ಜಗತ್ತಿನಾದ್ಯಂತ ಕೋವಿಡ್-19 ಮಹಾಮಾರಿ ತಾಂಡವವಾಡುತ್ತಿದೆ. ಬಡವ ಶ್ರೀಮಂತ, ಮೇಲು-ಕೀಳು ಅನ್ನೋದು ನೋಡದೆ ಕರೋನಾ ಜಗತ್ತಿನಾದ್ಯಂತ ಹರಡಿದೆ. ವಿಶ್ವದ ದೊಡ್ಡಣ್ಣನಿಂದ ಹಿಡಿದು ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲೂ ಕರೋನಾ ದಾಳಿ ಕಂಗೆಡಿಸಿ ಬಿಟ್ಟಿದೆ. ಅದರಲ್ಲೂ ಅಮೆರಿಕಾ, ಇಟೆಲಿ, ಸ್ಪೇನ್ ಮುಂತಾದ ರಾಷ್ಟ್ರಗಳು ಕರೋನಾದಿಂದ ಅಂಗಲಾಚುತ್ತಿದೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಅಧ್ಯಕ್ಷರ ಜೊತೆ ಕರೋನಾ ಸೋಂಕಿನ ವಿರುದ್ಧದ ಹೋರಾಟದ ಕುರಿತು ಚರ್ಚಿಸುತ್ತಿದ್ದಾರೆ. ಸಮರೋಪಾದಿಯಲ್ಲಿ ಕೆಲಸ ಮಾಡಿದ ಹೊರತಾಗಿಯೂ ಅಲ್ಲಿನ ಕೊರತೆಗಳನ್ನು ತಿಳಿಸಲು ಸಂಯುಕ್ತ ಸಂಸ್ಥಾನದ ಮಾಧ್ಯಮಗಳು ಹಿಂದೆ ಬಿದ್ದಿಲ್ಲ. ಇತ್ತ ನರೇಂದ್ರ ಮೋದಿ ಭಾರತದಲ್ಲಿ ಯಾವ ರೀತಿ ದೂರದರ್ಶನದ ಮೂಲಕ ಸಂದೇಶ ಕೊಡುತ್ತಾರೋ, ಅದೇ ರೀತಿ ಅಮೆರಿಕಾದ ವಾಷಿಂಗ್ಟನ್ ನಲ್ಲಿರುವ ಶ್ವೇತಭವನದಲ್ಲಿ ನಿಂತು ಡೊನಾಲ್ಡ್ ಟ್ರಂಪ್ ಕೂಡಾ ಮಾತನ್ನಾಡುತ್ತಾರೆ. ಆದರೆ ಅದನ್ನು ಸ್ವೀಕರಿಸುವ ಮಾಧ್ಯಮಗಳ ನಡುವೆ ವ್ಯತ್ಯಾಸಗಳಿವೆ ಅನ್ನೋದು ಸ್ಪಷ್ಟ.
ಹೇಳಿಕೇಳಿ ಭಾರತ ಹಾಗೂ ಅಮೆರಿಕಾ ಎರಡೂ ದೇಶಗಳು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಮತದಾರ ಪ್ರಭುಗಳೇ ಪ್ರಮುಖರಾಗುತ್ತಾರೆ. ಈ ಎರಡೂ ರಾಷ್ಟ್ರಗಳಲ್ಲಿ ಮಾಧ್ಯಮಗಳಿಗೂ ಸಾಕಷ್ಟು ಸ್ವಾತಂತ್ರ್ಯವಿದೆ. ಭಾರತದಲ್ಲಂತೂ ತುಸು ಜಾಸ್ತೀನೆ ಅನ್ನಬಹುದಾದಷ್ಟು. ಆದರೆ ಅಮೆರಿಕಾ ಹಾಗೂ ಭಾರತದ ಮಾಧ್ಯಮಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ತಮ್ಮ ಕೈಯಲ್ಲಿ ಪ್ರಶ್ನಿಸಬಹುದಾದ ಬಹುದೊಡ್ಡ ಅಸ್ತ್ರವಿದ್ದರೂ ಭಾರತದ ಮಾಧ್ಯಮಗಳು ತೆಪ್ಪಗೆ ಕೂತು ಪ್ರಧಾನಿ ಮಾತನ್ನು ಒಡೆಯನ ಮಾತಿನಂತೆ ಪಾಲಿಸುತ್ತಿದೆ. ಅದರಲ್ಲೂ ಒಂದೆರಡು ರಾಷ್ಟ್ರೀಯ ಮಾಧ್ಯಮಗಳು ಬಿಟ್ಟರೆ ಬಹುತೇಕ ಎಲ್ಲಾ ಟಿವಿ ಮಾಧ್ಯಮಗಳ ಹಣೆಬರಹ ಒಂದೇ.
ಸರಕಾರವನ್ನು, ಆಡಳಿತ ಯಂತ್ರವನ್ನು ಪ್ರಶ್ನಿಸಬಲ್ಲ ಹಾಗೂ ಒಂದು ಸಮಾಜದ ಜನ ನಂಬಿಕೆ ಇಡಬಲ್ಲ ಮಾಧ್ಯಮಗಳು ಇಂದು ಆಡಳಿತ ಪಕ್ಷದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಅನ್ನೋದನ್ನು ದೇಶದ ಬಹುತೇಕ ಮಾಧ್ಯಮಗಳು ಸಾಬೀತುಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಮಾತನ್ನು ಅವರದ್ದೇ ದಾಟಿಯಲ್ಲಿ ವಿವರಿಸುವ ಪ್ರಯತ್ನ, ಅದಕ್ಕೊಂದಿಷ್ಟು ಅಂದ ಚೆಂದ ಬೆರೆಸುವ ಮೂಲಕ ನೈಜ ಸಮಸ್ಯೆಗಳನ್ನೇ ಮರೆಮಾಚುವ ಚಾಣಕ್ಷತನವನ್ನು ದೇಶದ ಟಿವಿ ಮಾಧ್ಯಮಗಳು ಅಳವಡಿಸಿಕೊಂಡಿದ್ದಾವೆ. ಅಮೆರಿಕಾ ಹಾಗೂ ಭಾರತದ ಮಾಧ್ಯಮಗಳಿಗಿರುವ ಬಹುದೊಡ್ಡ ವ್ಯತ್ಯಾಸವೆಂದರೆ, ಅಮೆರಿಕಾದ ಮಾಧ್ಯಮಗಳು ಆಡಳಿತ ಯಂತ್ರವನ್ನ ಸದಾ ಪ್ರಶ್ನಿಸುತ್ತಿದ್ದರೆ, ಭಾತದ ಮಾಧ್ಯಮಗಳು ಆಡಳಿತ ಯಂತ್ರದ ಮಾತನ್ನು ಶಿರಸಾ ಪಾಲಿಸುವ ಕೆಲಸ ಮಾಡುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ದೇಶಕ್ಕೆ ಮನೋರಂಜನಾ ರೀತಿಯ ಟಾಸ್ಕ್ ನೀಡುವ ದೇಶದ ಪ್ರಧಾನ ಮಂತ್ರಿಗಳ ಹೇಳಿಕೆಗಳನ್ನೂ ಟಿಆರ್ಪಿ ಆಗಿ ಬದಲಾಯಿಸುವ ಭಾರತದ ಮಾಧ್ಯಮಗಳು, ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳನ್ನೇ ಹಿಡಿದುಕೊಂಡು ಅವರ ವೈಫಲ್ಯಗಳನ್ನು ಎತ್ತಿ ಹಿಡಿಯುವ ಅಮೆರಿಕಾದ ಮಾಧ್ಯಮಗಳಿಂದ ಕಲಿಯಬೇಕಾದದ್ದು ಬಹಳಷ್ಟಿದೆ.
ದೇಶದ ಪ್ರಧಾನ ಮಂತ್ರಿ ಅವರಿಗೆ ಅವರದ್ದೇ ಆದ ಗೌರವ ಸಲ್ಲಬೇಕು ನಿಜ. ಅವರ ಹೇಳಿಕೆಗಳು ಪ್ರಸಾರ ಮಾಡಬೇಕು ಅನ್ನೋದು ನಿಜ. ಆದರೆ ಅವರ ಹೇಳಿಕೆಗಳನ್ನು ಎಲ್ಲೂ ಪರಾಮರ್ಶಿಸಕೂಡದು ಅನ್ನೋ ಕಲ್ಪನೆ ರಾಜಪ್ರಭುತ್ವದ ಕಲ್ಪನೆಯಾಗಿ ಬಿಡುತ್ತದೆ. ಇಂದಿಗೂ ಭಾರತದಲ್ಲಿ ಪ್ರಜೆಗಳೇ ಪ್ರಭುಗಳಾಗಿಯೇ ಇದ್ದಾರೆ. ಗಲ್ಫ್ ಅಥವಾ ಇನ್ನಿತರ ರಾಜಪ್ರಭುತ್ವ ರಾಷ್ಟ್ರಗಳಂತಲ್ಲ. ರಾಜಪ್ರಭುತ್ವ ರಾಷ್ಟ್ರಗಳಲ್ಲಾದರೂ ಅಲ್ಲಿನ ಸರಕಾರ ನೀಡಿದ ಅಂಕಿಅಂಶ, ಅಲ್ಲಿನ ರಾಜ ಹೇಳಿದ್ದೇ ವೇದವಾಕ್ಯವಾಗಿ ಬಿಡುತ್ತದೆ. ದೊರೆಯ ಹೇಳಿಕೆ ವಿರುದ್ಧ ಚಕಾರವೆತ್ತುವೆಂತುವಿಲ್ಲ, ಎದುರು ಮಾತಾಡುವಂತೆಯೇ ಇಲ್ಲ. ಆದರೆ ಭಾರತ ಆ ಸಾಲಿನಲ್ಲಿ ಇದೆಯಾ ಅನ್ನೋ ಪ್ರಶ್ನೆ ಎದುರಾಗುತ್ತಿರೋದು ಈ ದೇಶದ ಮಾಧ್ಯಮಗಳು ದೇಶದ ಪ್ರಧಾನ ಮಂತ್ರಿಗಳಿಗೆ ಹಾಗೂ ಆಡಳಿತ ವ್ಯವಸ್ಥೆಗೆ ತೋರುತ್ತಿರುವ ಅತಿಯಾದ ನಿಷ್ಠೆಯೇ ಈ ಪ್ರಶ್ನೆಯನ್ನ ಹುಟ್ಟುಹಾಕಿದೆ.
ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಗಮನಸೆಳೆಯುವ ಲಾಕ್ಡೌನ್ ಹೊರತಾಗಿ ಬೇರೆಲ್ಲ ವಿಚಾರದಲ್ಲಿ ಭಾರತ ಹಿಂದೆ ಬಿದ್ದಿದೆ. ಸಮರ್ಪಕವಾದ ವೈದ್ಯಕೀಯ ಸೌಲಭ್ಯಗಳಿಲ್ಲ, ಅದನ್ನೇನಾದರೂ ಪ್ರಶ್ನೆ ಮಾಡಿದ ವೈದ್ಯರ ಮೇಲೆ ಕೇಸುಗಳಾಗುತ್ತವೆ, ವಲಸೆ ಕಾರ್ಮಿಕರ ಗೋಳು ಕೇಳುವವರಿಲ್ಲ, ಕೇಂದ್ರದಿಂದ ಬಿಡುಗಡೆಯಾದ ಹಣ ಇನ್ನೂ ಬಡ ಮಂದಿಯ ಕೈ ಸೇರಿಲ್ಲ. ಸಮುದಾಯಕ್ಕೆ ಹರಡುವುದನ್ನು ತಡೆಗಟ್ಟಲು ಬೇಕಾದ ಯಾವೊಂದು ಸೌಲಭ್ಯಗಳೂ ಸರಕಾರದ ಬಳಿಯಿಲ್ಲ. ಆದರೆ ಇದು ಯಾವುದನ್ನೂ ಪ್ರಶ್ನಿಸುವ ದೊಡ್ಡತನವನ್ನು ಭಾರತದ ಮಾಧ್ಯಮಗಳು ಮೈಗೂಡಿಸಿಕೊಂಡಿಲ್ಲ. ಮೋದಿ ಹೊಗಳುವಿಕೆಗೂ ಒಂದಿಷ್ಟು ಕಡಿವಾಣ ಹಾಕಿ, ಸೂಕ್ತ ಆಲೋಚನೆ ಅಳವಡಿಸಿಕೊಳ್ಳಬೇಕಿದೆ. ಎಲ್ಲಿ ಪ್ರಶ್ನೆ ಮಾಡಬೇಕೋ, ಅಲ್ಲಿ ಪ್ರಶ್ನಿಸಬೇಕಿದೆ. ಆ ಕಾರ್ಯಗಳು ಬಹುತೇಕ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸಾಧ್ಯನೇ ಆಗುತ್ತಿಲ್ಲ. ನಿಜಕ್ಕೂ ಕರೋನಾ ವಿರುದ್ಧ ಪ್ರಧಾನಿ ಮೋದಿ ಹೋರಾಟಗಳು ಸಮರ್ಪಕ ರೀತಿಯಲ್ಲಿದ್ದರೆ ಇಂತಹ ಸಂಧಿಗ್ಧತೆ ಒದಗಿ ಬರುತ್ತಿರಲಿಲ್ಲ. ಅಥವಾ ಇಲ್ಲಿನ ಪ್ರಜ್ಞಾವಂತರು ಮಾಧ್ಯಮಗಳನ್ನ ಪ್ರಶ್ನಿಸಬೇಕಿರಲಿಲ್ಲ. ಆದರೆ ತಪ್ಪನ್ನು ತಪ್ಪು ಅನ್ನೋದಕ್ಕೆ ಮಾಧ್ಯಮಗಳು ಹಿಂಜರಿಯೋದು ಯಾಕೆ ಅನ್ನೋ ಪ್ರಶ್ನೆ ಸಹಜವಾದುದು. ವಿದೇಶಿ ಅನುಕರಣೆಯ ಚಪ್ಪಾಳೆ, ಕ್ಯಾಂಡಲ್ ದೀಪಗಳು ಈ ದೇಶಕ್ಕೆ ಬೇಕಾಗಿರುವುದಲ್ಲ ಬದಲಾಗಿ ಭಾರತದ ಎದುರಿಸುತ್ತಿರುವ ಸವಾಲನ್ನು ನೀಗಿಸಲು ದೇಶದ ಪ್ರಧಾನ ಮಂತ್ರಿಗಳು ಮಾಡಿರುವ ಯೋಜನೆಗಳು, ಯೋಚನೆಗಳನ್ನು ದೇಶದ ಮುಂದಿಡಬೇಕಿದೆ.
ಅತ್ತ ಅಮೆರಿಕಾದ ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಮಾಡುವ ಸುದ್ದಿಗೋಷ್ಟಿಯನ್ನು ಯಥಾವತ್ತಾಗಿ ನೇರಪ್ರಸಾರ ಮಾಡುವ ಅಲ್ಲಿನ ಮಾಧ್ಯಮಗಳು, ಅದೇ ರೀತಿಯ ಅವರ ಎಡವಟ್ಟುಗಳನ್ನು ಅದಕ್ಕಿಂತಲೂ ಜಾಸ್ತೀನೆ ತೋರಿಸುತ್ತವೆ. ನೈಜ ಪತ್ರಿಕೋದ್ಯಮದ ಅನಾವರಣ ಅಲ್ಲಿ ಆಗುತ್ತಿದೆ. ಆದರೆ ಭಾರತದ ಸುದ್ದಿ ಮಾಧ್ಯಮಗಳು ಬಹುತೇಕ ಪತ್ರಿಕಾರಂಗದಲ್ಲಿ ನೈತಿಕತೆಯನ್ನು ಮೆಲ್ಲನೆ ಕೆಳೆದುಕೊಳ್ಳುತ್ತಿದೆ. ಜನರ ಧ್ವನಿಯಾಗದ ಟಿವಿ ಮಾಧ್ಯಮಗಳು ಆಡಳಿತ ಪಕ್ಷವನ್ನು ಹಾಗೂ ಅಧಿಕಾರಿಗಳನ್ನು ಚೆನ್ನಾಗಿ ಓಲೈಸುವ ಕೆಲಸದಲ್ಲಿ ನಿರತವಾಗಿದೆ.
ಕರೋನಾ ವೈರಸ್ ಸೋಂಕು ಏರುಗತಿಯಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ ಇಂತಹ ಟಾಸ್ಕ್ ಎಷ್ಟು ಉಪಯುಕ್ತಕಾರಿ ಅನ್ನೋ ಪ್ರಶ್ನೆಗೆ ಪ್ರಧಾನ ಮಂತ್ರಿ ಉತ್ತರಿಸಬೇಕಿದೆ. ಭಾರತದ ಏಕತೆ ತೋರಿಸಬೇಕಾದ ಸಮಯದಲ್ಲೆಲ್ಲ ಇಲ್ಲಿನ ದೇಶವಾಸಿಗಳು ಸಮರ್ಪಕವಾಗಿಯೇ ತೋರಿಸಿದ್ದಾರೆ. ನೆರೆ ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳು ನಡೆದಾಗಲೆಲ್ಲ ಒಂದಾಗಿ ನಿಂತಿದ್ದಾರೆ. ಆದರೆ ಅದಕ್ಕೂ ಮೊಂಬತ್ತಿ ಹಚ್ಚಿ ನಿಲ್ಲೋದಕ್ಕೂ ಸಾಕಷ್ಟು ವ್ಯತ್ಯಸಾವಿದೆ. ಕರೋನಾ ವಿರುದ್ಧ ಬೇಕಾದ ಎಲ್ಲ ವ್ಯವಸ್ಥೆ ಮಾಡಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತು. ಆದರೆ ಸಾಕಷ್ಟು ಸಂಖ್ಯೆಯಲ್ಲಿ ವೈದ್ಯಕೀಯ ಸೌಲಭ್ಯ, ಉಪಕರಣಗಳನ್ನು ಒದಗಿಸದ ಹೊರತು ಕ್ಯಾಂಡಲ್ ಹಚ್ಚಿ ನಿಂತರೆ ಕರೋನಾ ಓಡಿ ಹೋಗುವುದೇ..?
ಅದರಲ್ಲೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೀಡುವ ಟಾಸ್ಕ್ ನ್ನು ಇಡೀ ದೇಶವೇ ಒಪ್ಪಿಕೊಳ್ಳಬೇಕು ಅನ್ನೋ ಬಲವಂತವನ್ನು ಕೂಡಾ ಈ ಮಾಧ್ಯಮಗಳಿಂದ ನಡೀತಾ ಇದೆ. ಇದರ ಹೊರತಾಗಿ ನೈಜ ಸಮಸ್ಯೆಗಳ ಬಗ್ಗೆ ಸರಕಾರದ ಗಮನಹರಿಸಲು ಈ ಮಾಧ್ಯಮಗಳಾವುವೂ ಕೆಲಸ ಮಾಡುತ್ತಿಲ್ಲ.
ಹೀಗೆಯೇ ಮುಂದುವರೆದರೆ ಜನ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಿಗೆ ಹೆಚ್ಚು ವ್ಯತ್ಯಾಸ ಅರಿಯಲಾರರು. ಆದ್ದರಿಂದ ಅಮೆರಿಕಾದ ಮಾಧ್ಯಮಗಳು ತೋರುತ್ತಿರುವ ಆ ಬದ್ಧತೆ ಭಾರತದ ಮಾಧ್ಯಮಗಳು ಕೂಡಾ ಮೈಗೂಡಿಸಿಕೊಳ್ಳಬೇಕಿದೆ.