ಕೋವಿಡ್-19 ಕುರಿತ ಮಾರ್ಗಸೂಚಿಗಳನ್ನ ನ್ಯಾಯಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲಿಸದೇ ಹೋದಲ್ಲಿ ಅವರ ಮೇಲೂ ʼದುರ್ನಡತೆʼ ಆಧಾರದ ಮೇಲೆ ಕಾನೂನು ರೀತ್ಯಾ ಕ್ರಮವನ್ನ ಕೈಗೊಳ್ಳುವ ಎಚ್ಚರಿಕೆಯನ್ನ ರಾಜ್ಯ ಹೈಕೋರ್ಟ್ ನೀಡಿದೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ರಾಜ್ಯ ಹೈಕೋರ್ಟ್, ಕೋವಿಡ್-19 ಸಂಬಂಧ ನೀಡುವ ಎಲ್ಲಾ ಸೂಚನೆ ಹಾಗೂ ಆದೇಶಗಳನ್ನ ಪಾಲಿಸುವಂತೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಚಿಸುತ್ತಿದ್ದು. ಈ ಆದೇಶವು ಹೈ ಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯಗಳ ಸಿಬ್ಬಂದಿಗಳಿಗೆ ಅನ್ವಯವಾಗಲಿದ್ದು, ಒಂದು ವೇಳೆ COVID-19 ಸಂಬಂಧಿತ ಸೂಚನೆ ಹಾಗೂ ಆದೇಶಗಳನ್ನ ಪಾಲಿಸದಿದ್ದಲ್ಲಿ ʼದುರ್ನಡತೆʼ ಆಧಾರದ ಮೇಲೆ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ.
ಅಲ್ಲದೇ, ಮಾರ್ಚ್ 24 ಕ್ಕಿಂತ ಮೊದಲು ರಜೆ ಅಥವಾ ಕಚೇರಿ ಬಿಟ್ಟು ತೆರಳಿದವರು, ಮೊದಲ ಬಾರಿಗೆ ನ್ಯಾಯಾಲಯಕ್ಕೆ ಹಾಜರಾಗುವ ಸಿಬ್ಬಂದಿಗಳು ಅಗತ್ಯವಾಗಿ ಆರೋಗ್ಯ ತಪಾಸಣೆ ನಡೆಸಿಕೊಳ್ಳಬೇಕು ಮತ್ತು ಅಗತ್ಯಬಿದ್ದಲ್ಲಿ 14 ದಿನಗಳ ಹೋಂ ಕ್ವಾರೆಂಟೈನ್ ಗೂ ಸಿದ್ಧವಾಗಿರಬೇಕೆಂದು ಹೈಕೋರ್ಟ್ ತನ್ನ ಹಾಗೂ ಎಲ್ಲಾ ಜಿಲ್ಲಾ ನ್ಯಾಯಾಲಯಗಳಿಗೂ ಈ ಆದೇಶವನ್ನ ನೀಡಿದೆ.