ಅಕ್ಷತಾ ನಾಯಕ್ ಎಂಬವರು ವೀಡಿಯೋವೊಂದರ ಮೂಲಕ Republic Tv ಮುಖ್ಯಸ್ಥ ಅರ್ನಬ್ ಗೋಸ್ವಾಮಿ ವಿರುದ್ಧ ಗಂಭೀರವಾದ ಆರೋಪವೊಂದನ್ನ ಮಾಡಿದ್ದಾರೆ. ಈ ವೀಡಿಯೋವನ್ನು ಮಹಾರಾಷ್ಟ್ರ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿಯೂ ಹಂಚಿಕೊಂಡಿದೆ.
Republic Tv ಸ್ಟುಡಿಯೋವನ್ನು ವಿನ್ಯಾಸಗೊಳಿಸಿದ್ದಕ್ಕಾಗಿ ಅರ್ನಬ್ ಗೋಸ್ವಾಮಿ ಹಾಗೂ ಇಬ್ಬರು ಇತರರು ತನ್ನ ಪತಿ ಅನ್ವೆ ನಾಯಕ್ ರಿಗೆ ನೀಡಬೇಕಿದ್ದ ಹಣ ಬಾಕಿ ಉಳಿಸಿಕೊಂಡಿದ್ದರು ಎಂದು ವೀಡಿಯೋದಲ್ಲಿ ಅನ್ವೆ ನಾಯಕ್ ಪತ್ನಿ ಅಕ್ಷತಾ ನಾಯಕ್ ಆರೋಪಿಸಿದ್ದಾರೆ. ಇನ್ನು ಮೇ 26ರಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಈ ಪ್ರಕರಣವನ್ನು ಮರು ತನಿಖೆಗಾಗಿ CIDಗೆ ವಹಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ ಏನು.?
Sabrang India ಸುದ್ದಿ ಜಾಲತಾಣ ವರದಿ ಮಾಡಿರುವ ಪ್ರಕಾರ, 2018ರ ಮೇ ತಿಂಗಳಲ್ಲಿ ಅರ್ನಬ್ ಗೋಸ್ವಾಮಿ ಹಾಗೂ ಫಿರೋಜ್ ಶೈಕ್ ಮತ್ತು ನಿತೇಶ್ ಸರ್ದಾ ಎಂಬವರ ವಿರುದ್ಧ ಆಲಿಭಗ್ ಪೊಲೀಸ್ ಠಾಣೆಯಲ್ಲಿ ಅನ್ವೆ ನಾಯಕ್ ಮತ್ತು ಅವರ ತಾಯಿಯ ಆತ್ಮಹತ್ಯೆ ಸಂಬಂಧ ಪ್ರಕರಣ ದಾಖಲಾಗಿತ್ತು. ಅನ್ವೆ ನಾಯಕ್ ಕಾನ್ಕಾರ್ಡ್ ಡಿಸೈನ್ಸ್ ಪ್ರೈ. ಲಿ. ಸಂಸ್ಥೆಯ ಮಾಲೀಕರಾಗಿದ್ದರು. ಇವರು ಮಾನಸಿಕ ಖಿನ್ನತೆಗೆ ಒಳಗಾಗಿ ತನ್ನ ತಾಯಿಯ ಜೊತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಅನ್ವೆ ನಾಯಕ್ ಬರೆದಿಟ್ಟಿದ್ದ ಡೆತ್ ನೋಟ್ ನಲ್ಲಿ ಅರ್ನಬ್ ಗೋಸ್ವಾಮಿ, ಫಿರೋಜ್ ಶೈಕ್ ಹಾಗೂ ನಿತೇಶ್ ಸರ್ದಾ ಸೇರಿದಂತೆ ಒಟ್ಟು 5.4 ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿದ್ದರು ಎಂದು ಉಲ್ಲೇಖಿಸಲಾಗಿತ್ತು. ಈ ಪೈಕಿ ಅರ್ನಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿ ಸ್ಟುಡಿಯೋ ವಿನ್ಯಾಸಗೊಳಿಸಿದಕ್ಕಾಗಿ ಅನ್ವೆ ನಾಯಕ್ ರಿಗೆ 83 ಲಕ್ಷ ರೂಪಾಯಿ ಹಣ ಕೊಡಬೇಕಾಗಿತ್ತು.
ಆದರೆ ಈ ಬಗ್ಗೆ ಆಗಲೇ ರಿಪಬ್ಲಿಕ್ ಟಿವಿ ಒಂದು ಸ್ಪಷ್ಟತೆಯನ್ನೂ ಕೂಡ ಪತ್ರದ ಮೂಲಕ ನೀಡಿತ್ತು. “ಈ ಪತ್ರದಲ್ಲಿ “ರಿಪಬ್ಲಿಕ್ ಟಿವಿ ಈ ಮೂಲಕ ಸ್ಪಷ್ಟ ಪಡಿಸಲು ಇಚ್ಛಿಸುವುದು ಏನೆಂದರೆ, ರಿಪಬ್ಲಿಕ್ ಟಿವಿ ಸ್ಟುಡಿಯೋ ವಿನ್ಯಾಸಗೊಳಿಸಿದ ಕಾನ್ಕಾರ್ಡ್ ಡಿಸೈನ್ಸ್ ಪ್ರೈ. ಲಿ. ಕಂಪೆನಿಗೆ ನೀಡಬೇಕಿದ್ದ ಎಲ್ಲಾ ಹಣವನ್ನು ಪಾವತಿ ಮಾಡಿಯಾಗಿದೆ. ಇದಕ್ಕೆ ಸಂಬಂಧಿಸಿದ ಚೆಕ್ ಹಾಗೂ ಬ್ಯಾಂಕ್ ವ್ಯವಹಾರಗಳ ದಾಖಲೆಗಳು ನಮ್ಮ ಬಳಿ ಇದೆ. ಸಂಬಂಧಿತ ಅಧಿಕಾರಿಗಳಿಗೆ ಅದನ್ನು ತೋರಿಸಲು ರಿಪಬ್ಲಿಕ್ ಟಿವಿ ಸಿದ್ಧವಿದೆ” ಎಂದು ಹೇಳಿತ್ತು.
ವಿಡಿಯೋದಲ್ಲಿ ಅಕ್ಷತಾ ನಾಯಕ್ ಮಾಡಿದ ಆರೋಪವೇನು.?
2018ರ ಮೇ ತಿಂಗಳಲ್ಲಿ ಅಲಿಭಾಗ್ ನಲ್ಲಿರುವ ತಮ್ಮ ಫಾರ್ಮ್ಹೌಸ್ನಲ್ಲಿ ನನ್ನ ಪತಿ ಅನ್ವೆ ನಾಯಕ್ ಹಾಗೂ ತಾಯಿ ಆತ್ಮಹತ್ಯೆಗೆ ಶರಣಾಗಿದ್ದರು. ಇದಕ್ಕೂ ಮುನ್ನ ಅನ್ವೆ ಬರೆದಿಟ್ಟಿದ್ದ ಡೆತ್ ನೋಟ್ನಲ್ಲಿ ಅರ್ನಬ್ ಗೋಸ್ವಾಮಿ, ಫಿರೋಜ್ ಶೈಕ್ ಹಾಗೂ ನಿತೇಶ್ ಸರ್ದಾ ಎಂಬ ಮೂವರ ಹೆಸರು ಉಲ್ಲೇಖಿಸಿ, ಈ ಮೂವರಿಂದ ತನಗೆ ಸುಮಾರು 5 ಕೋಟಿ ರೂಪಾಯಿ ಮೊತ್ತ ಬರಬೇಕಿದೆ ಎಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಆಲಿಭಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರು ಕೂಡ ಇವರನ್ನು ಈವರೆಗೆ ಬಂಧಿಸಿಲ್ಲ. ಈ ಪ್ರಕರಣದ ತನಿಖೆಯಲ್ಲಿ ಈವರೆಗೆ ಯಾವುದೇ ಪ್ರಗತಿಯೂ ಆಗಿಲ್ಲ. ಅರ್ನಬ್ ಗೋಸ್ವಾಮಿ ಸೇರಿದಂತೆ ಮೂವರ ವಿರುದ್ಧವೂ ಕ್ರಮಗೈಗೊಳ್ಳಬೇಕೆಂದು ಅಕ್ಷತಾ ನಾಯಕ್ ಕೇಳಿಕೊಂಡಿದ್ದಾರೆ. ಅಲ್ಲದೆ ತನ್ನ ಹಾಗೂ ತನ್ನ ಮಗಳಿದೆ ಜೀವದ ಭಯ ಇದೆ ಎಂದೂ ವೀಡಿಯೋದಲ್ಲಿ ಹೇಳಿದ್ದಾರೆ.
ಇನ್ನು ವೀಡಿಯೋದಲ್ಲಿ ಅಕ್ಷತಾ ನಾಯಕ್ ಆಲಿಭಗ್ ಪೊಲೀಸ್ ಠಾಣೆಯ ಪಿಐ ಸುರೇಶ್ ವರದೆ ಎಂಬವರ ವಿರುದ್ಧವೂ ಆರೋಪ ಎತ್ತಿದ್ದಾರೆ. ಈ ಪ್ರಕರಣದ ಸಂಬಂಧ FIR ದಾಖಲಿಸಿ ಸೂಕ್ತ ಕ್ರಮಕೈಗೊಳ್ಳಿ ಎಂದು ಕೇಳಿಕೊಂಡರೂ ಸುರೇಶ್ ವರದೆ ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿರಲಿಲ್ಲ. ಕೇಳಿದಾಗಲೆಲ್ಲ ತನಿಖೆ ಪ್ರಗತಿಯಲ್ಲಿದೆ ಮತ್ತು ಪೂರಕ ಸಾಕ್ಷ್ಯಗಳು ಈವರೆಗೆ ಸಿಕ್ಕಿಲ್ಲ ಎಂದು ಸಬೂಬು ನೀಡುತ್ತಿದ್ದಾರೆ. ಅಲ್ಲದೆ ತನಿಖೆಗೆಂದು ಕೊಂಡೊಯ್ಯಲಾದ ಅನ್ವೆ ನಾಯಕ್ ಅವರ ಲ್ಯಾಪ್ಟಾಕ್ ಹಾಗೂ ಮೊಬೈಲ್ ಫೋನ್ ಈವರೆಗೂ ಹಿಂತಿರುಗಿಸಿಲ್ಲ ಎಂದು ಅಕ್ಷತಾ ನಾಯಕ್ ವೀಡಿಯೋದಲ್ಲಿ ಆರೋಪಿಸಿದ್ದಾರೆ.
ಸದ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಈ ಪ್ರಕರಣದ ಮರು ತನಿಖೆಗೆ CIDಗೆ ಒಪ್ಪಿಸಿದ್ದಾರೆ. ಈ ಬಗ್ಗೆ ತನ್ನ ಅಧಿಕೃತ ಟ್ವಿಟರ್ ಖಾತೆಯಿಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.