ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಸರ್ಕಾರದ ಕೃಷಿ ಕಾರ್ಪೊರೇಟೀಕರಣದ ತಾಳಕ್ಕೆ ತಕ್ಕಂತೆ ಕರ್ನಾಟಕ ಸರ್ಕಾರ ಕುಣಿಯಲು ಅಣಿಯಾಗಿದೆ. ಆ ಮೂಲಕ ಇಡೀ ದೇಶಕ್ಕೇ ಮಾದರಿಯಾದ ದುರ್ಬಲ ಜಾತಿ- ವರ್ಗಗಳಿಗೆ ಸ್ವಾಭಿಮಾನದ ಬದುಕು ಕೊಟ್ಟ ಐತಿಹಾಸಿಕ ‘ಉಳುವವನೆ ಹೊಲದೊಡೆಯ’ ಎಂಬ ಘೋಷಣೆಯ ಭೂ ಸುಧಾರಣಾ ಕಾನೂನಿಗೆ ಎಳ್ಳು ನೀರು ಬಿಟ್ಟು, ‘ಉಳ್ಳವರೇ ನೆಲದೊಡೆಯರು’ ಎಂಬ ಹೊಸ ಘೋಷಣೆಗೆ ಬಿಜೆಪಿ ಸರ್ಕಾರ ಚಾಲನೆ ನೀಡಿದೆ.
Also Read: ಪರಿಸರ ಮಾರಕ ನಿರ್ಧಾರ ಕೈಗೊಳ್ಳುವುದಾದರೆ ವನ್ಯಜೀವಿ ಮಂಡಳಿ ಅಗತ್ಯವೇನು?
ಪ್ರಮುಖವಾಗಿ ಈವರೆಗೆ ಕೃಷಿಕರಲ್ಲದವರು ಕೃಷಿ ಜಮೀನು ಖರೀದಿಸಲು ಇದ್ದ ನಿಷೇಧವನ್ನು ರದ್ದು ಮಾಡಲು ಮತ್ತು ಭೂಮಿಯ ಮಾಲೀಕತ್ವದ ಮೇಲೆ ಇದ್ದ ಪ್ರಮಾಣ ಮಿತಿಯನ್ನು ಮತ್ತು ಆದಾಯ ಮಿತಿಯನ್ನು ರದ್ದು ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದ್ದು, ಆ ಮೂಲಕ ಕೃಷಿ ಭೂಮಿಯನ್ನು ಹಣಬಲವಿರುವ ರಿಯಲ್ ಎಸ್ಟೇಟ್ ಕುಳಗಳು, ಕಾರ್ಪೊರೇಟ್ ಉದ್ಯಮಿಗಳು ಮತ್ತು ಬಲಾಢ್ಯ ಉದ್ಯಮಿಗಳು ಮನಸೋ ಇಚ್ಚೇ ಖರೀದಿ ಮಾಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಪ್ರಮುಖವಾಗಿ ಈ ಮುಕ್ತತೆ ಸಣ್ಣ ಮತ್ತು ಮಧ್ಯಮ ಭೂ ಹಿಡುವಳಿದಾರರ ಪಾಲಿಗೆ ಮರಣಶಾಸನವಾಗಲಿದ್ದು, ಬಲಾಢ್ಯರು ತಮ್ಮ ಹಣ ಬಲ ಮತ್ತು ತೋಳ್ಬಲದ ಮೇಲೆ ಕಣ್ಣಿಟ್ಟ ಭೂಮಿಯನ್ನು ಲಪಟಾಯಿಸಲು ಕಾನೂನು ಬಲ ಸಿಕ್ಕಂತಾಗಿದೆ.
Also Read: ಲಾಕ್ ಡೌನ್ ಪತನದಿಂದ ಕೃಷಿ- ಗ್ರಾಮೀಣ ಆರ್ಥಿಕತೆ ಪಾರು ಹೇಗೆ?
ಈ ರೈತ ವಿರೋಧಿ ಮತ್ತು ಸಾಮಾಜಿಕ ನ್ಯಾಯ ವಿರೋಧಿ ತಿದ್ದುಪಡಿಯನ್ನು ಸಮರ್ಥಿಸಿಕೊಂಡು ಸಚಿವರಾದ ಆರ್ ಅಶೋಕ್ ಮತ್ತು ಜೆ ಮಾಧುಸ್ವಾಮಿ ಅವರು, “ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಯಾವ ರಾಜ್ಯದಲ್ಲೂ ಕೃಷಿಕರಲ್ಲದವರು ಕೃಷಿ ಭೂಮಿ ಖರೀಸಲು ಮತ್ತು ಆದಾಯ ಮಿತಿ ಹಾಗೂ ಭೂ ಪ್ರಮಾಣ ಮಿತಿಗಳ ನಿರ್ಬಂಧವಿಲ್ಲ. ಕರ್ನಾಟಕದಲ್ಲಿ ಮಾತ್ರ ಇರುವ ಇಂಥ ಮಿತಿಯಿಂದಾಗಿ ರಾಜ್ಯದ ಭೂಮಿಯ ಮೇಲಿನ ಹೂಡಿಕೆಗೆ ತೊಂದರೆಯಾಗಿದೆ. ಅಲ್ಲದೆ ನ್ಯಾಯಾಲಯ ಕೂಡ ಇಂತಹ ತೊಂದರೆ ತಪ್ಪಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಇದೀಗ ಅಂತಹ ಮಿತಿಗಳನ್ನು ತೆಗೆದುಹಾಕಿ ಯಾರು ಬೇಕಾದರೂ, ಎಷ್ಟು ಬೇಕಾದರೂ ಭೂಮಿ ಖರೀದಿಸಲು ಅವಕಾಶ ಮಾಡಿಕೊಡಲು ತೀರ್ಮಾನಿಸಿದ್ದೇವೆ” ಎಂದಿದ್ದಾರೆ.

ಅಂದರೆ; ಸಚಿವರ ಮಾತುಗಳಲ್ಲೇ ಸ್ಪಷ್ಟವಾಗಿರುವ ಸಂಗತಿಯೆಂದರೆ; ಭೂರಹಿತ ಸಾಗುವಳಿದಾರರು ಭೂ ಮಾಲೀಕರಿಂದ ಶೋಷಣೆಗೊಳಗಾಗುವ ಗೇಣಿ ಪದ್ಧತಿಗೆ ಇತಿಶ್ರೀ ಹಾಡಿದ ಮತ್ತು ಆ ಮೂಲಕ ದುಡಿಯುವ ಜನರಿಗೆ ಭೂಮಿಯ ಹಕ್ಕು ನೀಡಿದ ಕ್ರಾಂತಿಕಾರಕ ಭೂ ಸುಧಾರಣೆಯ ಕಾಯ್ದೆಯ ಆಶಯಕ್ಕೆ ತದ್ವಿರುದ್ಧವಾಗಿ, ಮತ್ತೆ ಸ್ವತಃ ಭೂಮಿಯಲ್ಲಿ ದುಡಿಯುವ ಜನರಿಂದ ಭೂಮಿಯನ್ನು ಕಿತ್ತುಕೊಂಡು ಬೆವರು ಸುರಿಸಿ ದುಡಿಯದ ಶ್ರೀಮಂತರಿಗೆ ಭೂಮಿಯ ಮಾಲೀಕತ್ವವನ್ನು ಕೊಡುವುದು ಈ ಸರ್ಕಾರದ ಉದ್ದೇಶ.
Also Read: ವನ್ಯಜೀವಿ ಮಂಡಳಿ ಇರುವುದು ನಿಜಕ್ಕೂ ಯಾರ ಹಿತ ಕಾಯಲು?
ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಎನ್ನುವುದಕ್ಕಿಂತ ಬಹುತೇಕ ಆ ಕಾಯ್ದೆಯ ರದ್ದತಿ ಅಥವಾ ನಿಷೇಧ ಎಂದೇ ಕರೆಯಬಹುದಾದ ಸ್ವರೂಪದಲ್ಲಿ ಮೂಲ ಕಾಯ್ದೆಯ ಆಶಯಕ್ಕೆ ಸಂಪೂರ್ಣವಾಗಿ ತದ್ವಿರುದ್ಧವಾದ ತಿದ್ದುಪಡಿ ಇದು. ಹಾಗಾಗಿ ಸರ್ಕಾರ ತಿದ್ದುಪಡಿ ಎಂದು ಹೇಳುತ್ತಿದ್ದರೂ ವಾಸ್ತವವಾಗಿ ಇದು ದೇವರಾಜ ಅರಸು ಅವರಂಥ ಸಮಾಜವಾದಿ ನಾಯಕ ಮತ್ತು ಅವರ ಜೊತೆ ಕೈಜೋಡಿಸಿದ್ದ ಮಲೆನಾಡಿನ ಕಾಗೋಡು ಚಳವಳಿಯ ಹೋರಾಟಗಾರರು ಮತ್ತು ಅವರ ಶಿಷ್ಯಪಡೆಯ ಕಾಳಜಿ ಮತ್ತು ಆಶಯದ ಮೇಲೆ ಜಾರಿಗೆ ಬಂದಿದ್ದ ಮತ್ತು ಆ ಕಾರಣಕ್ಕೆ ಇಡೀ ದೇಶದಲ್ಲಿ ಒಂದು ಮಾದರಿ ಕಾಯ್ದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಭೂ ಸುಧಾರಣಾ ಕಾಯ್ದೆಯನ್ನು ಕಸದ ಬುಟ್ಟಿಗೆ ಎಸೆಯಲು ಬಿಜೆಪಿ ಸರ್ಕಾರ ಸಜ್ಜಾಗಿದೆ.

ಆ ಹಿನ್ನೆಲೆಯಲ್ಲಿ ಬಹುತೇಕ ರೈತ ಮುಖಂಡರು, ಸಾಮಾಜಿಕ ಚಿಂತಕರು ಸರ್ಕಾರದ ಈ ಪ್ರಯತ್ನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಡಿದಾಳು ಶಾಮಣ್ಣ, ಬಾಬಾಗೌಡ ಪಾಟೀಲ, ನಿವೃತ್ತ ಅಧಿಕಾರಿ ವಿ ಬಾಲಸುಬ್ರಮಣಿಯನ್, ರೈತ ಮುಖಂಡ ಜಿ ಸಿ ಬಯ್ಯಾರೆಡ್ಡಿ ಸೇರಿದಂತೆ ಹಲವರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಬಯ್ಯಾರೆಡ್ಡಿಯವರು ರಾಜ್ಯಾದ್ಯಂತ ಈ ತಿದ್ದುಪಡಿ ವಿರೋಧಿಸಿ ರೈತ ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಆದರೆ, ನಿರೀಕ್ಷೆಯಂತೆ ಉದ್ಯಮಿಗಳು ಮತ್ತು ಕಾರ್ಪೊರೇಟ್ ವಲಯದ ಪ್ರತಿನಿಧಿಗಳು ಈ ಕಾಯ್ದೆಯನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದು, ಇದು ರೈತರಿಗೂ ಮತ್ತು ಉದ್ಯಮಿಗಳಿಗೂ ಅನುಕೂಲಕರ ತಿದ್ದುಪಡಿ ಎಂದು ಬಣ್ಣಿಸಿದೆ.
Also Read: ಉಳ್ಳವರ ‘ವಂದೇ ಭಾರತ್’ ವರ್ಸಸ್ ನತದೃಷ್ಟರ ಅಸಲೀ ಭಾರತದ ಗೋಳು!
ಇದೆಲ್ಲಾ ಸದ್ಯದ ಮೇಲ್ನೋಟದ ಕ್ರಿಯೆ- ಪ್ರತಿಕ್ರಿಯೆಗಳು. ಬಿಜೆಪಿ ಸರ್ಕಾರದ ಇಂತಹ ತಿದ್ದುಪಡಿಗಳ ಹಿಂದೆ ನಿಜಕ್ಕೂ ಯಾರಿದ್ಧಾರೆ ಮತ್ತು ಯಾರ ಹಿತಾಸಕ್ತಿ ಇದೆ ಎಂಬುದನ್ನು ಅರಿಯಲು ಆ ಪಕ್ಷದ ತತ್ವ ಸಿದ್ಧಾಂತ ಮತ್ತು ಅದರ ಕಟ್ಟಾ ಬೆಂಬಲಿಗರ ವರ್ಗದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತ್ಯಂತರ ಬಗ್ಗೆ ಒಂದಿಷ್ಟು ಗಮನ ಹರಿಸುವುದು ಅಗತ್ಯ.
ವಾಸ್ತವವಾಗಿ ಬಿಜೆಪಿ ಮೂಲ ನೆಲೆ ವ್ಯಾಪಾರಿಗಳು ಮತ್ತು ಉದ್ಯಮಿಗಳು. ಅಂದರೆ; ಸಾಮಾಜಿಕವಾಗಿಯೂ ಮೇಲ್ಜಾತಿ ಮತ್ತು ಮೇಲ್ವರ್ಗ. ಈಗ ಕಳೆದ ಇಪ್ಪತ್ತು ವರ್ಷಗಳಲ್ಲಿ ಆ ಪಕ್ಷ ದೇಶದೆಲ್ಲೆಡೆಯಂತೆ ರಾಜ್ಯದಲ್ಲಿಯೂ ಪಂಚಾಯ್ತಿರಾಜ್ ಕಾಯ್ದೆ ಮತ್ತು ರಾಜಕೀಯ ಮೀಸಲಾತಿಗಳ ಕಾರಣದಿಂದಾಗಿ ಅನಿವಾರ್ಯವಾಗಿ ಇತರೆ ಜನಸಮುದಾಯಗಳನ್ನು, ದುರ್ಬಲ ವರ್ಗಗಳನ್ನು ಒಳಗೊಂಡಿದ್ದರೂ ಈಗಲೂ ಅದರ ಮೂಲ ತತ್ವ- ಸಿದ್ಧಾಂತಗಳಲ್ಲಿ ಅದರ ಮೂಲ ನೆಲೆಯ ವರ್ಗ ಮತ್ತು ಸಮುದಾಯಗಳ ಹಿತವೇ ಪ್ರಧಾನ ಆಶಯ ಎಂಬುದನ್ನು ಅದರ ಚುನಾವಣಾ ಪ್ರಣಾಳಿಕೆಯಿಂದ ಹಿಡಿದು ಹಿಂದುತ್ವದ ಅಜೆಂಡಾದವರೆಗೆ ಎಲ್ಲದರಲ್ಲಿಯೂ ಢಾಳಾಗಿ ರಾಚುವ ಸಂಗತಿ.
Also Read: ಪ್ರಭಾವಿ ಲಾಬಿಯ ಮುಂದೆ ಮಂಡಿಯೂರಿದರೆ ಪರಿಸರ ತಜ್ಞರು?
ಆದರೆ, ಕಾಗೋಡು ರೈತ ಚಳವಳಿ ಮತ್ತು ಶಾಂತವೇರಿ ಗೋಪಾಲಗೌಡರ ನೇತೃತ್ವದ ಸಮಾಜವಾದಿ ರಾಜಕಾರಣದ ಪರಿಣಾಮವಾಗಿ ಕಳೆದ ಶತಮಾನದ 60 ಮತ್ತು 70ರ ದಶಕದಲ್ಲಿ ಕರ್ನಾಟಕ ಕ್ರಾಂತಿಕಾರಕ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳಿಗೆ ತೆರೆದುಕೊಂಡಿತು. ಆ ಸುಧಾರಣೆಗಳು ಕೃಷಿಯಲ್ಲೂ ಮಹತ್ವದ ಬದಲಾವಣೆ ತಂದವು. ಅಂತಹ ಒಂದು ಬದಲಾವಣೆಯೇ ಉಳುವವನೇ ಹೊಲದೊಡೆಯ ಎಂಬ ಘೋಷಣೆಯ ರೂಪದಲ್ಲಿ ಜಾರಿಗೆ ಬಂದ ಭೂ ಸುಧಾರಣಾ ಕಾನೂನು. ಆವರೆಗೆ ಭೂಮಿಯ ಒಡೆತನ ಒಬ್ಬನ ಕೈಯಲ್ಲಿ, ವಾಸ್ತವವಾಗಿ ಅದನ್ನು ಉತ್ತಿಬಿತ್ತುವವನು ಮತ್ತೊಬ್ಬ. ಉಳುವವನಿಗೆ ಭೂಮಿಯ ಒಡೆತನವಿಲ್ಲ. ಆತನ ಬೆವರಿಗೆ ತಕ್ಕ ಪ್ರತಿಫಲವಿಲ್ಲ. ಆತನ ಬೆಳೆದದ್ದರಲ್ಲಿ ಸಿಂಹಪಾಲು ಭೂಮಿಗೆ ಇಳಿಯದ ಮಾಲೀಕನ ಪಾಲಿಗೆ ಎಂಬ ಸ್ಥಿತಿ ಇತ್ತು. ಆದರೆ, ಭೂ ಸುಧಾರಣೆ ಕಾಯ್ದೆ ಜಾರಿಯ ಬಳಿಕ ಚಿತ್ರಣ ಬದಲಾಯಿತು. ಸಾವಿರಾರು ಎಕರೆ ಜಮೀನು ಮಾಲೀಕನಾಗಿ ಮನೆಯ ಜಗಲಿಯ ಮೇಲೆ ಊಳಿಗಮಾನ್ಯದ ದರ್ಪ ಮೆರೆಯುತ್ತಿದ್ದವರ ಕೈಯಿಂದ ನಿಜವಾಗಿಯೂ ಹೊಲದಲ್ಲಿ ಹಗಲಿರುವ ದುಡಿಯುವ ದುರ್ಬಲ ವರ್ಗ- ಸಮುದಾಯದ ಅಮಾಯಕರ ಕೈಗೆ ಭೂ ಮಾಲೀಕತ್ವ ಹಸ್ತಾಂತರವಾಯಿತು (ಕೆಲಮಟ್ಟಿಗಾದರೂ!).

ಹಾಗಾಗಿ ಸ್ಥಾಪಿತ ಹಿತಾಸಕ್ತಿಯ ಮೇಲ್ಜಾತಿ ಮತ್ತು ವರ್ಗದವರು ತಮ್ಮ ಪರಂಪರಾಗತ ಭೂ ಮಾಲೀಕತ್ವ ಕಳೆದುಕೊಂಡರು. ಪರಂಪರಾಗತವಾಗಿ ಉತ್ತಿಬಿತ್ತಿದವರು ಭೂಮಿಯ ಹಕ್ಕು ಪಡೆದರು. ದೇವರಾಜ ಅರಸು ಅವರ ಸಾಮಾಜಿಕ ಕಾಳಜಿ ಮತ್ತು ಬದ್ಧತೆ ಮತ್ತು ಅಂತಹ ನಿರ್ಧಾರಗಳಿಗೆ ಬೆಂಬಲವಾಗಿ ನಿಂತಿದ್ದ ಅಂದಿನ ಇಂದಿರಾಗಾಂಧಿ ನೇತೃತ್ವದ ಕೇಂದ್ರ ಸರ್ಕಾರದ ಬೆಂಬಲದ ಹಿನ್ನೆಲೆಯಲ್ಲಿ ಮತ್ತು ಮುಖ್ಯವಾಗಿ ಅಂದು ವ್ಯಾಪಕವಾಗಿದ್ದ ಸಮಾಜವಾದಿ ಚಿಂತನೆ ಪ್ರಭಾವದ ಹಿನ್ನೆಲೆಯಲ್ಲಿ ಅಂತಹ ಕ್ರಾಂತಿಕಾರಕ ಕ್ರಮಗಳು ಪರಿಣಾಮಕಾರಿಯಾಗಿ ಜಾರಿಗೂ ಬಂದವು. ಈ ನಡುವೆ ಇಂತಹ ಕಾಯ್ದೆಯ ಬಗ್ಗೆ ವಿರೋಧವಿದ್ದರೂ ಕೆಲವು ಭೂಮಾಲೀಕ ಜಾತಿ-ವರ್ಗಗಳ ದನಿಗೆ ಆಗ ಸಾಮಾಜಿಕ ಮನ್ನಣೆಯಾಗಲೀ, ರಾಜಕೀಯ ಬೆಂಬಲವಾಗಲೀ ಸಿಗಲಿಲ್ಲ.
Also Read: ಸರ್ಕಾರ ಕೃಷಿ ವಲಯ ಬಲಪಡಿಸಿದರೆ ಮಾತ್ರ ದೇಶ ಸದೃಢಗೊಳ್ಳಬಹುದು
ಆದರೆ, ಐದಾರು ದಶಕದ ಹಿಂದೆ ಭೂಸುಧಾರಣೆ ಕಾಯ್ದೆಯ ಪರಿಣಾಮವಾಗಿ ಭೂಮಿ ಕಳೆದುಕೊಂಡು ಜಾತಿ- ವರ್ಗಗಳಲ್ಲಿ; ಕಳೆದ ಒಂದು ದಶಕದಿಂದ ಐಟಿ-ಬಿಟಿ ಮತ್ತು ಸೇವಾ ವಲಯದಲ್ಲಿ ಭಾರತದಲ್ಲಾದ ಕ್ರಾಂತಿಕಾರಕ ಸುಧಾರಣೆಗಳ ಫಲವಾಗಿ, ಮತ್ತೆ ಆರ್ಥಿಕ ಬಲ ವೃದ್ಧಿಯಾಯಿತು. ಜೊತೆಗೆ ತೆರಿಗೆ, ಭೂಮಿಯ ಮೌಲ್ಯ ಮತ್ತಿತರ ಕಾರಣಕ್ಕೆ ಮತ್ತೆ ಭೂ ಮಾಲೀಕತ್ವ ಪಡೆಯುವ ಲೆಕ್ಕಾಚಾರಗಳು ಚಿಗುರಿದ್ದವು. ಅದೇ ಹೊತ್ತಿಗೆ ಕರ್ನಾಟಕದಲ್ಲಿ ಆ ವರ್ಗಗಳ ಹಿತಾಸಕ್ತಿಯನ್ನೇ ಅಜೆಂಡಾವಾಗಿ ಹೊಂದಿರುವ ಬಿಜೆಪಿ ಕೂಡ ಪ್ರವರ್ಧಮಾನಕ್ಕೆ ಬಂದಿತ್ತು.
ಇದೀಗ ಭೂ ಸುಧಾರಣೆ ಕಾಯ್ದೆಯಿಂದ ಕೃಷಿ ಮತ್ತು ಹಳ್ಳಿ ತೊರೆದು ನಗರ ಸೇರಿ ಹಣ ಮಾಡಿಕೊಂಡು ಶ್ರೀಮಂತ ಉದ್ಯಮಿಗಳು, ಕಾರ್ಪೊರೇಟ್ ಧಣಿಗಳಾಗಿರುವ ಮಂದಿಗೆ ಅನುಕೂಲಕರವಾಗಿ ಬಿಜೆಪಿ ಸರ್ಕಾರ ಮತ್ತೆ ಭೂ ಮಾಲೀಕರಾಗುವ ಅವಕಾಶ ಒದಗಿಸಿಕೊಟ್ಟಿದೆ. ಸಚಿವ ಮಾಧುಸ್ವಾಮಿ ಅವರು “ಐಟಿ-ಬಿಟಿ ಉದ್ಯಮಿಗಳು ಕೃಷಿಯಲ್ಲಿ ಹೂಡಿಕೆ ಮಾಡಲು ಇದು ಅನುಕೂಲಕಾರಿ ಕ್ರಮ” ಎಂದು ತಿದ್ದುಪಡಿ ಸಮರ್ಥಿಸಿ ಹೇಳಿಕೆ ನೀಡಿರುವುದರ ಹಿಂದಿನ ಮರ್ಮ ಇದು!
Also Read: ರೈತರ ಸಮಾವೇಶದಲ್ಲೇ ರೈತರ ಧ್ವನಿ ಅಡಗಿಸಿದ ಸರ್ಕಾರ
ಹಾಗೆ ನೋಡಿದರೆ, ಹೀಗೆ ದೇಶದ ಕೃಷಿಯನ್ನು ಬಡ ಮತ್ತು ಮಧ್ಯಮ ವರ್ಗದ ರೈತರ ಕೈಯಿಂದ ಕಿತ್ತು ಬಹುಕೋಟಿ ಬಂಡವಾಳಿಗರ ಕೈಗೆ ಇಡುವ ಮೂಲಕ ದೇಶದ ಭೂಮಿಯ ಒಡೆತನವನ್ನು ಮತ್ತೆ ಕೆಲವೇ ಮಂದಿ ಬಲಾಢ್ಯರ, ಪ್ರಭಾವಿಗಳ ಉಂಬಳಿಯಾಗಿ ಬದಲಾಯಿಸುವ ಬಿಜೆಪಿಯ ಈ ನಡೆ ಹೊಸತೇನಲ್ಲ. ಕೃಷಿ ಕಾರ್ಪೊರೇಟೀಕರಣ ಎಂಬುದು ಬಿಜೆಪಿಯ ಹಿಂದುತ್ವದ ಅಜೆಂಡಾದಷ್ಟೇ ಪ್ರಮುಖವಾಗಿರುವ ಒಂದು ಪ್ರಬಲ ಅಜೆಂಡಾ. ಆದರೆ, ವ್ಯತ್ಯಾಸವೇನೆಂದರೆ; ಹಿಂದುತ್ವದ ಬಗ್ಗೆ ಹೆಚ್ಚು ಬಹಿರಂಗವಾಗಿ ಸಾರ್ವಜನಿಕವಾಗಿ ಮಾತನಾಡಲಾಗುತ್ತದೆ; ಕೃಷಿ ಕಾರ್ಪೊರೇಟೀಕರಣದ ಬಗ್ಗೆ ಹಿಡನ್ ಅಜೆಂಡಾದಂತೆ ನಾಜೂಕಾಗಿ ಕೆಲಸ ಮಾಡಲಾಗುತ್ತಿದೆ.

ಹೊಸ ಬೀಜ ನೀತಿ, ಹೊಸ ಕೃಷಿ ನೀತಿ, ಕಾರ್ಪೊರೇಟ್ ಕೃಷಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕೃಷಿ ಬೆಂಬಲ ಬೆಲೆ ಯೋಜನೆ, ಬೆಳೆ ವಿಮೆ ಮುಂತಾದ ಬಿಜೆಪಿ ಸರ್ಕಾರದ ಯೋಜನೆ ಮತ್ತು ಪ್ರಸ್ತಾಪಗಳೆಲ್ಲದರ ಆಳದಲ್ಲಿ ಇರುವುದು ಇದೇ ಅಜೆಂಡಾ. ಕೃಷಿಯನ್ನು ಮತ್ತು ದೇಶದ ಭೂಮಿಯ ಒಡೆತನವನ್ನು ನೈಜ ಉಳುವವನಿಂದ ಕಿತ್ತು ಉಳ್ಳವರ ಕೈಗೆ ಇಡುವುದೇ ಆ ಅಜೆಂಡಾ. ಮೋದಿ ಸರ್ಕಾರದ ಆರು ವರ್ಷಗಳ ಅವಧಿಯಲ್ಲಿ ಕೃಷಿ ಸಾಲ, ಬೆಳೆ ವಿಮೆ, ರೈತ ಸಾಲ ಮನ್ನಾ, ನರೇಗಾ ಯೋಜನೆ ಅನುದಾನ ಹಂಚಿಕೆ ಸೇರಿದಂತೆ ಕೃಷಿ ಮತ್ತು ಕೃಷಿ ಅವಲಂಬಿತ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲಾ ವಿಷಯದಲ್ಲಿಯೂ ನಿರ್ಲಕ್ಷ್ಯ, ಇಲ್ಲವೇ ಕೃಷಿ ವಿರೋಧಿ ನೀತಿ-ನಿಲುವುಗಳ ಹಿಂದೆ ಇರುವುದು ಕೂಡ ಕೃಷಿಯನ್ನು ಕಾರ್ಪೊರೇಟೀಕರಣಗೊಳಿಸುವ ಇದೇ ಅಜೆಂಡಾವೇ.
ಹಾಗಾಗಿ, ಅರ್ಧ ದಶಕದ ಹಿಂದೆ ಕರ್ನಾಟಕದ ಆರ್ಥಿಕ ಮತ್ತು ಸಾಮಾಜಿಕ ಚಿತ್ರಣವನ್ನೇ ಬದಲಿಸಿದ ‘ಉಳುವವನೆ ಹೊಲದೊಡೆಯ’ ಎಂಬ ಸಮಾಜವಾದಿ ಚಿಂತನೆಯ ಭೂ ಸುಧಾರಣೆಯ ಕಾಯ್ದೆಯನ್ನು ‘ಉಳ್ಳವನೇ ಭೂ ಒಡೆಯ’ ಎಂಬ ಕಾರ್ಪೊರೇಟ್ ಚಿಂತನೆಗೆ ಬದಲಾಯಿಸಿದ ರಾಜ್ಯ ಬಿಜೆಪಿ ಸರ್ಕಾರದ ನಿರ್ಧಾರ ಆಕಸ್ಮಿಕವೂ ಅಲ್ಲ; ಆತುರದ ಕ್ರಮವೂ ಅಲ್ಲ. ಬದಲಾಗಿ ಇದು ದಶಕಗಳ ಕಾಲದ ಯೋಜಿತ ಹೆಜ್ಜೆ. ಭಾರತೀಯ ಜನತಾ ಪಕ್ಷದ ಸ್ಥಾಪಿತ ಹಿತಾಸಕ್ತಿಯ, ಅಜೆಂಡಾದ ಜಾರಿಯ ದೊಡ್ಡ ಹೆಜ್ಜೆ!
Also Read: ಗಣಿಗಾರಿಕೆಗೆ ಮೂರು ಅಭಯಾರಣ್ಯವನ್ನೇ ಆಹುತಿ ಕೊಟ್ಟ ಸರ್ಕಾರ!