ಬುದ್ಧ ಪೂರ್ಣಿಮೆಯ ಹಿನ್ನೆಲೆಯಲ್ಲಿ ಪರೋಕ್ಷ ಪ್ರಾರ್ಥನಾ ಸಭೆಯೊಂದರಲ್ಲಿ ಭಾಗವಹಿಸಿದ ಪ್ರಧಾನಿ ಮೋದಿಯವರು , ಇಡೀ ಜಗತ್ತು ಸಂಕಷ್ಟದಲ್ಲಿರುವ ಈ ಹೊತ್ತಿನಲ್ಲಿ ಬುದ್ಧನ ಬೋಧನೆಗಳು ಹೆಚ್ಚು ಪ್ರಸ್ತುತ. ಬುದ್ಧನ ನಾಡು ಭಾರತ, ಅವರ ಬೋಧನೆಗಳ ಹಾದಿಯಲ್ಲೇ ಸಾಗಿ ನೊಂದವರು, ಕಷ್ಟದಲ್ಲಿರುವವರ ನೆರವಿಗೆ ಕೈಚಾಚಿದೆ. ದೇಶದ ಒಳಹೊರಗೆ ಎಲ್ಲರ ಹಿತರಕ್ಷಣೆಗಾಗಿ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ. ಔಷಧ ಮತ್ತು ವೈದ್ಯಕೀಯ ಸಲಕರಣೆಗಳನ್ನು ಜಗತ್ತಿನ ಮೂಲೆಮೂಲೆಗೆ ಸರಬರಾಜು ಮಾಡುವ ಮೂಲಕ ಜಾಗತಿಕ ಫಾರ್ಮಸಿಯಂತೆ ಕೆಲಸ ಮಾಡುತ್ತಿದೆ ಎಂದಿದ್ದಾರೆ.
ಲಾಭ, ನಷ್ಟ, ಪ್ರಬಲ, ದುರ್ಬಲ ಎಂಬ ಲೆಕ್ಕಾಚಾರಗಳನ್ನೆಲ್ಲಾ ಮೀರಿ ಜಗತ್ತಿನ ಸರಿಸುಮಾರು ನೂರು ದೇಶಗಳಿಗೆ ಹೈಡ್ರೋಕ್ಸಿಕ್ಲೋರೋಕ್ವೈನ್ ಸೇರಿದಂತೆ ವಿವಿಧ ಔಷಧ ಮತ್ತು ವೈದ್ಯಕೀಯ ಪರಿಕರಗಳನ್ನು ಸರಬರಾಜು ಮಾಡಲಾಗಿದೆ. ಅಮೆರಿಕ, ಬ್ರಿಜಿಲ್, ಸ್ಪೇನ್, ಮಧ್ಯಪ್ರಾಚ್ಯ, ಮಲೇಶ್ಯಾ, ನೇಪಾಳ, ಬಾಂಗ್ಲಾ ಸೇರಿದಂತೆ ಹಲವು ದೇಶಗಳು ಭಾರತದ ಈ ನೆರವನ್ನು ಸ್ಮರಿಸುತ್ತಿವೆ. ಬುದ್ಧನ ಮಾನವೀಯ ದಾರಿಯಲ್ಲಿ ಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿರುವ ದೇಶದ ಬಗ್ಗೆ ಜಾಗತಿಕ ಮಟ್ಟದಲ್ಲಿ ಗೌರವ ಮತ್ತು ಅಭಿಮಾನ ಮೂಡಿದೆ ಎಂದೂ ಮೋದಿ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಭಾರತ ತನ್ನ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದೆ. ಕರೋನಾ ವೈರಾಣು ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿದ್ದು ಜಾಗತಿಕ ಮಟ್ಟದಲ್ಲಿ ಒಗ್ಗಟ್ಟಿನಿಂದ ಹೋರಾಡುವ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತಿದೆ ಎಂದೂ ಪ್ರಧಾನಿ ಹೇಳಿದ್ದಾರೆ.
ಹಾಗೆ ನೋಡಿದರೆ, ಕರೋನಾ ವಿಷಯದಲ್ಲಿ ಜಾಗತಿಕ ಸಮುದಾಯವನ್ನು ಉದ್ದೇಶಿಸಿಸಿ ಮೋದಿಯವರು ಮಾತನಾಡುತ್ತಿರುವುದು ಇದೇ ಮೊದಲೇನಲ್ಲ. ಈಗಾಗಲೇ ಸಾರ್ಕ್ ಒಕ್ಕೂಟ, ಜಿ20 ದೇಶಗಳು ಮತ್ತು ನ್ಯಾಮ್ ಒಕ್ಕೂಟವನ್ನು ಉದ್ದೇಶಿಸಿಯೂ ಪ್ರಧಾನಿ ಮೋದಿ ಕಳೆದ ಒಂದು ತಿಂಗಳಲ್ಲಿ ಮೂರಕ್ಕೂ ಹೆಚ್ಚು ಬಾರಿ ಮಾತನಾಡಿದ್ದಾರೆ. ಅಲ್ಲದೆ, ಕಳೆದ ಮಾರ್ಚ್ ಎರಡನೇ ವಾರದಿಂದಲೇ ಮೋದಿಯವರು, ಪ್ರತಿದಿನವೂ ಒಬ್ಬ ಜಾಗತಿಕ ನಾಯಕರೊಂದಿಗೆ ಮಾತನಾಡುತ್ತಿದ್ದಾರೆ. ಅವರ ವೈಯಕ್ತಿಕ ಕುಶಲೋಪರಿಯ ಜೊತೆ ಕೋವಿಡ್-19 ವಿರುದ್ಧದ ಆ ದೇಶದ ಹೋರಾಟ, ಜಾಗತಿಕ ಮಟ್ಟದಲ್ಲಿ ಜಂಟಿ ಹೋರಾಟ, ಸಂಶೋಧನೆಯ ಬಗ್ಗೆಯೂ ಚರ್ಚಿಸುತ್ತಾರೆ. ಈಗಾಗಲೇ ಹಾಗೆ ಅಮೆರಿಕ, ಫ್ರಾನ್ಸ್, ರಷ್ಯಾ, ಜರ್ಮನಿ, ಸ್ಪೇನ್, ಕೆನಡಾ, ಜಪಾನ್, ಸಿಂಗಪೂರ್, ದಕ್ಷಿಣ ಆಫ್ರಿಕಾ, ಪೋರ್ಚುಗಲ್, ಸ್ವೀಡನ್ ಸೇರಿದಂತೆ ಹಲವು ದೇಶಗಳ ನಾಯಕರೊಂದಿಗೆ ಪರಸ್ಪರ ಚರ್ಚೆ ನಡೆಸಿದ್ದಾರೆ ಎಂದು ಪ್ರಧಾನಮಂತ್ರಿಗಳ ಕಚೇರಿಯ ಮೂಲಗಳು ಹೇಳಿವೆ ಎಂದು ‘ದ ಪ್ರಿಂಟ್’ ಉಲ್ಲೇಖಿಸಿದೆ.
ಕರೋನಾ ಸಂಕಷ್ಟದ ಹೊತ್ತಲ್ಲಿ ಜಾಗತಿಕ ಮಟ್ಟದ ಬಲಾಢ್ಯ ರಾಷ್ಟ್ರಗಳು ತಮ್ಮದೇ ಸಮಸ್ಯೆ, ಸಂಕಟದಲ್ಲಿ ಮುಳುಗಿವೆ. ಚೀನಾದಂತಹ ದೇಶ ತಾನು ಮಹಾಮಾರಿಯ ವಿಷಯದಲ್ಲಿ ಜಾಗತಿಕ ಸಮುದಾಯವನ್ನು ದಿಕ್ಕುತಪ್ಪಿಸಿದ, ವಂಚಿಸಿದ ಆರೋಪಕ್ಕೆ ಸಿಲುಕಿ ಜಾಗತಿಮ ಮಟ್ಟದಲ್ಲಿ ದೊಡ್ಡ ಮುಖಭಂಗ ಮತ್ತು ಅವಮಾನ ಎದುರಿಸಿ ಬದಿಗೆ ಸರಿದಿದೆ. ಅಮೆರಿಕ ವಿಶ್ವದ ಅತಿ ಹೆಚ್ಚು ಸಾವು-ನೋವುಗಳಿಗೆ ಸಾಕ್ಷಿಯಾಗಿ, ಅಧ್ಯಕ್ಷ ಟ್ರಂಪ್ ವೈಫಲ್ಯ ಮತ್ತು ಮೂರ್ಖತನವನ್ನು ಇಡೀ ದೇಶ ಶಪಿಸತೊಡಗಿದೆ. ಹಾಗಾಗಿ ಅಮೆರಿಕಕ್ಕೆ ಸದ್ಯ ತನ್ನ ಮನೆಮಾರು ಸರಿಪಡಿಸಿಕೊಂಡರೆ ಸಾಕಾಗಿದೆ. ಇನ್ನು ಬಹುತೇಕ ಯುರೋಪಿಯನ್ ದೇಶಗಳು ಕೋವಿಡ್ 19ರ ವಿರುದ್ಧದ ಅಳಿವು ಉಳಿವಿನ ಹೋರಾಟದಲ್ಲೇ ನಿರತವಾಗಿವೆ. ರಷ್ಯಾ ಕೂಡ ಜಾಗತಿಕ ವಿದ್ಯಮಾನಗಳತ್ತ ತಲೆಹಾಕುವಷ್ಟು ಆಸಕ್ತಿ ಹೊಂದಿಲ್ಲ. ಆದರೆ, ಇಂತಹ ಅವಕಾಶವನ್ನು ಬಳಸಿಕೊಂಡು ಭಾರತ ಜಾಗತಿಕ ನಾಯಕತ್ವ ವಹಿಸುವ ಒಂದು ಪ್ರಯತ್ನವಾಗಿ ಪ್ರಧಾನಿ ಮೋದಿ ಹೀಗೆ ನಿರಂತರವಾಗಿ ಜಾಗತಿಕ ಸಮುದಾಯದೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ನೂರಕ್ಕೂ ಹೆಚ್ಚು ದೇಶಗಳಿಗೆ ಮಾನವೀಯತೆಯ ನೆಲೆಯ ಮೇಲೆ ವೈದ್ಯಕೀಯ ನೆರವು ವಿಸ್ತರಿಸಿದ್ದಾರೆ. ಇದು ಖಂಡಿತವಾಗಿಯೂ ಒಂದು ಜಾಗತಿಕ ರಾಜತಾಂತ್ರಿಕ ಚಾಣಾಕ್ಷತನ ಎಂದು ಬಣ್ಣಿಸಲಾಗುತ್ತಿದೆ.
ಆದರೆ, ಜಾಗತಿಕ ಮಟ್ಟದಲ್ಲಿ ದೇಶವನ್ನು ನಾಯಕನಾಗಿ ಬಿಂಬಿಸುವುದಕ್ಕಿಂತ, ಸ್ವತಃ ತಮ್ಮನ್ನು ಜಾಗತಿಕ ನಾಯಕ ಎಂದು ಬಿಂಬಿಸಿಕೊಳ್ಳುವ ಜರೂರು ಪ್ರಧಾನಿಯವರದ್ದು. ಹಾಗಾಗಿ ಅವರು, ದೇಶದ ಆಂತರಿಕವಾಗಿ ಕರೋನಾ ಸೋಂಕು ವಿರುದ್ಧದ ಹೋರಾಟ ಮತ್ತು ಅದರಿಂದಾಗಿ ಆಗಿರುವ ಆರ್ಥಿಕ ನಷ್ಟವನ್ನು ಸರಿಪಡಿಸುವ ಕಡೆ ಕೊಡಬೇಕಾದ ಗಮನಕ್ಕಿಂತ ನಿತ್ಯ ಅಂತಾರಾಷ್ಟ್ರೀಯ ಮಟ್ಟದ ನಾಯಕರ ಜೊತೆ ಹೆಚ್ಚು ಮಾತನಾಡುತ್ತಿದ್ದಾರೆ. ಆಂತರಿಕವಾಗಿ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನದಂತಹ ರಾಜ್ಯಗಳಲ್ಲಿ ಕರೋನಾ ಪ್ರಕರಣಗಳು ಆಘಾತಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಲಾಕ್ ಡೌನ್ ನಿಂದಾಗಿ ರಾಜ್ಯಗಳ ಆದಾಯ ಮೂಲ ಸಂಪೂರ್ಣ ನೆಲಕಚ್ಚಿದೆ. ಉದ್ಯಮ ಚಟುವಟಿಕೆ, ಕೃಷಿ, ಸೇವಾ ವಲಯಗಳೆಲ್ಲವೂ ಬಿದ್ದುಹೋಗಿವೆ. ಇಡೀ ದೇಶವೇ ಹಿಂದೆಂದೂ ಕಂಡುಕೇಳರಿಯದ ಸಂಕಷ್ಟದಲ್ಲಿದೆ. ಇಂತಹ ಹೊತ್ತಲ್ಲಿ ರಾಜ್ಯಗಳ ಸಿಎಂಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಅಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಕೇಳಬೇಕು, ರೋಗದ ನಿಯಂತ್ರಣ, ಚಿಕಿತ್ಸೆ ಮತ್ತು ಲಾಕ್ ಡೌನ್ ಹೊಡೆತದಿಂದ ಆರ್ಥಿಕತೆಯನ್ನು, ರಾಜ್ಯದ ಆದಾಯ ಕೊರತೆಯನ್ನು ಪಾರುಮಾಡುವ ಬಗ್ಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ಆದರೆ, ಅಂತಹ ಪ್ರಯತ್ನಗಳನ್ನು ಪ್ರಧಾನಿಯವರು ನಡೆಸಿದ್ದು ತೀರಾ ವಿರಳ.
ಜೊತೆಗೆ, ಇದೀಗ ಲಾಕ್ ಡೌನ್ ತೆರವಿನ ಬಳಿಕ ವಲಸೆ ಕಾರ್ಮಿಕರ ಮತ್ತೊಂದು ಸಮಸ್ಯೆ ಉಲ್ಬಣಗೊಂಡಿದೆ. ಲಾಕ್ ಡೌನ್ ಅವಧಿಯಲ್ಲಿ 40 ದಿನಗಳ ಕಾಲ ಕೆಲಸವಿಲ್ಲದೆ, ಊಟ-ಉಪಾಹಾರವಿಲ್ಲದೆ ಕಂಗಾಲಾದ ವಲಸೆ ಕಾರ್ಮಿಕರು ಇದೀಗ ನಗರ ತೊರೆದು ತಮ್ಮ ಹಳ್ಳಿಗಳತ್ತ ಮುಖಮಾಡಿದ್ದಾರೆ. ಈ ಕಾರ್ಮಿಕರ ತಮ್ಮ ಮೂಲ ನೆಲೆಗಳ ಕಡೆಗಿನ ಈ ದಾರುಣ ಪಯಣ, ಈ ನಲವತ್ತು ದಿನಗಳ ಕಾಲ ಮೋದಿಯವರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಅವರ ಜೀವಕ್ಕೆ ಕನಿಷ್ಠ ಭರವಸೆಯ ಖಾತ್ರಿಯನ್ನೂ ನೀಡಿಲ್ಲ, ಅವರಿಗೆ ಊಟ- ವಸತಿಯ ವ್ಯವಸ್ಥೆ ಮಾಡಿದ್ದೇವೆ ಎಂಬ ಸರ್ಕಾರದ ಮಾತುಗಳು ಕೇವಲ ಬಡಿವಾರದ ಬರಿ ಮಾತುಗಳು ಎಂಬುದನ್ನು ಸಾಬೀತುಮಾಡಿದೆ.
ಕರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಸೆಣೆಸುತ್ತಿರುವ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಯ ನಿಟ್ಟಿನಲ್ಲಿ ಅಗತ್ಯ ಗುಣಮಟ್ಟದ ಮತ್ತು ಪ್ರಮಾಣದ ಸುರಕ್ಷಾ ಸಾಧನಗಳನ್ನು (ಪಿಪಿಇ) ಸರಬರಾಜು ಮಾಡಲಾಗದ ಸರ್ಕಾರದ ಹೊಣೆಗೇಡಿತನದಿಂದಾಗಿ ದೇಶದ ಉದ್ದಗಲಕ್ಕೆ ಐದು ನೂರಕ್ಕೂ ಅಧಿಕ ವೈದ್ಯರು ಮತ್ತು ದಾದಿಯವರು ಸೋಂಕಿಗೆ ಗುರಿಯಾಗಿದ್ದಾರೆ. ಈಗಲೂ ಹಲವು ವೈದ್ಯಕೀಯ ಸಿಬ್ಬಂದಿ ಅಗತ್ಯ ಪ್ರಮಾಣದ ಪಿಪಿಇಗಳಿಗಾಗಿ ಮೊರೆ ಇಡುತ್ತಲೇ ಇದ್ದಾರೆ. ಕೆಲವು ಕಡೆ ಬೀದಿಗಿಳಿದು ಹೋರಾಟವನ್ನೂ ಮಾಡಿದ್ದಾರೆ. ವೈದ್ಯಕೀಯ ಸಿಬ್ಬಂದಿಯ ಜೀವರಕ್ಷಣೆಯ ವಿಷಯದಲ್ಲಿ ತಮ್ಮ ಸರ್ಕಾರ ತೋರಬೇಕಾದ ಪ್ರಮಾಣದಲ್ಲಿ ಕಾಳಜಿ ತೋರಿಲ್ಲ ಎಂಬ ಬಗ್ಗೆ ಪ್ರಧಾನಿ ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು.
ಹಾಗೆಯೇ ಕೃಷಿಕರ ಬದುಕಿಗೆ ಆಸರೆಯಾಗಿ ಹಲವು ನೆರವು ಮತ್ತು ಅನುಕೂಲಗಳನ್ನು ಒದಗಿಸುವುದು ಸರ್ಕಾರದ ಹೊಣೆಯಾಗಿತ್ತು. ದೊಡ್ಡ ಪ್ರಮಾಣದಲ್ಲಿ ಪಂಚಾಯ್ತಿ ಮಟ್ಟದಲ್ಲಿ ಕೃಷಿ ಉತ್ಪನ್ನ ಖರೀದಿ ಮತ್ತು ಬೇಡಿಕೆ ಇರುವ ಕಡೆ ಸರಬರಾಜು ಮಾಡುವುದು ಸರ್ಕಾರಕ್ಕೆ ದೊಡ್ಡ ಸವಾಲಿನ ಕೆಲಸವಾಗಿರಲಿಲ್ಲ. ಆದರೆ ಪ್ರಧಾನಿ ಮೋದಿಯವರು ಸಣ್ಣ ರೈತರ ಖಾತೆಗೆ ಎರಡು ಸಾವಿರ ಹಣ ವರ್ಗಾವಣೆ ಮಾಡಿ ತಮ್ಮ ಕೈತೊಳೆದುಕೊಂಡುಬಿಟ್ಟರು. ಕೇರಳದಂತಹ ರಾಜ್ಯದಲ್ಲಿ ಯಶಸ್ಸಿಯಾಗಿ ಜಾರಿಗೊಳಿಸಿದ ಜನೋಪಯೋಗಿ ಕ್ರಮಗಳಾಗಲೀ, ಕರ್ನಾಟಕದ ಕೆಲವು ಪಂಚಾಯ್ತಿಗಳು ತಮ್ಮದೇ ವ್ಯಾಪ್ತಿಯಲ್ಲಿ ಮಾಡಿದ ರೈತ ಸಂಕಷ್ಟ ಪರಿಹಾರ ಕ್ರಮಗಳಾಗಲೀ ದೇಶವ್ಯಾಪಿ ಅನ್ನದಾತರ ಕಣ್ಣೀರು ಒರೆಸಲು ಶಕ್ತವಾಗಿದ್ದವು. ಆದರೆ, ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಕೃಷಿ ಉತ್ಪನ್ನಗಳ ನಷ್ಟ ತಡೆಯುವ ನಿಟ್ಟಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸಲೇ ಇಲ್ಲ.
ಜಾಗತಿಕ ಮಟ್ಟದಲ್ಲಿ ಕೂಡ ಜರ್ಮನಿಯ ಏಂಜೆಲಾ ಮರ್ಕೆಲ್, ನ್ಯೂಜಿಲೆಂಡಿನ ಜೆಸಿಂದಾ ಆರ್ಡೆನ್, ಡೆನ್ಮಾರ್ಕಿನ ಮಿಟ್ಟಿ ಫೆಡ್ರಿಕ್ಸನ್, ತೈವಾನ್ ನ ಸಾಯ್ ಇಂಗ್ವೆನ್ ಅವರಂಥ ಸಮಯೋಚಿತ ಮತ್ತು ಚಾಣಾಕ್ಷ ನಿರ್ಧಾರಗಳ ಮೂಲಕ ನೆರೆಹೊರೆಯ ದೇಶಗಳಲ್ಲಿ ಮಹಾಮಾರಿ ಸಾವಿರಾರು ಮಂದಿಯನ್ನು ಬಲಿತೆಗೆದುಕೊಳ್ಳುತ್ತಿರುವಾಗಲೂ ತಮ್ಮ ದೇಶದಲ್ಲಿ ಅದನ್ನು ಯಶಸ್ವಿಯಾಗಿ ನಿಭಾಯಿಸಿದರು. ಜೊತೆಗೆ ಕರೋನಾ ವಿರುದ್ಧದ ನೇರ ಸಮರದ ಜೊತೆಗೆ, ಅದರ ತಡೆಯ ಭಾಗವಾಗಿ ಹೇರಿದ ಲಾಕ್ ಡೌನ್ ನಿಂದ ಸಂತ್ರಸ್ತರಾದವರ ಬದುಕು ಸಂಕಷ್ಟಕ್ಕೆ ಸಿಲುಕದಂತೆ ಸಕಾಲಿಕ ನೆರವು ನೀಡಿದರು. ಮೋದಿಯವರು ತಮ್ಮ ಆಪ್ತ ಸ್ನೇಹಿತ ಎಂದು ಹೇಳುವ ಡೊನಾಲ್ಡ್ ಟ್ರಂಪ್ ಕೂಡ ತನ್ನ ದೇಶದ ಜನರಿಗೆ ಪ್ರತಿಯೊಬ್ಬರಿಗೂ ಕರೋನಾ ಸ್ಟಿಮುಲಸ್ ಪ್ಯಾಕೇಜ್ ಭಾಗವಾಗಿ (ತಲಾ 1200 ಡಾಲರ್) ಭಾರೀ ಮೊತ್ತವನ್ನು ನೇರ ವರ್ಗಾವಣೆ ಮಾಡಿದ್ದಾರೆ. ಆದರೆ, ಭಾರತದ ಪ್ರಧಾನಿಯಾಗಿ ಮೋದಿ ಮಹಿಳಾ ಜನ್ ಧನ್ ಖಾತೆಗೆ ತಲಾ 500 ರೂ, ಹಾಕುವುದಾಗಿ ಹೇಳಿದ ಮಾತೇ ಇನ್ನೂ ನೂರಕ್ಕೆ ನೂರು ಜಾರಿಗೆ ಬಂದಿಲ್ಲ!
ಹೀಗಿರುವಾಗ, ಬರಿ ಮಾತುಗಳಲ್ಲಿ, ದೊಡ್ಡ ದೊಡ್ಡ ಹೇಳಿಕೆಗಳಲ್ಲಿ ದೇಶದ ಬಡವರು, ಕಾರ್ಮಿಕರು, ಕೃಷಿಕರ ಬದುಕು ಕಾಯಲಾಗುವುದಿಲ್ಲ. ಬದಲಾಗಿ ಆಮೂಲಾಗ್ರವಾದ ಯೋಜನೆಗಳು ಬೇಕು, ಕಾರ್ಯನೀತಿಗಳು ಬೇಕು. ಅಂತಹ ಯೋಜನೆ ಮತ್ತು ಕಾರ್ಯನೀತಿಗಳು ತಳಮಟ್ಟದ ಬದುಕಿನ ಅರಿವಿನಿಂದ ಪ್ರೇರಣೆಗೊಂಡಿರಬೇಕು ಮತ್ತು ಅವುಗಳ ಅನುಷ್ಟಾನದ ವೇಳೆ ಸಂಕಷ್ಟದ ಹೊತ್ತಲ್ಲಿ ಜನರ ನೋವಿಗೆ ಮಿಡಿಯುವ ಮಾನವೀಯತೆಯಷ್ಟೇ ಕೆಲಸ ಮಾಡಬೇಕು ವಿನಃ ರಾಜಕೀಯ ಲಾಭನಷ್ಟದ ಲೆಕ್ಕಾಚಾರವಲ್ಲ. ಆದರೆ, ಸರ್ಕಾರದ ಬಳಿ ಈವರೆಗೂ ಕರೋನಾ ಸಂಕಷ್ಟದಿಂದ ಬದುಕು ಕಳೆದುಕೊಂಡಿರುವ ಮತ್ತು ಮುಂದೆ ಕಳೆದುಕೊಳ್ಳಲಿರುವ ಜನರ ಕುರಿತ ಸಮಗ್ರ ಯೋಜನೆ, ಕಾರ್ಯನೀತಿಗಳೇ ಇಲ್ಲ. ಆದರೆ, ಜಾಗತಿಕ ನಾಯಕರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲಲು ಪ್ರಧಾನಮಂತ್ರಿಗಳಿಗೆ ಅವರ ವರ್ಚಸ್ಸು ವೃದ್ಧಿ ಪಡೆ (ಪಿಆರ್ ಪಡೆ) ಬುದ್ಧ ಪೂರ್ಣಿಮೆಯ ದಿನದ ವರ್ಚುವಲ್ ಭಾಷಣದಂತಹ ಪ್ರಯತ್ನಗಳನ್ನು ಮಾತ್ರ ಯೋಜಿತವಾಗಿ ಮಾಡುತ್ತದೆ. ಜಾಗತಿಕ ನಾಯಕರಾಗಿ ಮೋದಿ ಹೊರಹೊಮ್ಮುತ್ತಾರೆ.