ಎರಡೂವರೆ ತಿಂಗಳ ಹಿಂದೆ ಮಾರ್ಚ್ 24ರಂದು ದೇಶ ಹಿಂದೆಂದೂ ಕಂಡಿರದ ಐತಿಹಾಸಿಕ ಲಾಕ್ ಡೌನ್ ಗೆ ಒಳಗಾದಾಗ ಕರೋನಾ ಮಹಾಮಾರಿಯ ವಿರುದ್ಧದ ಕೇವಲ 21 ದಿನದ ಮೊದಲ ಹಂತದ ಲಾಕ್ ಡೌನ್ ನಲ್ಲಿಯೇ ಜಯಭೇರಿ ಬಾರಿಸುವ ವಿಶ್ವಾಸವಿತ್ತು. ಆ 21 ದಿನಗಳಲ್ಲಿ ಜಾಗತಿಕ ಪಿಡುಗಿನ ವಿರುದ್ಧ ನಾವು ಜಯ ಸಾಧಿಸದೇ ಹೋದರೆ, ಇಡೀ ದೇಶ 21 ವರ್ಷಗಳಷ್ಟು ಹಿಂದಕ್ಕೆ ಹೋಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದರು.
ಈಗ ಈ 77 ದಿನಗಳಲ್ಲಿ ನಾಲ್ಕು ಹಂತದ ಲಾಕ್ ಡೌನ್ ಮುಗಿದು, ಐದನೇ ಹಂತದಲ್ಲಿ ಫ್ರೀಡೌನ್ ಆರಂಭವಾಗಿದೆ. ಇಂದಿನಿಂದ(ಜೂ.8) ಫ್ರೀಡೌನ್ ನ ಮುಂದುವರಿದ ಇನ್ನಷ್ಟು ವಿನಾಯ್ತಿ- ಸಡಿಲಿಕೆಯ ಫ್ರೀಡೌನ್ ಎರಡನೇ ಹಂತ ಆರಂಭವಾಗಿದೆ. ಆರಂಭದಲ್ಲಿ ಇಡೀ ದೇಶವನ್ನು ಕರೋನಾ ದಾಳಿಯಿಂದ ರಕ್ಷಿಸುವ, ಜೀವ ಉಳಿಸುವ ನಿಟ್ಟಿನಲ್ಲಿ ಕೇವಲ 21 ದಿನದಲ್ಲಿ, 18 ದಿನಗಳ ಮಹಾಭಾರತದ ಕುರುಕ್ಷೇತ್ರ ಯುದ್ಧದ ಮಾದರಿಯಲ್ಲಿ ಹೋರಾಡುವುದಾಗಿ ಹೇಳಿದ್ದ ಪ್ರಧಾನಿ ಮೋದಿಯವರು ಇಡೀ ಕರೋನಾ ವಿರುದ್ಧ ಹೋರಾಟವನ್ನು ತಮ್ಮ ಹೆಗಲಿಗೆ ವಹಿಸಿಕೊಂಡಿದ್ದರು. ಆ ಮೂಲಕ ದೇಶರಕ್ಷಕ ಪಿತಾಮಹನಂತೆ ತಮ್ಮನ್ನು ತಾವು ಬಿಂಬಿಸಿಕೊಂಡಿದ್ದರು. ಜೊತೆಗೆ ಕರೋನಾದ ವಿರುದ್ಧದ ತಮ್ಮ ದಿಗ್ವಿಜಯ ಕೇವಲ ದೇಶಕ್ಕೆ ಮಾತ್ರವಲ್ಲ; ಇಡೀ ಜಗತ್ತಿಗೆ ಮಾದರಿಯಾಗಲಿದೆ. ತಮ್ಮ ಹೋರಾಟ ಮತ್ತು ಯಶಸ್ಸು ಕಂಡು 21ದಿನಗಳ ಬಳಿಕ ಇಡೀ ಜಗತ್ತು ತಮ್ಮತ್ತ ಬೆರಗುಗಣ್ಣಿನಿಂದ ನೋಡಲಿದೆ ಎಂದೂ ಹೇಳಿದ್ದರು. ಆ ಮೂಲಕ ‘ವಿಶ್ವಗುರು’ ಎಂಬ ತಮ್ಮ ಕುರಿತ ತಮ್ಮ ಭಕ್ತರ ಬಹುಪರಾಕಿನ ಬಲೂನಿಗೆ ಇನ್ನಷ್ಟು ಗಾಳಿಯೂದಿದ್ದರು.
Also Read: ಮತ್ತೆ ಬರೀ ಮಾತಿನ ಬಾಯುಪಚಾರವಾಯ್ತೆ ಪ್ರಧಾನಿ ಮೋದಿ ಭಾಷಣ?
ಹೀಗೆ ಮಹಾಸಮರ ಮತ್ತು ಅದನ್ನು ಜಯಿಸಿ ವಿಶ್ವಗುರುವಾಗುವ ಭರವಸೆ ನೀಡಿದ್ದ ಮೋದಿಯವರ ಮೊದಲ ಲಾಕ್ ಡೌನ್ ಭಾಷಣದ ಬಳಿಕ ಆರಂಭದ ಎರಡು ಹಂತದ ಲಾಕ್ ಡೌನ್ ಅವಧಿಯ ಸುಮಾರು ಒಂದೂವರೆ ತಿಂಗಳಲ್ಲಿ; ಮೂರು ಬಾರಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಕರೋನಾ ವಿರುದ್ಧದ ಪ್ರಧಾನಿ ಮೋದಿಯವರ ಹೋರಾಟದ ಅತ್ಯಂತ ಯಶಸ್ವಿ ಅಸ್ತ್ರವಾದ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುವ ಪ್ರಯೋಗ ವಾಸ್ತವವಾಗಿ ಮಾರ್ಚ್ 19ರಿಂದಲೇ ಆರಂಭವಾಗಿತ್ತು. ಅಂದು ಅವರು, ಮಾ.22ರ ಭಾನುವಾರ ಒಂದು ದಿನದ ಜನತಾ ಕರ್ಫ್ಯೂಗೆ ಕರೆ ನೀಡಿ, ಅಂದು ಸಂಜೆ ಚಪ್ಪಾಳೆ ತಟ್ಟಲು, ಪಾತ್ರೆ-ಪಗಡ ಬಡಿದು ಕರೋನಾ ವಿರುದ್ಧದ ಸಮರದ ಮುಂಚೂಣಿ ಸೇನಾನಿಗಳಿಗೆ ಬೆಂಬಲ ವ್ಯಕ್ತಪಡಿಸಲು ಕೇಳಿದ್ದರು. ಎಂದಿನಂತೆ ದೇಶದ ಬಹುತೇಕ ಜನತೆ ಪ್ರಧಾನಿಗಳ ಮಾತಿಗೆ ಗೌರವಿಸಿ ಕೇವಲ ಚಪ್ಪಾಳೆ, ತಟ್ಟೆಲೋಟಗಳಿಗೆ ಸೀಮಿತವಾಗದೆ ಶಂಖ, ಘಂಟೆ, ಜಾಗಟೆಗಳನ್ನು ಬಾರಿಸಿ ಅದಕ್ಕೊಂದು ಧಾರ್ಮಿಕ ಬಣ್ಣವನ್ನೂ ಬಳಿದಿದ್ದರು.
Also Read: ಚಪ್ಪಾಳೆ ತಟ್ಟಿಸುವ, ದೀಪ ಹಚ್ಚಿಸುವ ಪ್ರಧಾನಿ ಮೋದಿ ನಿರ್ಧಾರ ಮೂರ್ಖತನದ್ದೇ? ಜಾಣತನದ್ದೇ?
ಬಳಿಕ ಮಾರ್ಚ್ 24ರಂದು ರಾತ್ರಿ 8ಕ್ಕೆ ಟಿವಿ ಮೂಲಕ ದೇಶದ ಜನತೆಯನ್ನುದ್ದೇಶಿಸಿ ಎರಡನೇ ಕರೋನಾ ಸಮರ ಭಾಷಣ ಮಾಡಿದ್ದ ಮೋದಿಯವರು, 21 ದಿನಗಳ ಕರೋನಾ ಕುರುಕ್ಷೇತ್ರ ಯುದ್ಧ ಘೋಷಿಸಿ, ಯುಗಪುರುಷನ ವರಸೆಯಲ್ಲಿ ದೇಶ ರಕ್ಷಣೆಯ ಹೊಣೆ ಹೊತ್ತಿದ್ದರು. ನಂತರ ಲಾಕ್ ಡೌನ್ ನ ಹತ್ತು ದಿನಗಳ ಯಶಸ್ವಿ ಸಮರದ ಬೆನ್ನಲ್ಲೆ ಏಪ್ರಿಲ್ 3ರಂದು ಟಿವಿ ಪರದೆಯ ಮೇಲೆ ಮತ್ತೆ ಕಾಣಿಸಿಕೊಂಡಿದ್ದ ಪ್ರಧಾನಿ, ಜನತೆಯನ್ನುದ್ದೇಶಿಸಿ ಮೂರನೇ ಕರೋನಾ ಸಮರ ಭಾಷಣ ಮಾಡಿದ್ದರು. ಅಂದು ಅವರು ಕರೋನಾದ ಆತಂಕದ ಕತ್ತಲು ದೂರ ಮಾಡಲು ಭರವಸೆಯ ಹಣತೆ ಹಚ್ಚುವಂತೆ ಜನತೆಗೆ ಕರೆ ನೀಡಿದ್ದರು. ಅಭಿಮಾನಿಗಳು ಹಣತೆ, ದೀಪದ ಜೊತೆಗೆ ಪಟಾಕಿ ಸಿಡಿಸಿ, ಕರೋನಾ ಭೂತ ಪ್ರತಿಕೃತಿಗಳಿಗೆ ಬೆಂಕಿ ಇಟ್ಟು, ಬೀದಿಬೀದಿಗಳಲ್ಲಿ ದೊಂದಿ ಹಿಡಿದು ಗೋ ಕರೋನಾ ಗೋ ಘೋಷಣೆ ಕೂಗಿ ಭಾರೀ ಬೆಂಬಲ ವ್ಯಕ್ತಪಡಿಸಿದ್ದರು.
ನಂತರ ಮೊದಲ ಹಂತದ ಲಾಕ್ ಡೌನ್ ಮುಗಿಯುವ ಹೊತ್ತಿಗೆ ಏ.14ರಂದು ಮತ್ತೆ ನಾಲ್ಕನೇ ಕರೋನಾ ಸಮರ ಭಾಷಣ ಮಾಡಿದ್ದ ಮೋದಿಯವರು, 19 ದಿನಗಳ ಕಾಲ ಲಾಕ್ ಡೌನ್ ವಿಸ್ತರಿಸಿ ಎರಡನೇ ಹಂತದ ಲಾಕ್ ಡೌನ್ ಘೋಷಿಸಿದ್ದರು. ಆ ಬಳಿಕ ಲಾಕ್ ಡೌನ್ 3 ಮತ್ತು 4 ಹಾಗೂ ಫ್ರೀಡೌನ್ ಮೊದಲ ಹಂತಗಳು ಪ್ರಧಾನಿಯವರ ಕರೋನಾ ಸಮರ ಭಾಷಣದ ಗೈರಿನಲ್ಲೇ ಆಗಿಹೋದವು. ಈ ನಡುವೆ, ಮೇ 12ರಂದು ಲಾಕ್ ಡೌನ್ ನಡುವೆಯೇ ಕರೋನಾ ವಿರುದ್ಧದ ಸಮರದ ಭಾಗವಾಗಿ ಹೇರಿದ ಲಾಕ್ ಡೌನ್ ಪರಿಹಾರವಾಗಿ ಬರೋಬ್ಬರಿ 20 ಲಕ್ಷ ಕೋಟಿ ಮೊತ್ತದ ಆತ್ಮನಿರ್ಭರ ಭಾರತ(ಸ್ವಾಭಿಮಾನಿ ಭಾರತ) ಪ್ಯಾಕೇಜ್ ಘೋಷಣೆಯ ವೇಳೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
Also Read: 20 ಲಕ್ಷ ಕೋಟಿ ಸ್ವಾವಲಂಬಿ ಭಾರತ ಪ್ಯಾಕೇಜ್ ನಿಜವಾಗುವುದೆ?
ಆ ಬಳಿಕ ಸರಿಸುಮಾರು ಒಂದು ತಿಂಗಳಾದರೂ ಮೋದಿಯವರ ಕರೋನಾ ವಿಷಯದಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿಲ್ಲ. ಕರೋನಾ ಸಮರ ಭಾಷಣಗಳ ಸರಣಿ ದಿಢೀರನೇ ನಿಂತುಹೋಗಿದೆ. ಮಾರ್ಚ್ 24ರಂದು ಮೊದಲ ಹಂತದ ಲಾಕ್ ಡೌನ್ ಘೊಷಣೆಯ ವೇಳೆ ದೇಶವ್ಯಾಪ್ತಿ ಕರೋನಾ ಸೋಂಕು ಪ್ರಮಾಣ ಕೇವಲ 564. ಸೋಂಕಿಗೆ ಬಲಿಯಾದವರ ಪ್ರಮಾಣ ಕೇವಲ 10! ಮೊದಲ ಮತ್ತು ಎರಡನೇ ಹಂತದ ಲಾಕ್ ಡೌನ್ ವೇಳೆ ಕೂಡ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಗಾಬರಿ ಹುಟ್ಟಿಸುಂತಹ ದಿಢೀರ್ ಏರಿಕೆ ಕಂಡಿರಲಿಲ್ಲ. ಎರಡನೇ ಹಂತದ ಲಾಕ್ ಡೌನ್ ಅಂತ್ಯವಾದ ಮೇ 3ರಂದು ದೇಶವ್ಯಾಪಿ ಕರೋನಾ ಪ್ರಕರಣಗಳ ಪ್ರಮಾಣ 40 ಸಾವಿರದಷ್ಟಿದ್ದರೆ, ಸಾವಿನ ಪ್ರಮಾಣ 1300ರಷ್ಟಿತ್ತು.
ಈಗ ಮೇ 3ರಿಂದ ಜೂನ್ 8ರವರೆಗಿನ ಕೇವಲ ಒಂದು ತಿಂಗಳ ಅವಧಿಯಲ್ಲಿ ದೇಶದ ಕರೋನಾ ಸೋಂಕಿತರ ಪ್ರಮಾಣ ಬರೋಬ್ಬರಿ ಎರಡೂವರೆ ಲಕ್ಷ ದಾಟಿದೆ(2.57 ಲಕ್ಷ) ಮತ್ತು ಮೃತರ ಪ್ರಮಾಣ 7200ರ ಗಡಿ ದಾಟಿದೆ! ಅದಕ್ಕಿಂತ ಆಘಾತಕಾರಿ ಎಂದರೆ; ಕಳೆದ ಐದು ದಿನಗಳಲ್ಲಿ ಸೋಂಕು ಪ್ರಮಾಣ ಬರೋಬ್ಬರಿ ಐವತ್ತು ಸಾವಿರದಷ್ಟು ಹೆಚ್ಚಾಗಿದೆ(ಜೂ.2ರಂದು 2.07 ಲಕ್ಷದಿಂದ 2.57 ಲಕ್ಷಕ್ಕೆ). ಅಂದರೆ ಸದ್ಯ ದೇಶದಲ್ಲಿ ದಿನಕ್ಕೆ ಹತ್ತು ಸಾವಿರ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಸಾವಿನ ಪ್ರಮಾಣ ಕೂಡ ಭಾರೀ ಏರಿಕೆ ಕಂಡಿದೆ. ಆ ಅರ್ಥದಲ್ಲಿ ದೇಶದ ಕರೋನಾ ಮಹಾಮಾರಿಯ ತಾಂಡವ ಈಗ ತಾರಕಕ್ಕೇರಿದೆ.
Also Read: ಪ್ರಧಾನಿ ಮೋದಿ ಪ್ಯಾಕೇಜು: ಕೊಟ್ಟೋನು ಈರಭದ್ರ, ಈಸ್ಕೊಂಡೋನೇ ಕೋಡಂಗಿ!
ಅಂದರೆ ಕಳೆದ ಒಂದು ತಿಂಗಳಿನಿಂದ ಕರೋನಾ ಸೋಂಕು ದೇಶದ ಪಾಲಿನ ‘ಆಪ್ತರಕ್ಷಕ’ರೆಂದು ತಮ್ಮನ್ನುತಾವು ಬಿಂಬಿಸಿಕೊಂಡಿದ್ದ ಮೋದಿಯವ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ. 21 ದಿನಗಳ ಸಮರ 79 ದಿನವಾದರೂ ಮುಗಿದಿಲ್ಲ. ಜೊತೆಗೆ ಜಯದ ಯಾವ ಲಕ್ಷಣಗಳೂ ಗೋಚರಿಸುತ್ತಲೂ ಇಲ್ಲ. ದಿನದಿಂದ ದಿನಕ್ಕೆ ದೇಶ ಅಪಾಯದ ಅಂಚಿಗೆ ಸರಿಯುತ್ತಲೇ ಇದೆ. ಸಾವಿರಾರು ಜನ ಜೀವ ಕಳೆದುಕೊಂಡಿದ್ದರೆ, ಲಕ್ಷಾಂತರ ಜನ ಸೋಂಕಿನ ದವಡೆಗೆ ಸಿಕ್ಕು ಸಾವು-ಬದುಕಿನ ಹೋರಾಟ ನಡೆಸಿದ್ದಾರೆ. ದೇಶದ ಅಗಾಧ ಜನಸಂಖ್ಯೆಗೆ ಹೋಲಿಸಿದರೆ ಸೋಂಕಿನ ಪ್ರಮಾಣ ಏನೇನೂ ಅಲ್ಲ ಎಂಬಂತಹ ಹೊತ್ತಲ್ಲಿ(ಲಾಕ್ ಡೌನ್ ಒಂದು ಮತ್ತು ಎರಡರ ಅವಧಿ) ದೇಶರಕ್ಷಕರ ಪಾತ್ರ ವಹಿಸಿದ್ದ ಮೋದಿಯವರು ಈಗ, ಅಕ್ಷರಶಃ ಶಸ್ತ್ರತ್ಯಾಗ ಮಾಡಿ ಮೌನಕ್ಕೆ ಜಾರಿದ್ದಾರೆ. ಕಳೆದ ಒಂದು ತಿಂಗಳಿನಿಂದ(ಮೇ 12ರ ಬಳಿಕ) ಅವರು ದೇಶದ ಜನತೆಯನ್ನುದ್ದೇಶಿಸಿ ಮಾತನಾಡುವ ಗೋಜಿಗೇ ಹೋಗಿಲ್ಲ.
ನಿಜಕ್ಕೂ ಶತ್ರು(ಕರೋನಾ) ತನ್ನ ಮೇಲುಗೈ ಸಾಧಿಸಿ ಅಟ್ಟಹಾಸ ಮೆರೆಯುತ್ತಿರುವ ಹೊತ್ತಲ್ಲಿ ಎದೆಗುಂದದ ಹೋರಾಡುವ ಕೆಚ್ಚು ಮತ್ತು ಭರವಸೆ ತುಂಬಬೇಕಾಗಿದ್ದ ದಂಡನಾಯಕರೇ ಕಾಲಾಳುಗಳ ಕಣ್ತಪ್ಪಿಸಿ ಮರೆಮಾಚಿಕೊಂಡ ಸ್ಥಿತಿ ಇದು! ಶತ್ರು ದುರ್ಬಲನಾಗಿದ್ದಾಗ ಕತ್ತಿ ಝಳಪಿಸಿ ಠೇಂಕಾರದ ಕೂಗು ಮೊಳಗಿಸಿದವರು, ಶತ್ರು ಬಲಾಢ್ಯನಾಗಿ ಎರಗಿ ಬಂದಾಗ ಹೀಗೆ ಕತ್ತಿ ಒರೆಗೆ ಸಿಕ್ಕಿಸಿ ಮೌನ ವಹಿಸುವುದು ಕಾಲಾಳುಗಳಲ್ಲಿ ಯಾವ ಸ್ಥೈರ್ಯ, ಭರವಸೆ ತುಂಬಬಹುದು? ಎಂಬುದು ಗೊತ್ತಿರುವ ಸಂಗತಿಯೇ!
ಸೋಂಕು ನಿಯಂತ್ರಣ ಮತ್ತು ಆರ್ಥಿಕತೆ ನಿರ್ವಹಣೆ ಸೇರಿದಂತೆ ಹಲವು ಸ್ತರದಲ್ಲಿ ವಿಫಲ ಲಾಕ್ ಡೌನ್, ಸುಳ್ಳು ಸಾಧನೆ ಮೆರೆಸುವ ಕ್ಷುಲ್ಲಕ ರಾಜಕೀಯ ಹಿತಾಸಕ್ತಿ ಸಾಧಿಸುವ ನಿಟ್ಟಿನಲ್ಲಿ ನಿರೀಕ್ಷಿತ ಮಟ್ಟಕ್ಕೇರದ ವೈರಾಣು ಪರೀಕ್ಷೆ ಪ್ರಮಾಣ, ತಿರುಚಿದ ಕರೋನಾ ಅಂಕಿಅಂಶಗಳು,.. ಹೀಗೆ ಹಲವು ಸಂಗತಿಗಳು ದೇಶದ ಜನಸಾಮಾನ್ಯರ ಪಾಲಿಗೆ ಕರಾಳ ಭವಿಷ್ಯವನ್ನು ಎದುರು ಒಡ್ಡಿವೆ. ನಾಳೆಯ ಭರವಸೆಯೇ ಇಲ್ಲದ ಹೀನಾಯ ಸ್ಥಿತಿಯಲ್ಲಿ ಜನ ಹತಾಶೆ ಮತ್ತು ನಿರಾಸೆಯ ತುತ್ತುತುದಿಯಲ್ಲಿ ಕೇವಲ ಹಣೇಬರಹವನ್ನು ಶಪಿಸುವ ಅಸಹಾಯಕತೆಗೆ ಜಾರಿದ್ದಾರೆ. ಈ ನಿರಾಶೆಯ, ಹತಾಶೆಯ, ಅಸಹಾಯಕ ಹೊತ್ತಲ್ಲಿ ಜನರ ಬೆನ್ನಿಗೆ ನಿಲ್ಲಬೇಕಾದ, ಭರವಸೆ ಕಳೆದುಕೊಳ್ಳದಂತೆ ಹುರಿದುಂಬಿಸಬೇಕಾದ ‘ಆಪತ್ಭಾಂಧವ’ವರು ಯಾರೂ ಕಾಣಿಸುತ್ತಿಲ್ಲ!
ಹಾಗಾಗಿ ಈಗ ಕರೋನಾ ವಿರುದ್ಧದ ಭಾರತದ ಸಮರದ ಇದೀಗ ಮೊಬೈಲ್ ರಿಂಗ್ ಟೋನ್ ಗೆ ಮಾತ್ರ ಸೀಮಿತವಾದಂತೆ ಭಾಸವಾಗುತ್ತಿದೆ!