ಕಠಿಣವಾದ ಸಮಸ್ಯೆಗಳಿಗೆ ಕಠಿಣವಾದ ಪರಿಹಾರ ಹುಡುಕಬೇಕು. ಸದ್ಯದ ಮಟ್ಟಿಗೆ ಭಾರತವು ಒಂದು ಕಠಿಣವಾದ ಅಂತರಾಷ್ಟ್ರೀಯ ಸಮಸ್ಯೆಯನ್ನು ಎದುರಿಸುತ್ತಿದೆ. ಚೀನಾ ಎಂದಿನಂತೆ ಗಡಿ ಭಾಗದಲ್ಲಿ ತನ್ನ ಕ್ಯಾತೆ ಮುಂದುವರೆಸುತ್ತಿದ್ದರೆ, ಈವರೆಗೆ ಸುಮ್ಮನಿದ್ದ ಪುಟ್ಟ ರಾಷ್ಟ್ರ ನೇಪಾಳವು ಭಾರತದ ಮೇಲೆ ದಾಳಿ ನಡೆಸುವಷ್ಟರ ಮಟ್ಟಿಗೆ ಬೆಳೆದಿದೆ. ಪಾಕ್ ಮತ್ತು ಚೀನಾದೊಂದಿಗೆ ಬಹಳ ಹಿಂದಿನಿಂದಲೂ ಗಡಿ ವಿವಾದವನ್ನು ಮುಂದುವರೆಸಿಕೊಂಡು ಬಂದಿರುವ ಭಾರತಕ್ಕೆ ಈಗ ನೇಪಾಳವೂ ಎದುರಾಳಿಯಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಸುತ್ತದೆ.
1962ರ ನಂತರ ಭಾರತವು ಚೀನಾ ಗಡಿಯನ್ನು ಉಂಟಾದ ಅತೀ ಹೆಚ್ಚಿನ ಆತಂಕವಿದು ಎಂದು ಎಲ್ಲರ ಅಂದಾಜು. ಭಾರತದ ಗಡಿಯೊಳಗೆ ನುಸುಳಲು ಚೀನಾ ಬಹಳಷ್ಟು ಪ್ರಯತ್ನ ಪಡುತ್ತಿದೆ. ಈ ಸಂದರ್ಭದಲ್ಲಿ ಭಾರತದ ಪ್ರತಿಕ್ರಿಯೆ ಚೀನಾದ ನುಸುಳುವಿಕೆಯ ಪ್ರಯತ್ನದಷ್ಟೇ ಕಠಿಣವಾಗಿರಬೇಕು. ಭಾರತದ ಯುದ್ದ ನೀತಿ ಬದಲಾಗಬೇಕು. ಭಾರತಕ್ಕೆ ಒಬ್ಬ ಹೊಸ ರಕ್ಷಣಾ ಮಂತ್ರಿ ಬೇಕು.
ಕಳೆದ ಹಲವು ಸರ್ಕಾರಗಳಲ್ಲಿ ನೋಡಿದರೆ, ದಿಟ್ಟ ನಿರ್ಧಾರ ತೆಗೆದುಕೊಂಡಂತಹ ರಕ್ಷಣಾ ಮಂತ್ರಿಗಳು ಬಹಳಷ್ಟು ಕಡಿಮೆ. ಎಲ್ಲರೂ ಅಂತರಾಷ್ಟ್ರೀಯ ಸಂಬಂಧಗಳನ್ನು ಉಳಿಸಿಕೊಳ್ಳುವ ಸಲುವಾಗಿ ಒದ್ದಾಡಿದ್ದರು. ಎ ಕೆ ಆಂಟನಿ, ಅರುಣ್ ಜೇಟ್ಲಿ, ಮನೋಹರ್ ಪರಿಕ್ಕರ್, ನಿರ್ಮಲಾ ಸೀತಾರಾಮನ್ ಮತ್ತು ಈಗ ರಾಜನಾಥ್ ಸಿಂಗ್ ಹೀಗೆ ಭಾರತದ ಕೆಲವು ರಕ್ಷಣಾ ಮಂತ್ರಿಗಳು ಧೃಢವಾದ ನಿರ್ಧಾರ ತಳೆಯಲು ವಿಫಲರಾಗಿದ್ದಾರೆ.
Also Read: ನೇಪಾಳ ಪಡೆಯಿಂದ ಅಪ್ರಚೋದಿತ ಗುಂಡಿನ ದಾಳಿ- ಓರ್ವ ಭಾರತೀಯ ಬಲಿ
ರಾಜನಾಥ್ ಸಿಂಗ್ ಬಿಜೆಪಿಯ ಹಿರಿಯ ಸದಸ್ಯರಾಗಿರಬಹುದು. ಆದರೆ, ಅವರಿನ್ನೂ ಬಿಜೆಪಿಯ ಹೊಸ ಆಯಾಮಕ್ಕೆ ಹೊಂದಿಕೊಂಡಂತೆ ಕಾಣುತ್ತಿಲ್ಲ. ಬಿಜೆಪಿಯ ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯನಾಥ್ ರೀತಿ ಜನರು ಸಮೂಹ ಸನ್ನಿಗೆ ಒಳಗಾಗುವ ರೀತಿ ದಿಟ್ಟ ನಿರ್ಧಾರ ತಳೆಯಲು ರಾಜನಾಥ್ ಸಿಂಗ್ ಅವರಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿಯ ಉಳಿದೆಲ್ಲಾ ಹಿರಿಯರಂತೆ ಕ್ರಮೇಣ ಪರದೆಯ ಹಿಂದೆ ಸರಿಯುವ ಎಲ್ಲಾ ಲಕ್ಷಣಗಳೂ ಇವೆ. ಈ ಸಂದರ್ಭದಲ್ಲಿ ಭಾರತಕ್ಕೆ ಒಬ್ಬ ಹೊಸ ರಕ್ಷಣಾ ಮಂತ್ರಿ ಬೇಕು.
Also Read: ನೇಪಾಳ ಸಂಸತ್ ನಲ್ಲಿ ಭಾರತ ಪ್ರದೇಶಗಳನ್ನ ಒಳಗೊಂಡ ನೂತನ ಮಸೂದೆ ಮಂಡನೆ
ಅಮಿತ್ ಶಾ ಈ ಹೊತ್ತಿಗೆ ಭಾರತದ ರಕ್ಷಣಾ ಮಂತ್ರಿ ಯಾಕಾಗಬಾರದು ಎನ್ನುವ ಪ್ರಶ್ನೆ ಈಗ ಕಾಡುತ್ತಿದೆ. ಚಾಣಕ್ಯ, ಮಾಸ್ಟರ್ ಮೈಂಡ್ ಎಂದೆಲ್ಲಾ ಕರೆಯಲ್ಪಡುವ ಅಮಿತ್ ಶಾ ಅವರಿಗೆ ಎರಡು ಪ್ರಮುಖ ಖಾತೆಗಳನ್ನು ನಿಭಾಯಿಸುವ ಜವಾಬ್ದಾರಿ ಹೆಚ್ಚೇನು ಆಗಲಿಕ್ಕಿಲ್ಲ. ಅವರಿಗಿರುವ ಸಾಮರ್ಥ್ಯವನ್ನು ನೋಡಿದರೆ ಬಹಳಷ್ಟು ಸಕ್ಷಮವಾಗಿ ಗೃಹ ಖಾತೆಯೊಂದಿಗೆ ರಕ್ಷಣಾ ಖಾತೆಯನ್ನು ನಿಭಾಯಿಸಬಲ್ಲರು ಎಂಬುದು ಸ್ಪಷ್ಟವಾಗುತ್ತದೆ.
ಸದ್ಯದ ಪರಿಸ್ಥಿತಿಯಲ್ಲಿ ನೋಡಿದರೂ, ಎಲ್ಲಾ ಇಲಾಖೆಗಳ ಪ್ರಮುಖ ನಿರ್ಧಾರಗಳನ್ನು ತೀರ್ಮಾನ ಮಾಡುವುದು ಮೋದಿ-ಶಾ ದ್ವಯರು. ಬಜೆಟ್ ಪೂರ್ವಭಾವಿ ಸಭೆಯಲ್ಲಿ ವಿತ್ತ ಸಚಿವೆ ಗೈರಾಗಿದ್ದರೂ, ಆ ಸಭೆಯನ್ನು ಸಕ್ಷಮವಾಗಿ ನಡೆಸಿಕೊಂಡು ಹೋದವರು ಅಮಿತ್ ಶಾ. ಇಂತಹವರಿಗೆ ರಕ್ಷಣಾ ಇಲಾಖೆ ಹೆಚ್ಚುವರಿಯಾಗಿ ನೀಡಿದರೆ ಯಾವುದೇ ತೊಂದರೆಯಾಗಲಿಕ್ಕಿಲ್ಲ.
Also Read: ಕೆಣಕಲು ಬಂದ ಚೀನಾಕ್ಕೆ ʼಸೇತುವೆʼ ಮೂಲಕ ಟಾಂಗ್ ನೀಡಿದ ಭಾರತ!
ಕಳೆದ ಒಂದು ವರ್ಷದಲ್ಲಿಯೇ ಬಿಜೆಪಿ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಗಳಲ್ಲಿ ಬಹಳಷ್ಟು ಭರವಸೆಗಳನ್ನು ಈಡೇರಿಸುವ ದಿಟ್ಟತನ ಹೊಂದಿರುವವರು ಇವರು. ರಾಷ್ಟ್ರಾದ್ಯಂತ ಪ್ರತಿಭಟನೆಗಳು ಭುಗಿಲೆದ್ದರೂ ಕ್ಯಾರೇ ಎನ್ನದೇ ತಮ್ಮದೇ ಹಠಮಾರಿತನವನ್ನು ಮುಂದುವರೆಸಿದವರು ಇನ್ನು ಚೀನಾವನ್ನು ಬಿಡುತ್ತಾರೆಯೇ? ತಮ್ಮ ದೇಶದ ಜನರ ಭಾವನೆಗಳನ್ನು ಹಾಗೂ ಬೇಡಿಕೆಗಳನ್ನು ಅರ್ಥ ಮಾಡಿಕೊಳ್ಳದ ಮನುಷ್ಯ, ಚೀನಾದ ಬೇಡಿಕೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆಯೇ? ಖಂಡಿತಾ ಇಲ್ಲ.
ಚೀನಾ ಬಹಳ ಹಿಂದಿನಿಂದಲೂ ಹಲವು ಬಾರಿ ಭಾರತದ ಹಲವಾರು ಭೂ ಪ್ರದೇಶಗಳನ್ನು ತನ್ನದು ಎಂದು ಹೇಳುತ್ತಾ ಬಂದಿದೆ. ಸುನ್ ಜೂ಼ (Sun Tzu) ಹೇಳಿದಂತೆ ಚುನಾವಣಾ ರಣತಂತ್ರಗಳನ್ನು ಹೆಣೆಯುತ್ತಿರುವ ಚೀನಾಗೆ ಸೆಡ್ಡು ಹೊಡೆಯಲು ಭಾರತದಲ್ಲಿ ʼಚಾಣಕ್ಯʼ ಹುಟ್ಟಿರಲಿಲ್ಲವೇ? ಅಮಿತ್ ಶಾ ಹಲವು ಬಾರಿ ತಾವೇಕೆ ಚಾಣಕ್ಯರೆಂದು ಕರೆಸಿಕೊಳ್ಳುತ್ತಾರೆಂದು ಸಾಬೀತು ಪಡಿಸಿದ್ದಾರೆ.
ಅಮಿತ್ ಶಾ ಅವರ ಮುಖ್ಯವಾದ ಒಂದು ಗುಣಗಳು ಅವರನ್ನು ರಕ್ಷಣಾ ಮಂತ್ರಿ ಸ್ಥಾನಕ್ಕೆ ಅರ್ಹರನ್ನಾಗಿಸುತ್ತದೆ. ಅವರೆಂದೂ ನುಸುಳುಕೋರರನ್ನು ಬಿಡುವುದಿಲ್ಲ. ಭಾರತಕ್ಕೆ ಬಂದಂತಹ ನುಸುಳುಕೋರರನ್ನು ಹೊರದಬ್ಬಲು ಕೋಟಿ ಕೋಟಿ ಖರ್ಚು ಮಾಡಿ ಎನ್ಆರ್ಸಿ ಮಾಡಲು ತಯಾರಾಗಿರುವ ವ್ಯಕ್ತಿ ಅಮಿತ್ ಶಾ. ನುಸುಳುಕೋರರಿಗೆ ʼಕ್ರೊನೋಲಜಿಯʼ ಪಾಠ ಮಾಡಿ ಅವರನ್ನು ಹೊರ ದಬ್ಬುವಲ್ಲಿ ಶಾ ಅವರದು ಎತ್ತಿದ ಕೈ. ಹೀಗಾಗಿ ಚೀನಾದ ಸೈನಿಕರು ಭಾರತದ ಗಡಿಯೊಳಗೆ ನುಸುಳದಂತೆ ಚಾಣಕ್ಯ ತಂತ್ರವನ್ನು ಹೆಣೆಯುವಲ್ಲಿ ಖಂಡಿತಾ ಅಮಿತ್ ಶಾ ಸಫಲರಾಗುವ ಸಾಧ್ಯತೆಗಳಿವೆ.
ಇನ್ನು, ಅವರು ತಮ್ಮ ವಿರೋಧಿಗಳನ್ನು ತಮ್ಮ ಪಕ್ಷಕ್ಕೆ ಸೆಳೆಯುವಲ್ಲಿ ನಿಸ್ಸೀಮರು. ತಾವು ಕಾಲಿಟ್ಟಲೆಲ್ಲಾ ಇರುವಂತಹ ವಿರೋಧ ಪಕ್ಷದ ಶಾಸಕರನ್ನು ಬಿಜೆಪಿಗೆ ಸೆಳೆಯುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಬಿಜೆಪಿಯ ಹೆಸರೇ ಇಲ್ಲದಿರುವ ಕಡೆಗಳಲ್ಲಿ ಬಿಜೆಪಿ ಸರ್ಕಾರವನ್ನು ರಚಿಸುವ ಕ್ಷಮತೆ ಹೊಂದಿದ್ದಾರೆ. ಈ ರೀತಿ ಶಾಸಕರನ್ನು ನುಂಗಿ ಹಿಂಬಾಗಿಲ ಮೂಲಕ ಸರ್ಕಾರ ರಚಿಸುವ ಕ್ಷಮತೆ ಹೊಂದಿರುವವರು ಚೀನಾದ ಸೈನಿಕರನ್ನು ನುಂಗದೇ ಇರುತ್ತಾರೆಯೇ?
ಇನ್ನು ಭಾರತವನ್ನು ʼವಿಶ್ವ ಗುರುʼ ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರ ನಾಲ್ಕು ಸೂತ್ರಗಳಾದ ಶಕ್ತಿ, ಸುರಕ್ಷತೆ, ಸಮನ್ವಯ ಮತ್ತು ಬುದ್ದಿವಂತಿಕೆ ಇವೆಲ್ಲವನ್ನು ಮೈಗೂಡಿಸಿಕೊಂಡಿರುವ ಬೇರೊಬ್ಬ ವ್ಯಕ್ತಿ ಬಿಜೆಪಿಯಲ್ಲಿ ಇಲ್ಲ. ಹಾಗಾಗಿ ಅಮಿತ್ ಶಾ ಅವರೇ ರಕ್ಷಣಾ ಇಲಾಖೆಗೆ ಸೂಕ್ತ ನಾಯಕರು.
Also Read: ಚೀನಾ-ಭಾರತ ಗಡಿ ಬಿಕ್ಕಟ್ಟು; ಸೂಕ್ತ ಮಾಹಿತಿ ನೀಡುತ್ತಿಲ್ಲವೇಕೆ ಕೇಂದ್ರ ಸರಕಾರ!?
ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದುವ ನೆಹರೂ ಕಾಲದ ಮೃದು ರಾಜಕೀಯಕ್ಕೆ ನಾಂದಿ ಹಾಡುವ ಎಲ್ಲಾ ಕ್ಷಮತೆಗಳು ಅಮಿತ್ ಶಾ ಅವರಲ್ಲಿದೆ. ಹೇಗೂ, ನೆಹರೂ ಅವರು ಮಾಡಿದಂತಹ ಎಲ್ಲಾ ರೀತಿಯ ಕೆಲಸಗಳನ್ನು ಹಿಂದಿನಿಂದಲೂ ತೆಗಳಿಕೊಂಡೇ ಬಂದಂತಹ ವ್ಯಕ್ತಿಯಾದ್ದರಿಂದ ನೆರೆ ರಾಷ್ಟ್ರಗಳೊಂದಿಗಿನ ಸಂಬಂಧಗಳನ್ನು ಹಾಳು ಮಾಡಿಕೊಳ್ಳುವುದು ಅವರಿಗೇನೂ ಕಷ್ಟವಾಗಲಾರದು.
ಇನ್ನೂ ಮುಂದುವರೆದು ನೋಡುವುದಾದರೆ, ನರೇಂದ್ರ ಮೋದಿಯವರು ಇತ್ತೀಚಿಗೆ ಹೇಳಿದಂತೆ ಭಾರತದಲ್ಲಿ ದಿಟ್ಟ ಸುಧಾರಣೆಗಳನ್ನು ತರಬೇಕಿದೆ. ಹೊಸ ರಕ್ಷಣಾ ಮಂತ್ರಿಯಾಗಿ ಅಮಿತ್ ಶಾ ಅವರನ್ನು ನೇಮಿಸುವುದಕ್ಕಿಂತ ದಿಟ್ಟ ಸುಧಾರಣೆ ಇನ್ನೇನು ಇರಲಿದೆ? ಭಾರತದ ಒಳಗಿನ ಹಾಗೂ ಹೊರಗಿನ ಶತ್ರುಗಳಿಗೆ ದಿಟ್ಟ ಸಂದೇಶವನ್ನೂ ರವಾನಿಸಿದಂತಾಗುತ್ತದೆ.
ಕೃಪೆ: ದಿ ವೈರ್