ಕರೋನಾ ಸೋಂಕಿನ ಗೊಂದಲಗಳ ನಡುವೆ ದೇಶದಲ್ಲಿ ರಾಜಕಾರಣದ ಏರಿಳಿತಗಳು ಕೂಡಾ ಸಮಾನಾಂತರವಾಗಿ ನಡೆಯುತ್ತಿವೆ. ಮುಖ್ಯವಾಗಿ ಈ ವರ್ಷ ಬಿಹಾರದಲ್ಲಿ ನಡೆಯಲಿರುವ ಚುನಾವಣೆಯ ಕಡೆಗೆ ಎಲ್ಲಾ ರಾಜಕೀಯ ಪಕ್ಷಗಳು ಮುಖ ಮಾಡಿವೆ. ಮುಖ್ಯವಾಗಿ ಬಿಹಾರದ ಪ್ರಸ್ತುತ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಅವರ ರಾಜಕೀಯ ನಡೆಯ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಅವಕಾಶವಾದಿತನದ ರಾಜಕಾರಣಕ್ಕೆ ಪ್ರಸಿದ್ದರಾಗಿರುವ ಜೆಡಿಯು ಪಕ್ಷದ ನಿತೀಶ್ ಕುಮಾರ್ ಅವರು ಈ ಬಾರಿಯೂ ತಮ್ಮ ಖುರ್ಚಿಯನ್ನು ಉಳಿಸಿಕೊಳ್ಳಬಲ್ಲರೇ ಎಂಬ ಲೆಕ್ಕಾಚಾರ ಎಲ್ಲೆಡೆ ನಡೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ಬಿಜೆಪಿಯಿಂದ ಬೆಂಬಲ ಪಡೆದುಕೊಂಡು ಸದ್ಯಕ್ಕೆ ಅಧಿಕಾರದಲ್ಲಿರುವ ನಿತೀಶ್ ಅವರು ಮತ್ತೆ ಮೈತ್ರಿಯನ್ನುಮುಂದುವರೆಸುತ್ತಾರಾ? ಇಲ್ಲ ಸ್ವತಂತ್ರವಾಗಿ ಸ್ಪರ್ಧಿಸುತ್ತಾರಾ ಎಂಬ ವಿಚಾರ ಮುನ್ನೆಲೆಗೆ ಬಂದಿದೆ.
ಸಿಎಎ-ಎನ್ಆರ್ಸಿ ವಿರುದ್ದದ ಹೋರಾಟದ ಸಂದರ್ಭದಲ್ಲಿ ಜೆಡಿಯು ಕೇಂದ್ರದಪರ ನಿರ್ಧಾರ ತಳೆದುದನ್ನು ವಿರೋಧಿಸಿ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರು ಜೆಡಿಯು ತೊರೆದಿದ್ದರು. ಯಾರಿಗೆ ಪಕ್ಷದಲ್ಲಿ ಇರಲು ಇಷ್ಟವಿಲ್ಲ ಅವರು ಪಕ್ಷವನ್ನು ತೊರೆಯಬಹುದು ಎಂದು ನಿತೀಶ್ ಕುಮಾರ್ ಹೇಳಿದ್ದು ಪ್ರಶಾಂತ್ ಕಿಶೋರ್ ಅವರಿಗೆ ನೀಡಿದ ಪರೋಕ್ಷ ಸಂದೇಶದಂತಿತ್ತು.
ಪಕ್ಷದ ನಡೆಯಿಂದ ಬೇಸರಗೊಂಡ ಪ್ರಶಾಂತ್ ಕಿಶೋರ್ ಪಕ್ಷವನ್ನುತೊರೆದು ಹೊರಬಂದಿದ್ದರು. ಇದರೊಂದಿಗೆ ಪರೋಕ್ಷವಾಗಿ ಬಿಜೆಪಿಯಿಂದಲೂ ಪ್ರಶಾಂತ್ ಅವರು ಹೊರಬಂದಂತಾಯಿತು. ಕಳೆದ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರ ಚಾಣಾಕ್ಷತನದಿಂದ ಅಧಿಕಾರಗಿಟ್ಟಿಸಿಕೊಳ್ಳಲು ಸಾಧ್ಯವಾಗಿದ್ದ ಜೆಡಿಯು ಈ ಬಾರಿ ಯಾವ ಕರಾಮತ್ತು ಮಾಡಲಿದೆ ಎಂಬುದು ಕುತೂಹಲಕಾರಿ ವಿಚಾರ.
ಆರ್ ಜೆ ಡಿಯಲ್ಲಿ ನಾಯಕರ ಕೊರತೆ:
ಬಿಹಾರದಲ್ಲಿ ಪ್ರಾದೇಶಿಕ ಪಕ್ಷಗಳಷ್ಟು ಜನಪ್ರಿಯತೆಯನ್ನು ರಾಷ್ಟ್ರೀಯ ಪಕ್ಷಗಳು ಹೊಂದಿಲ್ಲ. ಅಲ್ಲಿರುವ ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಜೆಡಿಯು, ಆರ್ಜೆಡಿ, ಹಿಂದುಸ್ತಾನ್ ಅವಾಮ್ ಮೋರ್ಚಾ, ಲೋಕ ಸಮತಾ ಪಾರ್ಟಿಗಳಲ್ಲಿ ಪ್ರಮುಖವಾದದು ಜೆಡಿಯು ಮತ್ತು ಆರ್ಜೆಡಿ ಎರಡೇ. ಸುಮಾರು ಎರಡೂವರೆ ವರ್ಷಗಳ ಹಿಂದೆ ಜೈಲು ಪಾಲಾಗಿದ್ದ ಲಾಲೂ ಪ್ರಸಾದ್ ಯಾದವ್ ನಂತರ ಆರ್ಜೆಡಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲ ಇನ್ನೊಬ್ಬ ನಾಯಕ ಪಕ್ಷಕ್ಕೆ ಸಿಗಲಿಲ್ಲ.
ಮೇವು ಹಗರಣದಲ್ಲಿ ಲಾಲೂ ಜೈಲು ಪಾಲಾದ ನಂತರ, ತೇಜಸ್ವಿ ಯಾದವ್ ಪಕ್ಷದ ನೇತೃತ್ವವನ್ನು ತೆಗೆದುಕೊಂಡರಾದರೂ, ರಾಜ್ಯ ಸರ್ಕಾರದ ವಿಫಲತೆಯನ್ನು ಜನರ ಮುಂದೆ ತಂದಿಡುವಲ್ಲಿ ಯಶಸ್ವಿಯಾಗಲಿಲ್ಲ. ಅಷ್ಟು ಮಾತ್ರವಲ್ಲದೇ, ಮಹಾಘಟಬಂಧನ್ ರೈಲು ಅರ್ಧದಲ್ಲೇ ಹಳಿ ತಪ್ಪಿದ್ದರಿಂದ ಕೈಯಲ್ಲಿದ್ದ ಅಧಿಕಾರವೂ ತಪ್ಪಿಹೋಗಿದೆ. ಹೀಗಾಗಿ, ಮತ್ತೆ ಪಕ್ಷವನ್ನು ಬೇರಿನಿಂದ ಗಟ್ಟಿಗೊಳಿಸುವುದು ತೇಜಸ್ವಿ ಅವರಿಗೆ ಕಬ್ಬಿಣದ ಕಡಲೆಕಾಯಿಯಾಗಬಹುದು.
ಇನ್ನು ಆರ್ಜೆಡಿಯಲ್ಲಿ ಉನ್ನತ ಸ್ಥಾನದಲ್ಲಿದ್ದ ರಘುವಂಶ್ ಪ್ರಸಾದ್ ಸಿಂಗ್ ಅವರು ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದು ನಿಜಕ್ಕೂ ಆರ್ಜೆಡಿಗೆ ಅತೀ ದೊಡ್ಡ ಹೊಡೆತ. ಏಕೆಂದರೆ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷದ ಮುತ್ಸದಿ ನಾಯಕರು ಒಬ್ಬರು ಪಕ್ಷದ ನಾಯಕತ್ವವನ್ನು ತೆಗೆದುಕೊಂಡು ಎಲ್ಲರನ್ನೂ ಮುನ್ನಡೆಸಬೇಕು. ಇಲ್ಲವಾದಲ್ಲಿ ಅನುಭವವಿಲ್ಲದ ಯುವನಾಯಕರು ಚುನಾವಣೆಯನ್ನು ಎದುರಿಸುವ ಶಕ್ತಿಯನ್ನು ಕಳೆದುಕೊಂಡುಬಿಡುತ್ತಾರೆ. ಈಗ ಆರ್ಜೆಡಿನಲ್ಲಿ ಆಗಿರುವುದೂ ಅದೇ. ಸರಿಯಾದ ನಾಯಕತ್ವವಿಲ್ಲದೇ ಆರ್ಜೆಡಿಯು ವಯಸ್ಸಾದ ಕುದುರೆಯಂತೆ ಆಗಿದೆ. ಅತ್ತ ಓಡಲು ಶಕ್ತಿಯಿಲ್ಲ, ಇತ್ತ ಓಡದೇ ವಿಧಿಯಿಲ್ಲ ಎಂಬುದು ಆರ್ಜೆಡಿಯ ಪರಿಸ್ಥಿತಿ.
ನಿತೀಶ್ ಸಮಯಸಾಧಕತನ
ಎಲ್ಲಿ ಅವಕಾಶದ ಬಾಗಿಲು ತೆರೆದಿರುತ್ತದೆಯೋ ಅಲ್ಲಿ ನುಸುಳುವ ಚಾಣಾಕ್ಷತೆಯನ್ನು ನಿತೀಶ್ ಹೊಂದಿದ್ದಾರೆ. ಬಿಹಾರದ ರಂಗಿನ ರಾಜಕಾರಣದಲ್ಲಿ ಹಳೇ ಹುಲಿಯಂತಿರುವ ಅವರು, ಯಾವುದೇ ಕಾರಣಕ್ಕೂ ತಮ್ಮ ಅಧಿಕಾರವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಆದರೆ, ಈ ಬಾರಿ ನಿತೀಶ್ ಗೆ ಬಿಜೆಪಿ ಬಿಟ್ಟರೆ ಬೇರೆ ಯಾವುದೇ ಪ್ರಮುಖ ಪಕ್ಷದ ಸಹಕಾರ ದೊರೆಯುವುದು ಈಗಿನ ಪರಿಸ್ಥಿಯಲ್ಲಿ ಅಸಾಧ್ಯ.
ಸಿಎಎಗೆ ಬಿಜೆಪಿಯೊಂದಿಗೆ ಸೇರಿ ಬೆಂಬಲ ಸೂಚಿಸಿದ್ದು ಜೆಡಿಯುಗೆ ಇನ್ನಷ್ಟು ಮುಳುವಾಗುವ ಸಾಧ್ಯತೆಯಿದೆ. ಸಿಎಎಗೆ ವಿರೋಧ ವ್ಯಕ್ತಪಡಿಸಿದ ಯಾವುದೇ ಪಕ್ಷಗಳು ನಿತೀಶ್ ಜೊತೆ ಸೇರುವ ಸಾಧ್ಯತೆಯಿಲ್ಲ. ಆದರೂ, ಯಾವ ಸಂದರ್ಭದಲ್ಲಿ ಯಾರ ಜೊತೆ ನಿತೀಶ್ ಕುಮಾರ್ ಸ್ನೇಹ ಸಂಪಾದಿಸುತ್ತಾರೆಂದು ಹೇಳಲು ಸಾದ್ಯವಿಲ್ಲ. ಮಹಾಘಟಬಂಧನ್ ಒಡೆದು ಬಿಜೆಪಿ ಜೊತೆ ಸೇರುವ ಅವರ ನಡೆಯನ್ನುಯಾರೂ ಯೋಚಿಸಲೂ ಇರಲಿಲ್ಲ. ಅದು ಒಂದೆರಡು ದಿನಗಳಲ್ಲಿ ತೆಗೆದುಕೊಂಡ ನಿರ್ಧಾರವಲ್ಲದಿದ್ದರೂ, ತಮ್ಮ ನಡೆಯನ್ನು ಅತ್ಯಂತ ಸೂಕ್ಷ್ಮವಾಗಿ ಹಾಗೂ ಬಹುಮುಖ್ಯವಾಗಿ ಯಾರಿಗೂ ತಿಳಿಯದಂತೆ ಕಾಪಿಟ್ಟುಕೊಳ್ಳುವುದು ಅವರಿಗೆ ಕರಗತವಾಗಿದೆ.
ಸರ್ಕಾರ ವಿರೋಧಿ ಅಲೆ ಎಬ್ಬಿಸಿದ ಲಾಕ್ಡೌನ್
ಸದ್ಯದ ಮಟ್ಟಿಗೆ ಬಿಹಾರದ ಜನತೆ ಲಾಕ್ಡೌನ್ನ ಪರಿಣಾಮವನ್ನು ಅನುಭವಿಸುತ್ತಿದೆ. ಕೋವಿಡ್ ಭಾರತಕ್ಕೆ ಲಗ್ಗೆಯಿಟ್ಟು ಲಾಕ್ಡೌನ್ ಆದಾಗಿಂದ ತಮ್ಮ ನಿವಾಸ ಬಿಟ್ಟು ತೆರಳದ ನಿತೀಶ್ ಕುಮಾರ್ ವಿರುದ್ದ ಜನತೆ ಕೆರಳಿ ನಿಂತಿದೆ. ಕೋವಿಡ್ ಪರಿಸ್ಥಿತಿಯನ್ನು ಕೂಡಾ ಸರಿಯಾಗಿ ನಿಭಾಯಿಸಿಲ್ಲ ಎಂಬ ಅಪವಾದವೂ ಕೇಳಿಬಂದಿದೆ.
ಇನ್ನೂ ಹೆಚ್ಚಾಗಿ ಗಮನಹರಿಸಬೇಕಾದ ವಿಷಯವೇನೆಂದರೆ ಲಾಕ್ಡೌನ್ ಸಂದರ್ಭದಲ್ಲಿ ಬಿಹಾರಕ್ಕೆ ಮರಳಿದ ಲಕ್ಷಾಂತರ ವಲಸೆ ಕಾರ್ಮಿಕರಿಗೆ ಮರುವಸತಿ ಕಲ್ಪಿಸಿಕೊಡುವುದು ನಿಜಕ್ಕೂ ಸವಾಲಿನ ವಿಚಾರ. ಇಂತಹ ಸಂದರ್ಭದಲ್ಲಿ ಮರಳಿ ಬಂದ ವಲಸೆ ಕಾರ್ಮಿಕರಿಗೆ ರೇಷನ್ ವ್ಯವಸ್ಥೆ ಸರಿಯಾಗಿ ಆಗದಿದ್ದರಿಂದ ಸಾಕಷ್ಟು ಜನರು ಸರ್ಕಾರದ ವಿರುದ್ದ ತಿರುಗಿಬಿದ್ದಿದ್ದಾರೆ.
ಏನೇ ಆದರೂ, ಕರೋನಾ ಸಂಕಷ್ಟದ ನಡುವೆಯೂ ಬಿಹಾರದಲ್ಲಿ ಈ ಬಾರಿಯ ಚುನಾವಣೆಗೆ ಸಾಕಷ್ಟು ಸಿದ್ದತೆಗಳು ಒಳಗಿಂದ ಒಳಗೇ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಲಡಾಖ್ ಭೇಟಿಯ ಹಿಂದೆಯೂ ಬಿಹಾರ ಚುನಾವಣೆಯ ಪ್ರಚಾರವೂ ಅಡಗಿದೆ ಎಂಬುದು ವಿರೋಧ ಪಕ್ಷದವರ ವಾದ. ಆದರೂ, ಈ ಸಂದರ್ಭದಲ್ಲಿ ಬಿಹಾರ ಚುನಾವಣೆಯ ಕೇಂದ್ರ ಬಿಂದುವಾಗಿರುವುದು ನಿತೀಶ್ ಕುಮಾರ್. ಪ್ರಶಾಂತ್ ಕುಮಾರ್ ಇಲ್ಲದೇ, ಕೋವಿಡ್-19 ವಿಚಾರವನ್ನುಸಮರ್ಥವಾಗಿ ನಿಭಾಯಿಸಲಾಗದೇ ಈಗಾಗಲೇ ಸಾಕಷ್ಟು ಹೆಸರು ಕೆಡಿಸಿಕೊಂಡಿರುವ ಬಿಹಾರದ ರಾಜ್ಯಸರ್ಕಾರ ಈ ಬಾರಿ ಚುನಾವಣೆಗೆ ಯಾವ ರೀತಿ ಕಾರ್ಯತಂತ್ರ ಹೆಣೇಯಲಿದೆ ಎಂಬುದನ್ನು ನೋಡಬೇಕಾಗಿದೆ.