ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಎರಡನೇ ಅವಧಿಯ ಮೊದಲ ವರ್ಷ ಪೂರ್ತಿಯಾಗಿದೆ. ಗುಜರಾತ್ ಮಾದರಿಯ ಮೇಲೆ 2014ರಲ್ಲಿ ಅಚ್ಛೇದಿನ ಭರವಸೆಯ ಮೇಲೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಮೋದಿಯವರು ಈ ಆರು ವರ್ಷಗಳಲ್ಲಿ ಆ ಮಾದರಿಯ ವಿವಿಧ ರೂಪಗಳನ್ನು ದೇಶದ ಜನರಿಗೆ ತೋರಿಸಿದ್ದಾರೆ.
ಅಂತಹ ಗುಜರಾತ್ ಮಾದರಿಗೆ ಇದೀಗ ಹೊಸ ಸೇರ್ಪಡೆಯಾಗಿ ಕರೋನಾ ಸೋಂಕು ನಿಯಂತ್ರಣದ ವಿಷಯದಲ್ಲಿ ಆ ರಾಜ್ಯದ ನಿರ್ಲಕ್ಷ್ಯದ ಕುರಿತು ದಿಟ್ಟ ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್ ಪೀಠದ ದಿಢೀರ್ ಬದಲಾವಣೆ ಪ್ರಕರಣ ಕಣ್ಣ ಮುಂದಿದೆ. ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಪೀಠ, ಸರ್ಕಾರದ ಹೊಣೆಗೇಡಿತನವನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಆ ಪೀಠದ ನ್ಯಾಯಾಧೀಶರನ್ನೇ ಬದಲಾಯಿಸಲಾಗಿದೆ. ಆ ಮೂಲಕ ಬಿಜೆಪಿ ಆಡಳಿತದಲ್ಲಿ ನ್ಯಾಯಾಂಗ ಕೂಡ ಸರ್ಕಾರದ ಮರ್ಜಿಯಿಂದ ಹೊರತಾಗಿಲ್ಲ ಎಂಬ ಸಂದೇಶ ರವಾನಿಸಲಾಗಿದೆ ಎಂಬ ವಿಶ್ಲೇಷಣೆಗಳಿಗೆ ಮತ್ತು ಅಸಲಿಗೆ ಗುಜರಾತ್ ಮಾದರಿ ಎಂದರೆ ಯಾವುದು ಎಂಬುದಕ್ಕೆ ಇಡೀ ಪ್ರರಕಣ ನಿದರ್ಶನವಾಗಿದೆ.
ಅಹಮದಾಬಾದ್ ಸರ್ಕಾರಿ ಆಸ್ಪತ್ರೆಯ ದುಃಸ್ಥಿತಿಯ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ಗುಜರಾತ್ ಹೈಕೋರ್ಟಿನ ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ನೇತೃತ್ವದ ದ್ವಿಸದಸ್ಯ ಪೀಠ, ಮಾರ್ಚ್ 22ರಂದು ಆಸ್ಪತ್ರೆಯನ್ನು ಕತ್ತಲಕೂಪಕ್ಕೆ ಹೋಲಿಸಿತ್ತು. ಜೊತೆಗೆ ಮಾ.25ರಂದು ವಿಚಾರಣೆ ಮುಂದುವರಿಸಿ, ಸದ್ಯದಲ್ಲೇ ಸ್ವತಃ ತಾವೇ ಆಸ್ಪತ್ರೆಗೆ ಭೇಟಿ ನೀಡಿ ವಾಸ್ತವಾಂಶ ಪರಿಶೀಲಿಸುವುದಾಗಿ ಹೇಳಿದ್ದ ಪೀಠ, ಆ ವಿಷಯದಲ್ಲಿ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಲು ನಿರಾಕರಿಸಿತ್ತು. ಆದರೆ, ಶುಕ್ರವಾರ ದಿಢೀರನೇ ಆಸ್ಪತ್ರೆಯ ವಿಷಯದಲ್ಲಿ ಬಿಜೆಪಿ ಸರ್ಕಾರದ ಹೊಣೆಗೇಡಿತನವನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ಆ ಪೀಠದ ನ್ಯಾಯಮೂರ್ತಿಗಳನ್ನು ಬದಲಾಯಿಸಲಾಗಿದೆ ಮತ್ತು ಹೊಸ ಪೀಠದಲ್ಲಿ ಗುಜರಾತ್ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ವಿಕ್ರಮ್ ನಾಥ್ ಅವರೇ ನೇತೃತ್ವ ವಹಿಸಲಿದ್ದು, ನ್ಯಾ. ಪರ್ದಿವಾಲಾ ಅವರು ಕಿರಿಯ ನ್ಯಾಯಮೂರ್ತಿಯಾಗಿ ಪೀಠದಲ್ಲಿ ಮುಂದುವರಿಯಲಿದ್ದಾರೆ ಎಂದು ರೋಸ್ಟರ್ ಬದಲಾವಣೆ ಅಧಿಸೂಚನೆ ಹೊರಬಿದ್ದಿದೆ!
ಅಲ್ಲದೆ, ಗುಜರಾತ್ ಸರ್ಕಾರದ ಕೋವಿಡ್ -19 ನಿರ್ವಹಣೆಯ ಲೋಪಗಳ ಕುರಿತ ಹಲವು ಸಾರ್ವಜನಿಕ ಅರ್ಜಿಗಳನ್ನು ಕೂಡ ನ್ಯಾ ಪರ್ದಿವಾಲಾ ನೇತೃತ್ವದ ಪೀಠ ವಿಚಾರಣೆಗೆ ಕೈಗೆತ್ತಿಕೊಳ್ಳುವುದಿತ್ತು. ಈ ನಡುವೆ, ಹೀಗೆ ವಾರಾಂತ್ಯದಲ್ಲಿ ದಿಢೀರನೇ ಪೀಠದ ನೇತೃತ್ವದಿಂದ ಅವರನ್ನು ಬದಲಾಯಿಸಿ, ಕಿರಿಯ ಸದಸ್ಯರ ಸ್ಥಾನಕ್ಕೆ ಸೀಮಿತಗೊಳಿಸಿ ಪೀಠವನ್ನು ಪುನರ್ ರಚಿಸಿರುವ ಕ್ರಮ ಹೈಕೋರ್ಟ್ ವಕೀಲರು ಸೇರಿದಂತೆ ವಿವಿಧ ವಲಯದ ಜನರ ಆಕ್ಷೇಪ ಮತ್ತು ಆತಂಕಕ್ಕೂ ಕಾರಣವಾಗಿದೆ.
ಕೋವಿಡ್ 19 ಜಾಗತಿಕ ಮಹಾಮಾರಿಯ ಅಪಾಯದ ಹಿನ್ನೆಲೆಯಲ್ಲಿ ಅಹಮದಾಬಾದಿನ ಸರ್ಕಾರಿ ಸಿವಿಲ್ ಆಸ್ಪತ್ರೆಯ ಕರ್ಮಕಾಂಡವನ್ನು ಉಲ್ಲೇಖಿಸಿ, ಅದರ ಅವ್ಯವಸ್ಥೆಯನ್ನು ಸರಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಕೂಡಲೇ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಪ್ರಕರಣವನ್ನು ಮೇ 11ರಿಂದ ನ್ಯಾ. ಪರ್ದಿವಾಲಾ ನೇತೃತ್ವದಲ್ಲಿ ಮತ್ತೊಬ್ಬ ನ್ಯಾಯಮೂರ್ತಿ ಇಲೇಶ್ ವೋರಾ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸುತ್ತಿತ್ತು. ಆ ಮುನ್ನ ಮಾರ್ಚ್ 13ರಿಂದ ಇದೇ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡಿದ್ದ ಮುಖ್ಯನ್ಯಾಯಮೂರ್ತಿಯವರನ್ನೊಳಗೊಂಡ ಪೀಠ, ಏಳು ಬಾರಿ ಆ ಕುರಿತ ವಿಚಾರಣೆ ನಡೆಸಿತ್ತು.
ಆದರೆ, ನ್ಯಾ. ಪರ್ದಿವಾಲಾ ಅವರು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಬಳಿಕ ಅಹಮದಾಬಾದ್ ಆಸ್ಪತ್ರೆಯ ಅವ್ಯಸ್ಥೆ ಮತ್ತು ಅಲ್ಲಿನ ವಲಸೆ ಕಾರ್ಮಿಕರ ಸಂಕಷ್ಟದ ಕುರಿತ ಹಲವು ಮಾಧ್ಯಮ ವರದಿಗಳನ್ನು ಸ್ವಯಂಪ್ರೇರಿತವಾಗಿ ಪ್ರಕರಣದ ಸಾಕ್ಷ್ಯಗಳಾಗಿ ಪರಿಗಣಿಸಿ ವಿಚಾರಣೆ ತೀವ್ರಗೊಳಿಸಿತ್ತು. ಜೊತೆಗೆ ಆ ಆಸ್ಪತ್ರೆಯಲ್ಲಿನ ರೋಗಿಗಳ ಸಾವಿನ ಪ್ರಮಾಣದಲ್ಲಿ ಆಗಿರುವ ಭಾರೀ ಏರಿಕೆಯನ್ನು ಕೂಡ ಸ್ವಯಂಪ್ರೇರಿತವಾಗಿ ಪರಿಗಣಿಸಿ, ಗಂಭೀರ ವಿಚಾರಣೆಯ ಸೂಚನೆ ನೀಡಿತ್ತು. ಅದರಿಂದಾಗಿ ಗುಜರಾತ್ ಬಿಜೆಪಿ ಸರ್ಕಾರ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜಗರಕ್ಕೆ ಸಿಲುಕಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಮತ್ತು ಅಮಿತ್ ಶಾ ಅವರ ಗುಜರಾತ್ ಮಾದರಿ ಇದು ಎಂಬರ್ಥದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿತ್ತು.
ಈ ನಡುವೆ ಪ್ರಕರಣದ ವಿಚಾರಣೆ ನಡುವೆಯೇ ಪೀಠದ ಮುಖ್ಯಸ್ಥರನ್ನು ದಿಢೀರನೇ ಬದಲಾಯಿಸುವುದರಿಂದ ವಿಚಾರಣೆಯ ಪ್ರಕ್ರಿಯೆ ಹಳಿತಪ್ಪಲಿದೆ. ನಿರಂತರತೆ ಮತ್ತು ಕಾರ್ಯದಕ್ಷತೆಯ ಮೇಲೆ ಇಂತಹ ತೀರ್ಮಾನ ಪರಿಣಾಮಬೀರುತ್ತದೆ. ಹಾಗಾಗಿ ತಮ್ಮ ಈ ನಿರ್ಧಾರವನ್ನು ಪುನರ್ ಪರಿಶೀಲಿಸಿ ಎಂದು ಹಲವು ವಕೀಲರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರಬರೆದಿದ್ದಾರೆ.
ಮೇ 22ರ ತನ್ನ 143 ಪುಟದ ಮಧ್ಯಂತರ ಆದೇಶದಲ್ಲಿ ನ್ಯಾ. ಪರ್ದಿವಾಲಾ ನೇತೃತ್ವದ ಪೀಠ, ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಆಸ್ಪತ್ರೆಯಲ್ಲಿ ತೀವ್ರ ಸಮಸ್ಯೆ ಇರುವ 22 ವಿಭಾಗಗಳ ಕುರಿತ ಆಸ್ಪತ್ರೆಯ ಆರೋಗ್ಯಾಧಿಕಾರಿಯೊಬ್ಬರು ಅನಾಮಿಕ ಹೆಸರಿನಲ್ಲಿ ಬರೆದಿದ್ದ ಪತ್ರದ ಆಧಾರದ ಮೇಲೆ ಪೀಠ, ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿತ್ತು. ಈ ನಡುವೆ ಗುಜರಾತ್ ಸರ್ಕಾರ, ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿ, ಆಸ್ಪತ್ರೆಯ ಸ್ಥಿತಿ ಹದಗೆಟ್ಟಿಲ್ಲ ಎಂದು ಹೇಳಿತ್ತು. ಮತ್ತು ತನ್ನ ಆ ಮನವಿಯನ್ನು ಪರಿಗಣಿಸಿ ಪ್ರಕರಣದ ವಿಚಾರಣೆ ತ್ವರಿತವಾಗಿ ಮುಕ್ತಾಯಗೊಳಿಸುವಂತೆ ಕೋರಿತ್ತು. ಆ ಮೂಲಕ ಆಗಬಹುದಾದ ಮುಖಭಂಗದಿಂದ ಪಾರಾಗುವ ಯತ್ನ ನಡೆಸಿತ್ತು. ಆದರೆ, ಆ ಮನವಿಗೆ ಸೊಪ್ಪು ಹಾಕದ ನ್ಯಾ. ಪರ್ದಿವಾಲಾ, ಸ್ವತಃ ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ ಪ್ರಕರಣದ ವಿಚಾರಣೆಯನ್ನು ಮುಂದುವರಿಸುವುದಾಗಿ ಹೇಳಿದ್ದರು.
ಅವರ ಈ ದಿಟ್ಟ ನಿಲುವಿನ ಬೆನ್ನಲ್ಲೇ ಇದೀಗ ದಿಢೀರನೇ ಪ್ರಕರಣದ ವಿಚಾರಣೆಯಿಂದ ಅವರನ್ನು ಬದಿಗೆ ಸರಿಸಲಾಗಿದೆ.
ಹಾಗೆ ನೋಡಿದರೆ, ಬಿಜೆಪಿಯ ಆಡಳಿತದಲ್ಲಿ ಹೀಗೆ ನ್ಯಾಯಾಂಗವನ್ನು ತನ್ನ ಮೂಗಿನ ನೇರಕ್ಕೆ ಬಗ್ಗಿಸುವ ಪ್ರಯತ್ನಗಳು ಹೊಸದೇನಲ್ಲ. ಕಳೆದ ಫೆಬ್ರವರಿಯಲ್ಲಿ ದೆಹಲಿ ಗಲಭೆಯ ಕುರಿತ ಪ್ರಕರಣದ ವಿಚಾರದಲ್ಲಿಯೂ ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿಯನ್ನು ಕೂಡ ಹೀಗೆಯೇ ದಿಢೀರನೇ ಬದಲಾಯಿಸಲಾಗಿತ್ತು. ದೆಹಲಿ ಪೊಲೀಸರು ಮತ್ತು ಬಿಜೆಪಿ ನಾಯಕರೇ ಸ್ವತಃ ನಿಂತು ಗಲಭೆಗೆ ಕುಮ್ಮಕ್ಕು ನೀಡಿದ ಆರೋಪಗಳ ಹಿನ್ನೆಲೆಯಲ್ಲಿ ಆ ಹಿಂಸಾಚಾರದ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಅಲ್ಲಿನ ಕಾನೂನು ಸುವ್ಯವಸ್ಥೆಯ ಹೊಣೆಗಾರಿಕೆ ಇರುವ ಗೃಹ ಇಲಾಖೆ ಮತ್ತು ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದ್ದ ನ್ಯಾ. ಮುರುಳೀಧರ್ ಅವರನ್ನು ದಿಢೀರನೇ ವರ್ಗಾವಣೆ ಮಾಡಲಾಗಿತ್ತು.
ಸಿಎಎ-ಎನ್ ಆರ್ ಸಿ ವಿರೋಧಿಸಿ ಹೋರಾಟ ನಡೆಸುತ್ತಿದ್ದವರ ಮೇಲೆ ಬಿಜೆಪಿ ಶಾಸಕರು ಮತ್ತು ಸಚಿವರೇ ಕುಮ್ಮಕ್ಕು ನೀಡಿ ಗಲಭೆಗೆ ಪ್ರಚೋದನೆ ನೀಡಿದ್ದರು. ಸ್ವತಃ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ವಿರುದ್ಧವೂ ಪ್ರಚೋದನೆ ನೀಡಿದ ಆರೋಪವಿತ್ತು. ಪ್ರರಕಣದ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾ. ಮುರುಳೀಧರ್ ನೇತೃತ್ವದ ಪೀಠ, ಪ್ರಚೋದನೆ ನೀಡಿದವರು ಮತ್ತು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ದೆಹಲಿ ಪೊಲೀಸರ ವರ್ತನೆಯ ವಿರುದ್ಧ ಕಿಡಿಕಾರಿದ್ದರು. ಅವರ ಆ ದಿಟ್ಟತನದ ಕಾರಣದಿಂದಾಗಿಯೇ ಅವರನ್ನು ಪ್ರಕರಣದ ವಿಚಾರಣೆಯ ನಡುವೆಯೇ ಪಂಜಾಬ್-ಹರ್ಯಾಣ ಹೈಕೋರ್ಟಿಗೆ ವರ್ಗಾವಣೆ ಮಾಡಲಾಗಿತ್ತು. ಆಗಲೂ ಹಲವು ವಕೀಲರು ಮತ್ತು ನಾಗರಿಕ ಗುಂಪುಗಳು ಆ ವರ್ಗಾವಣೆಯ ವಿರುದ್ಧ ದನಿ ಎತ್ತಿದ್ದವು.
ನ್ಯಾಯಾಂಗದಲ್ಲಿ ಹಸ್ತಕ್ಷೇಪ ನಡೆಸುವ ಬಿಜೆಪಿ ಸರ್ಕಾರಗಳ ವರಸೆ ಅಲ್ಲಿಗೇ ನಿಲ್ಲುವುದಿಲ್ಲ. 2017-18ರಲ್ಲಿ ಕೂಡ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧವೂ ಇಂತಹ ಆರೋಪ ಕೇಳಿಬಂದಿತ್ತು. ಆಗ ಸ್ವತಃ ಸುಪ್ರೀಂಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳೇ ಸರ್ಕಾರದ ವಿರುದ್ಧ ಕೋರ್ಟಿನ ರೋಸ್ಟರ್ ನಲ್ಲಿ, ಪ್ರಕರಣಗಳ ಹಂಚಿಕೆಯ ವಿಷಯದಲ್ಲಿ ಮತ್ತು ಸ್ವತಃ ಪೀಠಗಳ ರಚನೆಯ ವಿಷಯದಲ್ಲಿ ಸರ್ಕಾರ ನೇರ ಹಸ್ತಕ್ಷೇಪ ಮಾಡುತ್ತಿದೆ. ನ್ಯಾಯಾಧೀಶರನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ಹಾಗಾಗಿ ದೇಶದ ಪ್ರಜಾಪ್ರಭುತ್ವದ ಏಕೈಕ ಅಂತಿಮ ಭರವಸೆಯಾದ ನ್ಯಾಯಾಂಗ ಅಪಾಯದಲ್ಲಿದೆ ಎಂದು ಸಾರ್ವಜನಿಕವಾಗಿ ಕಣ್ಣೀರಿಟ್ಟಿದ್ದರು. ಪತ್ರಿಕಾಗೋಷ್ಠಿಯಲ್ಲಿ ಹಾಗೆ ಅಸಹಾಯಕ ತೋಡಿಕೊಂಡಿದ್ದ ನ್ಯಾಯಮೂರ್ತಿಗಳ ಆತಂಕ, ದೇಶದ ನ್ಯಾಯಾಂಗ ವ್ಯವಸ್ಥೆ ಮೋದಿ ಮತ್ತು ಶಾ ಆಡಳಿತದಲ್ಲಿ ಯಾವ ಮಟ್ಟಕ್ಕೆ ಕುಸಿದಿದೆ ಎಂಬುದಕ್ಕೆ ಒಂದು ಐತಿಹಾಸಿಕ ಸಾಕ್ಷ್ಯವಾಗಿ ದಾಖಲಾಗಿತ್ತು.