ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡದ ಸರ್ಕಾರದ ಧೋರಣೆಯನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ #ಕನ್ನಡವಿವಿಉಳಿಸಿ ಭಿತ್ತಿಪತ್ರ ಚಳವಳಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಇಂದೂ ಸಹ ಉತ್ಸಾಹದಿಂದ ಪಾಲ್ಗೊಂಡರು. `ಮುಖ್ಯಮಂತ್ರಿಗಳೇ, ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಲು ಹಣವಿಲ್ಲವೇ? ನಾವೇ ಭಿಕ್ಷೆ ಬೇಡಿಯಾದರೂ ವಿವಿ ಉಳಿಸಿಕೊಳ್ಳುತ್ತೇವೆ’ ಎಂದು ಕೋಲಾರ ಪುಟ್ಟ ಬಾಲಕಿಯೊಬ್ಬಳ ವಿಡಿಯೋ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಷ್ಟ್ರಪಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಮಂಸೋರೆ ಹೇಳಿಕೆ ನೀಡಿದ್ದು, ನಾನು ಚಿತ್ರಕಲಾ ಕ್ಷೇತ್ರದಿಂದ ಗುರುತಿಸಿಕೊಂಡವನು. ನಾನು ಪದವಿಗೆ ಸೇರಿದಾಗ ಸುಮಾರು 75 ಚಿತ್ರಕಲಾ ಶಾಲೆಗಳಿದ್ದವು. ಅಲ್ಲಿ ಓದಿದ ಎಲ್ಲಾ ವಿದ್ಯಾರ್ಥಿಗಳಿಗೂ ಎಸ್ ಎಸ್ ಎಲ್ ಸಿ ಬೋರ್ಡಿನಿಂದ ಪ್ರಮಾಣಪತ್ರಗಳನ್ನು ಕೊಡಲಾಗುತ್ತಿದ್ದುದರಿಂದ ಪದವಿ ಮಾನ್ಯತೆ ಒದಗಿರಲಿಲ್ಲ. ಈ ವಿಷಯವಾಗಿ ವಿವಿಧ ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸಿ ಹೋರಾಟ ಮಾಡಿದರೂ ನ್ಯಾಯ ದೊರೆತಿರಲಿಲ್ಲ. ಇಂಥ ಸಮಯದಲ್ಲಿ ಚಿತ್ರಕಲಾ ಶಾಲೆಗಳನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿದ್ದು ಹಂಪಿ ಕನ್ನಡ ವಿಶ್ವವಿದ್ಯಾಲಯ. ದೇಸೀ ಸೊಗಡಿಗೆ ಶ್ರಮಿಸಿದ ವಿಶ್ವವಿದ್ಯಾಲಯ ಆರ್ಥಿಕವಾಗಿ ಸಂಕಷ್ಟದಲ್ಲಿದೆ, ಹೀಗಾಗಿ ಸರ್ಕಾರ ತುರ್ತಾಗಿ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡ ವಿಶ್ವವಿದ್ಯಾಲಯಕ್ಕೆ ಎಂದಿಗೂ ಅನುದಾನಕ್ಕೆ ಕೊರತೆಯಾಗಬಾರದು. ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಭಿತ್ತಿಪತ್ರ ಚಳವಳಿಗೆ ನನ್ನ ಸಂಪೂರ್ಣ ಬೆಂಬಲವಿದೆ, ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರನಟ ಸಂಚಾರಿ ವಿಜಯ್ ಒತ್ತಾಯಿಸಿದರೆ, ಹೆಸರಾಂತ ಚಿತ್ರಗೀತೆಗಳ ರಚನೆಕಾರ ಹೃದಯಶಿವ ತಮ್ಮ ಹೇಳಿಕೆಯಲ್ಲಿ ಸರ್ಕಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಷಯದಲ್ಲಿ ತೋರುತ್ತಿರುವ ಬೇಜವಾಬ್ದಾರಿಯನ್ನು ಖಂಡಿಸಿದ್ಧಾರಲ್ಲದೆ, ಹಂಪಿ ವಿವಿಯನ್ನು ಜಗತ್ತಿನ ಮಾದರಿ ವಿಶ್ವವಿದ್ಯಾಲಯವನ್ನಾಗಿ ರೂಪಿಸುವ ಹೊಣೆ ಸರ್ಕಾರದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.
`ನಿನ್ನೊಡವೆಯೆಂಬುದು ಜ್ಞಾನರತ್ನ’ ಎಂಬ ಶರಣವಾಣಿಯಂತೆ ಕನ್ನಡ ಜ್ಞಾನಭಂಡಾರ ವಿಸ್ತಾರ ಮಾಡುವ ಕಾರ್ಯ ನಡೆಸುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡದೇ ಇರುವುದು ಕನ್ನಡಿಗರಾದ ನಾವು ನಮಗೇ ಮಾಡಿಕೊಳ್ಳುವ ಅವಮಾನ ಎನ್ನುತ್ತಾರೆ ಭಾಲ್ಕಿ ಹಿರೇಮಠದ ಪೂಜ್ಯರಾದ ಡಾ.ಚನ್ನಬಸವ ಪಟ್ಟದೇವರು ಎಂದು ನೊಂದು ನುಡಿದಿದ್ದಾರೆ, ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿಯ ಸಂವರ್ಧನೆಗಾಗಿ ಸರ್ಕಾರವೇ ಹುಟ್ಟುಹಾಕಿದ ವಿಶ್ವವಿದ್ಯಾಲಯಕ್ಕೆ ಇಂದು ಅನುದಾನವಾಗಿ ಹೋರಾಟ ಮಾಡುವ ಪ್ರಸಂಗ ಬಂದಿದ್ದು ನಮ್ಮ ರಾಜ್ಯದ ಸಾಂಸ್ಕೃತಿಕ ಹಿರಿತನಕ್ಕೆ ಶೋಭೆ ತರುವಂಥದ್ದಲ್ಲ. ಈ ದಿಶೆಯಲ್ಲಿ ಸರ್ಕಾರ ಆದಷ್ಟು ಬೇಗನೇ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಳ್ಳಾರಿಯ ಸಂಡೂರಿನ ವಿರಕ್ತಮಠದ ಶ್ರೀ ಮ.ನಿ.ಪ್ರ. ಪ್ರಭುಮಹಾಸ್ವಾಮಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಕನ್ನಡನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಬಿತ್ತಲು ಹುಟ್ಟಿಕೊಂಡಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನದ ಕೊರತೆ ಕಾಡುತ್ತಿರುವುದು ನಾವೆಲ್ಲಾ ತಲೆತಗ್ಗಿಸುವ ವಿಚಾರ. ಸರ್ಕಾರ ನಿಗಮ ಮಂಡಳಿಗಳಿಗೆ 500-600 ಕೋಟಿ ಹಣ ಕೊಡುತ್ತಿದೆ. ಮಠ ಮಾನ್ಯಗಳಿಗೆ ಬೊಗಸೆ ತುಂಬಾ ಹಣ ಕೊಡುತ್ತಿದೆ. ಕನ್ನಡಿಗರ ಅಸ್ಮಿತೆ ಕಾಪಾಡುವ ವಿಶ್ವವಿದ್ಯಾಲಯಕ್ಕೆ ಅನುದಾನ ಕೊಡದಿದ್ದರೆ ಹೇಗೆ? ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಕನ್ನಡಿಗರ ಮಾನ ಕಾಪಾಡಬೇಕು. ಮಾನ್ಯ ಎಂ.ಪಿ.ಪ್ರಕಾಶ್ ಹಾಗೂ ಚಂದ್ರಶೇಖರ್ ಕಂಬಾರ ಅವರು ಬಹಳ ಮಹತ್ವಾಕಾಂಕ್ಷೆಯಿಂದ ಕಟ್ಟಿದ ಕನ್ನಡ ವಿಶ್ವವಿದ್ಯಾಲಯ ಉಳಿಸಿಕೊಳ್ಳಲು ಕನ್ನಡಿಗರು ಹೋರಾಟಕ್ಕಿಳಿಯುವ ಮುನ್ನ ಸರ್ಕಾರ ಅನುದಾನ ಬಿಡುಗಡೆ ಮಾಡಲಿ. ಕರ್ನಾಟಕ ರಕ್ಷಣಾ ವೇದಿಕೆಯ ಈ ಅಭಿಯಾನಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ನಿಷ್ಠಿ ರುದ್ರಪ್ಪ, ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡದಿರುವ ಸರ್ಕಾರದ ಕ್ರಮ ಖಂಡನೀಯ. ಅನವಶ್ಯಕ ಜಾತಿ ನಿಗಮ ಮಂಡಳಿಗಳಿಗೆ ಹಣಹೂಡುವ ಸರ್ಕಾರಕ್ಕೆ ಕನ್ನಡ ಭಾಷೆ ಸಂಸ್ಕೃತಿಯ ಬಗ್ಗೆ ಕನಿಷ್ಟ ಕಾಳಜಿ ಇಲ್ಲದಿರುವುದು ಖೇದನೀಯ. ಅನುದಾನವಿಲ್ಲದೆ ಮತ್ತು ಅವಶ್ಯಕ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿ ಇಲ್ಲದೇ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಸೊರಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಕೆ.ಆರ್.ಪ್ರಗತ್, ಇವತ್ತಿನ ದಿನದಲ್ಲಿ ಕನ್ನಡ ಭಾಷೆಗೆ ಕರ್ನಾಟಕದಲ್ಲೇ ಕಾಡಿ, ಬೇಡಿ, ಪ್ರತಿಭಟಿಸಿ ಅನುದಾನ ಪಡೆಯಬೇಕಾದ ಹೀನಾಯ ಸ್ಥಿತಿಗೆ ಸರ್ಕಾರ ಭಾಷೆಯನ್ನು ತಂದು ನಿಲ್ಲಿಸಿದೆ. ಈ ಹಿಂದೆಯೂ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಹಠಕ್ಕೆ ಬಿದ್ದ ಸರ್ಕಾರ ಕೊನೆಗೂ ಹಣ ಬಿಡುಗಡೆ ಮಾಡದೇ ಸಾಹಿತ್ಯಾಸಕ್ತರೇ ಹಣ ಹಾಕಿ ಸಮ್ಮೇಳನ ಮಾಡುವ ದುರ್ಗತಿಗೆ ಕನ್ನಡ ಭಾಷೆ ಬಂದು ನಿಂತದ್ದು ಕನ್ನಡಿಗರ ದೌರ್ಭಾಗ್ಯವಲ್ಲದೇ ಇನ್ನೇನು.? ಈಗ ಇದೇ ಹಠವನ್ನು ಹಂಪಿ ಕನ್ನಡ ವಿವಿಗೆ ಮಾಡುತ್ತಿರುವುದು ಮಾತ್ರ ಇದು ಕನ್ನಡ ನೆಲ ಹೌದೋ ಅಲ್ಲವೋ ಎಂಬಷ್ಟು ಅನುಮಾನ ಮೂಡುತ್ತಿದೆ. ಸ್ಕಾಲರ್ಶಿಪ್-ಫೆಲೋಶಿಪ್ ಗಳನ್ನೇ ನಂಬಿದ ಬಡ ವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಸರ್ಕಾರವೇ ಕಸಿಯುತ್ತಿರುವುದು ಅಕ್ಷರಶಃ ಖಂಡನಾರ್ಹ. ಸರ್ಕಾರ ಈ ಕೂಡಲೇ ಕನ್ನಡ ವಿವಿಗೆ ತಡೆಹಿಡಿದ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕರವೇ ನಡೆಸುತ್ತಿರುವ #ಕನ್ನಡವಿವಿಉಳಿಸಿ ಅಭಿಯಾನವನ್ನು ಬೆಂಬಲಿಸಿರುವ ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘ, ಹಂಪಿಯಲ್ಲಿರುವ ಕನ್ನಡ ವಿವಿಯು ಕನ್ನಡ ಭಾಷೆಗೆ ತೊಡಿಸಿದ ಕಿರೀಟ. ವಿವಿ ಸ್ಥಾಪನೆಯ ಹಿಂದೆ ಕನ್ನಡ ಸಾಹಿತಿಗಳ ಮತ್ತು ಕನ್ನಡಪರ ಹೋರಾಟಗಾರರ ಪರಿಶ್ರಮವಿದೆ. ಕನ್ನಡವಿವಿಯನ್ನು ವಿಜಯನಗರ ಸಾಮ್ರಾಜ್ಯದ ಪರಿಸರದ ಹಂಪಿಯಲ್ಲೇ ಸ್ಥಾಪಿಸಬೇಕೆಂಬ ಪರಿಕಲ್ಪನೆಯನ್ನು ಚಿಂತಿಸಿದವರು ಖ್ಯಾತ ಸಂಶೋಧಕರಾದ ಡಾ.ಎಂ.ಚಿದಾನಂದಮೂರ್ತಿಯವರು. ಹಿಂದಿನ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪನವರ ಪ್ರೋತ್ಸಾಹದಿಂದ ಸ್ಥಾಪಿಸಲ್ಪಟ್ಟ ಈ ವಿವಿಯನ್ನು ನಿಷ್ಕ್ರಿಯಗೊಳಿಸುವ ಕರ್ನಾಟಕ ಸರ್ಕಾರದ ನಿಲುವನ್ನು ಖಂಡಿಸುವುದಾಗಿ ತಿಳಿಸಿದೆ. ಈ ಕುರಿತು ಸಂಘದ ಅಧ್ಯಕ್ಷ ರಫಾಯಲ್ ರಾಜ್ ಹೇಳಿಕೆ ನೀಡಿದ್ದು, ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.