದೇಶ, ಭಾಷೆ, ವಿವಿಧ ವಿಷಯಗಳ ಮೇಲೆ ಹಿಡಿತ, ಲೋಕಜ್ಞಾನ, ದೂರದರ್ಶಿತ್ವ ಹೊಂದಿರುವವರನ್ನು ರಾಜ್ಯಸಭೆಗೆ ಕಳುಹಿಸಿಕೊಡಲಾಗುತ್ತದೆ. ಲೋಕಸಭೆಗೆ ಆಯ್ಕೆಯಾಗುವವರ ನ್ಯೂನತೆಗಳನ್ನು ತಿದ್ದಿ, ಕಾಯ್ದೆಯೊಂದನ್ನು ಸಮಗ್ರವಾಗಿ ರೂಪಿಸುವ ಜವಾಬ್ದಾರಿಯನ್ನು ರಾಜ್ಯಸಭಾ ಸದಸ್ಯರ ಮೇಲಿದೆ. ಆದರೆ, ಬಿಜೆಪಿಯ ಆಡಳಿತದಲ್ಲಿ ಸಂವಿಧಾನದ ಪರಿಕಲ್ಪನೆಯನ್ನು ಅಣಕಿಸುವ ಬೆಳವಣಿಗೆಗಳು ಎಗ್ಗಿಲ್ಲದೇ ಸಾಗುತ್ತಿವೆ. ಪ್ರಜಾತಾಂತ್ರಿಕ ಮೌಲ್ಯಗಳಿಗೆ ಅಪಚಾರ ಎಸಗುವ ಸಂವಿಧಾನದ ಅಣಕದಂತೆ ಭಾಸವಾಗುವ ಕುತಂತ್ರಿಗಳು, ಉದ್ಯಮಿಗಳು, ರಿಯಲ್ ಎಸ್ಟೇಟ್ ದಲ್ಲಾಳಿಗಳು ರಾಜ್ಯಸಭೆಯ ಸದಸ್ಯರಾಗುತ್ತಿದ್ದಾರೆ. ಅಧಿಕಾರ ಹಿಡಿಯುವುದು ಹಾಗೂ ಮೇಲುಗೈ ಸಾಧಿಸುವುದೇ ರಾಜಕಾರಣ ಎಂದುಕೊಂಡಿರುವ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಜೋಡಿಯು ದೇಶದ ಪ್ರಜಾತಾಂತ್ರಿಕ ಮೌಲ್ಯಗಳಿಗೆ ಮರ್ಮಾಘಾತ ನೀಡುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕವಾಗಿದೆ.