ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎರಡನೇ ಅವಧಿಗೆ ಆಯ್ಕೆಯಾಗಿ ಒಂದು ವರುಷ ಪೂರೈಸುತ್ತಲೇ ಅವರಿಗೆ 17ರ ಹರೆಯದ ಬಾಲಕನೊಬ್ಬ ಬರೆದ ಪತ್ರ ದೇಶದ ಪ್ರಜ್ಞಾವಂತರ ವಲಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಅನ್ವೇಷ್ ಸತ್ಪತಿ ಪ್ರಧಾನಿ ಮೋದಿ ಅವರಿಗೆ ಬರೆದಿರುವ ಪತ್ರ ಸಾಕಷ್ಟು ಗಮನಸೆಳೆಯುತ್ತಿದೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡಾ ಈ ಪತ್ರದ ವರದಿಯನ್ನ ತಮ್ಮ ಟ್ವಿಟ್ಟರ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ. ಅತೀ ಕಿರಿಯ ಪ್ರಾಯದಲ್ಲೇ ಲೇಖಕ, ಭಾಷಣಕಾರನಾಗಿ ಗುರುತಿಸಿಕೊಂಡಿರುವ ಅನ್ವೇಷ್ ಸತ್ಪತಿ ಪತ್ರ ಮೇ 30 ರಂದು ಮೋದಿ 2.0 ಸರಕಾರಕ್ಕೆ ಒಂದು ವರುಷ ಸಲ್ಲುತ್ತಲೇ ಪ್ರಧಾನಿ ಮೋದಿ ದೇಶದ ಜನರನ್ನ ಉದ್ದೇಶಿಸಿ ಬರೆದಿರುವ ಪತ್ರಕ್ಕೇ ಕೌಂಟರ್ ನೀಡುತ್ತಲೇ ಆರಂಭಿಸಿದ್ದಾರೆ.
Penned a letter to my fellow citizens.
It takes you through the year gone by and the way ahead. https://t.co/t1uHcAKkAH pic.twitter.com/Ci8TImK3CU
— Narendra Modi (@narendramodi) May 30, 2020
ಆತ್ಮೀಯ ಪ್ರಧಾನ ಮಂತ್ರಿಗಳೇ,
ನೀವು ದೇಶದ ಜನರಿಗೆ ಮೇ 30 ರಂದು ಬರೆದ ಪತ್ರವನ್ನ ನಿಮ್ಮ ವೆಬ್ಸೈಟ್ ನಲ್ಲಿ ನಾನೂ ಗಮನಿಸಿದೆ. ನೀವೇ ಉಲ್ಲೇಖಿಸಿದಂತೆ ನಿಮ್ಮ ಚುನಾವಣಾ ಗೆಲುವು ಅದು ನಿಜಕ್ಕೂ ಐತಿಹಾಸಿಕ ಗೆಲುವೇ ಸರಿ. ದೇಶದ ಜನರೂ ನಿಮ್ಮ ಮೇಲೆ ಅಗಾಧ ಭರವಸೆ ಇಟ್ಟುಕೊಂಡಿದ್ದಾರೆ. ನಾನೂ ಹಾಗೂ ನನ್ನಂತೆಯೇ ಭಾರತದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಪ್ರಜಾಪ್ರಭುತ್ವ ಭಾರತದಲ್ಲಿ ವಾಸಿಸುತ್ತಿರುವುದಕ್ಕೆ ಹೆಮ್ಮೆ ಪಟ್ಟುಕೊಂಡಿದ್ದಾರೆ. ಕಾರಣ, ಓರ್ವ ʼಚಾಯ್ವಾಲಾʼ ಕೂಡಾ ಈ ದೇಶದ ಚುಕ್ಕಾಣಿ ಹಿಡಿಯಬಹುದು, ಅದು ಪ್ರಜಾಪ್ರಭುತ್ವ ಭಾರತದಲ್ಲಿ ಮಾತ್ರ ಸಾಧ್ಯ ಅನ್ನೋದಕ್ಕಾಗಿ.
ಅದಾಗ್ಯೂ, ನನ್ನ ಪತ್ರದಲ್ಲಿ ಉಲ್ಲೇಖಿಸುತ್ತಾ ಹೋಗುವ ವಿಚಾರಗಳೆಲ್ಲವೂ ಗೌರವಯುತ ಟೀಕೆಗಳು ಆಗಿರುತ್ತವೆ. ಇದನ್ನೇ ನಾವು ʼಪ್ರಜಾಪ್ರಭುತ್ವದ ಸೌಂದರ್ಯʼ ಎಂದು ಕರೆಯುತ್ತೇವೆ. ಮಾತ್ರವಲ್ಲದೇ ಭೀಮಾ-ಕೋರೆಗಾಂವ್ ಹಿಂಸಾಚಾರ ಸಂಬಂಧಪಟ್ಟಂತೆ ಸಾಮಾಜಿಕ ಕಾರ್ಯಕರ್ತರ ಬಂಧನದ ಸಮಯದಲ್ಲಿ ಸುಪ್ರೀಂ ಕೋರ್ಟ್ ಕೂಡಾ “ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ರಕ್ಷಾ ಕವಚಗಳಾಗಿವೆ” ಎಂದಿತ್ತು. (2018 ರಲ್ಲಿ ಭೀಮಾ ಕೋರೆಗಾಂವ್ ಹಿಂಸಾಚಾರ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರ ಬಂಧನ ವಿಚಾರವಾಗಿ ತ್ರಿಸದಸ್ಯ ಪೀಠದ ವಿಚಾರಣೆ ಸಮಯದಲ್ಲಿ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಈ ಹೇಳಿಕೆಯನ್ನ ನೀಡಿದ್ದರು). ಅಲ್ಲದೇ ಭಿನ್ನಾಭಿಪ್ರಾಯ ಅನ್ನೋದು ಒಂದು ಸುಂದರ ಪರಿಕಲ್ಪನೆ. ಆದರೆ ಜನರ ಹಕ್ಕುಗಳನ್ನ ಪಡೆಯಲು ಅವರು ಇದನ್ನ ಅನುಸರಿಸಲೇಬೇಕು ಅನ್ನೋದನ್ನು ನಾನು ಭಾವಿಸಲಾರೆ.

ನಿಮ್ಮ ಮೊದಲ ಅಧಿಕಾರಾವಧಿಗೂ ಮುನ್ನವೇ ನಿಮ್ಮ ಸುತ್ತಲೂ ಒಂದು ವಿಶಿಷ್ಟ ಆರಧಾನಾ ವ್ಯಕ್ತಿತ್ವವೇ ರೂಪುಗೊಂಡಿತ್ತು. ಅದು ಸಮಯದ ಜೊತೆಗೆ ಬಲಿಷ್ಠವೂ ಆಯಿತು. ಅಲ್ಲದೇ ನಾವು ಅದಾಗಲೇ ನಿಮ್ಮನ್ನು “ವಿಷ್ಣುವಿನ ಅವತಾರ”, “ದೇಶಕ್ಕೆ ದೇವರು ನೀಡಿದ ಕೊಡುಗೆ”, “ಜಗತ್ತಿನ ಅತ್ಯಂತ ಆಕರ್ಷಕ ವ್ಯಕ್ತಿತ್ವ” ಹಾಗೂ “ಓರ್ವ ಶ್ರೇಷ್ಠ ಅರ್ಥಶಾಸ್ತ್ರಜ್ಞ” ಎಂದೇ ಕರೆಸಿಕೊಳ್ಳುವುದನ್ನ ಕಂಡೆವು. ಹೀಗೆ ಕರೆದವರೆಲ್ಲರೂ ನಿಮ್ಮ ಪಕ್ಷದ ಸದಸ್ಯರೇ ಆಗಿದ್ದರು. ಬಹುತೇಕ ಮಂದಿ ಮಂತ್ರಿಯೂ ಆದವರು.
2016 ರಲ್ಲಿ ತಾವು ಗಂಗಾ ಶುದ್ಧೀಕರಣದ ಮಹತ್ವದ ಯೋಜನೆಯೊಂದನ್ನು ಘೋಷಣೆ ಮಾಡಿದಿರಿ. ಅಧಿಕೃತ ಮೂಲಗಳ ಪ್ರಕಾರ 2018 ಜುಲೈ ತಿಂಗಳಿಗೆ ಗಂಗಾ ನದಿ ಸ್ವಚ್ಛವಾಗಬೇಕಿತ್ತು. ಗಂಗಾ ಶುದ್ದೀಕರಣ ʼನಮಾಮಿ ಗಂಗೆʼ ಯೋಜನೆ ಅದು ಕೇವಲ ಪರಿಸರ ಅಸಮತೋಲನ ವಿಚಾರವಾಗಿರಲಿಲ್ಲ. ಬದಲಿಗೆ ಅದು ತಾವು ನಂಬಿದ್ದ ಹಿಂದುತ್ವ ಅನುಸರಣೆಯ ಭಾಗವೂ ಆಗಿತ್ತು. ಅದರಿಂದ ಹಿಂದೂಗಳ ಪವಿತ್ರ ನದಿ ಗಂಗೆಯೂ ತಾವು ಗೌರವ ಸಲ್ಲಿಸಿದಂತಾಗುತ್ತಿತ್ತು. ಆದರೆ 2018 ಬಂದು, ಹೋಗಿಯೂ ಆಯಿತು. ಆದರೆ ಗಂಗೆ ಇದುವರೆಗೂ ಶುದ್ಧಗೊಂಡಿಲ್ಲ. ಕಾರ್ಯಯೋಜನೆಯ ಕೊರತೆ ವಿರುದ್ಧ ಪರಿಸರ ಇಂಜಿನಿಯರಿಂಗ್ ಮಾಜಿ ಪ್ರಾಧ್ಯಾಪಕ ಹಾಗೂ ಹಿಂದೂ ಸನ್ಯಾಸಿ ಆಗಿದ್ದ ಜಿಡಿ ಅಗರ್ವಾಲ್ ಈ ಕುರಿತು ಸರಕಾರಕ್ಕೆ ಪತ್ರ ಬರೆದು ದೂರಿದ್ದರು. 86 ರ ಹರೆಯದ ʼಸಂತ-ವಿಜ್ಞಾನಿʼ ಅಂತಲೇ ಗುರುತಿಸಿಕೊಂಡ ಅಗರ್ವಾಲ್ ಅವರು ನಿಗದಿತ ದಿನಾಂಕದೊಳಗಾಗಿ ಗಂಗೆ ಶುದ್ಧಿಗೊಳಿಸುವಂತೆ ಬೇಡಿಕೆ ಮುಂದಿರಿಸಿ ಅಮರಣಾಂತ ಉಪವಾಸವನ್ನೂ ಕೈಗೊಂಡಿದ್ದರು. ಆದರೆ ಕೊನೆಗೆ 111 ದಿನಗಳ ಉಪವಾಸದ ಬಳಿಕ ಅವರು ಹಸಿವಿನಿಂದಾಗಿ ಸಾವನ್ನಪ್ಪಿದ್ದರು. ಆದರೂ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಲೂ ಸಾಧ್ಯವಾಗದೇ ವಿಫಲವಾಗಿತ್ತು. ಆದರೆ ಈ ಸಾವನ್ನ ನಾನು ಹಾಗೂ ಆತ್ಮಸಾಕ್ಷಿಯುಳ್ಳ ಪ್ರತಿಯೊಬ್ಬ ಪ್ರಜೆಯೂ ಇದೊಂದು ಕೊಲೆಯೇ ಎಂದು ಇದುವರೆಗೂ ನಂಬಿದ್ದೇವೆ.
ಮಾತ್ರವಲ್ಲದೇ ಪರಿಸರ ಸಂಬಂಧಿತ ಹಾಗೂ ಹವಾಮಾನ ಬದಲಾವಣೆ ವಿಚಾರವಾಗಿ ತಾವು ಕ್ರಮ ಕೈಗೊಳ್ಳುತ್ತೀರಿ ಅನ್ನೋ ನಿರೀಕ್ಷೆ ಸಹಜವಾಗಿದೆ. ಕಾರಣ ತಾವೇ ನಂಬಿಕೊಂಡಂತೆ ಹವಾಮಾನ ಬದಲಾಗಿಲ್ಲ, ಬದಲಿಗೆ ಜನರು ಬದಲಾಯಿಸಿದ್ದಾರೆ ಅನ್ನೋ ಮಾತು ತಮ್ಮ ಮೇಲಿನ ಜವಾಬ್ದಾರಿ ಹೆಚ್ಚಿಸಿದೆ.
ಅಲ್ಲದೇ ತಾವು ಸ್ವತಂತ್ರ ಸಂಸ್ಥೆಗಳನ್ನೂ ನಿಧಾನವಾಗಿ ತನ್ನ ತೆಕ್ಕೆಗೆ ಪಡೆಯುತ್ತಿರುವುದಕ್ಕೂ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಪ್ರಸ್ತುತ ನಿಮ್ಮ ಟೀಕಾಕಾರರೂ ಆದಂತಹ ತಲ್ವೀನ್ ಸಿಂಗ್ ನಂತಹ ಪತ್ರಕರ್ತರ ಮೇಲೂ ನೀವು ಆರಂಭಿಕ ಹಂತದಲ್ಲಿ ಪ್ರಭಾವ ಬೀರಿದವರಾಗಿದ್ದಿರಿ. ನಿಮ್ಮನ್ನು ಹೊರಗಿನವರಂತೆ ಕಾಣಲಾಯಿತು. ಮತ್ತು ನೀವು ಯಾವುದೇ ಪ್ರಭಾವಕ್ಕೂ ತಲೆಬಾಗದವರಂತೆ ಬಿಂಬಿಸಲಾಯಿತು. ದೆಹಲಿ ಪ್ರಭಾವವಿಲ್ಲದೇ ಗೆದ್ದು ಬಂದವರೆಂದು ಹೇಳಲಾಯಿತು.ಸ್ವತಃ ತಾವೇ ಈ ಕುರಿತು ಮಾತಾಡಿದ್ದಿರಿ. ದೆಹಲಿ ಹೊರಗಿನವರು ಅನ್ನೋ ಅಸ್ತ್ರವೂ ತಮ್ಮ ಅಸ್ತಿತ್ವಕ್ಕೆ ಹೆಚ್ಚು ಬಲ ತುಂಬಿದ್ದು ನಿಜ.
ಇತ್ತೀಚೆಗೆ ಮಾಧ್ಯಮಗಳು ಬಹುರಂಗವಾಗಿ ಧ್ರುವೀಕರಣಕ್ಕೆ ಇಳಿದಿವೆ. ಅವುಗಳು ವಿಪಕ್ಷಗಳನ್ನೇ ಪ್ರಶ್ನೆ ಮಾಡುತ್ತಿವೆ. ಅದು ಅವುಗಳ ಅಸ್ತಿತ್ವಕ್ಕೂ ಸಂಬಂಧಪಟ್ಟಿರಲೂಬಹುದು. ನೀವು ಕೂಡಾ ನಿಮ್ಮನ್ನ ಹೊಗಳುವ ಮಾಧ್ಯಮಗಳಿಗಷ್ಟೇ ಸಂದರ್ಶನ ಕೊಡುತ್ತೀರಿ. ಅಲ್ಲಿ ಕೇಳುವ ಪ್ರಶ್ನೆಗಳಾದರೂ ಎಂತದ್ದು? ನಿಮ್ಮಿಷ್ಟದ ಸಂಗೀತ, ನಿಮ್ಮ ಬಾಲ್ಯ ದಿನಗಳು, ನವರಾತ್ರಿ ಉಪವಾಸ, ನಿಮ್ಮ ದಣಿವರಿಯದ ಶಕ್ತಿ, ಫ್ಯಾಶನ್ ಸೆನ್ಸ್, ಅನಾರೋಗ್ಯ ಸಮಯದಲ್ಲಿ ತೆಗೆದುಕೊಂಡ ಔಷಧಿಗಳು, ವೀಕ್ಷಿಸಿದ ಸಿನೆಮಾಗಳು, ಕೇಳಿರುವ ಹಾಡುಗಳು, ಮಾವಿನಹಣ್ಣು ತಿಂದ ಬಗೆ ಹಾಗೂ ನಿದ್ರಾ ಸಮಯ ಇತ್ಯಾದಿಗಳು. ಇಂತಹ ಪ್ರಶ್ನೆಗಳಿಗೆಲ್ಲ ಒಂದು ಗಂಟೆಗಳ ಕಾಲ ಬಾಲಿವುಡ್ ನಟ ಸಂದರ್ಶನದಲ್ಲಿ ಭಾಗವಹಿಸಿರುವ ತಮಗೆ ಸುದ್ದಿಗೋಷ್ಟಿ ನಡೆಸಲು ಸಮಯವಿರಲಿಲ್ಲ. ನಿಮ್ಮನ್ನ ಟೀಕಿಸುವವರ ಪ್ರಶ್ನೆಗಳಿಗೆ ಉತ್ತರಿಸಲೂ ಸಂದರ್ಶನ ಮಾಡಲಾರಿರಿ. ಬದಲಿಗೆ ಮಾಧ್ಯಮಗಳು ತಮ್ಮ ಪರ ಪ್ರಚಾರದ ಸಾಧನವಾಗಿ ಕಂಡಿದ್ದೀರಿ. ನಿಮ್ಮ ಸಂದೇಶ, ಪ್ರಚಾರಕ್ಕಷ್ಟೇ ಇರುವ ಸಾಧನ ಅನ್ನೋದು ನೀವು ಭಾವಿಸಿದ್ದೀರಿ.
ಇದು ಮಾತ್ರವಲ್ಲದೇ ನಿಧಾನವಾಗಿ ನ್ಯಾಯಾಂಗ ವ್ಯವಸ್ಥೆಯನ್ನೂ ತಮ್ಮ ಹತೋಟಿಗೆ ತೆಗೆದುಕೊಳ್ಳುತ್ತಿದ್ದೀರಿ. ಇತ್ತೀಚೆಗೆ ಗುಜರಾತ್ ಹೈಕೋರ್ಟ್ ಕೋವಿಡ್-19 ವಿಚಾರವಾಗಿ ಅಲ್ಲಿನ ರಾಜ್ಯ ಸರಕಾರದ ಕ್ರಮವನ್ನ ಟೀಕಿಸುವ ಹಕ್ಕನ್ನು ಯಾರೂ ಹೊಂದಿಲ್ಲ ಎಂದಿತ್ತು. ಸರಕಾರ ಜವಾಬ್ದಾರಿಯಿಂದ ನುಣುಚಿಕೊಂಡಾಗ ಅದನ್ನ ಪ್ರಶ್ನಿಸುವ ಹಕ್ಕು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇದೆ ಎಂದು ನಾವು ನಂಬಿದ್ದೇವೆ. ಏಕೆಂದರೆ ಸರಕಾರವಿರುವುದೇ ಜನರ ಕೆಲಸ ಮಾಡಲು. ಇದು ಮಾತ್ರವಲ್ಲದೇ ನಿಮ್ಮ ಸರಕಾರ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನ ಅವರ ನಿವೃತ್ತಿ ಆಗಿ ಕೆಲವೇ ತಿಂಗಳಲ್ಲಿ ರಾಜ್ಯಸಭಾ ಸದಸ್ಯರಾಗಿ ನಾಮ ನಿರ್ದೇಶನ ಮಾಡಲಾಗುತ್ತದೆ. ಈ ವಿಚಾರ ನಮ್ಮನ್ನು ಹಲವು ಆಯಾಮಗಳಲ್ಲಿ ನೋಡುವಂತೆ ಮಾಡುತ್ತದೆ. ಕಾರಣ, ರಂಜನ್ ಗೊಗೊಯಿ ನೀಡಿದ ಒಂದಿಷ್ಟು ತೀರ್ಪುಗಳು ವಿವಾದಾತ್ಮಕವಾಗಿದ್ದು ನಮ್ಮ ಮುಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ವಿರುದ್ಧವಾದ ತೀರ್ಪು, ಅಸ್ಸಾಂ ನಲ್ಲಿ ಎನ್ಆರ್ಸಿ ಜಾರಿ ಕುರಿತಾಗಿ ಬಹಿರಂಗ ಸಭೆಯಲ್ಲೇ ಸಮರ್ಥಿಸಿರುವುದು, ಸಿಬ್ಬಂದಿಯೊಬ್ಬರಿಂದ ಗೊಗೊಯಿ ವಿರುದ್ಧ ಕೇಳಿ ಬಂದ ಲೈಂಗಿಕ ದೌರ್ಜನ್ಯ ದೂರು ಮುಂತಾದವುಗಳು ಕಾಣಸಿಗುತ್ತವೆ. ಈ ಎಲ್ಲಾ ಉಪಕಾರಕ್ಕಾಗಿ ಅವರನ್ನ ನಾಮ ನಿರ್ದೇಶನಗೊಳಿಸಿ ತಮ್ಮ ಅಧಿಕಾರದಲ್ಲಿ ಮಾಡಿದ ಸಹಾಯಕ್ಕೆ ʼಪ್ರತಿಫಲʼ ಎಂಬಂತಿತ್ತು. ಇದಕ್ಕೆ ಪೂರಕವೆನ್ನುವಂತೆ ನಿಮ್ಮ ಸ್ನೇಹಿತರಾಗಿದ್ದ ದಿವಂಗತ ಅರುಣ್ ಜೇಟ್ಲಿ ಅವರು ನೀಡಿದ್ದ ಹೇಳಿಕೆ ಮಹತ್ವ ಪಡೆದುಕೊಳ್ಳುತ್ತದೆ. “ನಿವೃತ್ತಿ ಮುನ್ನ ಜಡ್ಜ್ ಗಳು ನೀಡುವ ತೀರ್ಪು ಅವರ ನಿವೃತ್ತಿ ನಂತರದ ಜೀವನದ ಮೇಲೆ ಪ್ರಭಾವಿತವಾಗಿರುತ್ತದೆ” ಎಂದಿದ್ದರು.
ಇನ್ನು ತಾವು ಜನರಿಗೆ ಬರೆದ ಪತ್ರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ರಾಮ ಮಂದಿರ ತೀರ್ಪು ತಮ್ಮ ಸರಕಾರದ ಸಾಧನೆ ಎಂದಿದ್ದೀರಿ. ಆದರೆ ಅದೇ ಸಮಯದಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಸೆಕ್ಷನ್ 377 (ಸಲಿಂಗಕಾಮ ಅಪರಾಧವಲ್ಲ) ಹಾಗೂ ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತ ಐತಿಹಾಸಿಕ ತೀರ್ಪು ಬಗ್ಗೆ ಯಾಕಾಗಿ ಉಲ್ಲೇಖಿಸಿಲ್ಲ ಎಂದು ಅಚ್ಚರಿಯಾಗುತ್ತಿದೆ. ಈ ಕುರಿತು ಒಂದು ಟ್ವೀಟ್ ಕೂಡಾ ಮಾಡಲಾಗುವುದಿಲ್ಲ.
ಆದರೆ ಸೆಕ್ಷನ್ 377 ಕುರಿತ ಐತಿಹಾಸಿಕ ತೀರ್ಪಿನ ಬಗ್ಗೆ ನಿಮ್ಮ ಸರಕಾರ ತಟಸ್ಥವಾಗಿರುತ್ತದೆ. ಸಲಿಂಗಕಾಮಿಗಳ ಇರುವ ಸಮಸ್ಯೆಗಳ ವಿರುದ್ಧ ಎದುರಾದ ಕಳಂಕ ತೊಡೆದು ಹಾಕಲು ಮುಂದಾಗುವುದಿಲ್ಲ. ಅಯೋಧ್ಯೆ ತೀರ್ಪಿನ ಬಗ್ಗೆ ಇದ್ದ ಆತುರತೆ ನಿಮ್ಮಲ್ಲಿ ಕಾಣಿಸುವುದಿಲ್ಲ. ಅಂದರೆ ಅಯೋಧ್ಯೆ ತೀರ್ಪಿನಂತೆ ಈ ವಿಚಾರಗಳು ತಮಗೆ ರಾಜಕೀಯ ಲಾಭ ತಂದುಕೊಡುವುದಿಲ್ಲ ಅನ್ನೋ ಕಾರಣವೇ?

ಫೆಬ್ರವರಿಯಲ್ಲಿ ದೆಹಲಿ ಗಲಭೆಯಿಂದ ಹೊತ್ತಿ ಉರಿಯಬೇಕಾದರೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಕ್ರಮಕ್ಕೆ ವ್ಯಾಪಕ ಪ್ರಚಾರ ಕೊಡಲಾಗುತ್ತದೆ. ಇತ್ತ ಭಿನ್ನ ಧರ್ಮಗಳು ಹತ್ಯೆಯಲ್ಲಿ ತೊಡಗಿಸಿಕೊಂಡಿದ್ದರೆ ಅತ್ತ ಟ್ರಂಪ್ ಮೋದಿ ಕುರಿತಾಗಿ “ಧಾರ್ಮಿಕ ಸ್ವಾತಂತ್ರ್ಯ ಬಹಳವಾಗಿ ಶ್ರಮಿಸುತ್ತಿದ್ದೀರಿ” ಎಂದು ಹೊಗಳಿಕೆಯ ಹೇಳಿಕೆ ನೀಡುತ್ತಾರೆ. ಮುಸ್ಲಿಂ ಪ್ರತಿಭಟನಾಕಾರರ ವಿರುದ್ಧ “ಜೈ ಶ್ರೀರಾಂ” ಘೋಷಣೆ ಮೊಳಗಿಸುತ್ತಾ ಲಾಠಿ ಚಾರ್ಜ್ ಮಾಡಲಾಗುತ್ತದೆ. ನಿಮ್ಮನ್ನ ಅರಿತವರಿಗೆ ಅಥವಾ ಟೀಕಾಕಾರರಿಗೆ ಇದೇನು ಅಚ್ಚರಿ ವಿಚಾರವಾಗಿರಲಿಲ್ಲ. ಏಕೆಂದರೆ ಈ ಹಿಂದೆ 2002 ರ ಗುಜರಾತ್ ಗಲಭೆ ಸಂದರ್ಭದಲ್ಲೂ ಇಂತಹದ್ದೇ ಕಂಡುವರಾಗಿದ್ದಾರೆ.
ಇನ್ನು ಲಾಕ್ಡೌನ್ ಸಮಯದಲ್ಲೂ ಸಮರ್ಪಕವಾದ ಯೋಜನೆಯಿಲ್ಲದ ಪರಿಣಾಮ ಅನಗತ್ಯವಾಗಿ ವಲಸೆ ಕಾರ್ಮಿಕರ ಹಾಗೂ ದಿನಗೂಲಿ ನೌಕರರ ಯಾತನೆಗೆ ಕಾರಣವಾದವು. ಈ ಸಮಯದಲ್ಲಿ ನಾವು ಹಲವಾರು ಮನಕಲಕುವ ದೃಶ್ಯಗಳನ್ನ ಕಂಡೆವು. ಮೃತದೇಹಗಳನ್ನ ಹೊತ್ತೊಯ್ದ ಟ್ರಕ್ನಲ್ಲಿ ವಲಸಿಗರನ್ನ ತೆರಳಲು ಬಲವಂತಪಡಿಸಲಾಯಿತು. ಹಸಿವಿನಿಂದ ಸಾಯವಿಕೆ ಹಾಗೂ ಇದೆಲ್ಲಕ್ಕೂ ಇತ್ತೀಚೆಗೆ ಕಂಡ ಹಸಿವಿನಿಂದ ತೀರಿಕೊಂಡ ತಾಯಿಯನ್ನ ಮಗು ಎಬ್ಬಿಸುವ ಆ ದೃಶ್ಯ. ಇದೆಲ್ಲವೂ ಸುಮಾರು ಒಂದು ತಿಂಗಳಿನಿಂದ ಮುಂದುವರಿದಿದೆ ಅಂದರೆ ಯಾವ ಮಟ್ಟಿಗೆ ಅಸಮರ್ಪಕತೆ ಇದೆ ಅನ್ನೋದನ್ನ ಅರ್ಥೈಸಿಕೊಳ್ಳಬಹುದು.
ಎಂಎಸ್ ಗೋಲ್ವಾಳ್ಕರ್ ಅವರನ್ನ ʼಪೂಜ್ಯನೀಯʼ ಎನ್ನುತ್ತಲೇ ನೀವು ದೇಶದ ಬಹುತ್ವದ ಬಗ್ಗೆ ಮಾತನಾಡುತ್ತೀರಿ. ಗೋಲ್ವಾಳ್ಕರ್ ತಮ್ಮ ಪುಸ್ತಕದಲ್ಲಿ ನಮ್ಮ ರಾಷ್ಟ್ರತ್ವವನ್ನ ವಿವರಿಸುವ ರೀತಿ ಹೀಗಿದೆ.. “ವಿದೇಶದಿಂದ ಬಂದವರು ಹಿಂದೂ ಸಂಸ್ಕೃತಿಯನ್ನ ಹಾಗೂ ಭಾಷೆಯನ್ನ ಅಳವಡಿಸಿಕೊಳ್ಳಬೇಕು. ಮಾತ್ರವಲ್ಲದೇ ಹಿಂದೂ ಧರ್ಮವನ್ನ ಗೌರವದಿಂದ ಕಾಣಲು ಕಲಿಯಬೇಕು. ಹಿಂದೂ ಜನಾಂಗದ ವೈಭವೀಕರಣದ ಹೊರತಾಗಿ ಯಾವುದೇ ವಿಚಾರಗಳನ್ನು ರಂಜಿಸಬಾರದು ಮತ್ತು ಸಂಸ್ಕೃತಿ ಅಥವಾ ಹಿಂದೂ ರಾಷ್ಟ್ರಕ್ಕೆ ಸಂಪೂರ್ಣವಾಗಿ ಅಧೀನನಾಗಿರಬೇಕು. ಅಲ್ಲದೇ ಆ ರೀತಿ ನೆಲೆಸಿರುವವರಿಗೆ ಯಾವುದೇ ನಾಗರಿಕ ಸವಲತ್ತುಗಳಾಗಲೀ, ಈ ದೇಶದ ಪೌರತ್ವದ ಹಕ್ಕಾಗಲಿ ಇರದು”
ಇದು ಮಾತ್ರವಲ್ಲದೇ “ಸೆಕ್ಯುಲರ್” (ಜಾತ್ಯತೀತತೆ) ಪದವನ್ನೇ ಖಂಡಿಸಿರುವ ದೀನ್ ದಯಾಳ್ ಉಪಾಧ್ಯಾಯ ಹಾಗೂ ಗೋಲ್ವಾಳ್ಕರ್ ಚಿಂತನೆಗಳನ್ನೇ ತಮ್ಮ ʼಐಡಿಯಾಲಜಿʼ ಮಾಡಿಕೊಂಡಿರುವ ತಮಗೆ ಸಂವಿಧಾನ ಪವಿತ್ರ ಗ್ರಂಥವಾಗಲು ಸಾಧ್ಯವಾದೀತೆ?
ಇನ್ನೊಂದೆಡೆ ಗಾಂಧೀಜಿಯ ತತ್ವಗಳು ತಮ್ಮ ಆದರ್ಶವೆನ್ನುವ ತಾವು ಅದೇ ಗಾಂಧೀಜಿ ಹತ್ಯೆಗೈದ ಗೋಡ್ಸೆಯನ್ನ ʼದೇಶ ಪ್ರೇಮಿʼ ಎಂದಾಗ ಸಾಧ್ವಿ ಪ್ರಜ್ಞಾ ಸಿಂಗ್ (ಲೋಕಸಭಾ ಸದಸ್ಯೆ) ವಿರುದ್ಧ ಯಾವುದೇ ಕ್ರಮಕೈಗೊಳ್ಳಲಾರಿರಿ. “ಇಡೀ ಜಗತ್ತೇ ಒಂದು ಕುಟುಂಬ” (ವಸುಧೈವ ಕುಟುಂಬಕಂ) ಎಂದು ನಂಬುವ ತಾವೇ ಸದಾ ಹಿಂದೂ-ಮುಸ್ಲಿಂ ನಡುವೆ ಕೋಮು ದ್ವೇಷ ಹುಟ್ಟು ಹಾಕುವ ಯೋಗಿ ಆದಿತ್ಯನಾಥ ಅವರನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತೀರಿ.
ಜೊತೆಗೆ ನಿಮ್ಮ ಅನುಯಾಯಿಗಳು ಕೂಡಾ ಭಿನ್ನರಾಗಿಲ್ಲ. ಅವರೆಲ್ಲರೂ ವಿರೋಧ ಪಕ್ಷವು ದೇಶದ ವಿರೋದಿ ಅನ್ನೋ ಹಾಗೆ ಬಿಂಬಿಸುತ್ತಿದೆ. ಈ ಮೂಲಕ ಅವರೆಲ್ಲವರೂ “ನಾವು ಮತ್ತು ಅವರು” ಅನ್ನೋ ವಿರೋಧಿ ಭಾವನೆ ಹುಟ್ಟು ಹಾಕುತ್ತಿದ್ದಾರೆ. ಆದರೆ ವಾಸ್ತವವೇನೆಂದರೆ ನೀವು ಮಾತ್ರ ದೇಶವಲ್ಲ ಎನ್ನುವುದು. ಬಿಜೆಪಿ ಮಾತ್ರ ರಾಷ್ಟ್ರೀಯತೆಯ ಏಕಸ್ವಾಮ್ಯತೆಯನ್ನ ಹೊಂದಿಲ್ಲ. ಭಾರತ ಅನ್ನೋದು ಪ್ರಜಾಪ್ರಭುತ್ವ ರಾಷ್ಟ್ರ. ಈ ರಾಷ್ಟ್ರದ ಜನತೆ ನಿಮ್ಮನ್ನ ಜನರ ಸೇವೆಗಾಗಿ ಮಾತ್ರ ಆಯ್ಕೆ ಮಾಡಿರುತ್ತಾರೆ. ನೀವು ಜನರೆಲ್ಲರ ಹಕ್ಕುಗಳಿಗೆ ಜವಾಬ್ದಾರರಾಗಿರುತ್ತೀರಿ. ಆದ್ದರಿಂದ ಆಯ್ಕೆ ಮಾಡಿರುವ ಜನರು ತಾವು ನೀಡಿದ ಭರವಸೆಗಳನ್ನ ಪೂರೈಸದಿದ್ದಾಗ ಪ್ರಶ್ನೆ ಮಾಡುವ ಅಥವಾ ಟೀಕಿಸುವ ಅಧಿಕಾರ ಹೊಂದಿದ್ದಾರೆ. ಆದರೆ ದೇಶದಲ್ಲಿ ಏನಾಗುತ್ತಿದೆ? ನಿಮ್ಮನ್ನ ಟೀಕಿಸಿದ ಮಾತ್ರಕ್ಕೆ ನಿಮ್ಮ ಪಕ್ಷದ ಸಂಸದರು ಹಾಗೂ ಸಚಿವರು ಯಾವ ರೀತಿ ಹೇಳಿಕೆ ನೀಡುತ್ತಿದ್ದಾರೆ?. ಖಂಡಿತಾವಾಗಿಯೂ ಅದೆಲ್ಲಕ್ಕೂ ನೀವು ಜವಾಬ್ದಾರರಲ್ಲ. ಆದರೆ ನಿಮ್ಮ ಮೌನವು ಇನ್ನಷ್ಟು ಧ್ರುವೀಕರಣವನ್ನ ಹೆಚ್ಚಿಸುತ್ತದೆ.
ಆದರೆ ನೆನಪಿರಲಿ ನಿಮ್ಮ ದ್ವಂದ್ವಾರ್ಥ, ನಿಮ್ಮ ಮೌನ ಹಾಗೂ ನಿಮ್ಮ ತಟಸ್ಥತೆ ಇವುಗಳೆಲ್ಲವೂ ನಿಮ್ಮ ಹೇಳಿಕೆಗಳೇ ಆಗಿರುತ್ತದೆ. ಮಿಸ್ಟರ್ ಪ್ರಧಾನ ಮಂತ್ರಿಗಳೇ ಮಾತನಾಡಿ. ಈ ಹಿಂದೆ ನೀವೆಂದೂ ಮೌನವಾಗಿದ್ದಿರಲಿಲ್ಲ. ಆದ್ದರಿಂದ ಮಾತನಾಡಿ, ಆ ಮೂಲಕ ಇತಿಹಾಸದಲ್ಲಿ ನೀವೊಬ್ಬರು ನಿಜವಾದ “ಮೌನಿ ಪ್ರಧಾನಿ” ಅನ್ನೋದಾಗಿ ಬಿಂಬಿತವಾಗದಂತೆ ನೋಡಿಕೊಳ್ಳಿ.
ಹೀಗೆ 17 ರ ಹರೆಯದ ಅನ್ವೇಷ್ ಸತ್ಪತಿ ಪತ್ರ ಕೊನೆಗೊಳ್ಳುತ್ತದೆ. ಇನ್ನು ಶಶಿ ತರೂರ್ ಈ ಪತ್ರದ ವರದಿ ಪ್ರಕಟಿಸಿರುವ medium.com ನಿಂದ ಟ್ವೀಟ್ ಮಾಡಿಕೊಂಡಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಅನ್ವೇಷ್ “ಪ್ರಧಾನ ಮಂತ್ರಿಗಳು ಪ್ರತಿಕ್ರಿಯಿಸುತ್ತಾರೆ ಅನ್ನೋ ಭರವಸೆ ಇರಿಸೋಣ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Thanks for sharing Dr. Tharoor! Glad you liked it. Especially considering the fact that you're one of my fav writers. Lets hope Mr. Modi replies. https://t.co/DsKzA0aPvU
— Anwesh Satpathy (@anwesh_satpathy) June 1, 2020








