ಕರೋನಾ ವೈರಾಣು ಭಾರತಕ್ಕೆ ಕಾಲಿಟ್ಟಿದ್ದು 2020ರ ಜನವರಿ 30 ರಂದು. ಕರೋನಾ ವೈರಸ್ ಸೋಂಕನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದ ಕೇಂದ್ರ ಸರ್ಕಾರ, ತನ್ನ ಪಾಡಿಗೆ ತಾನಿತ್ತು. ಸಾಂಕ್ರಾಮಿಕ ಕಾಯಿಲೆ ಕರೋನಾ ನಿಯಂತ್ರಣಕ್ಕಾಗಿ ರಾಜ್ಯಗಳಿಗೆ ಯಾವುದೇ ವಿಶೇಷ ಅನುದಾನವನ್ನು ಒದಗಿಸುವ ಗೋಜಿಗೂ ಕೇಂದ್ರ ಸರ್ಕಾರ ಹೋಗಲಿಲ್ಲ. ಆದರೆ, ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ನಿಧಿಯಲ್ಲಿರುವ SDRF (State Disaster Response Fund) ಹಣವನ್ನು ಬಳಸಬಹುದು ಎಂದು ಅನುಮತಿ ನೀಡಿತ್ತು. ಕೇಂದ್ರ ಸರ್ಕಾರ ಕೊಟ್ಟ ಈ ಅವಕಾಶ ಕರೋನಾ ಹೆಸರಲ್ಲಿ ಕೋಟಿ ಕೋಟಿ ಹಣವನ್ನು ವೆಚ್ಚ ಮಾಡಲು ರಾಜ್ಯ ಸರ್ಕಾರಗಳಿಗೆ ಸಮುದ್ರದಲ್ಲಿ ನೀರು ತುಂಬಿಕೊಳ್ಳಲು ಅವಕಾಶ ಸಿಕ್ಕಂತಾಯ್ತು.
ರಾಜ್ಯಕ್ಕೆ ಬಂದಿದ್ದು 334 ಕೋಟಿ, ವೆಚ್ಚಕ್ಕೆ 84 ಕೋಟಿ..!
ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ನಿಧಿಗೆ ಈ ವರ್ಷ ಕೇಂದ್ರದಿಂದ ಬಂದಿರುವ ಅನುದಾನ 334 ಕೋಟಿ ರೂಪಾಯಿ. ಆದರೆ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ನಿಧಿಯಲ್ಲಿರುವ ಹಣದಲ್ಲಿ ಶೇಕಡ 25ರಷ್ಟು ವೆಚ್ಚ ಮಾಡಬಹುದು ಎಂದು ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದ್ದರಿಂದ 84 ಕೋಟಿ ಹಣ ವೆಚ್ಚ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿ, ಕರೋನಾ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳಿಗೆ ತೆಗದುಕೊಳ್ಳಲು ಮುಂದಾಯ್ತು. ಶೇಕಡ 10 ರಷ್ಟು ವೈದ್ಯಕೀಯ ಉಪಕರಣಗಳ ಖರೀದಿಗೂ ನಿರ್ಧಾರ ಮಾಡಿತ್ತು. ಜೊತೆಗೆ ಕರೋನಾ ವಾರಿಯರ್ಸ್ಗೆ ಪಿಪಿಇ ಕಿಟ್ (Personal protective equipment), N – 95 ಮಾಸ್ಕ್, ಸ್ಯಾನಿಟೈಸರ್, ವೆಂಟಿಲೇಟರ್, ರ್ಯಾಪಿಡ್ ಟೆಸ್ಟ್ ಕಿಟ್ ಖರೀದಿಯನ್ನೂ ರಾಜ್ಯ ಸರ್ಕಾರ ತುರ್ತು ಆದ್ಯತೆಯಲ್ಲಿ ಖರೀದಿ ಮಾಡಿತ್ತು. ಈ ಉಪಕರಣ ಖರೀದಿ ಸೇರಿದಂತೆ ಎಲ್ಲಾ ಖರ್ಚು ವೆಚ್ಚಗಳನ್ನು ಬೇಕಾಬಿಟ್ಟಿಯಾಗಿ ಮಾಡಲಾಗಿದೆ. ಲೆಕ್ಕ ತೋರಿಸುತ್ತಿರುವುದೇ ಒಂದು. ಆದರೆ ನಡೆಯುತ್ತಿರುವುದೇ ಒಂದು ಎನ್ನುವ ಆರೋಪ ಆರಂಭದಲ್ಲೇ ಕೇಳಿ ಬಂದಿತ್ತು. ಆರೋಪದಲ್ಲಿ ಸತ್ಯವಿದೆ ಎನ್ನುವ ಅನುಮಾನ ಸರ್ಕಾರದ ನಿರ್ಧಾರದಿಂದ ಗಟ್ಟಿಯಾಗುತ್ತಿದೆ.
ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನಿಖೆಗೆ ಸ್ಪೀಕರ್ ತಡೆ..!
ರಾಜ್ಯ ವಿಧಾನಸಭೆ ಹಾಗೂ ಸಂಸತ್ ಸದನದ ಪೀಠಾಧ್ಯಕ್ಷರ ನೇತೃತ್ವದಲ್ಲಿ ಹಲವಾರು ಸಮಿತಿಗಳನ್ನು ರಚನೆ ಮಾಡಿರುತ್ತಾರೆ. ಅದರಲ್ಲಿ ಪ್ರಮುಖವಾದುದು ಸಾರ್ವಜನಿಕ ಲೆಕ್ಕಪತ್ರ ಸಮಿತಿ. ಕರ್ನಾಟಕ ಸಾರ್ವಜನಿಕ ಲೆಕ್ಕಪತ್ರ ಸಮಿತಿಯನ್ನು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರಚನೆ ಮಾಡಿದ್ದಾರೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಶಾಸಕ ಹೆಚ್.ಕೆ ಪಾಟೀಲ್ ನೇಮಕ ಮಾಡಲಾಗಿದೆ. ಈ ಸಮಿತಿ ಕೆಲಸ ಎಂದರೆ, ಯಾವುದಾದರೂ ಹಗರಣ ನಡೆದಿದೆ ಎಂದು ದೂರು ಬಂದ ಕೂಡಲೇ ಆ ಬಗ್ಗೆ ತನಿಖೆ ನಡೆಸಿ ವಿಧಾನಸಭೆಗೆ ವರದಿ ಸಲ್ಲಿಸುವುದು. ಈ ವರದಿಯನ್ನು ಸ್ಪೀಕರ್ ಸದನದ ಮುಂದಿಡಬಹುದು, ಅಥವಾ ವರದಿಯನ್ನೇ ಒಪ್ಪದೆ ತಿರಸ್ಕಾರ ಮಾಡಲೂಬಹುದು. ಅದು ವಿಧಾನಸಭಾಧ್ಯಕ್ಷರ ವಿವೇಚನೆಗೆ ಬಿಟ್ಟ ವಿಚಾರ ಆಗಿರುತ್ತದೆ. ಆದರೆ, ಇದೀಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತನಿಖೆ ಮಾಡುವುದಕ್ಕೇ ತಡೆ ನೀಡಿದ್ದಾರೆ. ಇದು ಸಾಕಷ್ಟು ಗುಮಾನಿಗಳಿಗೆ ಕಾರಣ ಆಗಿದೆ.
ಇದೀಗ ರಾಜ್ಯದಲ್ಲಿ ಬಂದ ಆರೋಪ ಆದರೂ ಏನು..?
ಕೋವಿಡ್ – 19 ಹೆಸರಲ್ಲಿ ಕೋಟಿ ಕೋಟಿ ಹಣವನ್ನು ಹೊಳೆಯಲ್ಲಿ ಹುಣಸೆ ತೊಳೆದಂತೆ ಖರ್ಚು ಮಾಡಲಾಗಿದೆ. ಪಿಪಿಇ ಕಿಟ್ ಖರೀದಿ, ವೈದ್ಯಕೀಯ ಉಪಕರಣ ಖರೀದಿ, ಕೋವಿಡ್ – 19 ಪರೀಕ್ಷಾ ಕಿಟ್, ವೆಂಟಿಲೇಟರ್ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿಬಂದಿತ್ತು. ಆರೋಪ ಬಂದಿದ್ದರಿಂದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕೆಲವು ಆಸ್ಪತ್ರೆಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಭ್ರಷ್ಟಾಚಾರ ನಡೆದಿದೆಯೋ ಇಲ್ಲವೋ ಎನ್ನುವುದನ್ನು ತನಿಖೆ ಮಾಡಲು ಮುಂದಾಗಿತ್ತು. ಆದರೆ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಾಮಾಜಿಕ ಅಂತರದ ಹೆಸರಲ್ಲಿ ತನಿಖೆಗೆ ತಡೆ ನೀಡಿದ್ದಾರೆ. ಯಾವುದೇ ಅಧ್ಯಯನ ಪ್ರವಾಸ ಕೈಗೊಳ್ಳದಿರಲು ಆದೇಶ ಮಾಡಿದ್ದಾರೆ. ಸ್ಪೀಕರ್ ಕಾಗೇರಿ ಆದೇಶಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹೆಚ್.ಕೆ ಪಾಟೀಲ್ ಖಂಡನೆ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಬೆಂಬಲ ಕೊಟ್ಟಂತೆ ಆಗಿದೆ ಎಂದು ಕಿಡಿಕಾರಿದ್ದಾರೆ. ಸ್ಪೀಕರ್ ಸಾಂವಿಧಾನಿಕ ವಿರೋಧಿ ನಿರ್ಧಾರ ಕೈಗೊಂಡಿದ್ದಾರೆ. ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಆಗ್ರಹ ಮಾಡಿದ್ದಾರೆ.
ಆಕ್ರಮದ ವಾಸನೆ ಎಲ್ಲೆಲ್ಲಿ ಕೇಳಿ ಬಂದಿತ್ತು..?
ಪಿಪಿಇ ಕಿಟ್ ಖರೀದಿಯನ್ನು ಮಹಾರಾಷ್ಟ್ರ ಮೂಲದ ಅಮರಾವತಿ ಪ್ಲಾಸ್ಟಿ ಸರ್ಜಿ ಇಂಡಸ್ಟ್ರಿಸ್ ಮೂಲಕ ಖರೀದಿ ಮಾಡಲಾಗಿತ್ತು. ಆ ಕಿಟ್ಗಳು ಕಳಪೆ ದರ್ಜೆಯವು ಎನ್ನಲಾಗಿದೆ. ಆದರೂ ಎರಡು ಬಾರಿ ಖರೀದಿ ಮಾಡಲಾಗಿದೆ. ರಾಜಸ್ತಾನ ಸರ್ಕಾರ ಬಳಕೆ ಯೋಗ್ಯವಲ್ಲವೆಂದು ಹೇಳಿದ ಮೇಲೂ ಕಳಪೆ ಕಿಟ್ ಖರೀದಿಸಿರುವುದು ಅಕ್ರಮದ ವಾಸನೆಯನ್ನು ದೃಢಪಡಿಸಿದೆ. ವೆಂಟಿಲೇಟರ್ ಖರೀದಿಯನ್ನು ದೆಹಲಿಯ ಆರ್ ಕೆ ಸೊಲ್ಯೂಷನ್ಸ್ ಸಂಸ್ಥೆಯಿಂದ ಖರೀದಿ ಮಾಡಿತ್ತು. ವೆಂಟಿಲೇಟರ್ಗಳೂ ಸಹ ಕಳಪೆ ಗುಣಮಟ್ಟ ಎನ್ನುವ ಆರೋಪ ಎದುರಾಗಿತ್ತು. ಸ್ಯಾನಿಟೈಸರ್ ಖರೀದಿಯಲ್ಲೂ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. 500Ml ಸ್ಯಾನಿಟೈಸರ್ ಅನ್ನು ಮೊದಲು 97.44 ಪೈಸೆಯಂತೆ ಖರೀದಿ ಮಾಡಲಾಗಿತ್ತು. ಆ ಬಳಿಕ ಅದೇ ಸ್ಯಾನಿಟೈಸರ್ ಅನ್ನು 250 ರೂಪಾಯಿಗೆ ಖರೀದಿ ಮಾಡಿರೋದು ಕೋಟಿ ಕೋಟಿ ಕಮಾಯಿ ಮಾಡಿದ್ದಾರೆ ಎನ್ನುವುದಕ್ಕೆ ತಾಜಾ ಉದಾಹರಣೆ ಎನ್ನಲಾಗ್ತಿದೆ.
ಒತ್ತಡಕ್ಕೆ ಮಣಿದರಾ ಸ್ಪೀಕರ್ ಕಾಗೇರಿ..?
ಕರೋನಾ ಖರ್ಚು ಬೇಕಾಬಿಟ್ಟಿಯಾಗಿದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಾಗುತ್ತಿದೆ. ಈಗಲೇ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಎಲ್ಲಾ ಕಡೆಗೆ ಭೇಟಿ ನೀಡಿ ತನಿಖೆ ಮಾಡಿದ್ರೆ ಸಾಕಷ್ಟು ಸಾಕ್ಷಿಗಳು ಸಿಕ್ಕಿ ಬೀಳುವ ಭೀತಿ ಎಲ್ಲರನ್ನೂ ಕಾಡುತ್ತಿದೆ ಎನ್ನಲಾಗಿದೆ. ಅದೇ ಕಾರಣಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಖ್ಯಸ್ಥರಾದ ಸ್ಪೀಕರ್ ಅವರ ಮೇಲೆಯೇ ಒತ್ತಡ ತಂದು ತನಿಖೆಗೆ ತಡೆ ಹಾಕುವ ಕೆಲಸ ಮಾಡಿದ್ದಾರೆ ಎನ್ನಲಾಗ್ತಿದೆ. ಸಾರ್ವಜನಿಕವಾಗಿ ಸಾಕಷ್ಟು ಆರೋಪಗಳು ಟೀಕೆಗಳು ಎದುರಾದರೆ ನಿಧಾನವಾಗಿ ತನಿಖೆ ಮಾಡಲು ಅವಕಾಶ ಕೊಡುತ್ತಾರೆ. ಅದೇ ಕಾರಣಕ್ಕಾಗಿ ಸಾಮಾಜಿಕ ಅಂತರದ ಕಾರಣ ಕೊಟ್ಟು ತಡೆ ನೀಡಿರುವ ಉದ್ದೇಶ ಎನ್ನಲಾಗ್ತಿದೆ. ಆದರೆ ಸ್ಪೀಕರ್ ಅವರು ಅನುಮತಿ ಕೊಡುವ ವೇಳೆಗೆ ಎಲ್ಲವೂ ಮಾಸಲು ಆಗಿರುವ ಸಾಧ್ಯತೆಗಳಿರುತ್ತವೆ. ಇದೇ ಕಾರಣಕ್ಕಾಗಿ ಪ್ರಭಾವ ಬೀರುವ ಮೂಲಕ ಸದ್ಯಕ್ಕೆ ತನಿಖೆಯನ್ನು ತಡೆದಿದ್ದಾರೆ ಎನ್ನುವ ಮಾಹಿತಿ ಬಲ್ಲ ಮೂಲಗಳದ್ದಾಗಿದೆ.
ಭ್ರಷ್ಟಾಚಾರ ಹೇಗೆಲ್ಲಾ ನಡೀತಿದೆ ಗೊತ್ತಾ..?
ಕರೋನಾ ಸಂಕಷ್ಟದಲ್ಲೂ ಸಾಕಷ್ಟು ಅವ್ಯವಹಾರ ಆಗ್ತಿದೆ ಎನ್ನುವುದಕ್ಕೆ ನೂರಾರು ನಿದರ್ಶನಗಳಿವೆ. ಕ್ವಾರಂಟೈನ್ ಕೇಂದ್ರದಲ್ಲಿ ಇರುವ ಜನರಿಗೆ ಇಂತಿಷ್ಟು ಎಂದು ದರ ನಿಗದಿ ಮಾಡಲಾಗಿರುತ್ತದೆ. ಆದರೆ, ಕ್ವಾರಂಟೈನ್ ಕೇಂದ್ರದಲ್ಲಿ ಬೆಳಗ್ಗೆ ಒಂದು ತಿಂಡಿ, ಮಧ್ಯಾಹ್ನ ಅನ್ನ ಸಾಂಬಾರ್, ರಾತ್ರಿ ಅನ್ನ ಸಾಂಬಾರ್ ಮಾತ್ರ ಕೊಡಲಾಗ್ತಿದೆ. ಅದಕ್ಕೆ ಬಿಲ್ ಮಾತ್ರ ದುಬಾರಿಯಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಅದೇ ರೀತಿ ಕರೋನಾ ಸೋಂಕು ಬಂದವರನ್ನು ಜಿಲ್ಲಾಸ್ಪತ್ರೆಗಳಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗ್ತಿದೆ. ಇದರ ವೆಚ್ಚ ಓರ್ವ ಮನುಷ್ಯನಿಗೆ 3 ಲಕ್ಷ ರೂಪಾಯಿ ವೆಚ್ಚ ಮಾಡುತ್ತಿದ್ದೇವೆ ಎನ್ನುವ ಬಗ್ಗೆ ಒಂದು ಧ್ವನಿ ಸಂದೇಶ ಹರಿದಾಡಿತ್ತು. ಆ ಬಳಿಕ ಅದು ಸುಳ್ಳು ಎನ್ನಲಾಯ್ತು. ಒಟ್ಟಾರೆ, ಕ್ವಾರಂಟೈನ್ ಕೇಂದ್ರದಲ್ಲಿ ಇದ್ದವರು ಹಾಗೂ ಕರೋನಾ ಸೋಂಕು ಬಂದಿದ್ದ ಜನರಿಗೆ ಯಾವೆಲ್ಲಾ ಸೌಲಭ್ಯ ಕೊಟ್ಟಿದ್ದಾರೆ. ಅದಕ್ಕೆ ಖರ್ಚು ಮಾಡುತ್ತಿರುವ ಸರ್ಕಾರ ಲೆಕ್ಕ ಹೇಗಿದೆ ಎನ್ನುವುದು ಕೆಲವೇ ದಿನಗಳಲ್ಲಿ ಬಹಿರಂಗ ಆಗಲಿದೆ. ಆಗ ಸರ್ಕಾರದ ನಿಜವಾದ ಬಂಡವಾಳ ಬಯಲಾಗುವುದು.