ಚೀನಾ-ಭಾರತ ನಡುವಿನ ಗಡಿ ತಕರಾರು ತಾರಕಕ್ಕೆ ಏರುತ್ತಿದ್ದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ವಿರೋಧ ಪಕ್ಷಗಳ ಒತ್ತಡ ಹೆಚ್ಚಾಗುತ್ತಲೇ ಇದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸರ್ಕಾರದ ಮೇಲೆ ಪ್ರಶ್ನೆಗಳ ಮಳೆ ಸುರಿಯುತ್ತಿದ್ದಾರೆ. ಈ ಹಂತದಲ್ಲಿ ಸರ್ಕಾರವನ್ನು ಪ್ರಶ್ನಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಕುರಿತ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ ಇದರೊಂದಿಗೆ ಬಿಜೆಪಿಯು ಕೂಡಾ ತೀಕ್ಷ್ಣ ಮಾತುಗಳಿಂದ ತಿವಿದು ಡ್ಯಾಮೇಜ್ ಕಂಟ್ರೋಲಿಂಗ್ ಗೆ ಮುಂದಾಗಿದೆ.
ಈಗ ಕಾಂಗ್ರೆಸ್ನ ಪ್ರಶ್ನೆಗಳನ್ನು ಉತ್ತರಿಸಲಾಗದೇ ತಡಬಡಾಯಿಸುತ್ತಿರುವ ಬಿಜೆಪಿ ಯುಪಿಎ ಸರ್ಕಾರವಿದ್ದಾಗ ಉಂಟಾದ ಗಡಿ ತಕರಾರಿನ ಸಂದರ್ಭದಲ್ಲಿ ಏನು ಮಾಡಿತ್ತು ಎಂದು ನೋಡುವುದಾದರೆ ಬಹಳಷ್ಟು ಗಮನಾರ್ಹ ವಿಚಾರಗಳು ಬೆಳಕಿಗೆ ಬರುತ್ತವೆ. ಇಂದು ಕಾಂಗ್ರೆಸ್ ಪ್ರಶ್ನೆಗಳು ʼಬೇಜವಾಬ್ದಾರಿʼತನದಿಂದ ಕೂಡಿದವು, ಸೈನಿಕರ ಆತ್ಮಸ್ಥೈರ್ಯವನ್ನು ʼಕುಂದಿಸುವಂಥವುʼ ಹಾಗೂ ʼಕ್ಷುಲ್ಲಕ ರಾಜಕಾರಣʼ ಎಂದೆಲ್ಲಾ ಜರಿಯುತ್ತಿರುವ ಬಿಜೆಪಿ ನಾಯಕರಾದ ಜೆ ಪಿ ನಡ್ಡಾ, ಅಮಿತ್ ಶಾ ಹಾಗೂ ರಾಜನಾಥ್ ಸಿಂಗ್ ಒಮ್ಮೆ ತಾವು ನಡೆದ ಬಂದ ಹಾದಿಯನ್ನು ತಿರುಗಿ ನೋಡಬೇಕಾಗಿದೆ. ತಮ್ಮ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ತಾವು ಮಾಡಿದ್ದೇನು ಎಂಬುದನ್ನು ಅವಲೋಕಿಸಬೇಕಿದೆ.
2004 ರಿಂದ 2014ರ ವರೆಗೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಚೀನಾ ಭಾರತದ ಮೇಲೆ ದಾಳಿ ಮಾಡಿದಾಗ ಬಿಜೆಪಿಯು ಸರ್ಕಾರವನ್ನು ರಾಜತಾಂತ್ರಿಕ ನಿರ್ಣಯ ಹೊಂದಲು ಒತ್ತಡ ಹೇರಿತ್ತು. ಅಷ್ಟು ಮಾತ್ರವಲ್ಲದೇ, ಬಿಜೆಪಿ ನಾಯಕರ ಒಂದು ನಿಯೋಗವು ಖುದ್ದಾಗಿ ಗಡಿ ಪ್ರದೇಶಕ್ಕೆ ಭೇಟಿ ನೀಡಿ ಹಲವಾರು ಪತ್ರಿಕಾಗೋಷ್ಟಿಗಳನ್ನು ಕರೆದು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದೂಷಿಸಿದ್ದು ಇಷ್ಟು ಬೇಗ ಮರೆತು ಹೋಯಿತೇ?
2013ರಲ್ಲಿ ಪಣಜಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿಯು ʼಸುರಕ್ಷೆ ಮತ್ತು ಸ್ವಾಭಿಮಾನʼ ಎಂಬ ಪ್ರತ್ಯೇಕ ನಿರ್ಣಯವನ್ನು ತೆಗೆದುಕೊಂಡಿತು. ಇದರಲ್ಲಿ ಏನು ಹೇಳಲಾಗಿತ್ತೆಂದರೆ, “ಭಾರತದ ಮೀನುಗಾರನ್ನು ಬಂಧಿಸಿ ಕೊಲ್ಲಲಾಗುತ್ತಿದೆ, ನಮ್ಮ ಸೈನಿಕರ ತಲೆಗಳನ್ನು ಕಡಿಯಲಾಗುತ್ತಿದೆ ಮತ್ತು ಚೀನಾವು ಪದೇ ಪದೇ ಭಾರತದ ಗಡಿಯೊಳಗೆ ನುಗ್ಗುತ್ತಿದೆ. ಇತ್ತೀಚಿಗೆ ಚೀನಾ ಭಾರತದ ಗಡಿಯೊಳಗಡೆ 19 ಕಿ. ಮೀ.ನಷ್ಟು ಒಳಗೆ ನುಗ್ಗಿತ್ತು. ಸುಮಾರು ಒಂದು ತಿಂಗಳ ಕಾಲ ಭಾರತದ ಗಡಿಯೊಳಗಡೆ ತನ್ನ ಹಿಡಿತವನ್ನು ಸಾಧಿಸಿತ್ತು. ಭಾರತದ ಮಾನ್ಯತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಳೆಗುಂದುತ್ತಾ ಇದೆ, ನಮ್ಮ ಸಾರ್ವಭೌಮತೆ ಪ್ರಶ್ನಿಸಲ್ಪಡುತ್ತಿದೆ. ನಮ್ಮ ಸರ್ಕಾರ ಜನರಿಗೆ ಸಾಂತ್ವನವನ್ನು ಬಿಟ್ಟು ಬೇರೇನನ್ನೂ ಹೇಳುತ್ತಿಲ್ಲ.”
ಇನ್ನು 2009ರಲ್ಲಿ ತೆಗೆದುಕೊಂಡ ನಿರ್ಣಯದ ಪ್ರಕಾರ ಅರುಣಾಚಲ್ ಪ್ರದೇಶದಲ್ಲಿ ಚೀನಾ ಭಾರತದ ಗಡಿಯನ್ನು ಆಕ್ರಮಿಸಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಭಾರತ ಸರ್ಕಾರವು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಲ್ಲಿನ ನಿಜ ಪರಿಸ್ಥಿತಿಯ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಪಕ್ಷವು ಆಗ್ರಹಿಸುತ್ತದೆ ಎಂದು ಹೇಳಲಾಗಿತ್ತು.

ಸೆಪ್ಟೆಂಬರ್ 18, 2009ರಲ್ಲಿ ಬಿಜೆಪಿಯ ಆಗಿ ವಕ್ತಾರರಾಗಿದ್ದ ಸಚಿವ ರವಿಶಂಕರ್ ಪ್ರಸಾದ್ ಅವರು ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತವು ಗಡಿಯನ್ನು ಚೀನಾ ವಿರುದ್ದ ಹೋರಾಡಲು ಅಗತ್ಯವಿರುವ ಮೂಲಭೂತ ಸೌಕರ್ಯವನ್ನು ಸಿದ್ದಪಡಿಸಿದೆಯೇ ಎನ್ನುವುದರ ಕುರಿತು ಶ್ವೇತ ಪತ್ರವನ್ನು ಹೊರಡಿಸಬೇಕೆಂದು ಹೇಳಿದ್ದರು.
“ಚೀನಾ ಪದೇ ಪದೇ ದಾಳಿ ಮಾಡುತ್ತಿರುವುದು ನಿಜಕ್ಕೂ ಅಸಹನೀಯ. ಆದರೆ, ಭಾರತ ಸರ್ಕಾರ ದಿವ್ಯ ನಿರ್ಲಕ್ಷ್ಯವನ್ನು ತೋರುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತ-ಚೀನಾ ಸಂಬಂಧ ಹೇಗಿದೆ? ಯಾಕೆ ಈ ಗೊಂದಲಗಳು ಉಂಟಾಗಿವೆ? ಸರ್ಕಾರಕ್ಕೆ ಈ ಪರಿಸ್ಥಿತಿಯನ್ನು ನಿಭಾಯಿಸುವ ಶಕ್ತಿ ಇಲ್ಲವೇ?” ಎಂದು ರವಿಶಂಕರ್ ಪ್ರಶ್ನಿಸಿದ್ದರು.
ಬಿಜೆಪಿಯು ಇಷ್ಟಕ್ಕೇ ಸುಮ್ಮನಾಗದೇ, ಈಗ ಮಹರಾಷ್ಟ್ರದ ರಾಜ್ಯಪಾಲರಾಗಿರುವ ಭಗತ್ ಸಿಂಗ್ ಕೋಶಿಯಾರಿ ಅವರ ಅಧ್ಯಕ್ಷತೆಯಲ್ಲಿ ಒಂದು ತಂಡವನ್ನು ಗಡಿ ಭಾಗಕ್ಕೆ ಕಳುಹಿಸಿ ವರದಿಯನ್ನು ತರಿಸಿಕೊಂಡಿತ್ತು. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಭಾರತದ ನೆಲವನ್ನು ಆಕ್ರಮಿಸಿಕೊಂಡಿರುವ ಕುರಿತು ಸಂಪೂರ್ಣ ವರದಿಯನ್ನು ತಯಾರಿಸಿತ್ತು.
ಆ ನಂತರ ಪತ್ರಿಕಾಗೋಷ್ಟಿ ಕರೆದಿದ್ದ ತಂಡದ ಸದಸ್ಯರಾಗಿದ್ದ ರಾಜೀವ್ ಪ್ರತಾಪ್ ರುಡಿ ಅವರು, ಯುಪಿಎ ಸರ್ಕಾರ ಭಾರತದ ಗಡಿಯನ್ನು ರಕ್ಷಿಸುವಲ್ಲಿ ಸಂಪೂರ್ಣವಾಗಿ ಸೋತಿದೆ ಎಂದು ಹೇಳಿಕೆ ನೀಡಿದ್ದರು.

ಇನ್ನು ಸೋನಿಯಾ ಗಾಂಧಿ ಅವರ ಚೀನಾ ಭೇಟಿ ಹಾಗೂ ರಾಹುಲ್ ಗಾಂಧಿ ಅವರ ಚೀನಾ ರಾಯಭಾರಿಯೊಂದಿಗಿನ ಭೇಟಿಗಳ ವಿರುದ್ದ ಬಿಜೆಪಿಯು ಕಿಡಿಕಾರಿತ್ತು. ಆದರೆ, ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಂತಹ ರಾಜನಾಥ್ ಸಿಂಗ್ ಅವರು ಅಕ್ಟೋಬರ್ 16, 2009ರಲ್ಲಿ ಚೀನಾ ದೇಶದ ರಾಜಭಾರಿ ಝಾಂಗ್ ಯಾನ್ ಅವರನ್ನು ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದರು. ಆಗಸ್ಟ್ 2010ರಲ್ಲಿ ಏಳು ಜನರ ಚೀನಾ ಸಮಿತಿಯು ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿತ್ತು. ಇನ್ನು 2011 ಜನವರಿಯಲ್ಲಿ ನಿತಿನ್ ಗಡ್ಕರಿ ಅವರು ಚೀನಾ ಭೇಟಿ ಮಾಡಿದ್ದರು.
ಈ ಎಲ್ಲಾ ಘಟನೆಗಳು ನಡೆದು ವರ್ಷಗಳೆ ಕಳೆದಿವೆ. ತಾವು ಮಾಡಿದ್ದ ಎಲ್ಲಾ ಕೆಲಸಗಳು ಈ ಹೊತ್ತಿನಲ್ಲಿ ಕಾಂಗ್ರೆಸ್ ಮಾಡಿದರೆ ಅವು ಬಿಜೆಪಿಯ ಕಣ್ಣಿಗೆ ತಪ್ಪಾಗಿ ಕಾಣಿಸುತ್ತಿವೆ. ದೇಶದ ಸಾರ್ವಭೌಮತೆಯ ಪ್ರಶ್ನೆಯಾಗಿ ಕಾಡುತ್ತಿವೆ ಇಂದಿನ ಪರಿಸ್ಥಿತಿ. ಈ ಹೊತ್ತಿನಲ್ಲಿ ಬಿಜೆಪಿಯವರು ತಾವು ನಡೆದು ಬಂದ ಹಾದಿಯನ್ನು ಅವಲೋಕಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಲ್ಲವಾದರೆ, ಯಾವುದೇ ನೈತಿಕತೆ ಇಲ್ಲದೇ ವಿರೋಧ ಪಕ್ಷವನ್ನು ಟೀಕಿಸುವ ಕೆಲಸವನ್ನು ಮುಂದುವರೆಸಿಕೊಂಡು ಹೋದಲ್ಲಿ ತಾನು ತೋಡಿದ ಹಳ್ಳಕ್ಕೆ ತಾನೇ ಬೀಳುವುದರಲ್ಲಿ ಅನುಮಾನವಿಲ್ಲ.