ನರೇಂದ್ರ ಮೋದಿ ಪ್ರಧಾನ ಮಂತ್ರಿ ಆದ ಬಳಿಕ ಇದೇ ಮೊದಲ ಬಾರಿಗೆ ಏಕಕಾಲಕ್ಕೆ ಇಷ್ಟೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದೆಡೆ ಕರೋನಾ ಸಮಸ್ಯೆ, ಇನ್ನೊಂದೆಡೆ ಭಾರತ ಮತ್ತು ಚೀನಾ ನಡುವಿನ ಗಡಿ ಉದ್ವಿಗ್ನತೆ, ಮತ್ತೊಂದೆಡೆ ಆರ್ಥಿಕ ಬಿಕ್ಕಟ್ಟುಗಳು ಕಾಡಲಾರಂಭಿಸಿವೆ. ಇವೆಲ್ಲವುಗಳನ್ನು ಅವರು ಮತ್ತು ಅವರ ಸರ್ಕಾರ ನಿಭಾಯಿಸಿರುವ ರೀತಿಯ ಬಗ್ಗೆ ಹಲವು ಪ್ರಶ್ನೆಗಳು, ಅನುಮಾನಗಳು ಹುಟ್ಟಿಕೊಂಡಿವೆ.
ಇವು ಜನರ ಮಧ್ಯೆ, ಮಾಧ್ಯಮದಲ್ಲಿ ಚರ್ಚೆ ಆಗುವುದರ ಜೊತೆಜೊತೆಗೆ ಸಂಸತ್ತಿನ ಅಧಿವೇಶನದಲ್ಲೂ ಚರ್ಚೆ ಆಗಬೇಕಿದೆ. ಚರ್ಚೆಗೆ ಪ್ರತಿಪಕ್ಷಗಳು ಪ್ರಸ್ತಾಪಿಸುತ್ತವೆ ಎಂಬ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಕರೋನಾ ನೆಪವೊಡ್ಡಿ ಅಧಿವೇಶನವನ್ನು ಎಷ್ಟು ಸಾಧ್ಯವೋ ಅಷ್ಟು ಮುಂದೂಡಲು ಯತ್ನಿಸುತ್ತಿದೆ. ಆದರೆ ಸಂಸತ್ ಅಧಿವೇಶನ ಮುಂದೂಡುವುದು ಅಷ್ಟು ಸುಲಭದ ಕೆಲಸವಲ್ಲ.
ಏಕೆಂದರೆ, ಸಂಸತ್ತಿನ ನಿಯಮಾವಳಿಗಳ ಪ್ರಕಾರ ಸೆಪ್ಟೆಂಬರ್ 23 ರೊಳಗೆ ಮುಂಗಾರಿನ ಅಧಿವೇಶನ ನಡೆಯಬೇಕು. ಜೊತೆಗೆ ಸುಮಾರು ಒಂದು ತಿಂಗಳ ಕಾಲ ನಡೆಯಬೇಕು. ಅದೇ ಕಾರಣಕ್ಕೆ ಆಗಸ್ಟ್ ಮೂರು ಅಥವಾ ನಾಲ್ಕನೇ ವಾರದಲ್ಲಿ ನಡೆಸಬಹುದು ಎಂದು ಕೂಡ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯಿಂದಾಗಲಿ, ಸಂಸತ್ ಸಚಿವಾಲಯದ ಮೂಲಗಳಿಂದಾಗಲಿ, ರಾಜ್ಯಸಭಾ ಅಥವಾ ಲೋಕಸಭಾ ಸ್ಪೀಕರ್ ಕಚೇರಿಗಳಿಂದಾಗಲಿ ಅಧಿಕೃತವಾದ ಮಾಹಿತಿ ಹೊರಬಿದ್ದಿಲ್ಲ.
ಇದಲ್ಲದೆ, ಈ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ 11 ಸುಗ್ರೀವಾಜ್ಞೆಗಳಿಗೆ ಅನುಮೋದನೆ ಪಡೆಯಬೇಕಿದೆ. ಯಾವುದೇ ಸುಗ್ರೀವಾಜ್ಞೆಗೆ ಆರು ತಿಂಗಳ ಒಳಗೆ ಸಂಸತ್ತಿನ ಅನುಮೋದನೆ ದೊರೆಯದಿದ್ದರೆ ಅದರ ಸಾಂವಿಧಾನಿಕ ಸಿಂಧುತ್ವ ಇಲ್ಲವಾಗುತ್ತದೆ. ಆಗ ಕೇಂದ್ರ ಸರ್ಕಾರ ಅದೇ ವಿಷಯಗಳನ್ನಾಧರಿಸಿ ಮತ್ತೊಮ್ಮೆ ಸುಗ್ರೀವಾಜ್ಞೆಗಳನ್ನು ಹೊರಡಿಸಬೇಕಾಗುತ್ತದೆ. ಜೊತೆಗೆ ಆ ಸುಗ್ರೀವಾಜ್ಞೆಗಳಿಗೆ ಸಚಿವ ಸಂಪುಟದ ಒಪ್ಪಿಗೆಯನ್ನೂ ಪಡೆಯಬೇಕಾಗುತ್ತದೆ.
ಈ ಕಾರಣಗಳಿಂದ ಕೇಂದ್ರ ಸರ್ಕಾರ ಮನಸ್ಸಿಲ್ಲದಿದ್ದರೂ ಮುಂಗಾರು ಅಧಿವೇಶನವನ್ನು ನಡೆಸಲೇಬೇಕಿದೆ. ಹಾಗಾಗಿ ಈ ಬಾರಿ ‘ಶಾಸ್ತ್ರಕ್ಕೆ ನಡೆಯುವ’ ಸಾಧ್ಯತೆಯೇ ಹೆಚ್ಚು ಎಂದು ಕೂಡ ಹೇಳಲಾಗುತ್ತಿದೆ. ಅದು ಹೇಗೆಂದರೆ ಅಧಿವೇಶನ ಆರಂಭಿಸಿ, ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮತ್ತಿತರ ಸಂಪ್ರದಾಯಗಳನ್ನು ಪಾಲಿಸಿ ನಂತರ ನೇರವಾಗಿ ಸುಗ್ರೀವಾಜ್ಞೆಗಳ ಮಸೂದೆ ಮಂಡನೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಪ್ರತಿಪಕ್ಷಗಳು ಸಹಜವಾಗಿ ಕರೋನಾ, ಚೀನಾ, ಆರ್ಥಿಕ ದಿವಾಳಿತನದ ಬಗ್ಗೆ ಚರ್ಚೆಗೆ ಅವಕಾಶ ಕೇಳುತ್ತವೆ. ಆದರೆ ಆ ವಿಷಯಗಳನ್ನು ಚರ್ಚೆಗೆ ಅವಕಾಶ ನೀಡದೆ ಬಹುಮತ ಇರುವುದರಿಂದ ಸುಗ್ರೀವಾಜ್ಞೆಗಳಿಗೆ ಅನುಮೋದನೆ ಪಡೆದು ನಂತರ ಕರೋನಾ ಉಲ್ಭಣಿಸುತ್ತಿದೆ ಎಂಬ ಕಾರಣ ನೀಡಿ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗುತ್ತದೆ ಎಂದು ಕೂಡ ಹೇಳಲಾಗುತ್ತಿದೆ.

ಹೀಗೆ ಮಾಡುವ ಮೂಲಕ ಅಧಿವೇಶನ ನಡೆಸಬೇಕಾದ ನಿಯಮಾವಳಿ ಪಾಲನೆ ಮಾಡಿದಂತೆ ಆಗುತ್ತದೆ, ಸುಗ್ರೀವಾಜ್ಞೆಗಳಿಗೆ ಸಂಸತ್ತಿನ ಅನುಮೋದನೆ ಪಡೆದಂತೆ ಆಗುತ್ತದೆ ಹಾಗೂ ಕರೋನಾ ಸಮಸ್ಯೆ, ಗಡಿ ಉದ್ವಿಗ್ನತೆ ಹಾಗೂ ಆರ್ಥಿಕ ಬಿಕ್ಕಟ್ಟಿನ ಚರ್ಚೆಯಿಂದ ಪಾರಾದಂತೆಯೂ ಆಗುತ್ತದೆ ಎಂಬುದು ಕೇಂದ್ರ ಸರ್ಕಾರದ ನಿಲುವಾಗಿದೆ. ಕರೋನಾ ಹೆಸರೇಳಿಕೊಂಡು ಈ ಉದ್ದೇಶ ಈಡೇರಿಸಿಕೊಳ್ಳುವುದಕ್ಕೆ ಪೂರಕವಾಗಿ ಹಲವು ವೈದ್ಯಕೀಯ ತಜ್ಞರು ಆಗಸ್ಟ್ ತಿಂಗಳಲ್ಲಿ ದೇಶದಲ್ಲಿ ಕರೋನಾ ಸೋಂಕು ಹರಡುವಿಕೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈಗ ದಿನದಿಂದ ದಿನಕ್ಕೆ ಕರೋನಾ ಪೀಡಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗುತ್ತಲೇ ಇದೆ. ಇದು ಸ್ವಲ್ಪ ಸುಧಾರಿಸಿದರೂ ಒಂದು ತಿಂಗಳಲ್ಲಿ ಗಣನೀಯವಾದ ವ್ಯತ್ಯಾಸವಂತೂ ಕಂಡುಬರುವುದಿಲ್ಲ. ಅದನ್ನೇ ಆಳುವ ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳುತ್ತದೆ ಅಷ್ಟೇ. ಇದಲ್ಲದೆ ಕೆಲವು ಸಂಸದರು ಕೂಡ ಅಧಿವೇಶನ ನಡೆಸುವ ಬಗ್ಗೆ ವಿರೋಧ ಮಾಡುತ್ತಿರುವುದರಿಂದ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡೇ ಅಧಿವೇಶನ ನಡೆಸಬೇಕಾಗಿರುವುದರಿಂದ ಜಾಗದ ಸಮಸ್ಯೆ ಉಂಟಾಗಿರುವುದನ್ನು ಕೂಡ ಕೇಂದ್ರ ಸರ್ಕಾರ ‘ಸದ್ಭಳಕೆ’ ಮಾಡಿಕೊಳ್ಳಲೊರಟಿದೆ.
ಸದ್ಯ ಲೋಕಸಭೆ, ರಾಜ್ಯಸಭೆ, ಎರಡೂ ಸದನಗಳ ಸಂಸದರ ಗ್ಯಾಲರಿಗಳು, ಸ್ಪೀಕರ್ ಗ್ಯಾಲರಿಗಳು, ಸಂದರ್ಶಕರ ಗ್ಯಾಲರಿಗಳು, ಸೆಂಟ್ರಲ್ ಹಾಲ್, ಪಾರ್ಲಿಮೆಂಟ್ ಅನೆಕ್ಸ್ ಬಿಲ್ಡಿಂಗ್, ಲೈಬ್ರರಿ ಬಿಲ್ಡಿಂಗ್, ವಿಜ್ಞಾನ ಭವನಗಳಲ್ಲಿ ನಡೆಸಬಹುದು. ವರ್ಚ್ಯುಯಲ್ ಆಗಿ ಅಧಿವೇಶನ ನಡೆಸಬಹುದು ಎಂದು ಸಂಸತ್ ಸಚಿವಾಲಯದ ಅಧಿಕಾರಿಗಳು ರಾಜ್ಯಸಭೆಯ ಸ್ಪೀಕರ್ ಎಂ. ವೆಂಕಯ್ಯ ನಾಯ್ಡು ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪ್ರಸ್ತಾವನೆ ನೀಡಿದ್ದಾರೆ. ಆದರೆ ಅಧಿವೇಶನ ನಡೆಸಬೇಕು ಎಂಬ ಇಚ್ಛಾಶಕ್ತಿ ಸರ್ಕಾರಕ್ಕೆ ಇರಬೇಕು ಅಲ್ಲವೇ?






