ಕಣ್ಣು ಹಾಗೂ ಮನಸ್ಸು ಒದ್ದೆಯಾಗುವ ಘಟನೆಯೊಂದು ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಪುಟ್ಟ ಮಗುವೊಂದು ಸತ್ತು ಮಲಗಿರುವ ತನ್ನ ತಾಯಿಯನ್ನು ಎಬ್ಬಿಸುವ ಮನಕಲಕಿಸುವ ದೃಶ್ಯ ಅದು. ಆಕೆ ತನ್ನ ಕಂದಮ್ಮನ ಜತೆಗೆ ಗುಜರಾತ್ನಿಂದ ತವರಿಗೆ ರೈಲು ಹತ್ತಿದ್ದಳು. ಉಗಿಬಂಡಿ ಬಿಹಾರದ ಪಾಟ್ನಾದ ಮುಝಪ್ಪರಪುರ್ ರೈಲ್ವೇ ನಿಲ್ದಾಣ ತಲುಪುತ್ತಿದ್ದಂತೆ ಆಕೆ ಸಾವನ್ನಪ್ಪಿದ್ದಾಳೆ. ತೀವ್ರವಾದ ಬಾಯಾರಿಕೆ ಹಾಗೂ ಹಸಿವು ಆಕೆಯನ್ನು ಬಸವಳಿಯುವಂತೆ ಮಾಡಿದೆ. ಸಾವಪ್ಪಿದ ಆಕೆಯ ಮೃತ ದೇಹ ಮುಝಪ್ಪರಪುರ್ ರೈಲ್ವೇ ನಿಲ್ದಾಣದಲ್ಲಿದೆ. ಈ ವೇಳೆ ಆಕೆಯ ಮಗು ಆಕೆಯ ಮೇಲಿದ್ದ ಚಾದರವನ್ನು ಎಳೆದು ತಾಯಿಯನ್ನು ಎಬ್ಬಿಸುವ ದೃಶ್ಯ ಈ ಪ್ರಭುತ್ವವನ್ನು ಅಣಕಿಸುವಂತಿದೆ.
ಮಗು ಎಷ್ಟೇ ಕರೆದರು, ಮೈ ಮೇಲಿದ್ದ ಚಾದರ ಎಳೆದಾಡಿದರೂ ಆಕೆ ಮಾತ್ರ ಏಳುವುದಿಲ್ಲ. ಆ ಕಂದಮ್ಮನಿಗೆ ಅದರ ಪರಿವೆಯೂ ಇಲ್ಲದೆ ತಾಯಿಯನ್ನು ಎಬ್ಬಿಸುವ ನಿರಂತರ ಪ್ರಯತ್ನ ಮಾಡುತ್ತಲೇ ಇತ್ತು. ಲಾಕ್ ಡೌನ್ನಿಂದ ಕಂಗೆಟ್ಟು ಊರು ಸೇರಲಾಗದೆ ಅರ್ಧ ದಾರಿಯಲ್ಲಿ ಪ್ರಾಣ ಬಿಟ್ಟ ವಲಸೆ ಕಾರ್ಮಿಕರ ಗೋಳು, ಸಂಕಟ, ಹತಾಶೆ ಹಾಗೂ ಅವರ ದುಸ್ಥಿತಿಯನ್ನು ಈ ದೃಶ್ಯಗಳು ಪ್ರತಿಬಿಂಬಿಸುತ್ತಿದೆ. ಆಳುವ ವರ್ಗ ಕಣ್ಣಿದ್ದು ಕುರುಡರಂತೆ, ಬಡವರ ಎದೆಯ ಮೇಲೆ ತಮ್ಮ ಸರ್ಕಾರವನ್ನು ನಿಲ್ಲಿಸಿರುವ ಪರಿ ಇದು.
ಮಾರ್ಚ್ ಅಂತ್ಯದಲ್ಲಿ ಭಾರತ ಸ್ಥಬ್ಧಗೊಂಡ ಮೇಲೆ ಲಕ್ಷಾಂತರ ಕಾರ್ಮಿಕರು ಹೆಣಗಾಡಿ ಹೋಗಿದ್ದರು. ಉದ್ಯೋಗವಿಲ್ಲ. ಕೈಯಲ್ಲಿ ಕಾಸಿಲ್ಲ. ಅತ್ತ ಮನೆಯೂ ಸೇರಲಾಗದೆ ಬಿಸಿಲ ಧಗೆಗೆ ನಡೆದು ಊರು ಸೇರಿದರು. ಈ ಮಧ್ಯೆ ಊರು ಸೇರಲಾಗದೆ ನಡು ರಸ್ತೆಯಲ್ಲೇ ಪ್ರಾಣ ಬಿಟ್ಟವರ ಸಂಖ್ಯೆ ಅದೆಷ್ಟೋ. ಈಗ ಈ ಮಗು. ನಿಜ. ಈ ಮಗುವಿನ ತಾಯಿ ರೈಲ್ವೆ ನಿಲ್ದಾಣದ ಮೇಲೆ ಸತ್ತು ಮಲಗಿರುವುದು, ದೇಶದಲ್ಲಿನ ಆಡಳಿತ ವರ್ಗ ಕುಂಭಕರ್ಣನ ರೀತಿ ನಿದ್ದೆಗೆ ಜಾರಿದೆ ಎಂಬುವುದಕ್ಕಿರುವ ಸಾಂಧರ್ಭಿಕ ನಿರ್ದಶನ.
ಇದೀಗ ಈ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯಕಂಡು ನೆಟ್ಟಿಗರ ಕಣ್ಣಾಲಿ ಕಂಪಿಸಿಹೋಗಿದೆ. ಎಲ್ಲೆಲ್ಲೂ ಭಾವನಾತ್ಮಕ ಒಕ್ಕಣೆ ಬರೆದು ಹಂಚಿಕೊಳ್ಳಲಾಗುತ್ತಿದೆ. ಇದು ದೇಶ ಮುಂದೆ ಸಾಗಬಹುದಾದ ದಾರಿಯನ್ನು ನಿಚ್ಚಳಗೊಳಿಸಿದೆ. ಸರ್ಕಾರಗಳು, ದೇಶದ ಆಡಳಿತ ಯಂತ್ರ ಎಲ್ಲವೂ ಇದಕ್ಕೂ ಮರುಗದೆ ʻಪ್ಯಾಕೇಜ್ʼ ಸರ್ಕಾರ ನಡೆಸುವಲ್ಲಿ ನಿರತವಾಗಿದೆ. ಇದಕ್ಕಿಂತ ಕೆಟ್ಟ ದಿನಗಳು ದೇಶಕ್ಕೆ ಬಂದೊದಗಲಿದೆಯೇ..?