ತಿರುವಾಂಕೂರು ರಾಜ ಮನೆತನದಡಿಯಲ್ಲಿದ್ದ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ನಿಯಂತ್ರಣವನ್ನು 2011 ರಲ್ಲಿ ಕೇರಳ ಹೈ ಕೋರ್ಟ್ ರಾಜ್ಯ ಸರ್ಕಾರಕ್ಕೆ ವರ್ಗಾಯಿಸಿ ಆದೇಶ ನೀಡಿತ್ತು. ಹಿಂದಿನ ಹಲವು ತಲೆಮಾರುಗಳಿಂದ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ರಾಜಮನೆತನ ಟ್ರಸ್ಟ್ ಈ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹಲವು ವರ್ಷಗಳಿಂದ ನಡೆದುಬರುತ್ತಿದ್ದ ಈ ವ್ಯಾಜ್ಯದಲ್ಲಿ ರಾಜೆಮನತನದ ಟ್ರಸ್ಟ್ ದೇವಾಲಯದ ಮೇಲಿನ ಉಸ್ತುವಾರಿಯನ್ನು ಗೆದ್ದುಕೊಂಡಿದೆ.
ಸೋಮವಾರ ಪ್ರಕರಣದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ನಿಯಂತ್ರಣವನ್ನು ತಿರುವಾಂಕೂರು ರಾಜಮನೆತನ ಮುಂದುವರೆಸುವಂತೆ ತೀರ್ಪು ಪ್ರಕಟಿಸಿದೆ. ಐತಿಹಾಸಿಕ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಆಡಳಿತದಲ್ಲಿ ತಿರುವಾಂಕೂರು ರಾಜಮನೆತನದ ಹಕ್ಕುಗಳನ್ನು ಎತ್ತಿಹಿಡಿದಿರುವ ಸುಪ್ರಿಂ ಕೋರ್ಟ್, ಆಡಳಿತದ ಮೇಲ್ವಿಚಾರಣೆಗಾಗಿ ತಿರುವನಂತಪುರಂ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿಯನ್ನೂ ನ್ಯಾಯಾಲಯ ಅನುಮೋದಿಸಿದೆ.
ಸುಪ್ರೀಂ ತೀರ್ಪು ಸ್ವಾಗತಿಸಿದ ಕೇರಳ ಸರ್ಕಾರ, ಭಕ್ತರಲ್ಲಿ ಹರ್ಷ
ಸುಪ್ರೀಂ ಕೋರ್ಟ್ ತೀರ್ಪು ಹೊರ ಬಿದ್ದೊಡನೆ ದೇವಾಲಯದ ಭಕ್ತರಲ್ಲಿ ಹರ್ಷ ಮಡುಗಟ್ಟಿದೆ. ಕೇರಳ ರಾಜಧಾನಿ ತಿರುವನಂತಪುರಂನಲ್ಲಿ, ಸುಮಾರು ಆರನೆಯ ಶತಮಾನದಿಂದಲೂ ನೆಲೆಸಿರುವ ಅನಂತ ಪದ್ಮನಾಭಸ್ವಾಮಿಯ ಸನ್ನಿಧಿಯಲ್ಲಿ ಭಕ್ತರು ಸಿಹಿ ಹಂಚಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಕೇರಳ ಸರ್ಕಾರವೂ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದೆ.
ನಾವು ಯಾವತ್ತೂ ಸುಪ್ರೀಂ ಕೋರ್ಟ್ನ ಆದೇಶವನ್ನು ಸ್ವಾಗತಿಸುತ್ತೇವೆ. ಸುಪ್ರೀಂ ಕೋರ್ಟ್ ತೀರ್ಪಿನಂತೆಯೇ ಮುಂದೆ ಹೋಗುತ್ತೇವೆ ಎಂದು ಕೇರಳ ರಾಜ್ಯ ಪ್ರವಾಸೋದ್ಯಮ ಹಾಗೂ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಹೇಳಿದ್ದಾರೆ.

ಪುರಾತನ ದೇವಸ್ಥಾನದ ಸುತ್ತಲಿನ ವಿವಾದವೇನು?
ಭಾರತದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದೆಂದು ಗುರುತಿಸಲಾಗಿರುವ ಅನಂತ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಬೆಲೆ ಕಟ್ಟಲಾಗದಷ್ಟು ಪುರಾತನ ಸಂಪತ್ತು ಇದು ಎಂಬ ಊಹಾಪೋಹಗಳು ಮೊದಲೇ ಇದ್ದವು, ದೇವಾಲಯದ 6 ಖಜಾನೆಯಲ್ಲಿ ಒಂದನ್ನು ಹೊರತುಪಡಿಸಿ ಉಳಿದ 5 ಭಂಡಾರವನ್ನು ತೆರೆದಾಗ ಅಪಾರ ಪ್ರಮಾಣದ ಚಿನ್ನಾಭರಣಗಳು ದೊರೆತಿತ್ತು. ಪತ್ತೆಯಾದ ಚಿನ್ನಾಭರಣಗಳ ಮೌಲ್ಯವನ್ನು ಅಂದು 90 ಸಾವಿರ ಕೋಟಿಯೆಂದು ಅಂದಾಜಿಸಲಾಗಿತ್ತು. ಮುಚ್ಚಿದ್ದ ʼಬಿʼ ಖಜಾನೆಯನ್ನು ತೆರೆಯದಂತೆ ಸುಪ್ರೀಂ ಕೋರ್ಟ್ 2011 ರಲ್ಲಿ ಆದೇಶ ನೀಡಿತ್ತು.
ದೇವಾಲಯದ ಕುರಿತು ವರದಿ ನೀಡುವಂತೆ ಆಗಸ್ಟ್ 2012 ರಲ್ಲಿ, ಹಿರಿಯ ವಕೀಲ ಗೋಪಾಲ್ ಸುಬ್ರಮಣ್ಯಂ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ಸುಪ್ರೀಂ ಕೋರ್ಟ್ ನೇಮಕ ಮಾಡಿತ್ತು. ದೇವಾಲಯದ ಟ್ರಸ್ಟ್ ಮತ್ತು ರಾಜಮನೆತನದವರು ವಿವಿಧ ಎಣಿಕೆಗಳಲ್ಲಿ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ಸುಬ್ರಮಣ್ಯಂ ಅವರು ಏಪ್ರಿಲ್ 2014 ರಲ್ಲಿ ನ್ಯಾಯಾಲಯಕ್ಕೆ ದೊಡ್ಡ ವರದಿಯನ್ನು ಸಲ್ಲಿಸಿದ್ದರು.
ಅದುವರೆಗೂ ರಾಜಮನೆತನದ ಅಡಿಯಲ್ಲಿದ್ದ ದೇವಾಲಯದ ನಿಯಂತ್ರಣವನ್ನು 2014 ರಲ್ಲಿ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ನಾಲ್ವರ ಆಡಳಿತಾತ್ಮಕ ಸಮಿತಿಗೆ ಸುಪ್ರೀಂ ಕೋರ್ಟ್ ವರ್ಗಾಯಿಸಿತ್ತು.
ತಿರುವಾಂಕೂರು ರಾಜ್ಯ 1949 ರಲ್ಲಿ ಭಾರತ ಒಕ್ಕೂಟದೊಂದಿಗೆ ವಿಲೀನಗೊಳ್ಳುವಾಗ ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದ 7 ನೇ ವಿಧಿಯಲ್ಲಿ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ನಿರ್ವಹಣೆ ಹಾಗೂ ಮೇಲ್ವಿಚಾರಣೆ ತಿರುವಾಂಕೂರು ರಾಜಮನೆತನದ ಆಡಳಿತಗಾರ ನಿಯೋಜಿಸಿದ ಕಾರ್ಯನಿರ್ವಾಹಕ ಅಧಿಕಾರಿಯಿಂದಲೇ ನಡೆಯಬೇಕು.






