ದೇಶದಲ್ಲಿ ಲಾಕ್ಡೌನ್ ಸಡಿಲಿಕೆಗೊಳ್ಳುತ್ತಲೇ ಧಾರ್ಮಿಕ ಆರಾಧನಾ ಕೇಂದ್ರಗಳನ್ನೂ ತೆರೆಯಲಾಗಿದೆ. ಈಗಾಗಲೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸರ್ವ ಧರ್ಮಗಳ ಆರಾಧನಾ ಕೇಂದ್ರಗಳು ತೆರೆಯಲ್ಪಟ್ಟಿದ್ದು, ಭಕ್ತರು ಒಂದಿಷ್ಟು ಕಡ್ಡಾಯ ನಿಯಮಗಳನ್ನ ಪಾಲಿಸಿಕೊಂಡೇ ಮಂದಿರ, ಮಸೀದಿ, ಚರ್ಚ್ ಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಕೇರಳದಲ್ಲಿ ಧಾರ್ಮಿಕ ಆರಾಧನಾ ಕೇಂದ್ರಗಳು ತೆರೆಯುವಂತೆ ನೀಡಿರುವ ಅವಕಾಶ ರಾಜಕೀಯ ಜಂಗೀಕುಸ್ತಿಗೆ ಕಾರಣವಾಗಿದೆ. ಹಿಂದೂ ಸಂಘಟನೆಗಳು ಕೇರಳದ ಎಡಪಂಥೀಯ ಸರಕಾರದ ವಿರುದ್ಧ ಹರಿಹಾಯ್ದಿದ್ದು, ಯಾವೊಂದು ಹಿಂದೂ ಸಂಘಟನೆಗಳನ್ನ ಸಂಪರ್ಕಿಸದೆಯೇ, ಅವರ ಭಾವನೆಗೂ ಬೆಲೆ ಕೊಡದೇ ಸರಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಆರೋಪಿಸಿದೆ.
ಕೇಂದ್ರ ಸಚಿವ ವಿ. ಮುರಳೀಧರನ್ ಜೂನ್ 8 ರಂದು ಕೇರಳ ಸರಕಾರ ಧಾರ್ಮಿಕ ಕೇಂದ್ರಗಳ ಬಾಗಿಲು ತೆರೆಯಲು ಅವಕಾಶ ನೀಡಿದ್ದನ್ನ ಮೊದಲನೆ ಬಾರಿಗೆ ಟ್ವೀಟ್ ಮೂಲಕ ಪ್ರಶ್ನೆ ಎತ್ತಿದ್ದಾರೆ. ಭಕ್ತರು ಆಗ್ರಹಿಸದೇ ಇದ್ದರೂ ಕೇರಳ ಸರಕಾರದ ಆತುರತೆ ಹಿಂದೆ ಕೆಟ್ಟ ವಾಸನೆಯೊಂದು ಬಡಿಯುತ್ತಿದೆ ಎಂದು ಟ್ವೀಟಿಸಿದ್ದರು. ಅಲ್ಲದೇ ನಿರ್ಧಾರ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಇದನ್ನ ಕೇರಳ ಸಿಎಂ ಕಚೇರಿ, ಕೇರಳ ರಾಜ್ಯ ಬಿಜೆಪಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಇವರೆಲ್ಲರಿಗೂ ಟ್ಯಾಗ್ ಮಾಡಿದ್ದಾರೆ.
The Kerala government’s decision to reopen temples despite opposition from devotees smell foul. Neither the devotees nor the temple committees demanded the opening of temples. @CMOKerala @vijayanpinarayi @BJP4Keralam @JPNadda @AmitShah @narendramodi @BJP4India
— V Muraleedharan (@VMBJP) June 8, 2020
ಇದಕ್ಕೆ ಕೇರಳದ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ತಿರುಗೇಟು ನೀಡಿದ್ದು, ಬಿಜೆಪಿ ಶಬರಿಮಲೆಯಂತಹ ವಿಚಾರಗಳನ್ನ ಮತ್ತೆ ಮುನ್ನೆಲೆ ತರಲು ಅವಕಾಶಕ್ಕಾಗಿ ಕಾಯುತ್ತಿದೆ. ಆದರೆ ನಾವು ಕೇಂದ್ರ ಸರಕಾರದ ಲಾಕ್ಡೌನ್ ಸಡಿಲಿಕೆ ನಿಯಮದಂತೆಯೇ ತೆರೆಯಲು ಮುಂದಾಗಿದ್ದೇವೆ. ಅದರೆ ಇದನ್ನ ವಿರೋಧಿಸುವ ಮೂಲಕ ವಿ. ಮುರಳೀಧರನ್ ಬಿಜೆಪಿ ಪಕ್ಷದ ನಾಯಕತ್ವವನ್ನೇ ವಿರೋಧಿಸಿದಂತಿದೆ ಎಂದು ಸುದ್ದಿಗೋಷ್ಟಿಯಲ್ಲಿ ಲೇವಡಿ ಮಾಡಿದ್ದಾರೆ.
ಆದರೆ ಈ ವಿಚಾರದಲ್ಲಿ ಯಾಕಿಷ್ಟು ಗೊಂದಲ ಅಂತಾ ಹುಡುಕುತ್ತಾ ಹೋದರೆ ರಾಜ್ಯ ಸರಕಾರ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಮುಸ್ಲಿಂ, ಕ್ರೈಸ್ತ ಹಾಗೂ ಕೆಲವೇ ಹಿಂದೂಗಳನ್ನ ಕರೆಸಿ ಚರ್ಚೆ ಮಾಡಿರುವುದೇ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಅವರ ಪ್ರಕಾರ ರಾಜ್ಯ ಸರಕಾರ ನಡೆಸಿದ್ದ ಸಭೆಯಲ್ಲಿ ಕೇವಲ ಎರಡು ಹಿಂದೂ ಸಮುದಾಯಕ್ಕಷ್ಟೇ ಅವಕಾಶ ನೀಡಲಾಗಿತ್ತು ಅನ್ನೋದು ಅವರ ಆರೋಪವಾಗಿದೆ. ನಾಯರ್ ಸಮುದಾಯದ ನಾಯರ್ ಸರ್ವಿಸ್ ಸೊಸೈಟಿ ಹಾಗೂ ಈಳವ ಸಮುದಾಯದ ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ಮಾತ್ರವೇ ಪಾಲ್ಗೊಂಡಿತ್ತು.
ಆದರೆ ಇದನ್ನೇ ಮುಂದಿರಿಸಿ ಬಿಜೆಪಿ ಕೇರಳ ಸರಕಾರದ ವಿರುದ್ಧ ವಾಗ್ದಾಳಿ ನಡೆಸಲು ಮುಂದಾಗಿದ್ದನ್ನ ಕೆಲ ಹಿಂದೂ ಪಂಥೀಯರು ವಿರೋಧಿಸಿದ್ದಾರೆ. ನಾಯರ್ ಸರ್ವಿಸ್ ಸೊಸೈಟಿಯು, ತಮ್ಮ ಯಾವುದೇ ದೇವಾಲಯಗಳನ್ನ ತೆರೆಯದಿರಲು ನಿರ್ಧರಿಸಿದ್ದು, ಉಂಟಾಗಿರುವ ಗೊಂದಲದಿಂದ ಭಕ್ತರು ಹಾಗೂ ಸರಕಾರದ ನಡುವೆ ಶಬರಿಮಲೆ ರೀತಿಯ ಗೊಂದಲ ಏರ್ಪಡದಿರಲಿ ಅನ್ನೋ ಕಾರಣಕ್ಕಾಗಿ ಎಂದು ತಿಳಿಸಿದ್ದಾಗಿ ʼದಿ ಪ್ರಿಂಟ್ʼ ವರದಿ ಮಾಡಿದೆ.
ಆದರೆ ಬಹುತೇಕ ದೇವಾಲಯಗಳು ತೆರೆಯದಿರಲು ನಿರ್ಧರಿಸಿರುವ ಕಾರಣಕ್ಕೂ, ರಾಜಕೀಯಕ್ಕೂ ಇಲ್ಲಿ ಸಂಬಂಧವಿರದು. ಏಕೆಂದರೆ, ದೇವಾಲಯಕ್ಕೆ ಬಂದ ಭಕ್ತರು ಪ್ರಸಾದ ಹಾಗೂ ನೈವೇದ್ಯಗಳನ್ನ ನಿರೀಕ್ಷಿಸುವುದು ಸಹಜ. ಮತ್ತು ಆ ರೀತಿ ಪಡೆದರೆ ಮಾತ್ರ ಭಕ್ತರಲ್ಲೂ ಧನ್ಯತಾ ಭಾವ ಮೂಡುತ್ತದೆ. ಆದರೆ ಅದಕ್ಕೆ ಅವಕಾಶವಿಲ್ಲದ್ದರಿಂದ ದೇವಾಲಯ ತೆರೆಯುವುದರಲ್ಲಿ ಅರ್ಥವಿರದು. ಹೊಟೇಲ್ ಗಳಲ್ಲಿ ಆಹಾರ ಪಡೆಯಲು ಅವಕಾಶವಿರೋದಾದರೆ, ದೇವಾಲಯಗಳಲ್ಲಿ ಯಾಕಿಲ್ಲ? ಅಂತಾ ಅವರು ನಾಯರ್ ಸರ್ವಿಸ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಸುಕುಮಾರನ್ ನಾಯರ್ ಪ್ರಶ್ನಿಸುತ್ತಾರೆ.
ಇದರ ಜೊತೆಗೆ ಇನ್ನೊಂದು ವಾದವೂ ಕೇಳಿ ಬರುತ್ತಿದೆ. ಕೋವಿಡ್-19 ಹೆಚ್ಚಳವಾಗುವ ಸಮಯದಲ್ಲಿಯೇ ದೇವಾಯಲಗಳ ಬಾಗಿಲು ತೆರೆಯುವುದರಿಂದ ಕೋವಿಡ್-19 ಹರಡುವ ಭೀತಿಯೂ ಇದೆ. ಏಕೆಂದರೆ, ಕೇರಳ ಸರಕಾರ ಯಾವುದೇ ಮುನ್ನೆಚ್ಚರಿಕೆ ವಹಿಸದೇ ಈ ರೀತಿಯಾಗಿ ಬಾಗಿಲು ತೆರೆಯಲು ಅವಕಾಶ ಮಾಡಿಕೊಟ್ಟರೆ, ಅದರಿಂದ ಸೋಂಕು ಹರಡುವ ಸಾಧ್ಯತೆಯೇ ಜಾಸ್ತಿ ಅಂತಾ ಕೇರಳದ ಧಾರ್ಮಿಕ ಮುಖಂಡರು ಬಲವಾಗಿ ನಂಬಿದ್ದಾರೆ. ಆದ್ದರಿಂದ ಬಾಗಿಲು ತೆರೆಯದೇ ಇರಲೂ ನಿರ್ಧರಿಸಿದ್ದಾರೆ. ಇದರ ಬಗ್ಗೆ ಕೇರಳ ಸರಕಾರ ನಿಜಕ್ಕೂ ಗಂಭೀರವಾಗಿಲ್ಲ ಅಂತಾನೂ ಅವರು ಆರೋಪಿಸಿದ್ದಾರೆ.
ಇನ್ನು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ದೇವಾಲಯದ ಬಾಗಿಲು ತೆರೆಯದಿರಲೂ ನಿರ್ಧರಿಸಿದ್ದಾಗಿ ಅಖಿಲ ಭಾರತೀಯ ಶಬರಿಮಲೆ ಕ್ರಿಯಾ ಸಮಿತಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್ಜೆಆರ್ ಕುಮಾರ್ ತಿಳಿಸಿದ್ದಾರೆ. “ದೇವಾಲಯದಲ್ಲಿ ʼನೆಯ್ಯಾಭಿಷೇಕಂʼ ನಡೆಸಲು ಅವಕಾಶ ಇಲ್ಲದೇ ಹೋದರೆ ಭಕ್ತರು ಆಗಮಿಸಿ ಏನು ಪ್ರಯೋಜನ? ಎಂದು ಪ್ರಶ್ನಿಸುವ ಅವರು, ಅದೇ ಇನ್ನೊಂದೆಡೆ ರಾಜ್ಯ ಸರಕಾರ ʼಅರವಾಣʼ ನೀಡಲು ಅವಕಾಶ ನೀಡುವುದಾದರೆ, ಇದು ಸರಕಾರ ಆದಾಯದ ಮೇಲೆ ಕಣ್ಣಿಟ್ಟಿರುವುದು ಗೊತ್ತಾಗುತ್ತದೆ. ಅಲ್ಲದೇ ಶಬರಿಮಲೆಗೆ ಬೇರೆ ರಾಜ್ಯಗಳಿಂದಲೂ ಭಕ್ತರು ಆಗಮಿಸುವ ಕಾರಣದಿಂದ ಕರೋನಾ ಸೋಂಕು ಹಬ್ಬುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಆದರೆ ಈ ಬಗ್ಗೆ ಸರಕಾರ ಯಾವುದೇ ಮುತುವರ್ಜಿ ವಹಿಸುತ್ತಿಲ್ಲ. ಆದ್ದರಿಂದ ದೇವಸ್ವಂ ಇಲಾಖೆಗೆ ದೇವಾಲಯದ ಸಿಬ್ಬಂದಿಗಳಿಂದ ಒಂದಿಷ್ಟು ಮಾರ್ಗದರ್ಶನದ ಅಗತ್ಯವಿದೆ” ಎಂದರು. ಅಲ್ಲದೇ ದೇವಾಲಯದಲ್ಲಿ ಒಂದು ಕೋವಿಡ್-19 ಪತ್ತೆಯಾದರೂ ಮತ್ತೆ ದೇವಾಲಯವನ್ನ ಮುಚ್ಚಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಸ್ಜೆಆರ್ ಕುಮಾರ್ ತಿಳಿಸಿದ್ದಾರೆ.
ಅಲ್ಲದೇ ಜೂನ್ 14 ರಿಂದ ಶಬರಿಮಲೆ ತೆರೆಯಲು ಅವಕಾಶ ನೀಡಿರುವುದನ್ನ ದೇವಾಲಯದ ಪ್ರಧಾನ ಅರ್ಚಕರು ವಿರೋಧಿಸಿದ್ದಾರೆ. ಅಲ್ಲದೇ ತಿರುವಾಂಕೂರು ದೇವಸ್ವಂ ಮಂಡಳಿಗೆ ಪತ್ರ ಬರೆದು ಮುಂದೂಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸರಕಾರ, ಗುರುವಾರ (ಜೂನ್ 11) ಸಭೆ ನಡೆಸಿದ್ದು, ದೇವಾಲಯಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡದಿರಲು ನಿರ್ಧರಿಸಿದೆ. ಅಲ್ಲದೇ ಸರಕಾರಕ್ಕೆ ಭಕ್ತರ ಜೊತೆ ಚರ್ಚಿಸದೇ, ದೇವಾಲಯಗಳನ್ನ ತೆರೆಯುವ ಆತುರತೆ ಇಲ್ಲ ಎಂದಿದೆ.
ಇನ್ನು ಮಸೀದಿಗಳಲ್ಲೂ ಇದೇ ಆತಂಕವಿದೆ. ಕೇರಳದ ಗ್ರಾಮೀಣ ಮಸೀದಿಗಳಲ್ಲಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗದು. ಆದರೆ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರವೂರಿನವರೂ ಆಗಮಿಸುವುದರಿಂದ ಅಂತರ ಕಾಯ್ದುಕೊಳ್ಳುವುದು ಕಷ್ಟವಾದೀತು ಅನ್ನೋದು ಪಳಯಂ ಜುಮ್ಮಾ ಮಸೀದಿ ಇಮಾಮ್ ಆಗಿರುವ ವಿಪಿ ಸುಹೈಬ್ ಮೌಲವಿ ಅವರ ಅಭಿಪ್ರಾಯ.
ಇವರು ಮಾತ್ರವಲ್ಲದೇ ಕ್ರಿಶ್ಚಿಯನ್ ಸಮುದಾಯವೂ ಸರಕಾರದ ಅನುಮತಿ ಇದ್ದರೂ ಚರ್ಚ್ ಬಾಗಿಲು ತೆರೆಯದಿರಲು ನಿರ್ಧರಿಸಿದ್ದಾವೆ. ಮಾತ್ರವಲ್ಲದೇ ಕೆಲವೆಡೆ ಚರ್ಚ್ ಗಳ ಬಾಗಿಲುಗಳು ತೆರೆದರೂ ಹೆಚ್ಚಿನ ಭಕ್ತರ ನಿರೀಕ್ಷೆ ಇಡುವಂತಿಲ್ಲ. 65 ವರುಷ ಮೇಲ್ಪಟ್ಟವರು ಆಗಮಿಸಬಾರದು ಅನ್ನೋ ನಿಯಮದಿಂದ ತುಸು ಕಷ್ಟವೇ ಸರಿ. ಕಾರಣ, 65 ವರುಷ ಮೇಲ್ಪಟ್ಟವರೇ ಚರ್ಚ್ ನ ಬೆನ್ನುಲುಬಾಗಿರುವವರು. ಮಾತ್ರವಲ್ಲದೇ 10 ರ ಹರೆಯದ ಕೆಳಗಿನ ಮಕ್ಕಳಿಗೆ ಅವಕಾಶ ಇಲ್ಲದೇ ಇರೋದರಿಂದ ತಾಯಂದಿರಾರೂ ಚರ್ಚ್ ಕಡೆ ಮುಖ ಮಾಡಲಾರರು. ಇನ್ನು ಈಗಾಗಲೇ ಮೂರು ತಿಂಗಳ ಲಾಕ್ಡೌನ್ ಬಂದ್ ನಿಂದಾಗಿ ಆನ್ ಲೈನ್ ಮೂಲಕವೇ ಪೂಜೆ ಸಲ್ಲಿಸುತ್ತಿದ್ದ ಮತ್ತೆ ಅದೇ ಮಾದರಿ ಪೂಜೆಗೆ ಮೊರೆ ಹೋದರೂ ಅಚ್ಚರಿಯಿಲ್ಲ.
ಒಟ್ಟಿನಲ್ಲಿ ಕೇರಳದಲ್ಲಿ ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ಒಂದಿಷ್ಟು ನಿರ್ಬಂಧದ ಮೇಲೆ ತೆರೆಯಲು ಅವಕಾಶ ಮಾಡಿಕೊಟ್ಟರೂ ದೇವಸ್ಥಾನ, ಮಸೀದಿ, ಚರ್ಚ್ ಗಳನ್ನ ತೆರೆಯದಿರಲು ಧಾರ್ಮಿಕ ನಾಯಕರೇ ನಿರ್ಧರಿಸಿದ್ದಾರೆ. ಆದರೆ ದೇವಾಲಯ ತೆರೆಯುವ ವಿಚಾರದಲ್ಲಿ ಬಿಜೆಪಿ ಕೇರಳ ಸರಕಾರದ ಜೊತೆ ಸಂವಹನ ನಡೆಸದೇ ಅನಗತ್ಯ ಗೊಂದಲ ಹುಟ್ಟು ಹಾಕಲು ಪ್ರಯತ್ನಿಸಿರುವು ಸುಳ್ಳಲ್ಲ.