ಕಳೆದ 14 ದಿನಗಳಿಂದ ಅನಿಲ ಸೋರಿಕೆಯಾಗುತ್ತಿದ್ದ ತೈಲ ಬಾವಿಯಲ್ಲಿ ಇಂದು ಭಾರೀ ಪ್ರಮಾಣದ ಬೆಂಕಿ ಅವಘಡ ಸಂಭವಿಸಿದೆ. ಭಾರೀ ಬೆಂಕಿಯ ತೀವ್ರತೆಯನ್ನು 30 ಕಿ.ಮೀ ವೀಕ್ಷಿಸಬಹುದು ಎಂದು ಪಿಟಿಐ ವರದಿ ಮಾಡಿದೆ.
ಸೈಖೋವಾ ರಾಷ್ಟ್ರೀಯ ಉದ್ಯಾನವನದ ಸಮೀಪವೇ ಇರುವ ತೈಲ ಬಾವಿ ಶಿಥಿಲಗೊಂಡಿದ್ದು, ಕಳೆದ ಎರಡು ವಾರದಿಂದ ನಿರಂತರ ಅನಿಲ ಸೋರಿಕೆಯಾಗುತ್ತಿತ್ತೆಂದು ವರದಿಯಾಗಿದೆ. ಭೀಕರವಾಗಿ ತನ್ನ ಕೆನ್ನಾಲಿಗೆ ಚಾಚುತ್ತಿರುವ ಬೆಂಕಿ ಭಾರಿ ಸದ್ದು ಗದ್ದಲವನ್ನುಂಟು ಮಾಡುತ್ತಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಜಾನುವಾರುಗಳು ಬೆಚ್ಚಿ ಬಿದ್ದಿದೆಯೆಂದು ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬೆಂಕಿ ಅವಘಡದಿಂದ ಉಂಟಾದ ದಟ್ಟವಾದ ಹೊಗೆಯು ಸುತ್ತಲಿನ ಪ್ರದೇಶದ ಜೀವವೈವಿಧ್ಯಕ್ಕೆ ಮಾರಕವಾಗಿದೆ. ಸುಮಾರು 1,600 ರಷ್ಟು ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿರಂತರ ಅನಿಲ ಸೋರಿಕೆಯಾಗುತ್ತಿರುವ ಬಾವಿಯ ದುರಸ್ಥಿಗಾಗಿ ಸಿಂಗಾಪುರದಿಂದ ತಜ್ಞರನ್ನು ಕರೆಸಲಾಗಿತ್ತು. ನಿನ್ನೆ ಮದ್ಯಾಹ್ನ 1:30 ರ ವೇಳೆಗೆ ಬಾವಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಬಾವಿಯ ಹೊರವಲಯದ ಬೆಂಕಿ ನಂದಿಸಿದ್ದರೂ , ಬಾವಿ ಆಳದಲ್ಲಿ ಬೆಂಕಿ ಉರಿಯುತ್ತಲೇ ಇದೆ. ಸಂಪೂರ್ಣವಾಗಿ ಬೆಂಕಿ ಆರಲು ಕನಿಷ್ಟ ಒಂದು ತಿಂಗಳಾದರೂ ಬೇಕು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ಕಾರ್ಯಾಚರಣೆಯ ನಡುವೆ ಕಾಣೆಯಾಗಿದ್ದ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿಗಳ ಮೃತದೇಹ ಪತ್ತೆಯಾಗಿದ್ದು, ದೇಹದಲ್ಲಿ ಯಾವುದೇ ಬೆಂಕಿ ತಾಗಿರುವ ಗುರುತು ಪತ್ತೆಯಾಗಿಲ್ಲ. ಮರಣಕ್ಕೆ ಕಾರಣ ಏನೆಂಬುದು ಮರಣೋತ್ತರ ಪರೀಕ್ಷೆ ನಡೆದ ಬಳಿಕ ತಿಳಿದು ಬರಬೇಕಷ್ಟೇ ಎಂದು NDTV ವರದಿ ಮಾಡಿದೆ.






