ಪ್ರತ್ಯೇಕ ರಾಜ್ಯ ಕೂಗು ಇಂದಿನದ್ದಲ್ಲ, ತುಂಬಾ ಹಳೆಯದು. ಉತ್ತರ ಕರ್ನಾಟಕಕ್ಕೆ ಸಾಕಷ್ಟು ಬಾರಿ ಅನ್ಯಾಯವಾದಾಗ ಕೇಳಿ ಬರುವ ಕೂಗಿದು. ಅನ್ಯಾಯವೊಂದೇ ಇದರ ಮುಖ್ಯ ಕಾರಣವಲ್ಲ. ಈಗಿನ ಕೂಗಿನಲ್ಲಂತೂ ರಾಜಕೀಯವೇ ಇದರಲ್ಲಿ ಅಡಗಿದೆ ಎಂಬುದು ಬಹಿರಂಗ ಸತ್ಯ. ಸಚಿವ ಸ್ಥಾನದ ಆಕಾಂಕ್ಷಿಯಾದ ಉಮೇಶ ಕತ್ತಿ ಪ್ರತ್ಯೇಕ ರಾಜ್ಯದ ಕೂಗನ್ನು ಮತ್ತೊಮ್ಮೆ ಮೊಳಗಿಸಿದ್ದಾರೆ. ಕಾರಣ, ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವುದು, ರಾಜಕೀಯ ಸ್ವಾರ್ಥ, ಮುಖ್ಯಮಂತ್ರಿಗಳ ವಿರುದ್ಧ ಮುನಿಸು, ಏನೂ ಇರಬಹುದು. ಶುಕ್ರವಾರ ಬೆಳಿಗ್ಗೆ ಬೆಳಗಾವಿಯ ಸಂಕೇಶ್ವರದಲ್ಲಿ ಮಾಧ್ಯಮಗಳ ಮುಂದೆ ಉಮೇಶ ಕತ್ತಿ ಈ ಮಾತನ್ನಾಡಿದರು.
ಕತ್ತಿಯ ಈ ಕಹಳೆ ಕೆಲವರಿಗೆ ಖಾರವಾದರೆ, ಹಲವರಿಗೆ ಅಂದರೆ ಸಾಹಿತಿಗಳಿಗೆ, ಈ ಭಾಗದ ಪರಿಸರವಾದಿಗಳಿಗೆ, ಅಭಿವೃದ್ಧಿ ಚಿಂತಕರಿಗೆ ಹಾಗೂ ಚಿಂತನಾಶೀಲರಿಗೆ ಸರಿಯೆನಿಸಿದೆ. ರಾಜಕೀಯ ಕಾರಣವಿದ್ದರೂ ಈ ಕೂಗು ಸರಿ ಎನ್ನುವ ರಾಜಕಾರಣದ ಹಿನ್ನೆಲೆ ಇಲ್ಲದ ವರ್ಗದ ಜನರ ಮನಸ್ಸಿಗೆ ತೋರಲು ಕಾರಣವಿದೆ. ಪ್ರತಿಯೊಂದು ರಾಜಕೀಯ ಪಕ್ಷದಿಂದಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತ ಬಂದಿದೆ. ಉದಾಹರಣೆಗೆ ಕೊರತೆಯಿಲ್ಲ. ಬರೆಯುತ್ತ ಹೋದರೆ ಪುಸ್ತಕವೇ ಆದೀತು. ಒಟ್ಟು 13 ಜಿಲ್ಲೆಗಳನ್ನು ಹೊಂದಿದ ಈ ಭಾಗ 12 ಕ್ಕೂ ಹೆಚ್ಚು ಸಂಸದರನ್ನು ಹೊಂದಿದೆ. ಎಲ್ಲ ರೀತಿಯ ಸಂಪನ್ಮೂಲಗಳಿದ್ದರೂ ಈ ಭಾಗಕ್ಕೆ ಕೈಗಾರಿಕೆಗಳಾಗಲಿ, ಉತ್ಪಾದನಾ ಕೇಂದ್ರಗಳಾಗಲಿ ಬಂದಿಲ್ಲ. ಕರ್ನಾಟಕದ ಏಕೀಕರಣಕ್ಕೆ ಬಹುದೊಡ್ಡ ಕೊಡುಗೆ ನೀಡಿದರೂ ಅಭಿವೃದ್ಧಿ ವಿಷಯಕ್ಕೆ ಬಂದಾಗ ಇಲ್ಲಿ ತಾರತಮ್ಯ. ಸದ್ಯ ನಡೆಯುತ್ತಿರುವ ಮಹಾದಾಯಿ ಹೋರಾಟ ಇದಕ್ಕೆ ನಿದರ್ಶನ.
ಉತ್ತರ ಕರ್ನಾಟಕ ಬರ ಮತ್ತು ನೆರೆಯಿಂದ ತತ್ತರಿಸಿ ಹೋಗಿದೆ. ಈ ಭಾಗದ ಜನತೆ ಮಳೆಯನ್ನೇ ನಂಬಿದವರು. ಈ ಭಾಗ ಇನ್ನೂ 30 ವರ್ಷಗಳಷ್ಟು ಹಿಂದೆ ಇದೆಯೇನೊ ಎಂಬಂತೆ ಭಾಸವಾಗುತ್ತದೆ. ಇನ್ನೂ ಇಲ್ಲಿ ಜನ ಗುಳೆ ಹೋಗುತ್ತಿದ್ದಾರೆ. ನಂಜುಡಪ್ಪ ವರದಿ ಸಲ್ಲಿಕೆಯಾಗಿ ಅದೆಷ್ಟೋ ವರ್ಷಗಳಾದರೂ ವರದಿಯ ಅನುಷ್ಠಾನ ಮಾತ್ರ ಇನ್ನೂ ಕಾಗದಕ್ಕೆ ಸೀಮಿತವಾಗಿದೆ. ಈ ಭಾಗದವರು ಮುಖ್ಯಮಂತ್ರಿಗಳಾದರೂ ಅಭಿವೃದ್ಧಿಯಿಲ್ಲ.

ಕೈತಪ್ಪಿದ ಕೈಗಾರಿಕೆಗಳು:
ಉತ್ತರ ಕರ್ನಾಟಕದಲ್ಲಿ ಸ್ಥಾಪಿತವಾಗಬೇಕಿದ್ದ ‘ಹೀರೋ ಮೋಟೊಕಾರ್ಪ್, ಧಾರವಾಡದಲ್ಲಿ ಬರಬೇಕಾಗಿದ್ದ ನ್ಯಾನೊ ಕಾರ್ ಘಟಕ, ಗದಗ್ ಜಿಲ್ಲೆಯ ಹಳ್ಳಿಗುಡಿ ಹತ್ತಿರ ಬರಬೇಕಾಗಿದ್ದ ಪೋಸ್ಕೊ ಘಟಕ ಹೀಗೆ ಇಲ್ಲಿ ಬರಬೇಕಾದ ಹಲವು ಕೈಗಾರಿಕೆಗಳು ಕೊನೆಗೂ ಬರಲೇ ಇಲ್ಲ.
ಈ ಭಾಗದಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಕಂಪೆನಿಗಳಿಲ್ಲ. ಹೇಳಿಕೊಳ್ಳುವಂತಹ ಕೈಗಾರಿಕಾ ಘಟಕಗಳಿಲ್ಲ. ಇಲ್ಲಿಯ ವಿದ್ಯಾರ್ಥಿಗಳು ಇಂಜಿನಿಯರ್ ಪದವಿ ಮುಗಿಸಿದ ನಂತರ ಹೋಗುವುದು ಬೆಂಗಳೂರು ಹಾಗೂ ಮುಂಬೈಗೆ. ಇದು ಹೀಗೆ ನಡೆಯುತ್ತಾ ಹೋದರೆ ಮುಂದೆ ಏನಾಗಬಹುದು! ಒಂದೆಡೆ ಗುಳೆ ಹೋಗುವವರು ಇನ್ನೊಂದೆಡೆ ಬ್ರೇನ್ ಡ್ರೇನ್!
ಏನಂದರು ಉಮೇಶ ಕತ್ತಿ:
ಮಹದಾಯಿ ನೀರು ಹರಿಯುವ ಮೂರು ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಇಷ್ಟಾದರೂ ನೀರು ಬಂದಿಲ್ಲ. ಒಂದು ವೇಳೆ ನೀರು ಕೊಡಲು ಸಾಧ್ಯವಾಗದಿದ್ದರೆ ಪ್ರತಿಭಟನೆ ನಡೆಸಲೇ ಬೇಕು. ಮುಂದಿನ ಮಾರ್ಚ್ ವರೆಗೂ ಅಂದರೆ ಬಜೆಟ್ ಅಧಿವೇಶನದ ವರೆಗೂ ಸರ್ಕಾರಕ್ಕೆ ಗಡುವು ನೀಡುತ್ತೇನೆ. ಮಹಾದಾಯಿ ಯೋಜನೆ ಕೈಗೊಳ್ಳದಿದ್ದರೆ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡುತ್ತೇನೆ. ಉತ್ತರ ಕರ್ನಾಟಕದ 13 ಜಿಲ್ಲೆಗಳ ಜೊತೆಗೆ ಮಹಾರಾಷ್ಟ್ರದ ಕೊಲ್ಹಾಪುರ, ಸೊಲ್ಲಾಪುರ ಹಾಗೂ ಸಾಂಗ್ಲಿ ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯ ರಚಿಸಿದರೆ ಈ ಭಾಗದ ಅಭಿವೃದ್ಧಿಯೂ ಸಾಧ್ಯವಾಗಲಿದೆ ಎನ್ನುವುದು ಕತ್ತಿ ಹೇಳಿಕೆ.
ಇವರೇನು ಮಾಡುತ್ತಿದ್ದಾರೆ!
ಈ ಭಾಗದ ಜನಪ್ರತಿನಿಧಿಗಳಿಗೆ ಸ್ಥಾನಗಳೇನು ಸಿಕ್ಕಿಲ್ಲವೆಂಬಂತಿಲ್ಲ. ಸದ್ಯ ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ, ಗೋವಿಂದ ಕಾರಜೋಳ ಕೂಡ. ಬಸವರಾಜ ಬೊಮ್ಮಾಯಿ ಗೃಹ ಸಚಿವರು. ಜಗದೀಶ ಶೆಟ್ಟರ್ ಇವರೆಲ್ಲರಿಗೂ ಈ ಅನ್ಯಾಯ ಸರಿಪಡಿಸುವ ಅಧಿಕಾರ ಸದ್ಯಕಂತೂ ಇದೆ ಅಲ್ಲವೇ! ಇವರಲ್ಲದೇ ಈ ಭಾಗದ ಇನ್ನೂ ಕೆಲವರು ಪ್ರಮುಖ ಖಾತೆಗಳನ್ನು ವಹಿಸಿಕೊಂಡಿದ್ದಾರೆ. ಈ ಮೇಲಿನ ಎಲ್ಲರೂ ಹಿಂದಿನಿಂದಲೂ ತಾರತಮ್ಯ, ಪ್ರಾದೇಶಿಕ ಅಸಮಾನತೆ ಎಂದು ಸಿಡಿದೆದ್ದವರೇ ಅಲ್ಲವೇ! ಈಗಲಾದರೂ ಈ ಕಡೆಗೆ ಕಣ್ಣಾಡಿಸಿ, ಅಭಿವೃದ್ಧಿ ಪಡಿಸಿ, ನಿಮಗೇ ಮತ ಹಾಕುವವರು ಇಲ್ಲಿ ಸಂಕಟದಲ್ಲಿದ್ದವರು!

ಪ್ರಮುಖವಾಗಿ ಏನೇನು ಬೇಕು ಇಲ್ಲಿ?
ಮೊದಲನೆಯದಾಗಿ ನಂಜುಡಪ್ಪ ವರದಿ ಅನುಷ್ಠಾನ. ಈ ವರದಿ ಸಿದ್ಧವಾಯಿತು, ಇದಕ್ಕೊಬ್ಬರನ್ನು ಅಧ್ಯಕ್ಷರನ್ನೂ ನೇಮಿಸಲಾಯಿತು. ಆದರೂ ಅನುಷ್ಠಾನವಾಗಲಿಲ್ಲ. ಸುವರ್ಣ ಸೌಧದ ಸದ್ಭಳಕೆ. 450 ಕೋಟಿ ರೂಪಾಯಿ ಖರ್ಚು ಮಾಡಿ ಇದನ್ನು ನಿರ್ಮಿಸಿದರು. ನಾಮಕಾವಾಸ್ಥೆ ಅನ್ನುವಂತೆ ಚಳಿಗಾಲದ ಅಧಿವೇಶನಕ್ಕಷ್ಟೆ ಇದನ್ನು ಬಳಸಲಾಗುತ್ತದೆ. ಈ ಬಾರಿ ನೆರೆಯ ನೆಪದಿಂದ ಅದೂ ಇಲ್ಲ. ಇಲ್ಲಿ ಪ್ರಮುಖ ಕಚೇರಿಗಳನ್ನು ಸ್ಥಳಾಂತರ ಮಾಡಿ ಬಳಸಬಹುದಲ್ಲವೇ. ಹೊಳೆ ಹಳ್ಳಗಳ ಸಮೀಕ್ಷೆ ಇಲ್ಲಿ ಅತ್ಯಗತ್ಯ.
ಮಹಾದಾಯಿಗೆ ಆದ್ಯತೆ ನೀಡಬೇಕು. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಸಾವಿರಾರು ದಿನದ ಮೇಲೂ ನಡೆಯುತ್ತಿರುವ ಮಹಾದಾಯಿ ಹೋರಾಟದ ಕೂಗನ್ನು ಕೇಳಿಸಿಕೊಳ್ಳುವಂತಾಗಬೇಕು. ಮಹದಾಯಿ ಕಾಮಗಾರಿ ಆರಂಭವಾಗಿ ನೀರು ಸಿಗುವಂತಾಗಬೇಕು. ಕೈಗಾರಿಕೆಗೆ ಆದ್ಯತೆ ನೀಡಿ, ಇಲ್ಲಿ ನಿರುದ್ಯೋಗ ಸಮಸ್ಯೆ ಹಾಗೂ ಗುಳೆ ಹೋಗುವುದನ್ನು ತಡೆಯಬೇಕು.
ಧಾರವಾಡದ ವಿಜಯ ಸತ್ತೂರ, ಖಾಸಗಿ ಸಮಾಲೋಚಕರು ಹಾಗೂ ಸಮಾಜ ಸೇವಕರು ಹೇಳಿದ್ದು, “ಈ ಭಾಗಕ್ಕೆ ಅನ್ಯಾಯವಾಗುತ್ತಿದ್ದು, ಇದರ ಬಗ್ಗೆ ಹಲವಾರು ಬಾರಿ ಧ್ವನಿ ಎತ್ತಿದರೂ ಸಫಲವಾಗಲಿಲ್ಲ. ನಾವು ಆರಿಸಿದ ಪ್ರತಿನಿಧಿಗಳಿಗೆ ಅಧಿಕಾರ ಸಿಕ್ಕಾಗ ಮಾಡಬೇಕಾದುದು ಅವರ ಕರ್ತವ್ಯ. ಮೊದ ಮೊದಲು ಪ್ರತ್ಯೇಕ ರಾಜ್ಯ ಬೇಡವೆನಿಸುತ್ತಿತ್ತು. ಈಗಿನ ಪರಿಸ್ಥಿತಿ ನೋಡಿದ ನಂತರ ಅನಿವಾರ್ಯತೆ ಇದೆ ಎಂದೆನಿಸುತ್ತದೆ. ಇದು ರಾಜಕೀಯವಾಗಿ ಹಲವರಿಗೆ ಲಾಭವಾಗಬಹುದು, ಆದರೆ ಅಭಿವೃದ್ಧಿಯಾದರೆ ಸಾಕು ಎಂದೆನಿಸಿದೆ”.
ವಿನಯ್ ಹುಯಿಲಗೋಳ, ಉದಯವಾಗಲಿ ನಮ್ಮ ಚೆಲುವು ಕನ್ನಡನಾಡು ಬರೆದ ಹುಯಿಲಗೋಳ ನಾರಾಯಣರಾಯರ ಮರಿಮೊಮ್ಮಗ ಹೇಳುವ ಪ್ರಕಾರ, “ಬೇರೆಯದು ಬೇಡ, ನಾರಾಯಣ ರಾಯರ ಮನೆಯನ್ನು ಪ್ರವಾಸಿ ತಾಣ ಮಾಡಿ ಎಂದು ಅರ್ಜಿ ಕೊಟ್ಟು ಕೊಟ್ಟು ಸಾಕಾಯಿತು. ಇದೊಂದು ಉದಾಹರಣೆ ಅಷ್ಟೇ. ಇನ್ನೂ ಹತ್ತು ಹಲವು ಕಾರಣಗಳಿವೆ. ಇಲ್ಲಿಯ ಹಲವು ಜನಪ್ರತಿನಿಧಿಗಳು ಬೆಂಗಳೂರಿಗೆ ಹೋದರೆ ಸಾಕು, ಅವರ ಕಾರ್ಯ ಬಾಹುಳ್ಯವೋ ಅಥವಾ ಏನೋ ನಮ್ಮ ಭಾಗವನ್ನು ಮರೆತೇ ಬಿಡುತ್ತಾರೆ. ಮಾಧ್ಯಮದವರು ಕೇಳಿದಾಗ, ಪರಿಶೀಲನೆ ಮಾಡಿ ಶೀಘ್ರದಲ್ಲಿ ಅಭಿವೃದ್ಧಿ ಕೈಗೊಳ್ಳಲಾಗುವುದು ಎನ್ನುತ್ತಾರೆ. ಶೀಘ್ರವೆಂದರೆ ಎಷ್ಟು ಬೇಗ ಎಂಬುದರ ಅರ್ಥ ನಮಗೆ ಇನ್ನೂ ತಿಳಿದಿಲ್ಲ”.