ಕಳೆದ 28 ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ನ್ಯಾಯಮೂರ್ತಿ ಎಸ್ ಕೆ ಯಾದವ್ ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಆರೊಪಿಗಳಾಗಿದ್ದ ಎಲ್ಲಾ 32 ಜನರು ನಿರಪರಾಧಿಗಳು ಎಂದು ಲಕ್ನೊ ಸಿಬಿಐ ನ್ಯಾಯಾಲಯ ಹೇಳಿದೆ.
“ಬಾಬ್ರಿ ಮಸೀದಿ ಧ್ವಂಸ ಮಾಡಲು ಮೊದಲೇ ಯೋಜನೆ ರೂಪಿಸಿರಲಿಲ್ಲ,” ಎಂದು ಕೋರ್ಟ್ ಹೇಳಿದೆ.
Also Read: ಇಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟ: ಅಡ್ವಾಣಿ, ಜೋಶಿ ಭವಿಷ್ಯ ನಿರ್ಧಾರ
ಅಶೋಕ್ ಸಿಂಘಾಲ್ ಸೇರಿದಂತೆ ಇತರ ಸಂಘಪರಿವಾರದ ಮುಖಂಡರು ಒಳಗಿದ್ದ ರಾಮ್ ಲಲ್ಲಾ ಮೂರ್ತಿಯನ್ನು ಕಾಪಾಡಲು ಇಚ್ಚಿಸಿದ್ದರು, ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆರೋಪವನ್ನು ಸಾಬೀತುಪಡಿಸುವಂತಹ ಯಾವುದೇ ಬಲವಾದ ಸಾಕ್ಷ್ಯಗಳನ್ನು ತನಿಖಾ ತಂ ನೀಡಿಲ್ಲ. ಸಾಕ್ಷ್ಯವಾಗಿ ನೀಡಲಾಗಿದ್ದ ವೀಡಿಯೋ ತಿರುಚಿರುವುದು ನ್ಯಾಯಾಲಯದ ಗಮನಕ್ಕೆ ಬಂದಿರುತ್ತದೆ. ಯಾವುದೇ ಚಿತ್ರಗಳ ʼನೆಗೆಟಿವ್ʼ ಫಿಲ್ಮ್ ರೋಲ್ಗಳನ್ನು ತನಿಖಾ ತಂಡಾ ನ್ಯಾಯಾಲಯಕ್ಕೆ ನೀಡಿಲ್ಲ, ಎಂದು ಕೋರ್ಟ್ ಹೇಳಿದೆ.
Also Read: ಬಾಬರಿ ಧ್ವಂಸ – ಅಯೋಧ್ಯೆ ಪ್ರಕರಣದ ಮುಖ್ಯ ಇಸವಿಗಳು
ಡಿಸೆಂಬರ್ 6ರಂದು ಅಹಿತಕರ ಘಟನೆಗಳು ನಡೆಯುವ ಸಂಭವವಿದೆ ಎಂದು ಗುಪ್ತಚರ ಇಲಾಖೆ ವರದಿ ನೀಡಿದ್ದರೂ, ಅದರ ಕುರಿತು ಯಾರೂ ಗಮನ ಹರಿಸಲಿಲ್ಲ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ದಾಖಲಿಸಿದೆ.
ಅಂತಿಮ ತೀರ್ಪು ನೀಡುವ ಸಲುವಾಗಿ ಪ್ರಕರಣಕ್ಕೆ ಸಂಬಂಧಪಟ್ಟಂತಹ ಆರೋಪಿಗಳು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.
ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದ ಬಾಳ್ ಠಾಕ್ರೆ ಹಾಗೂ ಅಶೋಕ್ ಸಿಂಘಾಲ್ ಅವರು ಈಗಾಗಲೇ ಮೃತಪಟ್ಟಿದ್ದಾರೆ. ಪವನ್ ಕುಮಾರ್ (52 ವರ್ಷ) ಈ ಪ್ರಕರಣದ ಅತ್ಯಂತ ಕಿರಿಯ ಆರೋಪಿಯಾಗಿದ್ದರು. ಉಳಿದಂತೆ, ಅಡ್ವಾಣಿ, ಜೋಷಿ, ನೃತ್ಯ ಗೋಪಾಲ್, ಕಲ್ಯಾಣ್ ಸಿಂಗ್, ಸತೀಶ್ ಪ್ರಧಾನ್, ಧರ್ಮೇದ್ರ ಸಿಂಗ್ ಗುಜ್ಜಾರ್ ಮತ್ತು ಆರ್ ಎನ್ ಶ್ರೀವಾಸ್ತವ ಅವರು 80 ವರ್ಷ ಮೇಲ್ಪಟ್ಟವರು.
Also Read: ಬಾಬರಿ ಮಸೀದಿ ಧ್ವಂಸ: ಸೆ. 30 ಕ್ಕೆ ತೀರ್ಪು, ಎಲ್ಲಾ ಆರೋಪಿಗಳ ಉಪಸ್ಥಿತಿಗೆ ನ್ಯಾಯಾಲಯ ಆದೇಶ
ತೀರ್ಪು ಹೊರಬರುವ ಮುನ್ನಾದಿನವೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಆರೋಪಿ ಉಮಾ ಭಾರತಿ, ಅಯೋಧ್ಯಾ ಪ್ರಕರಣದಲ್ಲಿ ಪಾತ್ರವಹಿಸಿದ್ದೇ ಗೌರವ. ಒಂದು ವೇಳೆ ಜೈಲು ಶಿಕ್ಷೆಯಾದರೂ, ಜಾಮೀನು ಅರ್ಜಿ ಸಲ್ಲಿಸುವುದಿಲ್ಲ ಎಂದಿದ್ದಾರೆ.
ಇನ್ನು ಶಿವ ಸೇನೆಯ ಮಾಜಿ ಶಾಸಕ ಪವನ್ ಪಾಂಡೆ, “ನನಗೆ ಶಿಕ್ಷೆಯಾದರೆ ಈ ಜನ್ಮ ಸಾರ್ಥಕವಾದಂತೆ,” ಎಂದು ಹೇಳಿದ್ದಾರೆ.
ಇನ್ನು ದೆಹಲಿ, ಉತ್ತರ ಪ್ರದೇಶದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಕೋರ್ಟ್ ಸಮೀಪಕ್ಕೆ ಆಗಮಿಸಿದ ಹಿಂದುತ್ವ ಕಾರ್ಯಕರ್ತರನ್ನು ಬ್ಯಾರಿಕೇಡ್ ಬಳಸಿ ತಡೆಯಲಾಗಿದೆ. ನ್ಯಾಯಾಲಯದ ಆಸುಪಾಸಿನಲ್ಲಿ ವಾಹನಗಳ ಓಡಾಟವನ್ನು ಕೂಡಾ ನಿಯಂತ್ರಿಸಲಾಗಿದೆ.