ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕರೋನಾ ಸೋಂಕು ಭಾರತವನ್ನೂ ಇನ್ನಿಲ್ಲದಂತೆ ಕಾಡುತ್ತಿದೆ. ದೇಶದ ಅರ್ಥ ವ್ಯವಸ್ಥೆ ಮೇಲೆ ಮಾತ್ರವಲ್ಲ, ಕೇಂದ್ರ ಸರ್ಕಾರದ ಬೊಕ್ಕಸಕ್ಕೂ ಭಾರೀ ಪೆಟ್ಟನ್ನೇ ನೀಡಿದೆ. ಇಂತಹ ವಿಪತ್ತನ್ನು ಎದುರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ‘ಪಿಎಂ-ಕೇರ್’ (ಪ್ರೈಮಿನಿಸ್ಟರ್ಸ್ ಸಿಟಿಜನ್ ಅಸಿಸ್ಟನ್ಸ್ ಅಂಡ್ ರಿಲೀಫ್ ಇನ್ ಎಮರ್ಜೆನ್ಸಿ ಸಿಚುವೇಷನ್ಸ್ ಫಂಡ್) ಎಂಬ ನಿಧಿ ಸ್ಥಾಪನೆ ಮಾಡಿದೆ. ಇದನ್ನು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಆಗಿ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್ ಆರ್ ಎಫ್) ಇರುವಾಗ ಪ್ರತ್ಯೇಕವಾಗಿ ‘ಪಿಎಂ-ಕೇರ್ʼ ಎಂಬ ನಿಧಿ ಸ್ಥಾಪಿಸಿರುವುದೇಕೆ ಈ ಬಗ್ಗೆ ಜನತೆಗೆ ವಿವರಿಸಿ ಎಂದು ಕಾಂಗ್ರೆಸ್ ಪ್ರಧಾನಿಯವರನ್ನು ಒತ್ತಾಯಿಸಿತ್ತು. ಆದರೆ, ಅದೇ ಕಾಂಗ್ರೆಸ್ಸಿನ ಪರಿಸ್ಥಿತಿ ರಾಜ್ಯದಲ್ಲಿ ಈಗ ʼಶಾಸ್ತ್ರ ಹೇಳೋಕೆ, ಬದನೇಕಾಯಿ ತಿನ್ನೋಕೆʼ ಎನ್ನುವಂತಾಗಿದೆ.
ಹೌದು, ಪ್ರಧಾನಮಂತ್ರಿಗಳೇ ಸ್ವತಃ ಮುಖ್ಯಸ್ಥರಾಗಿರುವ, ಗೃಹ ಸಚಿವರು, ರಕ್ಷಣಾ ಸಚಿವರು ಮತ್ತು ಹಣಕಾಸು ಸಚಿವರು ಸದಸ್ಯರಾಗಿರುವ ಪಿಎಂ ಕೇರ್ಸ್ ಫಂಡ್ ಟ್ರಸ್ಟಿನ ಬಗ್ಗೆ ಪ್ರಶ್ನಿಸಿರುವ ಕಾಂಗ್ರೆಸ್ ಇದೀಗ ರಾಜ್ಯದಲ್ಲಿ ಸರ್ಕಾರಕ್ಕೆ ಪರ್ಯಾಯವಾಗಿ ಕೆಪಿಸಿಸಿ ಕರೋನಾ ವಿಪತ್ತು ಪರಿಹಾರ ನಿಧಿ ಸ್ಥಾಪಿಸಿದೆ. ಆ ಮೂಲಕ ಪಕ್ಷದ ಶಾಸಕರು, ಮುಖಂಡರಿಂದ ದೇಣಿಗೆ ಸಂಗ್ರಹಿಸಲಾರಂಭಿಸಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಅವರ ಪುತ್ರ, ಶಾಸಕ ಯತೀಂದ್ರ ಸಿದ್ದರಾಮಯ್ಯ, ಪಕ್ಷದ ಮುಖಂಡ ಡೇವಿಡ್ ಪೌಲ್, ವಿಧಾನ ಪರಿಷತ್ ಸದಸ್ಯ ವಿಜಯ್ ಸಿಂಗ್, ದಿನೇಶ್ ಗುಂಡೂರಾವ್ ಪರವಾಗಿ ಅವರ ಪತ್ನಿ ತಬೂ ಗುಂಡೂರಾವ್ ಹೀಗೆ ಪಕ್ಷದ ಅನೇಕ ನಾಯಕರು ಲಕ್ಷಾಂತರ ರೂ. ದೇಣಿಗೆಯನ್ನು ಈ ವಿಪತ್ತು ಪರಿಹಾರ ನಿಧಿಗೆ ನೀಡಿದ್ದಾರೆ.
ಹಾಗೆಂದು ಕೆಪಿಸಿಸಿ ಕರೋನಾ ವಿಪತ್ತು ಪರಿಹಾರ ನಿಧಿ ಸ್ಥಾಪಿಸಿರುವುದು ಕಾನೂನು ಬಾಹಿರ ಎಂದು ಅರ್ಥವಲ್ಲ. ಒಂದು ಪಕ್ಷವಾಗಿ ಜನರಿಗೆ ನೆರವು ನೀಡಲು ಕಾಂಗ್ರೆಸ್ಸಿಗೆ ಎಲ್ಲಾ ಅಧಿಕಾರ ಮತ್ತು ಅವಕಾಶ ಇದೆ. ಆದರೆ, ಇನ್ನೊಬ್ಬರನ್ನು ಟೀಕಿಸುವ ಮುನ್ನ ತಾವೇನು ಮಾಡುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳದೇ ಇದ್ದರೆ ಏನಾಗುತ್ತದೆ ಎಂಬುದಕ್ಕೆ ರಾಜ್ಯ ಕಾಂಗ್ರೆಸ್ ಸ್ಥಾಪಿಸಿರುವ ಕೆಪಿಸಿಸಿ ಕರೋನಾ ವಿಪತ್ತು ಪರಿಹಾರ ನಿಧಿ ಒಂದು ಉದಾಹರಣೆ. ಏಕೆಂದರೆ, ಇದೇ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ʼಪಿಎಂ-ಕೇರ್ಸ್ʼ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗಾಗಲೇ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಇರುವಾಗ ಪತ್ಯೇಕವಾಗಿ ʼಪಿಎಂ-ಕೇರ್ಸ್ʼ ಆರಂಭಿಸಿರುವುದರ ಹಿಂದೆ ದುರುದ್ದೇಶವಿದೆ ಎಂಬಂತೆ ಟೀಕಿಸಿದ್ದರು. ಇದೀಗ ಅದೇ ಪಕ್ಷದ ರಾಜ್ಯ ಘಟಕವೊಂದು ಕರೋನಾ ವಿಪತ್ತು ಪರಿಹಾರ ನಿಧಿ ಸ್ಥಾಪಿಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗಿದೆ.
ಈ ಹಿಂದೆಯೂ ವಿಪತ್ತು ಪರಿಹಾರ ನಿಧಿ ಸ್ಥಾಪಿಸಿ ಹಣ ದುರ್ಬಳಕೆಯಾಗಿತ್ತು
ಕಾಂಗ್ರೆಸ್ ರಾಜ್ಯ ಘಟಕ ಸ್ಥಾಪಿಸಿರುವ ಕರೋನಾ ವಿಪತ್ತು ಪರಿಹಾರ ನಿಧಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಆ ಪಕ್ಷ ʼಪಿಎಂ ಕೇರ್ಸ್ʼ ನಿಧಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು ಎಂಬುದೊಂದೇ ಕಾರಣವಲ್ಲ. 2008-09ನೇ ಸಾಲಿನಲ್ಲಿ ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ತಲೆದೋರಿದಾಗ ನೆರೆ ಸಂತ್ರಸ್ತರಿಗಾಗಿ ಕಾಂಗ್ರೆಸ್ ಪಕ್ಷ ಸಂಗ್ರಹಿಸಿದ್ದ ನಿಧಿ ಸಂತ್ರಸ್ತರಿಗೆ ಸಿಗದೆ ದುರ್ಬಳಕೆ ಆಗಿರುವ ಉದಾಹರಣೆ ಇರುವಾಗ ಮತ್ತೆ ಅದೇ ರೀತಿ ಪರಿಹಾರ ನಿಧಿ ಸ್ಥಾಪಿಸಿ ಪಕ್ಷದ ಮುಖಂಡರು, ಕಾರ್ಯಕರ್ತರಿಂದ ಹಣ ಸಂಗ್ರಹಿಸುತ್ತಿರುವುದು ಎಷ್ಟು ಸರಿ ಎಂಬುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯೋಚಿಸಬೇಕಾಗಿದೆ.
2008-09ನೇ ಸಾಲಿನಲ್ಲಿ ರಾಜ್ಯದಲ್ಲಿ ಭೀಕರ ಪ್ರವಾಹ ಎದುರಾಗಿತ್ತು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವಿತ್ತು. ಹೀಗಾಗಿ ಸರ್ಕಾರ ಸರಿಯಾಗಿ ನೆರೆ ಪರಿಹಾರ ಒದಗಿಸುತ್ತಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಪ್ರತ್ಯೇಕವಾಗಿ ನೆರೆ ಸಂತ್ರಸ್ತರಿಗಾಗಿ ಪರಿಹಾರ ನಿಧಿ ಸಂಗ್ರಹಿಸಿತ್ತು. ಆದರೆ, ನಂತರದಲ್ಲಿ ಈ ಹಣವನ್ನು ಫಲಾನುಭವಿಗಳಿಗೆ ವಿತರಿಸದೆ ಇತರೆ ಉದ್ದೇಶಕ್ಕೆ ಬಳಕೆ ಮಾಡಲಾಗಿತ್ತು. ಒಟ್ಟು ಸಂಗ್ರಹವಾದ ಮೊತ್ತದಲ್ಲಿ 75 ಲಕ್ಷ ರೂಪಾಯಿ ಫಿಕ್ಸೆಡ್ ಡಿಪಾಸಿಟ್ ಮಾಡಲಾಗಿದೆ. ಕಾಂಗ್ರೆಸ್ ಅಧ್ಯಕ್ಷರ ಹೆಸರಿನಲ್ಲಿ 30 ಲಕ್ಷ ವಿತ್ ಡ್ರಾ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ ಅಧಿಕೃತ ಖಾತೆಗೆ 10 ಲಕ್ಷ ರೂಪಾಯಿ ವರ್ಗಾವಣೆ ಮಾಡಲಾಗಿದೆ. ಟೈಲ್ಸ್ ಖರೀದಿಗಾಗಿ 2,54,212 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಕಾಂಗ್ರೆಸ್ ಕಚೇರಿ ವೆಚ್ಚಕ್ಕಾಗಿ 50.1 ಲಕ್ಷ ರೂಪಾಯಿ ಬಳಸಿಕೊಳ್ಳಲಾಗಿದೆ. ಪಕ್ಷದ ಜಾಹೀರಾತಿಗಾಗಿ 4,82,861 ರೂಪಾಯಿ ವೆಚ್ಚ ಮಾಡಲಾಗಿದೆ. ಎಂ.ವಿ. ರಾಜಶೇಖರನ್ ಅವರ ವಿಮಾನಯಾನ ಟಿಕೆಟ್ಗೆ 13,824 ರೂ. ನೀಡಲಾಗಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ 500 ಟಿ-ಶರ್ಟ್ಗಾಗಿ 19,240 ರೂ., ನೆರೆ ಪರಿಹಾರ ವರದಿಯ 150 ಪ್ರತಿಗಳ ಮುದ್ರಣಕ್ಕೆ 70,000 ರೂ., ಕಾಂಗ್ರೆಸ್ ಕಾರ್ಯಕರ್ತನಿಗೆ 5,000 ರೂ. ಆರ್ಥಿಕ ನೆರವು ನೀಡಲಾಗಿದೆ ಎಂಬುದನ್ನು ಬ್ಯಾಂಕ್ ದಾಖಲೆಗಳ ಸಹಿತ ಬಹಿರಂಗಪಡಿಸಲಾಗಿತ್ತು. ಆಗ ಆರ್.ವಿ.ದೇಶಪಾಂಡೆ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರೆ, ಈಗ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಕಾರ್ಯಾಧ್ಯಕ್ಷರಾಗಿದ್ದರು. ಶಿವಕುಮಾರ್ ಅವರೇ ಈ ಅಕ್ರಮಗಳನ್ನು ಬಯಲಿಗೆಳೆದಿದ್ದರು.
ಇದಾದ ಬಳಿಕ ನಡೆದ ಚುನಾವಣೆಯಲ್ಲಿ (2013) ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿತ್ತು. ಹೀಗಾಗಿ ನಂತರದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ಪಕ್ಷದಿಂದ ನಿಧಿ ಸಂಗ್ರಹಿಸುವ ಕೆಲಸ ಆಗಿರಲಿಲ್ಲ. ಇದೀಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕರೋನಾ ಎಂಬ ಮಹಾಮಾರಿ ಕಾಣಿಸಿಕೊಂಡಿದೆ. ಇದರ ನಿಯಂತ್ರಣಕ್ಕೆ ಸರ್ಕಾರ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್ ಈಗಾಗಲೇ ಸರ್ಕಾರ ರಚಿಸಿರುವ ಕರೋನಾ ಕಾರ್ಯಪಡೆಗೆ ಪರ್ಯಾಯವಾಗಿ ಪಕ್ಷದಿಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಕರೋನಾ ಕಾರ್ಯಪಡೆ ರಚಿಸಿದೆ. ಈ ಕಾರ್ಯಪಡೆಗೆ ಹಣಕಾಸು ನೆರವು ಒದಗಿಸಲು ಕರೋನಾ ವಿಪತ್ತು ಪರಿಹಾರ ನಿಧಿ ಸ್ಥಾಪಿಸಿದೆ. ಈ ಬಾರಿ ಈ ನಿಧಿಯನ್ನು ಕಾಂಗ್ರೆಸ್ ಎಷ್ಟರ ಮಟ್ಟಿಗೆ ಸದ್ಬಳಕೆ ಅಥವಾ ದುರ್ಬಳಕೆ ಮಾಡಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.