ಡಾ. ಕೆ ಸುಧಾಕರ್ ಅವರಿಂದ ತೆರವಾದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸ್ಥಾನಕ್ಕೆ ಆಯ್ಕೆಗೊಂಡಿದ್ದ ಡಾ. ಸುಧೀಂದ್ರ ರಾವ್ರವರು ಅಧ್ಯಕ್ಷ ಸ್ಥಾನಕ್ಕೆ ಶನಿವಾರ (ಮೇ 2, 2020) ರಾಜೀನಾಮೆ ಕೊಟ್ಟಿದ್ದಾರೆ. ಇವರ ನೇಮಕವು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದ ವಿರುದ್ದವಾಗಿದೆ ಎಂದು ಅರಿತು, ಈ ಮುಂಚೆಯೇ ವಿಸ್ಥೃತವಾದ ವರದಿಯನ್ನು ʼಪ್ರತಿಧ್ವನಿʼ ಪ್ರಕಟಿಸಿತ್ತು.
Also Read: ಅನರ್ಹರಿಂದ `ಮಲೀನ’ವಾಗುತ್ತಿದೆ ಮಾಲಿನ್ಯ ನಿಯಂತ್ರಣ ಮಂಡಳಿ!
ಡಾ. ಸುಧೀಂದ್ರ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಕಾನೂನು ಬಾಹಿರ ಎಂದು ಕಮಿಟಿ ಫಾರ್ ಪಬ್ಲಿಕ್ ಅಕೌಂಟೆಬಿಲಿಟಿ (Committee for Public Accountability) ಎನ್ನುವ ಸರ್ಕಾರೇತರ ಸಂಸ್ಥೆಯು ರಿಟ್ ಅರ್ಜಿಯನ್ನು (WP No 2899/2020) ಕರ್ನಾಟಕ ಹೈಕೋರ್ಟ್ಗೆ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡಿಯುತ್ತಿರುವ ಸಂದರ್ಭದಲ್ಲಿ, ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿಯಾದ ಡಾ. ಸಂದೀಪ್ ದವೆ ಅವರು ಸುಧೀಂದ್ರ ರಾವ್ ಅವರಿಗೆ ಪತ್ರ ಬರೆದು ಯಾವುದೇ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳದಂತೆ ಆದೇಶಿಸಿದ್ದರು.
ಇನ್ನು ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವ ಮೊದಲೇ, ಡಾ. ಸುಧೀಂದ್ರ ರಾವ್ರವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ, ಹೈಕೋರ್ಟ್ನಿಂದ ಛೀಮಾರಿ ಹಾಕಿಸಿಕೊಳ್ಳಲು ಇಚ್ಚಿಸದೇ ರಾಜಿನಾಮೆ ಮೊರೆ ಹೋಗಿದ್ದಾರೆಂದು ಹೇಳಲಾಗಿದೆ.
ಈಗ, ಇವರು ಸಲ್ಲಿಸಿರುವ ರಾಜಿನಾಮೆಯನ್ನು ಅಂಗೀಕರಿಸಲಾಗಿದ್ದು ತೆರವಾದ ಸ್ಥಾನಕ್ಕೆ IAS ಅಧಿಕಾರಿ ವಿಜಯ್ಕುಮಾರ್ ಗೋಗಿಯವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಕಮಿಟಿ ಫಾರ್ ಪಬ್ಲಿಕ್ ಅಕೌಂಟೆಬಿಲಿಟಿಯ ಅಧ್ಯಕ್ಷರಾದ ಶಿವಕುಮಾರ್ ಎಸ್, ಈ ನಿರ್ಧಾರವನ್ನು ಸುಧೀಂದ್ರ ರಾವ್ ಅವರು ಬಹಳಷ್ಟು ಮೊದಲೇ ತೆಗೆದುಕೊಳ್ಳಬೇಕಾಗಿತ್ತು. ಇನ್ನಾದರೂ ಸರ್ಕಾರವು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅರ್ಹವಾದ ವ್ಯಕ್ತಿಗಳನ್ನು ಆ ಹುದ್ದೆಗೆ ನೇಮಿಸಲಿ ಎಂದಿದ್ದಾರೆ.