ಸರ್ಕಾರಿ ಜಮೀನು ಒತ್ತುವರಿ ತೆರವು ವೇಳೆ ಪೊಲೀಸ್ ಭೀಕರ ಹಲ್ಲೆ ಮತ್ತು ದಬ್ಬಾಳಿಕೆಯಿಂದ ರೋಸಿದ ದಲಿತ ದಂಪತಿ ತಹಶೀಲ್ದಾರರು ಮತ್ತು ಪೊಲೀಸ್ ಅಧಿಕಾರಿಗಳ ಕಣ್ಣ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಮಧ್ಯಪ್ರದೇಶದ ಗುಣ ಪಟ್ಟಣದಲ್ಲಿ ನಡೆದಿದೆ.
ಗುಣ ಪಟ್ಟಣದ ಹೊರವಲಯದ ಐದು ಎಕರೆ ಜಮೀನಿನಲ್ಲಿ ದಲಿತ ಸಮುದಾಯದ ರಾಮಕುಮಾರ್ ಮತ್ತು ಆತನ ಪತ್ನಿ ಸಾವಿತ್ರಿ ಕುಟುಂಬ ಸಾಗುವಳಿ ಮಾಡಿಕೊಂಡಿತ್ತು. ಆದರೆ, ಆ ಜಾಗ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಮೀಸಲಿಟ್ಟ ಜಾಗ ಎಂದು ಜಿಲ್ಲಾಡಳಿತದ ಸೂಚನೆ ಮೇರೆಗೆ ಸ್ಥಳೀಯ ತಹಶೀಲ್ದಾರರು ಪೊಲೀಸ್ ಬಲದೊಂದಿಗೆ ಮಂಗಳವಾರ ತೆರವು ಕಾರ್ಯಾಚರಣೆಗೆ ಮುಂದಾಗಿದ್ದರು. ಈ ವೇಳೆ ರಾಮ್ ಕುಮಾರ್ ಮತ್ತು ಪತ್ನಿ ಹಾಕಿದ ಬೆಳೆ ಕಟಾವು ಬಳಿಕ ಜಾಗ ಬಿಟ್ಟುಕೊಡುವುದಾಗಿ ಹೇಳಿ, ಬೆಳೆ ಕೊಯಿಲುವರೆಗೆ ಸಮಾಯಾವಕಾಶ ಕೋರಿದ್ದಾರೆ. ಆದರೆ, ಅವರ ಮನವಿಗೆ ಸೊಪ್ಪುಹಾಕದ ಆಡಳಿತ ಜೆಸಿಬಿ ಬಳಸಿ ಬೆಳೆ ನಾಶ ಮಾಡಿದ್ದಾರೆ. ಈ ವೇಳೆ ಬೆಳೆ ಮೇಲೆ ಮಾಡಿದ ಸಾಲದಿಂದ ದಿಕ್ಕೆಟ್ಟ ಕುಟುಂಬ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಎಷ್ಟೇ ಗೋಗರೆದರು ಪೊಲೀಸರು, ಲಾಠಿಯಿಂದ ಹೊಡೆದು, ಬೂಟಿನಿಂದ ಒದ್ದು, ಅಕ್ಷರಶಃ ಅವರನ್ನು ಪ್ರಾಣಿಗಳಂತೆ ಅನಾಮತ್ತಾಗಿ ಎತ್ತಿ ಹೊರಹಾಕಲು ಮುಂದಾಗಿದ್ದಾರೆ.
ಈ ಪೊಲೀಸ್ ದಬ್ಬಾಳಿಕೆಯಿಂದ ಕಂಗೆಟ್ಟು ಪತಿ- ಪತ್ನಿ ತಮ್ಮ ಮಕ್ಕಳ ಕಣ್ಣೆದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪೊಲೀಸರು ಅಂತಹ ಪರಿಸ್ಥಿತಿಯಲ್ಲಿ ಕೂಡ ವಿಷ ಸೇವಿಸಿದವರ ಜೀವ ರಕ್ಷಣೆಯ ಬದಲಾಗಿ ಅವರ ಮೇಲೆಯೇ ಅಮಾನುಷ ಹಲ್ಲೆ ನಡೆಸುತ್ತಿರುವ, ಅಮಾಯಕ ಮಕ್ಕಳನ್ನು ಬೆದರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಂಪತಿಗಳನ್ನು ಬಳಿಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರ ಪರಿಸ್ಥಿತಿಯೂ ಗಂಭೀರವಾಗಿದೆ ಎಂದು ವರದಿಗಳು ಹೇಳಿವೆ.
“ಜಮೀನನ್ನು ಬೇರೆಯವರಿಂದ ನ್ಯಾಯಯುತವಾಗಿ ದುಡ್ಡು ಕೊಟ್ಟು ಖರೀದಿಸಿ ಬೆಳೆ ಬೆಳೆದಿದ್ದೆವು. ಅದಕ್ಕಾಗಿ ಸುಮಾರು 3 ಲಕ್ಷ ರೂ. ಸಾಲ ಮಾಡಿದ್ದೆವು. ಈಗ ಬೆಳೆ ಕಟಾವಿಗೂ ಅವಕಾಶ ನೀಡದೆ ಹೀಗೆ ಮಾಡಿದರೆ, ನಮಗೆ ವಿಷ ಸೇವಿಸದೆ ಬೇರೆ ದಾರಿ ಏನಿದೆ” ವಿಷ ಸೇವಿಸುವ ಮುನ್ನ ದಂಪತಿ ತಮ್ಮ ಅಸಹಾಯಕತೆ ತೋಡಿಕೊಂಡಿರುವುದು ವರದಿಯಾಗಿದೆ. ಆದರೆ ವ್ಯವಸ್ಥೆ ಎಷ್ಟು ಅಮಾನುಷವೆಂದರೆ; ಹೀಗೆ ತಮ್ಮ ಮಕ್ಕಳ ಕಣ್ಣೆದುರೇ ವಿಷ ಸೇವಿಸಿ ಹೊರಳಾಡುತ್ತಾ ಬಿದ್ದ ದಂಪತಿಗೆ ಚಿಕಿತ್ಸೆ ಕೊಡಿಸುವ ಬದಲು, ಪೊಲೀಸರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ ಮನೆಮಂದಿಯ ಮೇಲೂ ಲಾಠಿ ಬೀಸಿದ್ದಾರೆ. ಜೀವ ಬಿಡುವ ಹಂತದಲ್ಲಿದ್ದವರ ಮೇಲೂ ಬೂಟುಗಾಲಿನಲ್ಲಿ ಒದ್ದು ಅಟ್ಟಹಾಸ ಮೆರೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಹೇಯ ಘಟನೆ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಶಿವರಾಜ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಜನಾಕ್ರೋಶ ಕೂಡ ವ್ಯಕ್ತವಾಗುತ್ತಿದ್ದು, ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಯ ಅಮಾನವೀಯ ನಡೆ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು, ದಲಿತಪರ ಸಂಘಟನೆಗಳು ಕೂಡ ಘಟನೆಯ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿತ ಮತ್ತು ಶಿವರಾಜ್ ಸಿಂಗ್ ದಲಿತ ವಿರೋಧಿ ನೀತಿಗಳನ್ನು ಟೀಕಿಸಿದ್ದು, ರಾಜ್ಯದಲ್ಲಿ ಸದ್ಯ ಇರುವುದು ಎಂಥ ಕಟುಕ ಸರ್ಕಾರ ಮತ್ತು ಎಷ್ಟು ಹೀನಾಯವಾದ ಜಂಗಲ್ ರಾಜ್ ವ್ಯವಸ್ಥೆ ಜಾರಿಯಲ್ಲಿದೆ ಎಂಬುದಕ್ಕೆ ಈ ಘಟನೆ ಒಂದು ನಿದರ್ಶನ ಎಂದು ಹೇಳಿವೆ.
ಈ ನಡುವೆ, ಸ್ವತಃ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಕಮಲ್ ನಾಥ್, ರಾಹುಲ್ ಗಾಂಧಿ, ಗುಜರಾತ್ ಶಾಸಕ ಮತ್ತು ದಲಿತ ಮುಖಂಡ ಜಿಗ್ನೇಶ್ ಮೆವಾನಿ ಮತ್ತಿತರು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಈ ಹೇಯ ಘಟನೆಯನ್ನು ಖಂಡಿಸಿದ್ದು, ಮಧ್ಯಪ್ರದೇಶದ ಬಿಜೆಪಿ ಆಡಳಿತದಲ್ಲಿ ದಲಿತರಿಗೆ ಯಾವುದೇ ಸುರಕ್ಷತೆ ಇಲ್ಲ. ದೇಶದ ಕಾನೂನು ಮತ್ತು ಪ್ರಜಾಸತ್ತೆಗೆ ಬಿಜೆಪಿ ಯಾವ ಮಟ್ಟಿನ ಬೆಲೆ ನೀಡುತ್ತಿದೆ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ. ಪೊಲೀಸ್ ಗುಂಡೂಗಿರಿಗೆ ಕುಮ್ಮಕ್ಕು ನೀಡುವ ಬಿಜೆಪಿ ಆಡಳಿತ ವರಸೆ ಉತ್ತರಪ್ರದೇಶದ ಬಳಿಕ ಈಗ ಮಧ್ಯಪ್ರದೇಶದಲ್ಲಿ ಮತ್ತೆ ತಲೆ ಎತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Also Read: ಪಂಜಾಬಿ ದಲಿತ- ಬಂತ್ ಎಂಬ ಅನಂತ!
ಪ್ರತಿಪಕ್ಷಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ಕುರಿತು ವ್ಯಾಪಕ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಒತ್ತಡಕ್ಕೆ ಸಿಲುಕಿದ ಶಿವರಾಜ್ ಸಿಂಗ್ ಸರ್ಕಾರ, ಗುಣ ಜಿಲ್ಲಾಧಿಕಾರಿ ಎಸ್ ವಿಶ್ವನಾಥನ್ ಮತ್ತು ಪೊಲೀಸ್ ವರಿಷ್ಟಾಧಿಕಾರಿ ತರುಣ್ ನಾಯಕ್ ಅವರನ್ನು ಸೇವೆಯಿಂದ ಅಮಾನುತುಗೊಳಿಸಿದೆ.
ಆದರೆ, ಮಂಗಳವಾರ ನಡೆದ ಈ ಘಟನೆ ಗುರುವಾರದವರೆಗೆ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳಲ್ಲಾಗಲೀ, ಟಿವಿ ವಾಹಿನಿಗಳಲ್ಲಾಗಲೀ ಕಾಣಿಸಿಕೊಂಡಿದ್ದು ವಿರಳ. ಸಾಮಾಜಿಕ ಜಾಲತಾಣದಲ್ಲಿ ಕೂಡ, ಅಮೆರಿಕದ ಕರಿಯರ ವಿರುದ್ಧದ ದಬ್ಬಾಳಿಕೆಯ ಸಂದರ್ಭದಲ್ಲಿ ಮಹಾನ್ ಮಾನವತಾವಾದಿಗಳಾಗಿ ಮಿಡಿದಿದ್ದ ದೇಶದ ಸೆಲೆಬ್ರಿಟಿಗಳು, ಸಿನಿಮಾ ತಾರೆಯರು, ಕ್ರಿಕೆಟಿಗರು, ಸಾಮಾಜಿಕ ಜಾಲತಾಣದ ಸ್ಟಾರುಗಳು ಸೇರಿದಂತೆ ಯಾರೂ ಈ ಬಗ್ಗೆ ಮರುಕು ವ್ಯಕ್ತಪಡಿಸಲಿಲ್ಲ. ಆ ಹಿನ್ನೆಲೆಯಲ್ಲಿ ಭಾರತೀಯ ಸೆಲೆಬ್ರಿಟಿಗಳ ಆಶಾಢಭೂತಿತನವೂ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದೆ. ನಿಮಗೆ #blacklivesmatter ಮಾತ್ರವೇ ಕಾಣುತ್ತದೆ, ದಲಿತರ ಜೀವಗಳು ಕಾಣುತ್ತಿಲ್ಲ ಎಂದಾದರೆ, ನಿಮ್ಮ ಮಾನವೀಯತೆ, ಔದಾರ್ಯಗಳನ್ನು ಯಾರಿಗೆ ಅಡವಿಟ್ಟಿದ್ದೀರಿ? ದಲಿತದ ಬದುಕಿಗೆ ಬೆಲೆಯೇ ಇಲ್ಲವೆ? ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯಗಳಿಗೆ ನಿಮ್ಮ ಮನಸ್ಸು ಕರಗಲು ಯಾವುದು ಅಡ್ಡಿಯಾಗಿದೆ? ಜಾತಿ ವ್ಯವಸ್ಥೆ, ಜಾತಿ ವ್ಯವಸ್ಥೆಯೊಂದಿಗಿನ ತಾರತಮ್ಯ, ದಬ್ಬಾಳಿಕೆ, ಅಟ್ಟಹಾಸಗಳು ಒಪ್ಪಿತ, ವರ್ಣ ವ್ಯವಸ್ಥೆಯ ಬಗ್ಗೆ ಮಾತ್ರ ನಿಮ್ಮ ವಿರೋಧ ಎಂದೇ ಇದರರ್ಥ? ಎಂಬ ಪ್ರಶ್ನೆಗಳು ಸದ್ದು ಮಾಡುತ್ತಿವೆ.
ಅದರಲ್ಲೂ ಮುಖ್ಯವಾಗಿ ಆ ದಲಿತ ದಂಪತಿ ಕೊಲೆ ಮಾಡಿರಲಿಲ್ಲ, ದರೋಡೆ ಮಾಡಿರಲಿಲ್ಲ. ಕೇವಲ ತುಂಡು ಜಮೀನಿನಲ್ಲಿ, ಅದು ಸರ್ಕಾರಿ ಜಾಗ ಎಂಬ ಕಾನೂನು ಮಾಹಿತಿ ಕೂಡ ಇಲ್ಲದೆ, ಬೇರೊಬ್ಬ ವ್ಯಕ್ತಿಯಿಂದ ಖರೀದಿಸಿ ಅಲ್ಲಿ ಬೆಳೆ ಬೆಳೆದಿದ್ದರು. ಅವರಿಗೆ ಬೆಳೆ ಕಟಾವಿಗೆ ಅವಕಾಶ ನೀಡಲು ಕಾನೂನು ಅವಕಾಶವಿತ್ತು. ಅದೂ ಸಾಧ್ಯವಿಲ್ಲದಿದ್ದರೆ, ಕಾನೂನು ಹೋರಾಟದ ಮೂಲಕ ಭೂಮಿ ವಶಪಡಿಸಿಕೊಳ್ಳುವ ಅವಕಾಶವಿತ್ತು. ಆದರೆ, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸಾಧ್ಯವಿದ್ದ ಎಲ್ಲವನ್ನೂ ಬಿಟ್ಟು ನೇರಾನೇರಾ ಪೊಲೀಸ್ ಅಟ್ಟಹಾಸದ ಮೂಲಕ, ಮೃಗೀಯ ವರಸೆಯ ಮೂಲಕ ದುರ್ಬಲರನ್ನು ಹೀಗೆ ಹೊಸಕಿಹಾಕಿ ಜಮೀನು ತೆರವು ನಡೆಸುವುದು ಎಂದರೆ ಇದು ಬಿಜೆಪಿಯ ನಿರಂಕುಶ ಪ್ರಭುತ್ವದ ನಡೆಯಷ್ಟೇ. ಉತ್ತರಪ್ರದೇಶ ಮಾದರಿಯಲ್ಲೇ ಬಿಜೆಪಿ ಇಡೀ ದೇಶದಲ್ಲಿ ನಿರಂಕುಶ ಪ್ರಭುತ್ವ, ಸರ್ವಾಧಿಕಾರಿ ಆಡಳಿತ ಜಾರಿಗೆ ತರುತ್ತಿದೆ ಎಂಬುದಕ್ಕೆ ಈ ಘಟನೆ ಮತ್ತೊಂದು ನಿದರ್ಶನ ಎಂಬ ಟೀಕೆಗಳು ವ್ಯಕ್ತವಾಗಿವೆ.
ದೇಶದಲ್ಲಿ ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆಯೇ ಅಥವಾ ಪೊಲೀಸ್ ರಾಜ್, ಜಂಗಲ್ ರಾಜ್ ವ್ಯವಸ್ಥೆ ಜಾರಿಯಲ್ಲಿದೆಯೇ ಎಂಬ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿರುವ ಮಧ್ಯಪ್ರದೇಶದ ಈ ದಲಿತರ ಮೇಲಿನ ಅಟ್ಟಹಾಸ, ಬಿಜೆಪಿಯ ಆಡಳಿತ ವರಸೆಗೆ ಕನ್ನಡಿ ಹಿಡಿದಿದೆ.