ಕೋವಿಡ್ -19 ತಂದೊಡ್ಡಿರುವ ಆರ್ಥಿಕ ಸಂಕಷ್ಟದಿಂದ ಭಾರತ ಚೇತರಿಸಿಕೊಳ್ಳುತ್ತಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಇಂಡಿಯಾ ಗ್ಲೋಬಲ್ ವೀಕ್-2020 ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡಿದ ಮೋದಿ ಭಾರತವು ವಿಶ್ವದ ಅತ್ಯಂತ ಮುಕ್ತ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
ಜಾಗತಿಕ ಒಳಿತಿಗಾಗಿ ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ಭಾರತವು ಏನು ಬೇಕಾದರೂ ಮಾಡಲು ಸಿದ್ಧವಾಗಿದೆ. ಇದು ಸುಧಾರಣೆಯಾಗುವ, ಪರಿವರ್ತನೆಯಾಗುವ ಭಾರತ ಎಂದಿದ್ದಾರೆ. ಆತ್ಮ ನಿರ್ಭರ ಎನ್ನುವುದು ಭಾರತವನ್ನು ಜಗತ್ತಿನ ಬಾಗಿಲನ್ನು ಮುಚ್ಚುವುದಲ್ಲ ಬದಲಾಗಿ ಸ್ವಾವಲಂಬಿ ಹಾಗೂ ಸ್ವಯಂ ಉತ್ಪಾದನೆಗೆ ತೆರೆದುಕೊಳ್ಳುವುದು ಎಂದು ಹೇಳಿದ್ದಾರೆ.
ಭಾರತವು ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಯುದ್ಧವನ್ನು ನಡೆಸುತ್ತಿದೆ. ಜನರ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸುವುದರೊಂದಿಗೆ, ನಾವು ಆರ್ಥಿಕತೆಯ ಆರೋಗ್ಯದ ಮೇಲೆ ಅಷ್ಟೇ ಗಮನ ಹರಿಸುತ್ತಿದ್ದೇವೆ.
ಭಾರತವು ವಿಶ್ವದ ಅತ್ಯಂತ ಮುಕ್ತ ಆರ್ಥಿಕತೆಗಳಲ್ಲಿ ಒಂದಾಗಿದೆ. ಎಲ್ಲಾ ಜಾಗತಿಕ ಕಂಪೆನಿಗಳು ಬಂದು ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ನಾವು ಕೆಂಪು ಹಾಸು ಹಾಸಿದ್ದೇವೆ. ಭಾರತ ಮನೀಡುವಂತಹ ಅವಕಾಶಗಳನ್ನು ಕೆಲವೇ ದೇಶಗಳು ನೀಡುತ್ತವೆ.ಭಾರತದ ವಿವಿಧ ಕ್ಷೇತ್ರಗಳಲ್ಲಿ ಅನೇಕ ಸಾಧ್ಯತೆಗಳು ಮತ್ತು ಅವಕಾಶಗಳಿವೆ. ಕೃಷಿಯಲ್ಲಿನ ನಮ್ಮ ಸುಧಾರಣೆಗಳು ಶೇಖರಣಾ ಮತ್ತು ಲಾಜಿಸ್ಟಿಕ್ಸ್ನಲ್ಲಿ ಹೂಡಿಕೆ ಮಾಡಲು ಬಹಳ ಆಕರ್ಷಕ ಹೂಡಿಕೆ ಅವಕಾಶವನ್ನು ಒದಗಿಸುತ್ತದೆ.”
ನಾವು ಮಧ್ಯಮ ಹಾಗೂ ಸಣ್ಣ ಉದ್ಯಮ ವಲಯದಲ್ಲಿ ಸುಧಾರಣೆಗಳನ್ನು ತಂದಿದ್ದೇವೆ. ಪ್ರವರ್ಧಮಾನಕ್ಕೆ ಬರುತ್ತಿರುವ ಮಧ್ಯಮ ಹಾಗೂ ಸಣ್ಣ ಉದ್ಯಮ ವಲಯವು ದೊಡ್ಡ ಉದ್ಯಮಕ್ಕೂ ಪೂರಕವಾಗಲಿದೆ. ರಕ್ಷಣಾ ಕ್ಷೇತ್ರದಲ್ಲೂ ಹೂಡಿಕೆಗೆ ಅವಕಾಶಗಳಿವೆ.
ಈಗ, ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಹೆಚ್ಚಿನ ಅವಕಾಶಗಳಿದ್ದು. ಜನರ ಅನುಕೂಲಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನದ ವಾಣಿಜ್ಯ ಬಳಕೆಗೆ ಹೆಚ್ಚಿನ ಪ್ರವೇಶವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.






