Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಸೊರಗಿದ ಮಂಡಲ- ಭೋರ್ಗರೆದ ಕಮಂಡಲ

ಸೊರಗಿದ ಮಂಡಲ- ಭೋರ್ಗರೆದ ಕಮಂಡಲ
ಸೊರಗಿದ ಮಂಡಲ- ಭೋರ್ಗರೆದ ಕಮಂಡಲ

November 13, 2019
Share on FacebookShare on Twitter

’’1949ರ ಡಿಸೆಂಬರ್ 22-23ರ ನಡುವಣ ರಾತ್ರಿ ಹಿಂದೂ ದೇವತೆಗಳ ಮೂರ್ತಿಗಳನ್ನು ಒಳಪ್ರಾಂಗಣದಲ್ಲಿ ತಂದಿಟ್ಟು ಮಸೀದಿಯನ್ನು ಅಪವಿತ್ರಗೊಳಿಸಲಾಯಿತು. ಆ ಸಂದರ್ಭದಲ್ಲಿ ಮುಸಲ್ಮಾನರನ್ನು ಅಲ್ಲಿಂದ ಹೊರದಬ್ಬಿದ್ದು ಕಾನೂನು ಬಾಹಿರವಾಗಿತ್ತು. ಅವರ ಧಾರ್ಮಿಕ ತಾಣವನ್ನು ಅವರ ಕೈ ತಪ್ಪಿಸುವ ಲೆಕ್ಕಾಚಾರದ ಕೃತ್ಯವಾಗಿತ್ತು’’.

ಹೆಚ್ಚು ಓದಿದ ಸ್ಟೋರಿಗಳು

ಪ್ರಧಾನಿ MODI ಮತ್ತು ಅದಾನಿ ನಡುವಿನ ಸಂಬಂಧ ಏನು? ಪ್ರಶ್ನಿಸುವುದನ್ನು ನಾನು ನಿಲ್ಲಿಸಲ್ಲ: Rahul Gandhi

ಕಾಂಗ್ರೆಸ್​ ನಾಯಕಿಗೆ ಶೂರ್ಪನಖಿ ಎಂದಿದ್ದ ಪ್ರಧಾನಿ ಮೋದಿ : ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದ ರೇಣುಕಾ ಚೌಧರಿ

ಬಿಜೆಪಿಗೆ ಬಿಜೆಪಿಯೇ ಎದುರಾಳಿ..! ‘ನಾವಿಕನಿಲ್ಲದ ಹಡಗು’ ಭಾಗ – 02

-”ಕ್ರಿಮಿನಲ್ ಪ್ರಕರಣವೊಂದನ್ನು ದಾಖಲು ಮಾಡಿಕೊಂಡ ನಂತರ ರಿಸೀವರ್ ನೇಮಕ ಮಾಡಿ ಒಳಪ್ರಾಂಗಣವನ್ನು ಮುಟ್ಟುಗೋಲು ಹಾಕಿಕೊಂಡ ನಂತರ ಹಿಂದೂ ದೇವತಾ ಮೂರ್ತಿಗಳ ಪೂಜೆಗೆ ಅವಕಾಶ ಮಾಡಿಕೊಡಲಾಯಿತು. ತಕರಾರು ಅರ್ಜಿಗಳ ವಿಚಾರಣೆ ಬಾಕಿ ಇರುವಂತೆಯೇ ಇಡೀ ಮಸೀದಿಯನ್ನು ನೆಲಸಮ ಮಾಲಾಯಿತು. ಸಾರ್ವಜನಿಕ ಪೂಜಾ ಸ್ಥಳವನ್ನು ನಾಶ ಮಾಡಿದ ಲೆಕ್ಕಾಚಾರದ ಕೃತ್ಯವದು. 450 ವರ್ಷಗಳ ಹಿಂದೆ ಕಟ್ಟಲಾಗಿದ್ದ ಮಸೀದಿಯೊಂದನ್ನು ಮುಸಲ್ಮಾನರ ಕೈ ತಪ್ಪಿಸಿದ್ದು ತಪ್ಪು’’ ಎಂದು ನ್ಯಾಯಾಲಯ ನಿಚ್ಚಳವಾಗಿ ಸಾರಿದೆ.

ಈ ಮಾತುಗಳನ್ನು ಹೇಳಿದ ನಂತರವೂ ವಿವಾದಿತ ಜಮೀನನ್ನು ಮಂದಿರ ನಿರ್ಮಾಣಕ್ಕೆ ಮಾತ್ರವೇ ಕೊಡಬೇಕಾಗಿ ಬಂದಿತಲ್ಲ ಅದು ಹೇಗೆ ಎಂಬ ಪ್ರಶ್ನೆಗಳನ್ನು ಸುಪ್ರೀಮ್ ಕೋರ್ಟಿನ ಹಲವು ನಿವೃತ್ತ ನ್ಯಾಯಮೂರ್ತಿಗಳು ಎತ್ತಿದ್ದಾರೆ. ಈ ಸಂದೇಹಕ್ಕೆ ನ್ಯಾಯಾಲಯ 799ನೆಯ ಪ್ಯಾರಾದಲ್ಲಿ ನೀಡಿರುವ ಸಮಾಧಾನ ಹೀಗಿದೆ- ‘ಸಾರ್ವಜನಿಕ ಶಾಂತಿ ಸಾಮರಸ್ಯ ಕಾಪಾಡುವ ಉದ್ದೇಶದಿಂದ 2010ರ ತೀರ್ಪಿನಲ್ಲಿ ಅಲಹಾಬಾದ್ ಹೈಕೋರ್ಟು ವಿವಾದಿತ ಜಾಗವನ್ನು ಮೂರೂ ಅರ್ಜಿದಾರರಿಗೆ (ಸುನ್ನಿ ವಕ್ಫ್ ಮಂಡಳಿ, ರಾಮಲಲ್ಲಾ ವಿರಾಜಮಾನ್ ಹಾಗೂ ನಿರ್ಮೋಹಿ ಅಖಾಡ) ಹಂಚಿಕೊಟ್ಟಿದೆಯಾದರೂ, ಈ ಪರಿಹಾರ ಕಾರ್ಯಸಾಧ್ಯ ಅಲ್ಲ. ವಿವಾದಿತ ಜಾಗದ ಒಟ್ಟು ವಿಸ್ತೀರ್ಣ ಕೇವಲ 1500 ಚದರ ಗಜಗಳು. ಈ ಜಾಗವನ್ನು ವಿಭಾಗಿಸಿ ಹಂಚಿಕೊಡುವುದರಿಂದ ಯಾರ ಹಿತದ ಸಾಧನೆಯೂ ಆಗುವುದಿಲ್ಲ. ಅಷ್ಟೇ ಅಲ್ಲ, ಇಂತಹ ಕ್ರಮದಿಂದ ಶಾಂತಿ ಸಾಮರಸ್ಯ ಕಾಯಮ್ಮಾಗಿ ನೆಲೆಸುತ್ತದೆಂದು ಹೇಳುವುದು ಸಾಧ್ಯವಿಲ್ಲ’.

ಅರ್ಥಾತ್ ಮಂದಿರ ಮಸೀದಿಗಳೆರಡಕ್ಕೂ ಈ ಜಾಗವನ್ನು ಹಂಚಿಕೊಟ್ಟರೆ ವಿವಾದ ಪುನಃ ಭುಗಿಲೇಳಬಹುದು ಎಂಬ ಶಂಕೆಯನ್ನು ನ್ಯಾಯಾಲಯ ಇಲ್ಲಿ ವ್ಯಕ್ತಪಡಿಸಿದೆ. ದೇಶದಲ್ಲಿ ಇನ್ನೂ ಮೂರು ಸಾವಿರ ಮಸೀದಿಗಳು ಮೂಲತಃ ಹಿಂದೂ ದೇವಾಲಯಗಳಾಗಿದ್ದು ಅವುಗಳನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂಬುದು ವಿಶ್ವಹಿಂದೂ ಪರಿಷತ್ತಿನ ದಾವೆ. ಈ ಪಟ್ಟಿಯಲ್ಲಿ ಕಾಶಿ ಮತ್ತು ಮಥುರಾ ಅಗ್ರ ಸ್ಥಾನದಲ್ಲಿವೆ. ಸದ್ಯಕ್ಕೆ ಇವುಗಳ ಪ್ರಸ್ತಾಪ ಮಾಡುವುದಿಲ್ಲ ಎಂಬ ಮಾತುಗಳು ಪರಿವಾರದ ಕಡೆಯಿಂದ ಬಂದಿವೆ. ಆದರೆ ಈ ದಾವೆಯನ್ನು ಸದಾ ಕಾಲಕ್ಕೆ ಕೈ ಬಿಟ್ಟಿರುವುದಾಗಿ ಹೇಳಿಲ್ಲ ಎಂಬುದನ್ನು ಗಮನಿಸಬೇಕಿದೆ. ಯಾವುದೇ ಪೂಜಾ ಅಥವಾ ಪ್ರಾರ್ಥನಾ ಸ್ಥಳವನ್ನು ಅದು 1947ರ ಆಗಸ್ಟ್ 15ರಂದು ಇದ್ದ ಸ್ಥಿತಿಯಿಂದ ಬದಲಾಯಿಸುವುದನ್ನು 1991ರ ಪೂಜಾಸ್ಥಳಗಳ ಕಾಯಿದೆಯು ಪ್ರತಿಬಂಧಿಸಿದೆ. ಈ ಕಾಯಿದೆಯನ್ನು ತೀರ್ಪಿನಲ್ಲಿ ಮತ್ತೊಮ್ಮೆ ಉಲ್ಲೇಖಿಸಲಾಗಿದೆ ಅಷ್ಟೇ.

ನ್ಯಾಯಾಲಯದ ಮುಂದಿರುವ ನಿರ್ದಿಷ್ಟ ವಾಜ್ಯವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಹೊರಗೆ ನಡೆಯುವ ಘಟನಾವಳಿಗಳು ನಮಗೆ ಅಪ್ರಸ್ತುತ. ಕಾಯಿದೆ ಮತ್ತು ಸಂವಿಧಾನವೇ ನಮಗೆ ಪರಮ ಒರೆಗಲ್ಲುಗಳು. ನಮ್ಮ ನ್ಯಾಯ ನಿರ್ಣಯ ಪ್ರಕ್ರಿಯೆ ಈ ಎರಡು ಅಂಶಗಳನ್ನು ಮಾತ್ರವೇ ಆಧರಿಸಿರುತ್ತದೆ ಎಂದು ಸುಪ್ರೀಮ್ ಕೋರ್ಟ್ ನೂರಾರು ಪ್ರಕರಣಗಳಲ್ಲಿ ಸಾರಿರುವುದು ಉಂಟು.

ಆದರೆ ಸುಪ್ರೀಮ್ ಕೋರ್ಟಿನ ನಿಲುವಿಗೆ ಅಲ್ಲಲ್ಲಿ ಬಹುದೊಡ್ಡ ಅಪವಾದಗಳು ಕಾಣಸಿಗುತ್ತವೆ. ಉದಾಹರಣೆಗೆ ಇಂದಿರಾಗಾಂಧೀ ಅವರು ಹೇರಿದ್ದ ತುರ್ತುಪರಿಸ್ಥಿತಿಯ ಕಾಲ. ಹೊರಗಿನ ವಾತಾವರಣದ ಪ್ರಭಾವದಿಂದ ನ್ಯಾಯಾಲಯವೂ ತಪ್ಪಿಸಿಕೊಳ್ಳದೆ ಹೋಯಿತು ಎಂಬ ಮಾತಿಗೆ ಜ್ವಲಂತ ನಿದರ್ಶನವೊಂದು ಇತಿಹಾಸದಲ್ಲಿ ಸದಾ ಕಾಲಕ್ಕೆ ದಾಖಲಾಗಿಬಿಟ್ಟಿತು. ವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಮತ್ತು ಪ್ರಾಣದ ಹಕ್ಕು ಸಂವಿಧಾನವೇ ನೀಡಿರುವ ಮೂಲಭೂತ ಹಕ್ಕುಗಳು (ಈ ಹಕ್ಕುಗಳು ಅನಿರ್ಬಂಧಿತ ಅಲ್ಲ). ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಈ ಎರಡು ಹಕ್ಕುಗಳನ್ನು ಅಮಾನತುಗೊಳಿಸಬಹುದು ಎಂದು ಮುಖ್ಯನ್ಯಾಯಮೂರ್ತಿ ಎ.ಎನ್.ರೇ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ ಬಹುಮತದ ತೀರ್ಪು ನೀಡಿಬಿಟ್ಟಿತ್ತು. ಎ.ಡಿ.ಎಂ.ಜಬ್ಬಲ್ಪುರ ಪ್ರಕರಣ ಎಂದೇ ಜನಜನಿತವಾದ ತೀರ್ಪು ಇದು. ಈ ನ್ಯಾಯಪೀಠದಲ್ಲಿ ಎಚ್.ಆರ್. ಖನ್ನಾ, ಹಮೀದುಲ್ಲಾ ಬೇಗ್, ವೈ.ವಿ.ಚಂದ್ರಚೂಡ್ ಹಾಗೂ ಪಿ.ಎನ್.ಭಗವತಿ ಅವರು ಇದ್ದರು. ಈ ಪೈಕಿ ನ್ಯಾಯಮೂರ್ತಿ ಖನ್ನಾ ಭಿನ್ನಮತದ ತೀರ್ಪು ಬರೆದರು. ನಾಗರಿಕ ಸಮಾಜಗಳಲ್ಲಿ ಪ್ರಾಣದ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳು ಮಾನವ ಜೀವಿಗಳ ಅತ್ಯಮೂಲ್ಯ ಹಕ್ಕುಗಳು…. ಈ ಹಕ್ಕುಗಳನ್ನು ಕಾರ್ಯಾಂಗದ ಪದತಲಕ್ಕೆ ಶರಣಾಗಿಸುವುದನ್ನು ಭಾರತದ ಸಂವಿಧಾನ ಮತ್ತು ಕಾಯಿದೆ ಕಾನೂನುಗಳು ಒಪ್ಪುವುದಿಲ್ಲ. ಈ ಹಕ್ಕುಗಳ ಉಲ್ಲಂಘನೆಯನ್ನು ನ್ಯಾಯಾಲಯದಲ್ಲೂ ಪ್ರಶ್ನಿಸುವಂತಿಲ್ಲ ಎನ್ನುವ ಹಂತದ ಸರ್ವಾಧಿಕಾರವನ್ನು ಕಾರ್ಯಾಂಗಕ್ಕೆ ನೀಡಲು ಅವಕಾಶ ಇಲ್ಲ ಎಂದು ಸಾರಿದರು. ಈ ಭಿನ್ನಮತದ ತೀರ್ಪಿನ ಕಾರಣ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಹುದ್ದೆಗೆ ಬಡ್ತಿಯನ್ನು ನಿರಾಕರಿಸಲಾಯಿತು. ಸೇವಾ ಜ್ಯೇಷ್ಠತೆಯನ್ನು ಅವಗಣಿಸಿ ಅವರಿಗಿಂತ ಕಿರಿಯ ನ್ಯಾಯಮೂರ್ತಿಗೆ ಬಡ್ತಿ ನೀಡಿದ್ದು ತುರ್ತುಪರಿಸ್ಥಿತಿಯ ಅತಿರೇಕಗಳಲ್ಲೊಂದು.

ಮುಂದೊಂದು ದಿನ ಸುಪ್ರೀಮ್ ಕೋರ್ಟ್ ಮುಖ್ಯನ್ಯಾಯಮೂರ್ತಿಯಾದ ಚಂದ್ರಚೂಡ್ ಅವರು ಈ ತೀರ್ಪಿಗಾಗಿ ಕ್ಷಮೆ ಯಾಚಿಸಿದರು. ಪಿ.ಎನ್.ಭಗವತಿ ಪಶ್ಚಾತ್ತಾಪಪಟ್ಟರು. ಇಂತಹ ತೀರ್ಪಿನಲ್ಲಿ ಭಾಗಿಯಾಗುವುದರ ಬದಲು ತಾವು ರಾಜೀನಾಮೆ ನೀಡುವುದೇ ಲೇಸಿತ್ತು ಎಂದರು.

ಮಂದಿರ ಮಸೀದಿ ತೀರ್ಪು ಮತ್ತು ಎ.ಡಿ.ಎಂ.ಜಬ್ಬಲ್ಪುರ ತೀರ್ಪು ತೀರಾ ಭಿನ್ನವಾದ ತೀರ್ಪುಗಳು. ಸ್ವರೂಪದಲ್ಲಿ ಒಂದಕ್ಕೊಂದು ಸಂಬಂಧವಿಲ್ಲ. ಆದರೆ ನ್ಯಾಯಾಲಯದ ಹೊರಗಿನ ವಾತಾವರಣವೂ ನ್ಯಾಯಾಲಯದ ತೀರ್ಪಿನ ಮೇಲೆ ಪರಿಣಾಮ ಬೀರಬಲ್ಲದು ಎಂಬ ಮಾತಿಗೆ ಉದಾಹರಣೆಯಾಗಿ ಮಾತ್ರವೇ ಈ ತೀರ್ಪನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಮಂದಿರ-ಮಸೀದಿ ವಿವಾದದ ತೀರ್ಪಿನಲ್ಲೂ ಬಾಹ್ಯ ವಾತಾವರಣ ಪ್ರಭಾವ ಬೀರಿರುವ ಸಾಧ್ಯತೆಗಳನ್ನು ತಳ್ಳಿ ಹಾಕಲು ಬರುವುದಿಲ್ಲ. ಆದರೆ ಹಾಲಿ ಪ್ರಭಾವದ ಹಿಂದೆ ಸಾಮಾಜಿಕ ಶಾಂತಿ ಸಾಮರಸ್ಯಗಳನ್ನು ಕಾಪಾಡುವ ‘ಸದಾಶಯ’ದ ಹಿರಿಯ ಉದ್ದೇಶ ಇದ್ದೀತು. ನ್ಯಾಯಾಲಯದ ಹೊರಗಿನ ಇಂದಿನ ವಾತಾವರಣ ಹಿಂದುಸ್ತಾನ ಹಿಂದೆಂದೂ ಕಾಣದಂತಹುದು. ಉಗ್ರ ಹಿಂದುತ್ವ ಮತ್ತು ಆಕ್ರಮಣಕಾರಿ ರಾಷ್ಟ್ರವಾದಗಳು, ದೈತ್ಯ ಮತ್ತು ನಿರ್ದಯೀ ಬಹುಸಂಖ್ಯಾತ ವಾದವನ್ನು ಕಟೆದು ನಿಲ್ಲಿಸಿವೆ. ಈ ವಿವಾದವು 1989ರಿಂದ ದೇಶವನ್ನು ಉದ್ದಗಲಕ್ಕೆಹರಿಯ ಬಿಟ್ಟ ಹಿಂಸೆ ದ್ವೇಷ ತಿರಸ್ಕಾರ ಕೋಮು ಧೃವೀಕರಣದ ಹೆದ್ದೆರೆಗಳ ಭಯಾನಕ ಇತಿಹಾಸ ಪ್ರಾಯಶಃ ನ್ಯಾಯಾಲಯದ ಗಮನದಲ್ಲಿ ಇದ್ದಿರಬೇಕು. ಅಂತಹ ಮತ್ತೊಂದು ಉತ್ಕಟ ಸಂಕಟವನ್ನು ದೇಶ ಹಾದು ಹೋಗುವುದು ಬೇಡ ಎಂಬ ಸದಾಶಯ ಕೆಲಸ ಮಾಡಿದ್ದೀತು. ತೀರ್ಪು ಯಾರ ಪರವಾಗಿ ಬಂದರೂ ಒಬ್ಬರು ಸೋತರು ಮತ್ತೊಬ್ಬರು ಗೆದ್ದರು ಎಂದು ಭಾವಿಸುವುದು ಬೇಡ ಎಂಬ ವಿವೇಕದ ಮಾತುಗಳನ್ನು ಆಳುವ ಪಕ್ಷ ಮತ್ತು ಅದರ ಹಿಂದಿನ ಪರಿವಾರ ಆಡಿದ್ದು ಮೇಲ್ನೋಟಕ್ಕೆ ಪ್ರಶಂಸನೀಯ. ಆದರೆ ಆಳುವ ಪಕ್ಷ ಮತ್ತು ಅದರ ಬೆನ್ನಿಗಿರುವ ಪರಿವಾರ 1989ರಿಂದ ದೇಶದ ಬಹುಸಂಖ್ಯಾತರ ಸಾಮೂಹಿಕ ಮನಸ್ಥಿತಿಯನ್ನು ಬಹುತೇಕ ಹಿಂದೂರಾಷ್ಟ್ರದ ಪರಿಕಲ್ಪನೆಯ ಪರವಾಗಿ ಪ್ರಚೋದಿಸಿ ತಿದ್ದಿ ತೀಡಿ ರೂಪಿಸಿಬಿಟ್ಟಿದೆ. ದಶಕಗಟ್ಟಲೆ ‘ಮಂಡಲ’ವನ್ನು ಕುದಿಸಿ ಮಾಡಿದ ‘ಕಮಂಡಲ’ದ ಕಡುಪಾಕವನ್ನು ದಿನ ಬೆಳಗಾಗುವುದರ ಒಳಗೆ ಬದಲಾಯಿಸುವುದು ಸಾಧ್ಯವಿಲ್ಲ. ಈ ನಗ್ನ ವಾಸ್ತವ ಖುದ್ದು ಆಳುವ ಪಕ್ಷ ಮತ್ತು ಪರಿವಾರಕ್ಕೆ ಚೆನ್ನಾಗಿ ಗೊತ್ತು. ಇನ್ನು ಈ ನಿಷ್ಠುರ ಸತ್ಯ ದೇಶದ ಅತ್ಯುನ್ನತ ನ್ಯಾಯಸ್ಥಾನಕ್ಕೆ ತಿಳಿಯದೆ ಇದ್ದೀತೇ? ಹೀಗಾಗಿ ಮತ್ತೊಂದು ಕಡುದ್ವೇಷದ ಹೀನ ಹಿಂಸೆಯ ಹೆದ್ದೆರೆ ದೇಶದ ಸಮಾಜಜೀವನವನ್ನು ಅಪ್ಪಳಿಸುವ ಸಾಧಕ ಬಾಧಕಗಳು ನ್ಯಾಯಮೂರ್ತಿಗಳ ಕಣ್ಣ ಮುಂದೆ ಸುಳಿದಿರಲೇಬೇಕು. ಹೀಗಾಗಿಯೇ ನ್ಯಾಯ ನೀಡಿಕೆಯ ಉದಾತ್ತ ತತ್ವವು, ಕೇವಲ ವಿವಾದ ಇತ್ಯರ್ಥದ ಅನುಸಂಧಾನಕ್ಕೆ ಇಳಿದಿರಬೇಕು. ನ್ಯಾಯ ನೀಡಿಕೆ ಬೇರೆ. ವಿವಾದದ ಇತ್ಯರ್ಥ ಬೇರೆ ಎಂಬುದನ್ನು ಗಮನಿಸಬೇಕಿದೆ. ನ್ಯಾಯ ನೀಡಿಕೆಗೆ ಆದ್ಯತೆ ದೊರೆತಿದ್ದರೆ 2.77 ಎಕರೆ ಜಾಗದಲ್ಲಿ ಮಂದಿರ-ಮಸೀದಿಗಳೆರಡೂ ಸಹಬಾಳ್ವೆ ನಡೆಸಬೇಕಿತ್ತು. 1992ರ ಡಿಸೆಂಬರ್ 6ರ ಮುನ್ನ ನಿಂತಿದ್ದ ಮಸೀದಿಯ ಅಸ್ತಿತ್ವವನ್ನು ಮೂಲೆಗೆ ಸರಿಸುವುದೂ ಸಾಧ್ಯವಿರುತ್ತಿರಲಿಲ್ಲ. ಅಸ್ತಿತ್ವವನ್ನು ಮೂಲೆಗೆ ಒತ್ತಲಾಗಿದೆ ಎಂಬ ಕಾರಣಕ್ಕಾಗಿಯೇ ಮಸೀದಿ ನಿರ್ಮಾಣಕ್ಕೆಂದು ಐದು ಎಕರೆಯ ಜಾಗೆಯನ್ನು ನಷ್ಟಪರಿಹಾರ ರೂಪದಲ್ಲಿ ನೀಡಲಾಗಿದೆ. ಈ ಮೂಲಕ ತನ್ನ ತೀರ್ಪನ್ನು ಕೇವಲ ವಿವಾದ ಇತ್ಯರ್ಥದ ಹಂತದಿಂದ ನ್ಯಾಯ ನೀಡಿಕೆಯ ಎತ್ತರಕ್ಕೆ ಏರಿಸುವ ಪ್ರಯತ್ನವನ್ನು ನ್ಯಾಯಾಲಯ ನಡೆಸಿದೆ.

ದೇಶದ ರಾಜಕೀಯ ಚಿತ್ರದ ಗಾಲಿ ಒಂದು ಸುತ್ತು ತಿರುಗಿದೆ. ಮೂರು ದಶಕಗಳ ಹಿಂದೆ ಸಾಮಾಜಿಕ ನ್ಯಾಯ ಮತ್ತು ತಳವರ್ಗಗಳ ಅಸ್ಮಿತೆಯನ್ನು ಎತ್ತಿ ಹಿಡಿದಿದ್ದ ಮಂಡಲ್ ಶಕ್ತಿಗಳು ಕಮಂಡಲದ ಶಕ್ತಿಯ ಮುಂದೆ ಸಂಪೂರ್ಣ ಸೊರಗಿ ಮಲಗಿರುವುದೇ ಇಂದಿನ ಕಟು ವಾಸ್ತವ.

ಗಾಲಿ ಪುನಃ ತಿರುಗುವುದೇ? ಕಾಲವೇ ಹೇಳಬೇಕಿದೆ

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಇನ್ನೂ ಕ್ಷೇತ್ರದ ಗುಟ್ಟು ಬಿಟ್ಟುಕೊಡದ ಮಾಜಿ ಸಿಎಂ ಸಿದ್ದರಾಮಯ್ಯ..! : Siddaramaiah Still Not Giving Up The Secret Of The Constituency
Top Story

ಇನ್ನೂ ಕ್ಷೇತ್ರದ ಗುಟ್ಟು ಬಿಟ್ಟುಕೊಡದ ಮಾಜಿ ಸಿಎಂ ಸಿದ್ದರಾಮಯ್ಯ..! : Siddaramaiah Still Not Giving Up The Secret Of The Constituency

by ಪ್ರತಿಧ್ವನಿ
March 21, 2023
₹7.20 ಲಕ್ಷ ಮೌಲ್ಯದ 14 ಬೈಕ್‌ಗಳು ವಶಪಡಿಸಿಕೊಂಡ ಬೀದರ್‌ ಪೊಲೀಸರು : Bidar police seized 14 bikes worth ₹7.20 lakh
Top Story

₹7.20 ಲಕ್ಷ ಮೌಲ್ಯದ 14 ಬೈಕ್‌ಗಳು ವಶಪಡಿಸಿಕೊಂಡ ಬೀದರ್‌ ಪೊಲೀಸರು : Bidar police seized 14 bikes worth ₹7.20 lakh

by ಪ್ರತಿಧ್ವನಿ
March 20, 2023
VARTHUR PRAKSH |ಕೋಲಾರದಲ್ಲಿ ಗೆಲ್ಲಲು ಆಗುವುದಿಲ್ಲ ಅಂತ ಸಿದ್ದರಾಮಯ್ಯ ಯುಟರ್ನ್ : ವರ್ತೂರು ಪ್ರಕಾಶ್ #PRATIDHVANI
ಇದೀಗ

VARTHUR PRAKSH |ಕೋಲಾರದಲ್ಲಿ ಗೆಲ್ಲಲು ಆಗುವುದಿಲ್ಲ ಅಂತ ಸಿದ್ದರಾಮಯ್ಯ ಯುಟರ್ನ್ : ವರ್ತೂರು ಪ್ರಕಾಶ್ #PRATIDHVANI

by ಪ್ರತಿಧ್ವನಿ
March 20, 2023
DAKSHINA KANNADA : ದಕ್ಷಿಣ ಕನ್ನಡದ ಈ ಮೂರು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಯಾಕಾಗಿಲ್ಲ?? | CONGRESS
ಇದೀಗ

DAKSHINA KANNADA : ದಕ್ಷಿಣ ಕನ್ನಡದ ಈ ಮೂರು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಯಾಕಾಗಿಲ್ಲ?? | CONGRESS

by ಪ್ರತಿಧ್ವನಿ
March 26, 2023
AARADHYA | ಪೆಂಟಗನ್ ಸಿನಿಮಾದ ಪುಟ್ಟ ಪ್ರತಿಭೆಯ ಸಿಹಿ ಮಾತು.. #PRATIDHVANI
ಇದೀಗ

AARADHYA | ಪೆಂಟಗನ್ ಸಿನಿಮಾದ ಪುಟ್ಟ ಪ್ರತಿಭೆಯ ಸಿಹಿ ಮಾತು.. #PRATIDHVANI

by ಪ್ರತಿಧ್ವನಿ
March 23, 2023
Next Post
ಶಾಸಕರು ಅನರ್ಹ

ಶಾಸಕರು ಅನರ್ಹ, ಚುನಾವಣೆ ಸ್ಪರ್ಧೆಗೆ ಅರ್ಹ!

ಹಲವು ಪ್ರಶ್ನೆಗಳಿಗೆ ಉತ್ತರ ಕೊಡದ ಸುಪ್ರೀಂ ತೀರ್ಪು!

ಹಲವು ಪ್ರಶ್ನೆಗಳಿಗೆ ಉತ್ತರ ಕೊಡದ ಸುಪ್ರೀಂ ತೀರ್ಪು!

ಬಿಎಸ್ಎನ್ಎಲ್ ಸ್ವಯಂ ನಿವೃತ್ತಿ ಯೋಜನೆಯಿಂದಾಗುವ ದೀರ್ಘಕಾಲದ ಪರಿಣಾಮಗಳೇನು?

ಬಿಎಸ್ಎನ್ಎಲ್ ಸ್ವಯಂ ನಿವೃತ್ತಿ ಯೋಜನೆಯಿಂದಾಗುವ ದೀರ್ಘಕಾಲದ ಪರಿಣಾಮಗಳೇನು?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist