ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಜೂನ್ 12ರ ಸಂಜೆ ಬಿಡುಗಡೆಗೊಳಿಸಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇದುವರೆಗೂ ಶೇಕಡಾ 52.79 ಕರೋನಾ ಸೋಂಕಿತರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಅದೇ ವೇಳೆ ಇಡೀ ದೇಶದಾದ್ಯಂತ ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣ 49.32 ಶೇಕಡಾ ಇದೆ ಎಂದು ಅಂಕಿ ಅಂಶಗಳು ತಿಳಿಸಿದೆ.
ರಾಜ್ಯ ಸರ್ಕಾರ ನೀಡಿರುವ ಅಂಕಿ ಅಂಶದ ಪ್ರಕಾರ ಇದುವರೆಗೂ ರಾಜ್ಯದಲ್ಲಿ 79 ಮಂದಿ ಕರೋನಾ ಸೋಂಕಿತರು ಅಸುನೀಗಿದ್ದಾರೆ. ಇದು ಒಟ್ಟು ಕರೋನಾ ಸೋಂಕಿತರ 1.2 ಶೇಕಡ ಮಾತ್ರ. ಇನ್ನು ದೇಶದಲ್ಲಿ ಈ ಸೋಂಕಿನಿಂದ ಮರಣ ಹೊಂದಿದವರ ಪ್ರಮಾಣ ಶೇಕಡಾ 2.85. ಅಲ್ಲಿಗೆ ಕರೋನಾ ಸೋಂಕು ಮಾರಣಾಂತಿಕ ಅನ್ನುವುದರಲ್ಲಿ ಹುರುಳಿಲ್ಲ ಎಂಬ ತಜ್ಞರ ವಾದಕ್ಕೆ ಪೂರಕವಾಗಿದೆ.
ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 274 ಹೊಸ ಕರೋನಾ ಪ್ರಕರಣಗಳು ಕಂಡು ಬಂದಿವೆ. ಒಟ್ಟು ಪ್ರಕರಣಗಳ ಸಂಖ್ಯೆ 6,516 ತಲುಪಿದೆ. ಇದರಲ್ಲಿ 3,440 ಮಂದಿ ಸೋಂಕಿನಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ, ಇದು ಒಟ್ಟು ದಾಖಲಾದ ಪ್ರಕರಣದ ಅರ್ಧಕ್ಕಿಂತಲೂ ಹೆಚ್ಚು. ರಾಜ್ಯದಲ್ಲಿ ಸದ್ಯ 2,995 ಪ್ರಕರಣಗಳು ಸಕ್ರಿಯವಾಗಿವೆ ಎಂದು ಇಲಾಖೆ ತಿಳಿಸಿದೆ. ದೇಶಾದ್ಯಂತ 9,996 ಹೊಸ ಪ್ರಕರಣಗಳು ಕಂಡು ಬಂದಿದ್ದು, ಒಟ್ಟು ಪ್ರಕರಣ 2 ಲಕ್ಷದ 98 ಸಾವಿರ ದಾಟಿದೆ. ಇಂದು 357 ಮಂದಿ ಅಸು ನೀಗಿದ್ದು 8,498 ಮಂದಿ ಮರಣವನ್ನಪ್ಪಿದ್ದಾರೆ.