ಕರೋನಾ ಸಂಕಷ್ಟವನ್ನು ಯಶಸ್ವಿಯಾಗಿ ನಿಭಾಯಿಸಿದ ಕಾರಣಕ್ಕೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕೇರಳ ಸಾಕಷ್ಟು ಖ್ಯಾತಿ ಗಳಿಸಿದೆ. ಕೇರಳದ ಆರೋಗ್ಯ ಮಂತ್ರಿ ಶೈಲಜಾ ಟೀಚರ್ ಅವರ ಸಾಧನೆಯನ್ನು ವಿಶ್ವಸಂಸ್ಥೆ ಪರಿಗಣಿಸಿರುವುದು ನಿಜಕ್ಕೂ ಕೇರಳಕ್ಕೆ ಸಂದ ಅತೀ ದೊಡ್ಡ ಗೌರವ. ಈ ಸಂದರ್ಭದಲ್ಲಿ ಕೇರಳದಲ್ಲಿ ಅನುಷ್ಟಾನಗೊಳಿಸಲಾಗಿದ್ದ ಲಾಕ್ಡೌನ್ ಹಾಗೂ ಕೋವಿಡ್ ಪರಿಸ್ಥಿತಿಯ ನಿಯಂತ್ರಣದ ಕುರಿತು ಕೇರಳದ ಐಜಿಪಿ ವಿಜಯ್ ಸಖಾರೆ ಅವರ Carnegie India ದಲ್ಲಿ ಪ್ರಕಟವಾದ ಸಂದರ್ಶನದ ಕನ್ನಡ ಅವತರಣಿಕೆ ಇಲ್ಲಿದೆ.
ಲಾಕ್ಡೌನ್ ಸಂದರ್ಭದಲ್ಲಿ ಇವರು ಕಾಸರಗೋಡಿನ ವಿಶೇಷ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಲ್ಲಿ ಇವರ Triple Lock ತಂತ್ರಗಾರಿಕೆ ಸಾಕಷ್ಟು ಫಲ ನೀಡಿತ್ತು.
Triple Lock ತಂತ್ರಗಾರಿಕೆ ಎಂದರೇನು?
ಲಾಕ್ಡೌನ್ ಸಂದರ್ಭದಲ್ಲಿ ಜನರ ವಿವಿಧ ಗುಂಪುಗಳನ್ನು ನಿಯಂತ್ರಿಸಲು ಮಾಡಲಾದ ಮೂರು ಹಂತಗಳು. ಪ್ರತೀ ಹಂತವು ಹಿಂದಿಗಿಂತಲೂ ಕಠಿಣವಾಗಿರುತ್ತದೆ.
ಮೊದಲ ಹಂತ ಮಾರ್ಚ್ 25ರಂದು ಜಾರಿಗೆ ತರಲಾಯಿತು. ದೇಶಾದ್ಯಂತ ಲಾಕ್ಡೌನ್ ಆದ ಸಂದರ್ಭದಲ್ಲಿ ಜನರು ಮನೆಯಿಂದ ಹೊರಬರದಂತೆ ತಡೆಯಲಾಯಿತು. ರಸ್ತೆಗಳನ್ನು ಬಂದ್ ಮಾಡುವುದು, ಕಾಸರಗೋಡಿಗೆ ರಾಜ್ಯದ ಬೇರೆ ಜಿಲ್ಲೆಗಳಿಂದ ಹಾಗೂ ಪಕ್ಕದ ಕರ್ನಾಟಕದಿಂದ ಸಂಪರ್ಕ ಸಿಗದಂತೆ ಮಾಡಲಾಗಿತ್ತು. ಹಳ್ಳಿಗಳನ್ನು ಪ್ರತ್ಯೇಕವಾಗಿ ಇಡಲಾಗಿತ್ತು. ನಗರ ಪ್ರದೇಶವನ್ನು ವಿವಿಧ ಝೋನ್ಗಳಾಗಿ ಪರಿವರ್ತಿಸಲಾಗಿತ್ತು.
ಜನರಿಗೆ ಅಗತ್ಯ ಸಾಮಾಗ್ರಿಗಳನ್ನು ಪಡೆಯಲು ಮಾತ್ರ ಅವಕಾಶವಿತ್ತು. ಲಾಕ್ಡೌನ್ ನಿಯಮ ಮುರಿದವರನ್ನು ಮನೆಗೆ ಕಳುಹಿಸುತ್ತಿದ್ದೆವು ಇಲ್ಲವಾದಲ್ಲಿ ಅವರ ಮೇಲೆ ಕೇಸು ಹಾಕುತ್ತಿದ್ದೆವು. ಮಾರುಕಟ್ಟೆಯಲ್ಲಿ ಜನಸಂದಣಿ ಉಂಟಾಗದಂತೆ ನೋಡಿಕೊಳ್ಳುತ್ತಿದ್ದೆವು. ನಿರ್ದಿಷ್ಟ ಜನರು ನಿರ್ದಿಷ್ಟ ಸಮಯದಲ್ಲಿ ಮಾತ್ರ ಹೊರಗೆ ಬರುವಂತೆ ಸ್ಟ್ಯಾಂಪ್ ಹಾಕಿದ ಚೀಟಿ ನೀಡುತ್ತಿದ್ದವೆವು.
ಎರಡನೇ ಹಂತ ಆರಂಭವಾದದ್ದು ಮಾರ್ಚ್ 28ರಂದು. ಕರೋನಾ ಸೋಂಕು ಕಂಡುಬಂದ ಪ್ರದೇಶಗಳನ್ನು ಬೇರೆ ಪ್ರದೇಶಗಳಿಂದ ಪ್ರತ್ಯೇಕಿಸಿದೆವು. ಜಿಯೋಗ್ರಾಫಿಕ್ ಇನ್ಫಾರ್ಮೇಷನ್ ಸಿಸ್ಟಮ್ (GIS) ಬಳಸಿ ಅಧಿಕಾರಿಗಳು 11 ಪ್ರದೇಶಗಳನ್ನು ಗುರುತಿಸಿದರು. ಅವುಗಳನ್ನು ಕಂಟೈನ್ಮೆಂಟ್ ಝೋನ್ಗಳೆಂದು ಘೋಷಿಸಲಾಯಿತು. ಆ ಪ್ರದೇಶಗಳಲ್ಲಿ ಕೇವಲ ವೈದ್ಯಕೀಯ ಸೌಲಭ್ಯಕ್ಕಾಗಿ ಒಂದು ಮಾತ್ರ ದಾರಿಯನ್ನು ತೆರೆದಿಡಲಾಯಿತು.
ಇಷ್ಟಾದ ನಂತರ, ಕಂಟೈನ್ಮೆಂಟ್ ಝೋನ್ಗಳ ಒಳಗೆ ಸೋಂಕು ಹರಡುವುದನ್ನು ತಪ್ಪಿಸುವ ಕೆಲಸವಾಗಬೇಕಿತ್ತು. ಹಾಗಾಗಿ ಆ ಪ್ರದೇಶಗಳನ್ನು ಗಮನಿಸಲು ಡ್ರೋನ್ ಹಾಗೂ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಯಿತು.
ಮೂರನೇ ಹಂತ ಮಾರ್ಚ್ 30ರಂದು ಆರಂಭವಾಯಿತು. ಸೋಂಕಿತರನ್ನು, ಅವರ ಪ್ರಥಮ ಸಂಪರ್ಕಿತರನ್ನು ಹಾಗೂ ದ್ವಿತೀಯ ಸಂಪರ್ಕಿತರನ್ನು ಮನೆಯ ಒಳಗಡೆಯೇ ಇರುವಂತೆ ನೋಡಿಕೊಳ್ಳಲಾಯಿತು. ಇದರಿಂದಾಗಿ ಸೋಂಕಿನ ಸಮುದಾಯ ಪ್ರಸರಣ ತಡೆಯುವಲ್ಲಿ ಯಶಸ್ವಿಯಾದೆವು. ದ್ವಿಚಕ್ರ ವಾಹನದಲ್ಲಿ ಪೊಲೀಸರು ಪ್ರತೀ ಮನೆಗಳಿಗೂ ಹೋಗಿ ಅವರು ಕ್ವಾರೆಂಟೈನ್ನಲ್ಲಿ ಇರುವುದನ್ನು ಖಚಿತಪಡಿಸಿಕೊಂಡರು. ಡ್ರೋನ್ ಹಾಗೂ ಸಾರ್ವಜನಿಕರ ಸಹಾಯದಿಂದ ಇವರ ಚಲನವಲನವನ್ನು ನಿಯಂತ್ರಿಸಲಾಯಿತು.
ಈ ಮೂರು ಹಂತದ ಲಾಕ್ಡೌನ್ ಅನ್ನು triple lock ತಂತ್ರಗಾರಿಕೆ ಎಂದು ಕರೆಯಲಾಯಿತು.
Triple lock ತಂತ್ರಗಾರಿಕೆ ಅಳವಡಿಸಿಕೊಳ್ಳಲು ಕಾರಣವೇನು?
ಕಾಸರಗೋಡಿನಲ್ಲಿ ಮೊದಲ ಪ್ರಕರಣ ಪತ್ತೆಯಾದದ್ದು ಫೆಬ್ರುವರಿ 3ರಂದು. ವುಹಾನ್ನಿಂದ ಮರಳಿದ್ದ ವಿದ್ಯಾರ್ಥಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಆ ನಂತರ ನಿರಂತರವಾಗಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಆ ಕಾರಣಕ್ಕೆ ಮಾರ್ಚ್ 20ರಂದು ಜಿಲ್ಲೆಯನ್ನು ಲಾಕ್ಡೌನ್ ಮಾಡಲು ಸರ್ಕಾರ ಆದೇಶ ನೀಡಿತು. ಮೂರು ದಿನಗಳ ನಂತರ 19 ಹೊಸ ಪ್ರಕರಣಗಳು ದಾಖಲಾದವು. ಇದನ್ನು ಇನ್ನೂ ಹಬ್ಬುವುದು ತಪ್ಪಿಸಲು ಮೂರು ಹಂತದ ಲಾಖ್ಡೌನ್ ಮಾಡುವ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳಬೇಕಾಯಿತು.
ಇದನ್ನು ಅಳವಡಿಸಿಕೊಳ್ಳುವ ಮುಂಚೆ ಪೊಲೀಸ್ ಸಿಬ್ಬಂದಿಗಳಿಗೆ ಸಾಮಾಜಿಕ ಅಂತರವನ್ನು ಕಾಪಾಡುವುದು, ಮಾಸ್ಕ್ ಬಳಕೆ, ಸ್ಯಾನಿಟೈಜರ್ ಬಳಕೆ ಕುರಿತು ತರಬೇತಿ ನೀಡಲಾಯಿತು. ಜನಜಂಗುಳಿ ಇರುವ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ PPE Kitಗಳನ್ನೂ ನೀಡಲಾಯಿತು.

ಕೋವಿಡ್ ನಿಯಂತ್ರಣದಲ್ಲಿ ತಂತ್ರಜ್ಞಾನದ ಪಾತ್ರವೇನು?
ಕ್ವಾರೆಂಟೈನ್ನಲ್ಲಿರುವವರ ಮೇಲೆ ನಿಗಾ ವಹಿಸಲು ತಂತ್ರಜ್ಞಾನದ ಸಹಾಯ ಪಡೆಯಲಾಯಿತು. ಮೂವತ್ತು ಜನರ ಪೊಲೀಸ್ ತಂಡವು ಸೋಂಕಿತರ ಸಂಪರ್ಕಕ್ಕೆ ಬಂದಿದ್ದವರನ್ನು ಪತ್ತೆ ಹಚ್ಚುವಲ್ಲಿ ಸಫಲವಾಯಿತು. ತನಿಖೆಯ ಸಂದರ್ಭದಲ್ಲಿ ಅವರ ಕರೆಯ ದಾಖಲೆ, IP ದಾಖಲೆ ಹಾಗೂ ಸೆಕ್ಯುರಿಟಿ ಕ್ಯಾಮೆರಾ ಫೂಟೇಜ್ಗಳನ್ನು ಪಡೆಯಲಾಯಿತು. ಇದರಿಂದಾಗಿ ಸುಮಾರು 25,000 ಪ್ರಥಮ ಸಂಪರ್ಕಿತರನ್ನು ಪತ್ತೆಹಚ್ಚಲಾಯಿತು.
ಕ್ವಾರೆಂಟೈನ್ನಲ್ಲಿರುವವರ ಜಿಯೋಲಾಜಿಕಲ್ ಮಾಹಿತಿಯನ್ನು ಕಲೆ ಹಾಕಲಾಯಿತು. ಅದನ್ನು GIS ನೊಂದಿಗೆ ಸಂಯೋಜಿಸಲಾಯಿತು. ಅದರ ಸಹಾಯದಿಂದ ಎರಡನೇ ಹಂತದಲ್ಲಿ ಕಂಟೈನ್ಮೆಂಟ್ ಝೋನ್ಗಳನ್ನು ಗುರುತಿಸಲು ಸಾಧ್ಯವಾಯಿತು.
ಮಾರ್ಚ್ 25ರಂದು ಜನರಿಗೆ ಅಗತ್ಯ ಔಷಧಿಗಳನ್ನು ಪೂರಸಲು ಸ್ವರಕ್ಷಾ ಕಾಸರಗೋಡು ಎಂಬ ಫೋನ್ ಸೇವೆಯನ್ನು ಆಂಬಿಸಲಾಯಿತು. 25,000ಕ್ಕಿಂತಲೂ ಅಧಿಕ ಜನರಿಗೆ ಸೇವೆ ಒದಗಿಸಲಾಗಿದೆ. ಇನ್ನು ಕರೋನಾ ವೈರಸ್ ಸೇಫ್ಟಿ ಆಪ್ ಅನ್ನು ಕ್ವಾರೆಂಟೈನ್ನಲ್ಲಿರುವವರ ಫೋನ್ನಲ್ಲಿ ಹಾಕಲಾಯಿತು. ಅವರು ತಮ್ಮ ಮನೆ ಬಿಟ್ಟು 50 ಮೀಟರ್ ದೂರ ಹೋದಲ್ಲಿ ಆ ಆಪ್ ನಮಗೆ ಮಾಹಿತಿ ನೀಡುತ್ತಿತ್ತು.
ಈ ತಂತ್ರಗಾರಿಕೆ ಫಲ ನೀಡಿತೇ?
ಮೊದಲ ವಾರದಲ್ಲಿ 64 ಮತ್ತು ಎರಡನೇ ವಾರದಲ್ಲಿ 47 ಕರೋನಾ ಪ್ರಕರಣಗಳು ಪತ್ತೆಯಾದವು. ನಂತರದ ವಾರದಲ್ಲಿ ಕೇವಲ 11 ಪ್ರಕರಣ ಪತ್ತೆಯಾಯಿತು. ಶೇಕಡಾ 76 ಪ್ರಕರಣಗಳು ಕಡಿಮೆಯಾದವು.
ಮುಂದಿನ ಮೂರು ವಾರಗಲ್ಲಿ ಕೇವಲ ಮೂರು ನಾಲ್ಕು ಪ್ರಕರಣಗಳು ಮಾತ್ರ ಪತ್ತೆಯಾದವು. ಮೇ 1 ರಿಂದ ಮೇ 11ರ ವರೆಗೆ ಒಂದೇ ಒಂದು ಪ್ರಕರಣವೂ ಪತ್ತೆಯಾಗಲಿಲ್ಲ. ಮೇ 10ರಂದು ಕಟ್ಟ ಕಡೇಯ ಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆಯಾದರು.
ಕೇರಳ ಸರ್ಕಾರ ಈ ಮಾದರಿಯನ್ನು ಹೇಗೆ ಪರಿಗಣಿಸಿತು?
Triple Lock ತಂತ್ರಗಾರಿಕೆ ಮೊದಲ ಮೂರು ವಾರದಲ್ಲಿ ಕಾಸರಗೋಡಿನಲ್ಲಿ ಯಶಸ್ವಿಯಾದಂತೆ ಸರ್ಕಾರವು ಅದನ್ನು ರಾಜ್ಯಾದ್ಯಂತ ಜಾರಿಗೊಳಿಸಿತು. ಈ ಕುರಿತ ಮಾಹಿತಿಯನ್ನು ಭಾರತ ಸರ್ಕಾರ ಸೇರಿದಂತೆ ಇತರ ಜಿಲ್ಲಾಡಳಿತದೊಂದಿಗೂ ಹಂಚಿಕೊಳ್ಳಲಾಯಿತು.
ಇದರ ಯಶಸ್ಸಿನಲ್ಲಿ ಕಾಸರಗೋಡಿನ ಪೊಲೀಸರ ಶ್ರಮ ಹೆಚ್ಚಾಗಿದೆ. ಕಟ್ಟುನಿಟ್ಟಿನ ಲಾಕ್ಡೌನ್ ಜಾರಿ ಮಾಡುವುದು, ಶಿಸ್ತನ್ನು ಕಾಪಾಡಿಕೊಳ್ಳುವುದರಲ್ಲಿ ಸಾಖಷ್ಟು ಶ್ರಮ ವಹಿಸಿದ್ದಾರೆ. ತಂತ್ರಜ್ಞಾನದ ಹೆಚ್ಚಿನ ಸಹಾಯದಿಂದ ಸಮುದಾಯ ಪ್ರಸರಣ ಆಗದಂತೆ ತಡೆದಿದ್ದಾರೆ.