ಮಾತು ಮನೆ ಕೆಡಿಸಿತು ಎನ್ನುವ ಪದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತುಂಬಾ ಚೆನ್ನಾಗಿಯೇ ಒಪ್ಪುತ್ತದೆ. ಅವರೀಗ ಉಪ ಚುನಾವಣೆ ಕಣದಲ್ಲಿ ರಾಜಕೀಯ ಹೋರಾಟಕ್ಕಿಂತ ವೈಯಕ್ತಿಕ ಮಟ್ಟದ ಟೀಕೆಗೇ ಆದ್ಯತೆ ನೀಡುತ್ತಿದ್ದಾರೆ. ಅವರ ಈ ನಡವಳಿಕೆ ಗಮನಿಸಿದಾಗ ಚುನಾವಣೆಯ ಫಲಿತಾಂಶದ ಬಗ್ಗೆ ತಾವು ಹೊಂದಿದ್ದ ನಿರೀಕ್ಷೆ ಹುಸಿಯಾಗುವ ಲಕ್ಷಣ ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಆಶಾ ಭಂಗಕ್ಕೆ ಒಳಗಾದಂತೆ ಕಾಣುತ್ತದೆ.
ಹೌದು, ಕುಮಾರಸ್ವಾಮಿ ಅವರು ತಮ್ಮ ನಿರೀಕ್ಷೆ ಹುಸಿಯಾಗುತ್ತದೆ ಎನ್ನುವಾಗ ಭಾವನಾತ್ಮಕವಾಗಿ, ಉದ್ರೇಕಕ್ಕೆ ಒಳಗಾಗಿ ಮಾತನಾಡುವುದು ಸಾಮಾನ್ಯ. ಅದರಲ್ಲೂ ಆರೋಗ್ಯ ಸಮಸ್ಯೆ ಎದುರಾದ ಮೇಲೆ ಅವರ ಸಿಟ್ಟು ಹೆಚ್ಚಾಗಿದ್ದು, ಇಂತಹ ಮಾತುಗಳೂ ಹೆಚ್ಚಾಗುತ್ತಿದೆ. ರಾಜಕಾರಣದಲ್ಲಿ ವೈಯಕ್ತಿಕ ಟೀಕೆಗಳು ಸಾಮಾನ್ಯವಾದರೂ ಬಳಸುವ ಭಾಷೆ ಮುಖ್ಯವಾಗುತ್ತದೆ. ಬೇರೆ ಯಾರೋ ರಾಜಕಾರಣಿ, ಒಬ್ಬ ಶಾಸಕ ಈ ರೀತಿಯ ಭಾಷೆಗಳನ್ನು ಬಳಸಿದರೆ ಅದು ದೊಡ್ಡ ವಿಷಯವಾಗುವುದಿಲ್ಲ. ಆದರೆ, ಮಾಜಿ ಪ್ರಧಾನಿಯೊಬ್ಬರ ಪುತ್ರನಾಗಿ, ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ ವ್ಯಕ್ತಿಯೊಬ್ಬರು ಈ ರೀತಿಯ ಭಾಷೆಗಳನ್ನು ಬಳಸುವುದು ತಾವು ಅನುಭವಿಸಿ ಬಂದ ಹುದ್ದೆಯ ಗೌರವಕ್ಕೆ ತಕ್ಕುದಲ್ಲ.
ಹಾಗೆಂದು ಅನರ್ಹ ಶಾಸಕರ ಬಗ್ಗೆ ಅಥವಾ ತಮ್ಮ ಬಗ್ಗೆ ಟೀಕೆ ಮಾಡುವ ಪ್ರತಿಪಕ್ಷದವರ ಬಗ್ಗೆ ಕುಮಾರಸ್ವಾಮಿ ಅವರ ಆಕ್ರೋಶ, ಪ್ರತಿಟೀಕೆ ತಪ್ಪು ಎನ್ನುವುದರಲ್ಲಿ ಅರ್ಥವಿಲ್ಲ. ಆದರೆ, ಆ ಮಾತುಗಳು ತಮಗೆ ಹೇಗೆ ಗೌರವ ತರುತ್ತದೆ ಎಂಬುದನ್ನು ನೋಡಿಕೊಳ್ಳಬೇಕು. ಗಾಜಿನ ಮನೆಯಲ್ಲಿ ಕುಳಿತು ಹೊರಗೆ ಹೋಗುವವರ ಮೇಲೆ ಕಲ್ಲು ಎಸೆಯುವಾಗ ಆ ಕಲ್ಲು ಅವರಿಗೆ ತಾಗುವ ಮುನ್ನ ತಮ್ಮ ಮನೆಯ ಗಾಜನ್ನು ಪುಡಿ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಸಮಾಜದ ಮುಂದೆ ಸಣ್ಣವರಾಗುವುದು ನಾವೇ ಹೊರತು ಟೀಕೆಗೊಳಗಾದವರು ಅಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.
ಬದಲಾದ ಬಿಜೆಪಿ ನಿಲುವು ತಂದ ಸಿಟ್ಟಿದು
ಇಲ್ಲಿ ಕುಮಾರಸ್ವಾಮಿ ಅವರ ಆಕ್ರೋಶ, ಸಿಟ್ಟಿಗೆ ಬೇರೆ ಕಾರಣವೂ ಇದೆ. ಅಧಿಕಾರ ಕಳೆದುಕೊಂಡಿರುವ ಸಿಟ್ಟಿನ ಜತೆಗೆ ಮತ್ತೆ ತಮ್ಮ ರಾಜಕೀಯ ದಾಳ ಉರುಳಿಸಲು ಅವಕಾಶ ಸಿಗುತ್ತಿಲ್ಲವಲ್ಲ ಎಂಬ ಆಕ್ರೋಶವೂ ಇದೆ. ಈ ಕಾರಣಕ್ಕಾಗಿಯೇ ಕುಮಾರಸ್ವಾಮಿ ಅವರು ಸಿಟ್ಟಿನ ಕೈಗೆ ನಾಲಿಗೆ ಕೊಟ್ಟಿದ್ದಾರೆ. ಹಾಗಾಗಿ ಅವರ ಕೆಲವೊಂದು ವೈಯಕ್ತಿಕ ಟೀಕೆಗಳು ತಿರುಗುಬಾಣವಾಗಿ ಅವರ ವರ್ಚಸ್ಸಿಗೆ ಧಕ್ಕೆ ತರುತ್ತಿದೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಮೇಲೆ ಕುಮಾರಸ್ವಾಮಿ ಅವರಿಗೆ ತೀವ್ರ ಆಕ್ರೋಶವಿತ್ತು. ಆದರೆ, ನಂತರದ ಕೆಲವು ಬೆಳವಣಿಗೆಗಳು ಕುಮಾರಸ್ವಾಮಿ ಅವರನ್ನು ಸ್ವಲ್ಪ ಮೆತ್ತಗೆ ಮಾಡಿತ್ತು. ಈ ಮಧ್ಯೆ ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ಬಂದ ಬಳಿಕ ಕುಮಾರಸ್ವಾಮಿ ಅವರ ತಲೆಗೆ ಹೊಸ ಯೋಚನೆಯೊಂದು ಬಂದಿತ್ತು. ಉಪ ಚುನಾವಣೆಯಲ್ಲಿ ಬಿಜೆಪಿ ಅಗತ್ಯ ಸ್ಥಾನಗಳನ್ನು ಗೆಲ್ಲದೇ ಇದ್ದಲ್ಲಿ ಸರ್ಕಾರವನ್ನು ಬೆಂಬಲಿಸಿ ತಮ್ಮ ಕಾರ್ಯ ಸಾಧಿಸಬಹುದು ಎಂದುಕೊಂಡಿದ್ದರು. ಈ ಕಾರಣಕ್ಕೆ ಉಪ ಚುನಾವಣೆ ಘೋಷಣೆಯಾದಾಗ ಆರಂಭದಲ್ಲಿ ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿದ್ದರು. ಇದಕ್ಕೆ ಸ್ಪಂದಿಸಿದ್ದ ಬಿಜೆಪಿ ನಾಯಕರು ಕೂಡ ಕುಮಾರಸ್ವಾಮಿ ಮತ್ತು ಜೆಡಿಎಸ್ ವಿಚಾರದಲ್ಲಿ ಮೆತ್ತಗಾಗಿದ್ದರು.
ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಂದ ಬಿಜೆಪಿಯ ರಾಜ್ಯ ನಾಯಕರಿಗೆ ಬಂದ ಸಂದೇಶವೊಂದು ಇಬ್ಬರ ಲೆಕ್ಕಾಚಾರಗಳನ್ನೂ ತಲೆಕೆಳಗೆ ಮಾಡಿತು. ಈ ಮಾಹಿತಿ ಕುಮಾರಸ್ವಾಮಿ ಅವರಿಗೂ ತಲುಪಿ ಅವರು ಏಕಾಏಕಿ ಬಿಜೆಪಿ ಮತ್ತು ಅದರ ರಾಜ್ಯ ನಾಯಕರ ಮೇಲೆ ತಿರುಗಿಬೀಳುವಂತೆ ಮಾಡಿತು. ಇದರ ಪರಿಣಾಮ ಮೂರ್ನಾಲ್ಕು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ಮಧ್ಯೆ ನಡೆಯುತ್ತಿದ್ದ ವಾಕ್ಸಮರ ಕುಮಾರಸ್ವಾಮಿ ಮತ್ತು ಬಿಜೆಪಿ ಎನ್ನುವಂತಾಯಿತು.
ಅಮಿತ್ ಶಾ ಅವರಿಂದ ಬಂದ ಸಂದೇಶವೇನು
20108 ವಿಧಾನಸಭೆ ಚುನಾವಣೆ ವೇಳೆ ರಾಹುಲ್ ಗಾಂಧಿ ಅವರ ಬಾಯಲ್ಲಿ ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ಹೇಳಿಸಿತ್ತು. ಅಂದರೆ, ಆಗ ಪರಿಸ್ಥಿತಿ ಹಾಗೆಯೇ ಇತ್ತು. ಜೆಡಿಎಸ್ ಅಧಿಕಾರಕ್ಕೆ ಬರುವುದು ಕಷ್ಟಸಾಧ್ಯ ಎಂಬುದು ಮೊದಲೇ ಗೊತ್ತಾಗಿದ್ದರಿಂದ ಜೆಡಿಎಸ್ ಪರೋಕ್ಷವಾಗಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿತ್ತು. ಈ ಬಗ್ಗೆ ಕುಮಾರಸ್ವಾಮಿ ಮತ್ತು ಅಮಿತ್ ಶಾ ಅವರ ಮಧ್ಯೆ ಮಾತುಕತೆ ಕೂಡ ನಡೆದಿತ್ತು. ಅದರಂತೆ ಜೆಡಿಎಸ್ ತಟಸ್ಥವಾದರೆ ಬಿಜೆಪಿ ಗೆಲ್ಲುತ್ತದೆ ಎಂಬಂತಹ ಹಲವು ಕ್ಷೇತ್ರಗಳಲ್ಲಿ ಜೆಡಿಎಸ್ ಡಮ್ಮಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅದಷ್ಟೇ ಅಲ್ಲ, ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಬಿಜೆಪಿ ಸರ್ಕಾರ ರಚಿಸಲು ಜೆಡಿಎಸ್ ಬೆಂಬಲ ನೀಡುವ ಬಗ್ಗೆಯೂ ಮಾತುಕತೆಯಾಗಿತ್ತು.
ಆದರೆ, ಅಂತಿಮ ಕ್ಷಣದಲ್ಲಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆ ಎಂಬ ಕಾರಣಕ್ಕೆ ಬಿಜೆಪಿ ಜತೆಗಿನ ಮಾತುಕತೆಯನ್ನು ಮರೆತ ಜೆಡಿಎಸ್ ಅಧಿಕಾರ ಹಿಡಿಯಲು ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಿತ್ತು. ಆಗ ಜೆಡಿಎಸ್ ನಾಯಕರನ್ನು ನಂಬಿ ಬಿಜೆಪಿ ಕೆಟ್ಟಿತ್ತು.
ಹೀಗಾಗಿ ಮತ್ತೆ ಜೆಡಿಎಸ್ ಜತೆ ಕೈಜೋಡಿಸುವ ಅಥವಾ ಅವರ ಬೆಂಬಲ ಪಡೆಯುವ ಪರಿಸ್ಥಿತಿ ಬರಲೇ ಬಾರದು ಎಂದು ಅಮಿತ್ ಶಾ ಅವರು ರಾಜ್ಯ ಬಿಜೆಪಿ ನಾಯಕರಿಗೆ ಕಟ್ಟಪ್ಪಣೆ ಮಾಡಿದ್ದರು. ಉಪ ಚುನಾವಣೆಯಲ್ಲಿ ಸರ್ಕಾರದ ಬಹುಮತಕ್ಕೆ ಅಗತ್ಯ ಸ್ಥಾನ ಗೆಲ್ಲಲೇ ಬೇಕು. ಅದು ಸಾಧ್ಯವಾಗದೇ ಇದ್ದಲ್ಲಿ ಎರಡನೇ ಸುತ್ತಿನ ಆಪರೇಷನ್ ಗೆ ಸಿದ್ಧತೆ ಮಾಡಿಕೊಳ್ಳಬೇಕು. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಮತ್ತಷ್ಟು ಶಾಸಕರನ್ನು ಸೆಳೆದುಕೊಳ್ಳಬೇಕು. ಕುಮಾರಸ್ವಾಮಿ ಅವರು ನಮ್ಮ ಪರವಾಗಿ ಮಾತನಾಡುತ್ತಿದ್ದಾರೆ ಎಂದ ಮಾತ್ರಕ್ಕೆ ಅದನ್ನು ನಂಬಿ ಅವರ ಬಗ್ಗೆ ಮೃದು ಧೋರಣೆ ತಳೆಯಬಾರದು. ಸಿದ್ದರಾಮಯ್ಯ ವಿರುದ್ಧ ಒಟ್ಟಾಗಿ ತಿರುಗಿ ಬಿದ್ದಂತೆ ಕುಮಾರಸ್ವಾಮಿ ವಿರುದ್ಧವೂ ತಿರುಗಿ ಬೀಳಬೇಕು ಎಂದು ಅಮಿತ್ ಶಾ ರಾಜ್ಯದ ಬಿಜೆಪಿ ನಾಯಕರಿಗೆ ನಿರ್ದೇಶನ ನೀಡಿದ್ದರು. ಇದು ಗೊತ್ತಾಗುತ್ತಿದ್ದಂತೆ ಕುಮಾರಸ್ವಾಮಿ ಬಿಜೆಪಿ ಮೇಲೆ ಮುಗಿಬಿದ್ದರೆ, ಅದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರೂ ಕುಮಾರಸ್ವಾಮಿ ಮೇಲೆ ಮುಗಿಬಿದ್ದಿದ್ದಾರೆ.
ಇದರ ಬೆನ್ನಲ್ಲೇ ಬಿಜೆಪಿ ಎರಡನೇ ಸುತ್ತಿನ ಆಪರೇಷನ್ ಗೂ ಸಿದ್ಧತೆ ಆರಂಭಿಸಿದೆ. ಈಗಾಗಲೇ ಜೆಡಿಎಸ್ ಮತ್ತು ಕಾಂಗ್ರೆಸ್ ನ ಹಲವು ಶಾಸಕರನ್ನು ಸಂಪರ್ಕಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಅನರ್ಹ ಶಾಸಕರು ಈ ಆಪರೇಷನ್ ಕಮಲದ ಮುಂಚೂಣಿಯಲ್ಲಿ ನಿಂತಿದ್ದಾರೆ. ಇದರಿಂದ ಕೆರಳಿರುವ ಕುಮಾರಸ್ವಾಮಿ ಬಿಜೆಪಿ ಮೇಲಿನ ತಮ್ಮ ಸಿಟ್ಟು, ಆಕ್ರೋಶವನ್ನು ಇನ್ನಷ್ಟು ಜೋರಾಗಿ ಹೊರಹಾಕಲಾರಂಭಿಸಿದ್ದಾರೆ.