ಕರೋನಾ ಸೋಂಕು ಪೀಡಿತರು ಹೆಚ್ಚಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತ ಈಗ ಏಳನೇ ಸ್ಥಾನದಲ್ಲಿದೆ. ಪ್ರತಿದಿನ ಎಂಟು ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಇದರಿಂದ ವಾರ ಒಪ್ಪತ್ತಿನಲ್ಲಿ ಆರನೇ ಸ್ಥಾನಕ್ಕೂ ಜಿಗಿಯಲಿದೆ. ‘ಕರೋನಾ ಜನಕ’ ಎಂದೇ ಕುಖ್ಯಾತಿಗಳಿಸಿರುವ ಚೀನಾವನ್ನು ಹಿಂದಿಕ್ಕಿದೆ. ಕರೋನಾ ಕಂಗೆಣ್ಣಿಗೆ ತುತ್ತಾಗಿ ನಲುಗಿ ಜಗತ್ತಿಗೂ ಕರೋನಾದ ಕರಾಳ ಮುಖ ಹೇಗಿರುತ್ತದೆಂದು ಹೇಳಿಕೊಟ್ಟ ಇಟಲಿಯನ್ನೂ ಹಿಂದೆ ತಳ್ಳಿದೆ. ಇದು ದೇಶದಲ್ಲಿರುವ ಕರೋನ ಪರಿಸ್ಥಿತಿ.
136 ಕೋಟಿ ಜನರಿರುವ ದೇಶದಲ್ಲಿ, ಘನ ನಾಯಕತ್ವದಲ್ಲಿ ಈವರೆಗೆ ಕರೋನಾ ಪರೀಕ್ಷೆ ನಡೆಸಿರುವುದು ಹೆಚ್ಚೆಂದರೆ 40 ಲಕ್ಷ ಜನರಿಗೆ. ಇಷ್ಟು ಕಡಿಮೆ ಪ್ರಮಾಣದಲ್ಲಿ ಪರೀಕ್ಷೆ ನಡೆಸಿರುವುದರಿಂದ ದೇಶದಲ್ಲಿ ಕರೋನಾ ಸೋಂಕಿನ ಪ್ರಮಾಣ ಹೇಗಿದೆ ಎಂಬುದನ್ನು ನಿಖರವಾಗಿ ತಿಳಿಯಲು ಸಾಧ್ಯವಾಗುವುದಿಲ್ಲ. ಹೆಚ್ಚೆಚ್ಚು ಪರೀಕ್ಷೆ ನಡೆಸದಿರಲು ಪಿಪಿಇ ಕಿಟ್ ಗಳ ಅಲಭ್ಯತೆಗಿಂತ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಹೆಚ್ಚೆಚ್ಚು ಪರೀಕ್ಷೆ ಮಾಡಿದರೆ ಹೆಚ್ಚೆಚ್ಚು ಪ್ರಕರಣಗಳು ಪತ್ತೆಯಾಗಬಹುದೆಂಬ ಭಯ ಆಳುವವರನ್ನು ಕಾಡುತ್ತಿರುವಂತಿದೆ.
ಇವೆಲ್ಲದರ ನಡುವೆ ಪ್ರಧಾನಿ ಮೋದಿ ಅವರಿಂದ ಹಿಡಿದು, ಕೇಂದ್ರ ಸಚಿವರಿಂದ ಹಿಡಿದು ಬಿಜೆಪಿ ನಾಯಕರೆಲ್ಲರಿಂದ ‘ಕರೋನಾ ವಿರುದ್ಧದ ಹೋರಾಟದಲ್ಲಿ ಸಫಲವಾಗಿದ್ದೇವೆ. ಪ್ರಧಾನಿ ಮೋದಿ ಕರೋನಾದ ಹುಟ್ಟಡಗಿಸುತ್ತಿರುವ ರಣಕಲಿ, ಸದ್ಯ ಮೋದಿ ಅಲ್ಲದೆ ಬೇರೆ ಯಾರಾದರೂ ಭಾರತವನ್ನು ಮುನ್ನಡೆಸುತ್ತಿದ್ದರೆ ಭಾರೀ ಗಂಡಾಂತರ ಬಂದೊದಗಿರುತ್ತಿತ್ತು’ ಎಂದು ಬೀಗುವ, ಬಿಂಬಿಸುವ ಕೆಲಸ ನಡೆಯುತ್ತಿದೆ. ದಕ್ಷಿಣ ಕನ್ನಡದ ಸಂಸದ ನಳೀನ್ ಕುಮಾರ್ ಕಟೀಲ್ ಇದೇ ವಿಷಯವನ್ನು ಹಾಸ್ಯಾಸ್ಪದವಾಗಿ ಪ್ರಸ್ತುತಪಡಿಸಿದ್ದಾರೆ.
ಕರೋನಾ ಪರಿಸ್ಥಿತಿಯ ಜೊತೆಜೊತೆಗೆ ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸುವ ಹಾಗೂ ಲಾಕ್ಡೌನ್ ಜಾರಿಗೊಳಿಸಿದ ವಿಚಾರಗಳ ಬಗ್ಗೆಯೂ ಆಡಳಿತ ನಡೆಸುತ್ತಿರುವ ಭೂಪರು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಇದಲ್ಲದೆ ಕೇಂದ್ರ ಸರ್ಕಾರ ಇನ್ನೊಂದು ಮಾಹಿತಿಯನ್ನು ದೇಶದ ಜನರ ಮುಂದಿಡುತ್ತದೆ. ಅದೇನೆಂದರೆ ಕರೋನಾ ರೋಗ ಸಮುದಾಯಕ್ಕೆ ಹರಡಿಲ್ಲ ಅಂತಾ. ಈ ವಿಷಯವನ್ನು ಪದೇ ಪದೇ ಹೇಳಿ ನಂಬಿಸುವ ಪ್ರಯತ್ನ ಮಾಡಲಾಗುತ್ತಿದೆ.
ಆದರೆ ಕೇಂದ್ರ ಸರ್ಕಾರವೇ ಕರೋನಾ ವಿರುದ್ಧ ಹೋರಾಟದ ಭಾಗವಾಗಿ ರೂಪಿಸಿರುವ ಸಲಹಾ ಸಮಿತಿಗಳು ಕೇಂದ್ರ ಸರ್ಕಾರದ ನಡೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿವೆ. ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಇಂಡಿಯನ್ ಪಬ್ಲಿಕ್ ಹೆಲ್ತ್ ಅಸೋಸಿಯೇಷನ್ (ಇಪಿಹೆಚ್ಎ), ಇಂಡಿಯನ್ ಅಸೋಸಿಯೇಷನ್ ಅಂಡ್ ಸೋಷಿಯಲ್ ಮೆಡಿಸಿನ್ (ಐಎಪಿಎಸ್ಎಂ) ಮತ್ತು ಇಂಡಿಯನ್ ಅಸೋಸಿಯೇಷನ್ ಆಫ್ ಎಪಿಡೆಮಿಯಾಲಜಿಸ್ಟ್ (ಐಎಇ) ಕೇಂದ್ರ ಸರ್ಕಾರದ ನಡೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ. ಬಹಳ ಮುಖ್ಯವಾಗಿ ಕರೋನಾ ಸಮುದಾಯಕ್ಕೆ ಹರಡಿಲ್ಲ ಎಂಬುದಾಗಿ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ ಎಂದಿವೆ.
ಪ್ರಧಾನ ಮಂತ್ರಿಗೆ ಪತ್ರ ಬರೆದು ನಿಮ್ಮದೇ ನೇತೃತ್ವದ ಸರ್ಕಾರ ಜನರನ್ನು ದಾರಿ ತಪ್ಪಿಸುವ ಮಾಹಿತಿ ನೀಡುತ್ತಿದೆ ಎಂದು ಹೇಳಿರುವುದಷ್ಟೇಯಲ್ಲದೆ ಅದರ ಪೂರ್ಣ ಪಾಠವನ್ನು ವಿವರಿಸಿವೆ. ಜಂಟಿ ಪತ್ರ ಬರೆದಿರುವ ಇಪಿಹೆಚ್ಎ, ಐಎಪಿಎಸ್ಎಂ ಮತ್ತು ಐಎಇ ಸಂಸ್ಥೆಗಳು, ಕರೋನಾ ಸಮುದಾಯಕ್ಕೆ ಹರಡಿದೆ. ಕರೋನಾ ನಿಯಂತ್ರಿಸಲು ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಸಮರ್ಪಕವಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿವೆ.
ಲಾಕ್ಡೌನ್ ಜಾರಿಗೊಳಿಸಿದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಕರೋನಾ ಸೋಂಕು ಹರಡುವಿಕೆ ಕಡಿಮೆ ಇದ್ದಾಗ ಲಾಕ್ಡೌನ್ ಜಾರಿ ಮಾಡಿ ಕರೋನಾ ವ್ಯಾಪಕವಾಗಿ ಹರಡಲು ಆರಂಭಿಸಿದಾಗ ಲಾಕ್ಡೌನ್ ನಿಯಮಾವಳಿಗಳನ್ನು ಸಡಿಲಿಸಿದ ಕೇಂದ್ರ ಸರ್ಕಾರದ ನಡೆ ಅಸಮರ್ಥನೀಯವಾಗಿದೆ. ಅದೇ ರೀತಿ ವಲಸೆ ಕಾರ್ಮಿಕರನ್ನು ಮೊದಲ ಹಂತದ ಲಾಕ್ಡೌನ್ ಜಾರಿಗೊಳಿಸುವ ಮುನ್ನವೇ ಅವರವರ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕಿತ್ತು. ಸೋಂಕು ಹರಡುವಿಕೆ ತೀವ್ರಗೊಂಡ ಮೇಲೆ ಕಳುಹಿಸಿಕೊಟ್ಟಿದ್ದು ತಪ್ಪು ನಿರ್ಧಾರವಾಗಿದೆ ಎಂದು ಹೇಳಲಾಗಿದೆ.
ಕರೋನಾ ಸೋಂಕು ಸಮುದಾಯಕ್ಕೆ ಹರಡಿದ ಮೇಲೆ ವಲಸಿಗರನ್ನು ಅವರವರ ಊರಿಗೆ ಕಳುಹಿಸಿರುವುದರಿಂದ ಸೋಂಕು ಹರಡುವಿಕೆ ಇನ್ನಷ್ಟು ತೀವ್ರಗೊಳ್ಳಲಿದೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗಲಿದೆ. ಇದರ ಪರಿಣಾಮಗಳು ಭೀಕರವಾಗಿರಲಿವೆ. ಏಕೆಂದರೆ ಭಾರತದ ಗ್ರಾಮೀಣ ಭಾಗದಲ್ಲಿ ಇರುವ ಆರೋಗ್ಯ ಸೇವೆ, ಸವಲತ್ತುಗಳು ಅಷ್ಟು ಪರಿಣಾಮಕಾರಿಯಾಗಿ ಇಲ್ಲ. ಸಮರ್ಥ ವೈದ್ಯಕೀಯ ವ್ಯವಸ್ಥೆ ಇಲ್ಲದೆ ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವುದು ಅತಿಕಷ್ಟಕರವಾದ ಕೆಲಸ ಎಂದು ಎಚ್ಚರಿಸಲಾಗಿದೆ.
ಈ ಸಂಬಂಧ ಕೆಲವು ಸಲಹೆಗಳನ್ನು ನೀಡಿರುವ ಇಪಿಹೆಚ್ಎ, ಐಎಪಿಎಸ್ಎಂ ಮತ್ತು ಐಎಇ ಸಂಸ್ಥೆಗಳು, ಸದ್ಯ ಜಿಲ್ಲಾ ಮಟ್ಟದಲ್ಲಿ ಹೆಚ್ಚಿನ ಕ್ರಮಕೈಗೊಳ್ಳುವ ಆಯ್ಕೆ ಮಾತ್ರ ಉಳಿದಿದೆ. ಆದುದರಿಂದ ಜಿಲ್ಲಾಡಳಿತಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಅಧಿಕಾರ ಮತ್ತು ನೆರವು ನೀಡಬೇಕು ಎಂದು ಹೇಳಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೂಡ ಇತ್ತೀಚೆಗೆ ‘ಪರಿಸ್ಥಿತಿ ನಿರ್ವಹಿಸಲು ಜಿಲ್ಲಾಡಳಿತಗಳಿಗೆ ಹೆಚ್ಚಿನ ಅಧಿಕಾರ ಮತ್ತು ನೆರವು ನೀಡಿ’ ಎಂದು ಸಲಹೆ ನೀಡಿದ್ದನ್ನು ಸ್ಮರಿಸಬಹುದು. ಇದಲ್ಲದೆ ಕರೋನಾ ಸೋಂಕು ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಹರಡುವುದನ್ನು ತಡೆಯಲು ಕೂಡಲೇ ಕ್ಲಷ್ಟರ್ ಮಟ್ಟದಲ್ಲಿ ಲಾಕ್ಡೌನ್ ಜಾರಿಗೊಳಿಸುವಂತೆ ಕೂಡ ಸಲಹೆ ನೀಡಲಾಗಿದೆ. ಇವುಗಳ ಹೊರತಾಗಿ ದೇಶದ ಜಿಡಿಪಿಯ ಶೇಕಡಾ 5ರಷ್ಟನ್ನು ಆರೋಗ್ಯ ಸೇವೆ ಬಲಪಡಿಸಲು ಮೀಸಲಿಡುವಂತೆ ಕೂಡ ಶಿಫಾರಸು ಮಾಡಿವೆ.
ಮೊದಲ ಹಂತದ ಲಾಕ್ಡೌನ್ ಘೋಷಿಸುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಈ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಆಗ ನೀಡಿದ್ದ ಸಲಹೆಗಳನ್ನು ಉಪೇಕ್ಷಿಸಿರಬಹುದು, ರಾಹುಲ್ ಗಾಂಧಿ ಅವರು ನೀಡಿದ ಸಲಹೆಗಳನ್ನೂ ರಾಜಕೀಯ ಕಾರಣಗಳಿಗೆ ನೇಪಥ್ಯಕ್ಕೆ ಸರಿಸಿರಬಹುದು ಈಗ ಸಮುದಾಯಕ್ಕೆ ಕರೋನಾ ಹರಡಿದೆ ಎಂಬ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಜೊತೆಗೆ ಸಲಹೆಗಳನ್ನು…