ಕರೋನಾ ಸೋಂಕಿನ ನಡುವೆ ಹೈರಾಣಾಗಿರುವ ದೇಶಕ್ಕೆ ಇದೀಗ ಮತ್ತೊಂದು ವಿಪತ್ತು ಎರಗಿದ್ದು, ಮಿಡತೆಗಳ ಹಾವಳಿ ದೇಶದ ಆಹಾರ ಭದ್ರತೆಗೇ ಕನ್ನ ಹಾಕುವ ಅಪಾಯವಿದೆ.
ಈಗಾಗಲೇ ದೇಶದ ಐದು ರಾಜ್ಯಗಳಲ್ಲಿ ಸಾವಿರಾರು ಕೋಟಿ ಮೌಲ್ಯದ ಆಹಾರ ಬೆಳೆಗಳನ್ನು ನಾಶ ಮಾಡಿರುವ ಈ ರಾಕ್ಷಸ ಹಸಿವಿನ ಮಿಡತೆಗಳ ದಂಡು, ಇದೀಗ ಮಹಾರಾಷ್ಟ್ರಕ್ಕೂ ಲಗ್ಗೆ ಇಟ್ಟಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಕರ್ನಾಟಕಕ್ಕೂ ಮುತ್ತಿಗೆ ಹಾಕಬಹುದು ಎಂಬ ಆತಂಕ ಎದುರಾಗಿದೆ.
ಪ್ರಮುಖವಾಗಿ ಈಗಾಗಲೇ ರಾಜಸ್ಥಾನ, ಪಂಜಾಬ್, ಹರ್ಯಾಣ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಆರು ರಾಜ್ಯಗಳ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಎಕರೆ ಪ್ರದೇಶದ ಹತ್ತಿ, ದ್ವಿದಳ ಧಾನ್ಯ, ತರಕಾರಿ ಬೆಳೆಗಳನ್ನು ಸಂಪೂರ್ಣ ಸ್ವಾಹಾ ಮಾಡಿರುವ ಈ ಮಿಡತೆಗಳು, ರಾಜ್ಯದ ಗಡಿ ಸಮೀಪದ ಮಹಾರಾಷ್ಟ್ರದ ಭಾಗದಲ್ಲಿಯೂ ಕಾಣಿಸಿಕೊಂಡಿರುವುದು ಬೀದರ್, ಗುಲ್ಬರ್ಗಾ, ವಿಜಯಪುರ, ಬೆಳಗಾವಿ ಭಾಗದಲ್ಲಿ ಆತಂಕ ಮೂಡಿಸಿದೆ.
ಆಫ್ರಿಕಾದ ಸೊಮಾಲಿಯಾ, ಇಥಿಯೋಪಿಯಾದಲ್ಲಿ ಮೊದಲು ಕಾಣಿಸಿಕೊಂಡಿದ್ದ ಈ ಸರ್ವನಾಶಕ ಮಿಡತೆಗಳ ದಂಡು, ಕಳೆದ 25-30 ವರ್ಷಗಳಲ್ಲೇ ಕಂಡಿರದ ಪ್ರಮಾಣದ ಭಾರೀ ಹಾನಿ ಉಂಟುಮಾಡಿದ್ದು, ಆ ದೇಶಗಳಲ್ಲಿ ಆಹಾರದ ಬಿಕ್ಕಟ್ಟು ತಲೆದೋರುವ ಅಪಾಯ ಎದುರಾಗಿದೆ. ಇರಾನ್ ಮೂಲಕ ನರೆಯ ಪಾಕಿಸ್ತಾನಕ್ಕೆ ಪ್ರವೇಶ ಪಡೆದ ಇವು, ಆ ದೇಶದಲ್ಲಿ ದೊಡ್ಡ ಪ್ರಮಾಣದ ಬೆಳೆ ಹಾನಿ ಉಂಟುಮಾಡಿದ್ದು, ಇವುಗಳ ನಿಯಂತ್ರಣಕ್ಕಾಗಿ ಪಾಕಿಸ್ತಾನ ಕಳೆದ ಫೆಬ್ರವರಿಯಲ್ಲಿ ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನೇ ಘೋಷಿಸಿತ್ತು. ಪಾಕಿಸ್ತಾನದ ಗಡಿ ಮೂಲಕ ಕಳೆದ ಏಪ್ರಿಲ್ ಎರಡನೇ ವಾರದ ಹೊತ್ತಿಗೆ ರಾಜಸ್ತಾನ ಮತ್ತು ಗುಜರಾತಿನ ಕೆಲವು ಕಡೆ ಕಾಣಿಸಿಕೊಂಡಿದ್ದ ಈ ವಿನಾಶಕಾರಿ ಕೀಟಗಳು, ಇದೀಗ ದೇಶದ ಕೃಷಿಕರ ಪಾಲಿಗೆ ಕರೋನಾ ಲಾಕ್ ಡೌನ್ ಸಂಕಷ್ಟದ ನಡುವೆ ಮತ್ತೊಂದು ವಿಪತ್ತಾಗಿ ಪರಿಣಮಿಸಿವೆ.

ಗಾಳಿ ಬೀಸುವ ದಿಕ್ಕಿನಲ್ಲಿ ಕೋಟ್ಯಂತರ ಸಂಖ್ಯೆಯ ಗುಂಪುಗಳಲ್ಲಿ ಸಂಚರಿಸುವ ಈ ಮರುಭೂಮಿ ಮಿಡತೆಗಳು, ದಿನವೊಂದಕ್ಕೆ ಸುಮಾರು 200 ಕಿ.ಮೀ ದೂರ ಕ್ರಮಿಸಬಲ್ಲವು ಮತ್ತು ಹಾಗೆ ಹಾದುಹೋಗುವಾಗ ಸುಮಾರು 1-2 ಕಿ.ಮೀ ವ್ಯಾಪ್ತಿಯಲ್ಲಿ ಕಾಣುವ ಹಸಿರು ಬೆಳೆ, ಧವಸ-ಧಾನ್ಯ, ಗಿಡಮರಗಳ ಹಸಿರನ್ನೆಲ್ಲಾ ತಿಂದು, ಬರಿದುಮಾಡುತ್ತವೆ. ಹಾಗಾಗಿ ಒಂದೇ ದಿನದಲ್ಲಿ ಸಾವಿರಾರು ಎಕರೆ ಪ್ರದೇಶದ ಬೆಳೆಯನ್ನು ಸರ್ವನಾಶ ಮಾಡಬಲ್ಲವು. ಒಂದು ಕಿಮೀ ವ್ಯಾಪ್ತಿಯ ಒಂದು ಮಿಡತೆ ದಂಡು, ಒಂದು ದಿನದಲ್ಲಿ ಸುಮಾರು 35 ಸಾವಿರ ಜನರು ಊಟ ಮಾಡುವಷ್ಟು ಆಹಾರವನ್ನು ತಿಂದು ಹಾಕಬಲ್ಲವು. ಒಂದು ಮಿಡತೆ ಒಂದು ದಿನದಲ್ಲಿ ತನ್ನ ದೇಹದ ತೂಕದಷ್ಟೇ(ಸುಮಾರು 2 ಗ್ರಾಂ) ಆಹಾರವನ್ನು ತಿನ್ನಬಲ್ಲದು ಎಂದು ತಜ್ಞರು ಹೇಳುತ್ತಾರೆ. ಆ ಲೆಕ್ಕದಲ್ಲಿ ಒಂದು ಕಿಮೀ ವ್ಯಾಪ್ತಿಯಲ್ಲಿ ಸುಮಾರು ನಾಲ್ಕು ಕೋಟಿಯಷ್ಟು ಮಿಡತೆಗಳಿರುತ್ತವೆ ಎಂದರೆ, ಅಂತಹ ಒಂದು ದಂಡು ಒಂದು ದಿನದಲ್ಲಿ ಉಂಟುಮಾಡಬಹುದಾದ ಹಾನಿಯನ್ನು ಅಂದಾಜಿಸಬಹುದು.
ಸದ್ಯ ಭಾರೀ ಗಾತ್ರದ ನಾಲ್ಕು ಮಿಡತೆ ದಂಡುಗಳು ದೇಶದಲ್ಲಿ ಕಾಣಿಸಿಕೊಂಡಿವೆ. ಅವು ಸುಮಾರು ಮೂರರಿಂದ ನಾಲ್ಕು ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, ತಲಾ 8-10 ಕೋಟಿ ಮಿಡತೆಗಳನ್ನು ಒಳಗೊಂಡಿರಬಹುದು. ಅಂತಹ ಎರಡು ಗುಂಪು ಮಧ್ಯಪ್ರದೇಶದಲ್ಲೂ, ಒಂದು ಗುಂಪು ರಾಜಸ್ತಾನದಲ್ಲೂ, ಮತ್ತೊಂದು ಉತ್ತರ ಪ್ರದೇಶದ ಝಾನ್ಸಿ ಭಾಗದಲ್ಲಿವೆ. ಆ ಪೈಕಿ ಒಂದು ಸಣ್ಣ ಗುಂಪು ಮಹಾರಾಷ್ಟ್ರದ ಪೂರ್ವಭಾಗದತ್ತ ಹೋಗಿದೆ. ಆ ಗುಂಪು ಒಂದು ವೇಳೆ ಗಾಳಿ ದಕ್ಷಿಣಾಭಿಮುಖವಾಗಿ ಬೀಸಿದ್ದಲ್ಲಿ ಕರ್ನಾಟಕಕ್ಕೂ ಪ್ರವೇಶಿಸುವ ಸಾಧ್ಯತೆ ಇದೆ. ಆದರೆ, ಸದ್ಯಕ್ಕೆ ಗಾಳಿ ಉತ್ತರ ದಿಕ್ಕಿನತ್ತ ಬೀಸುತ್ತಿದೆ. ಆದರೂ, ಕರ್ನಾಟಕ ಸರ್ಕಾರ ಮುನ್ನೆಚ್ಚರಿಕೆಯ ಕ್ರಮವಾಗಿ ಈ ಹಾವಳಿ ಎದುರಿಸಲು ಗಡಿ ಜಿಲ್ಲೆಗಳಲ್ಲಿ ಅಗತ್ಯ ತಯಾರಿ ಮಾಡುಕೊಳ್ಳುವುದು ಕ್ಷೇಮ ಎಂದು ಭಾರತ ಸರ್ಕಾರದ ಮಿಡತೆ ಮುನ್ನೆಚ್ಚರಿಕೆ ಸಂಸ್ಥೆ(ಎಲ್ ಡಬ್ಲ್ಯೂ ಒ) ಎಚ್ಚರಿಕೆ ನೀಡಿದೆ. ಅಲ್ಲದೆ ಕೇಂದ್ರ ಕೃಷಿ ಇಲಾಖೆ ಕೂಡ ರಾಜ್ಯ ಕೃಷಿ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದೆ ಎನ್ನಲಾಗಿದೆ.
ಪಾಕಿಸ್ತಾನ ಮತ್ತು ಇರಾನ್ ನೊಂದಿಗೆ ಭಾರತ ಮಿಡತೆ ನಿಯಂತ್ರಣದ ವಿಷಯದಲ್ಲಿ ಪರಸ್ಪರ ಸಹಕಾರದ ನೆಲೆಯಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿ ನಿತ್ಯ ಸ್ಕೈಪ್ ಮೂಲಕ ವೀಡಿಯೋ ಸಮಾಲೋಚನೆ ನಡೆಸಲಾಗುತ್ತಿದೆ. ಭಾರತದ ಕಡೆಯಿಂದ ಸಸ್ಯ ಸಂರಕ್ಷಣಾ ನಿರ್ದೇಶನಾಲಯದ ಉಪ ನಿರ್ದೇಶಕ ಕೆ ಎಲ್ ಗುರ್ಜರ್ ಅವರು ಭಾಗವಹಿಸುತ್ತಿದ್ದು, ಉಭಯ ದೇಶಗಳ ಅಧಿಕಾರಿಗಳ ಮಟ್ಟದಲ್ಲಿ ಈ ನಿಟ್ಟಿನಲ್ಲಿ ಕಾರ್ಯಾಚರಣೆಗಳನ್ನು ಯೋಜಿಸಿ ಜಾರಿಗೆ ತರಲಾಗುತ್ತಿದೆ ಎಂದು ‘ದ ವೈರ್’ ವರದಿ ಮಾಡಿದೆ.

ಈವರೆಗೆ ರಾಜಸ್ಥಾನ, ಗುಜರಾತ್, ಹರ್ಯಾಣ ಮುಂತಾದ ತೀವ್ರ ದಾಳಿಗೆ ಒಳಗಾದ ಪ್ರದೇಶಗಳಲ್ಲಿ ಟ್ರ್ಯಾಕ್ಟರ್ ಮೂಲಕ ಮಿಡತೆಗಳು ಕುಳಿತ ಜಾಗಗಗಳಲ್ಲಿ ಮೆಲಾಥಿನ್ ಮತ್ತಿತರ ಕೀಟನಾಶಕ ಸಿಂಪಡಿಸುವ ಮೂಲಕ ಮಿಡತೆ ನಾಶಕ್ಕೆ ಪ್ರಯತ್ನಿಸಲಾಗುತ್ತಿತ್ತು. ಜೊತೆಗೆ ಮರುಭೂಮಿ ಪ್ರದೇಶದಲ್ಲಿ ತೇವಾಂಶಭರಿತ ಮರಳಿನಲ್ಲಿ ಮೊಟ್ಟೆ ಇಡುವ ಅವುಗಳ ಮೊಟ್ಟೆ ನಾಶದ ಮೂಲಕ ಭವಿಷ್ಯದ ದಾಳಿಯನ್ನು ತಡೆಯುವ ಯತ್ನ ಮಾಡಲಾಗುತ್ತಿತ್ತು. ಆ ಕಾರ್ಯಕ್ಕಾಗಿ ಸುಮಾರು 700 ಟ್ರ್ಯಾಕ್ಟರ್, 75 ಅಗ್ನಿಶಾಮಕ ವಾಹನ ಮತ್ತು 50ಕ್ಕೂ ಹೆಚ್ಚು ಇತರೆ ವಾಹನಗಳನ್ನು ಬಳಸಲಾಗುತ್ತಿದೆ. ಆದರೆ, ಟ್ರ್ಯಾಕ್ಟರ್ ಬಳಕೆ ಪರಿಣಾಮಕಾರಿಯಲ್ಲ ಎಂಬ ಹಿನ್ನೆಲೆಯಲ್ಲಿ ಇದೀಗ ಡ್ರೋನ್ ಬಳಕೆಗೂ ಯೋಚಿಸಲಾಗುತ್ತಿದೆ. ತತಕ್ಷಣಕ್ಕೆ ಮಿಡತೆಗಳು ನಿಯಂತ್ರಣಕ್ಕೆ ಬರದೇ ಇದ್ದಲ್ಲಿ ಡ್ರೋನ್ ಮತ್ತು ಹೆಲಿಕಾಪ್ಟರ್ ಬಳಕೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭಾರತ ಸರ್ಕಾರದ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ ಮಹಾ ನಿರ್ದೇಶಕ ತ್ರಿಲೋಚನ್ ಮಹಾಪಾತ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ನಡುವೆ, ಮಿಡತೆ ದಂಡಿನ ದಾಳಿಯ ಕುರಿತು ರಾಜಸ್ತಾನದ ಗಡಿ ಭಾಗದಲ್ಲಿ ಮಿಡತೆಗಳ ದಾಳಿಯ ವರದಿಯಾದ ಏಪ್ರಿಲ್ 11ರಂದೇ ಮಾಜಿ ಸಚಿವ ಎಂ ಬಿ ಪಾಟೀಲರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆದಿದ್ದರು. ಪ್ರಧಾನಮಂತ್ರಿಗಳ ಕಾರ್ಯಾಲಯ, ಕೃಷಿ ಇಲಾಖೆ ಮತ್ತು ಸ್ವತಃ ನರೇಂದ್ರ ಮೋದಿಯವರಿಗೆ ಟ್ವಿಟರ್ ಮೂಲಕ ಟ್ಯಾಗ್ ಮಾಡಿ ಮನವಿ ಮಾಡಿದ್ದ ಅವರು, “ಆಫ್ರಿಕಾ ಮತ್ತು ಕೆಲವು ನಮ್ಮ ನೆರೆ ದೇಶಗಳಲ್ಲಿ ವ್ಯಾಪಕವಾಗಿರುವ ಈ ಮಿಡತೆ ದಂಡುಗಳ ಅಪಾಯದ ಬಗ್ಗೆ ಕಣ್ಣಿಡುವುದು ಅಗತ್ಯ. ಒಂದು ವೇಳೆ ಆ ಮಿಡತೆಗಳು ದೇಶಕ್ಕೆ ನುಗ್ಗಿ ಬೆಳೆಗಳ ಮೇಲೆ ದಾಳಿ ಮಾಡಿದರೆ, ಖಂಡಿತವಾಗಿಯೂ ಅವು ಕ್ಷಾಮದಂತಹ ಭೀಕರ ಪರಿಸ್ಥಿತಿ ಸೃಷ್ಟಿಸಬಲ್ಲವು” ಎಂದು ಅಪಾಯದ ಬಗ್ಗೆ ಗಮನ ಸೆಳೆದಿದ್ದರು.
ಈ ನಡುವೆ ಮೇ 27ರಂದು ಕೂಡ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮತ್ತೊಂದು ಲಿಖಿತ ಪತ್ರ ಬರೆದಿರುವ ಎಂ ಬಿ ಪಾಟೀಲರು, ಲಾಕ್ ಡೌನ್ ನಡುವೆ ಸಂಕಷ್ಟಕ್ಕೆ ಸಿಲುಕಿರುವ ರೈತರು ಇದೀಗ ಈ ಮಿಡತೆ ಹಾವಳಿಯ ಆತಂಕ್ಕೆ ಒಳಗಾಗಿದ್ದಾರೆ. ಈಗಾಗಲೇ ನೆರೆಯ ಮಹಾರಾಷ್ಟ್ರ ಭಾಗದಲ್ಲಿ ಮಿಡತೆ ಕಾಣಿಸಿಕೊಂಡಿರುವ ವರದಿಗಳಿವೆ. ಹಾಗಾಗಿ ಕರ್ನಾಟಕ ಸರ್ಕಾರ ಕೂಡಲೇ ಮುಂಬೈ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಈ ಹಾವಳಿ ತಡೆಗೆ ಮತ್ತು ಬೆಳೆ ಹಾನಿಯ ಅಂದಾಜು ಸಮೀಕ್ಷೆಗೆ ಚಾಲನೆ ನೀಡಬೇಕು. ವಿಳಂಬ ಮಾಡಿದ್ದಲ್ಲಿ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.

ಆದರೆ, ಈಗಾಗಲೇ ಸರ್ಕಾರಿ ಅಂದಾಜಿನ ಪ್ರಕಾರವೇ ಉತ್ತರದ ರಾಜ್ಯಗಳಲ್ಲಿ ಸುಮಾರು 20 ಸಾವಿರ ಕೋಟಿ ಮೌಲ್ಯದಷ್ಟು ಬೆಳೆ ಹಾನಿಗೆ ಕಾರಣವಾಗಿರುವ ಈ ಮಿಡತೆ ದಂಡಿನ ವಿರುದ್ಧ ಶೀಘ್ರ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಕರೋನಾ ವಿರುದ್ಧದ ಹೋರಾಟದ ಮಾದರಿಯಲ್ಲೇ ಮುಂದಾಲೋಚನೆ ಮತ್ತು ಮುಂಜಾಗ್ರತೆ ರಹಿತ ಉದಾಸೀನದ ಧೋರಣೆ ತಳೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಒಂದೂವರೆ ತಿಂಗಳ ಹಿಂದೆಯೇ ಪಾಕಿಸ್ತಾನದ ಗಡಿ ಭಾಗದಲ್ಲಿ ಈ ಮಿಡತೆಗಳ ಹಾವಳಿ ಕಂಡುಬಂದಿತ್ತು. ಆ ಮೂಲಕ ಕಳೆದ ನವೆಂಬರ್-ಡಿಸೆಂಬರ್ ಹೊತ್ತಿಗೆ ಆಫ್ರಿಕಾದಿಂದ ಇರಾನಿನತ್ತ ಬಂದಿದ್ದ ಮಿಡತೆ ದಂಡು, ಭಾರತದೊಳಕ್ಕೆ ಪ್ರವೇಶಿಸಿದ್ದವು. ಆದರೆ, ಸರ್ಕಾರ ಕೂಡಲೇ ತೀವ್ರ ಕ್ರಮಗಳನ್ನು ಕೈಗೊಳ್ಳುವ ಬದಲು ಈಗಲೂ ಟ್ರ್ಯಾಕ್ಟರ್ ಮೂಲಕ ಮಿಲಾಥಿನ್ ಸಿಂಪರಣೆ, ಪಾತ್ರ-ಪಗಡ ಬಡಿಯವುದು, ಪಟಾಕಿ ಹಾರಿಸುವುದು ಮುಂತಾದ ಕ್ರಮಗಳಿಗೇ ಸೀಮಿತವಾಗಿದೆ. ಆದರೆ, ವಾಸ್ತವದಲ್ಲಿ ಮಿಲಾಥಿನ್ ಕೂಡ ಇವಕ್ಕೆ ಪರಿಣಾಮಕಾರಿಯಲ್ಲ; ಜೊತೆಗೆ ಪಾತ್ರೆ-ಪಡಗ, ಪಟಾಕಿ ಸದ್ದಿಗೆ ಈ ಮಿಡತೆಗಳು ಹೆದರುತ್ತಿಲ್ಲ ಎಂಬ ಮಾಹಿತಿ ತಳಮಟ್ಟದ ರೈತ ಸಮುದಾಯದಿಂದ ಕೇಳಿಬರುತ್ತಿದೆ.
ಕರೋನಾದ ವಿಷಯದಲ್ಲಿ ಅವೈಜ್ಞಾನಿಕ ಮತ್ತು ಅನಾಹುತಕಾರಿ ಲಾಕ್ ಡೌನ್ ಹೊರತುಪಡಿಸಿ ಇನ್ನಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾದ ಸರ್ಕಾರ ಕೊನೆಗೆ ಲಾಕ್ ಡೌನ್ ಕೂಡ ವಿಫಲವಾದ ಬಳಿಕ ಬಹುತೇಕ ಸಂಪೂರ್ಣ ಕೈಚೆಲ್ಲಿದೆ. ಈಗ ಮಿಡತೆಗಳ ಪಿಡುಗನ್ನು ನಿರ್ವಹಿಸುತ್ತಿರುವ ರೀತಿ ನೋಡಿದರೆ, ಈ ವಿಷಯದಲ್ಲಿಯೂ ಕೇಂದ್ರ ಸರ್ಕಾರ ಕರೋನಾ ಕಾರ್ಯಾಚರಣೆಯ ಮಾದರಿಯನ್ನೇ ಅನುಸರಿಸುತ್ತಿರುವಂತಿದೆ. ಹಾಗಾಗಿ ರೈತರ ಪಾಲಿಗೆ ತತಕ್ಷಣಕ್ಕೆ ಮತ್ತೊಂದು ಅನಾಹುತ ಕಾದಿದೆ.