ಎಪ್ರಿಲ್ 16 ರಂದು ಪೋಲಿಸರ ಸಮ್ಮುಖದಲ್ಲೇ ನಡೆದ ಗುಂಪುಹಲ್ಲೆಯಲ್ಲಿ ಸಾಧುಗಳು ಹಾಗೂ ಕಾರ್ ಡ್ರೈವರ್ ಸೇರಿ ಮೂರು ಮಂದಿ ಸಾವನ್ನಪ್ಪಿದ್ದರು. ಈ ಸಂಬಂಧ ಇಬ್ಬರು ಪೋಲೀಸ್ ಅಧಿಕಾರಿಗಳನ್ನು ವಜಾಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ ಬಂಧಿಸಿದ ಆರೋಪಿಗಳಲ್ಲಿ ಓರ್ವನಲ್ಲಿ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದೆ.
ಪಾಲ್ಘರ್ ಜಿಲ್ಲೆಯ ದಹನು ಪ್ರದೇಶದ ನಿವಾಸಿಯಾಗಿದ್ದ ಆರೋಪಿಯನ್ನು ಎಪ್ರಿಲ್ 17 ರಂದು ಕಾಸ ಪೋಲೀಸರು ಬಂಧಿಸಿದ್ದರು. ಆರೋಪಿಯನ್ನು ದಹನು ಕೋರ್ಟಿಗೆ ಹಾಜರುಪಡಿಸಿದಾಗ ಉಳಿದ 114 ಬಂಧಿತ ಆರೋಪಿಗಳೊಂದಿಗೆ ಮೇ 14ರವರೆಗೆ ಪೋಲಿಸ್ ರಿಮ್ಯಾಂಡಿಗೆ ಕೋರ್ಟ್ ನೀಡಿತ್ತು. ಇದರಂತೆ ಆರೋಪಿಯನ್ನು ಕೊಲೆ ಪ್ರಕರಣದ 20 ಮಂದಿ ಆರೋಪಿಗಳೊಂದಿಗೆ ವಾಡಾ ಪೋಲೀಸ್ ಸ್ಟೇಶನ್ನಿನ ಲಾಕಪ್ನಲ್ಲಿರಿಸಲಾಗಿತ್ತು. ಸಾಮಾಜಿಕ ಅಂತರವನ್ನು ಕಾಪಾಡಲು ಉಳಿದ ಆರೋಪಿಗಳನ್ನು ದಹನು, ಕಾಸ, ವಿಕ್ರಮಗಂಧ್, ತಲಸಾರಿ ಮೊದಲಾದ ವಿವಿಧ ಠಾಣೆಗಳಲ್ಲಿ ಇರಿಸಲಾಗಿತ್ತು .
ಶನಿವಾರದಂದು ಬಂದ ಫಲಿತಾಂಶದಲ್ಲಿ ಆರೋಪಿಗೆ ಕರೋನಾ ಇರುವುದಾಗಿ ಪತ್ತೆ ಹಚ್ಚಲಾಯಿತೆಂದು ಮೆಡಿಕಲ್ ಸುಪರಿಡೆಂಟ್ ಡಾ.ಗವಿತ್ ಹೇಳಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ. ಆರೋಪಿಯ ಜೊತೆಗೆ ಲಾಕಪ್ಪಿನಲ್ಲಿದ್ದ 20 ಸಹಕೈದಿಗಳನ್ನೂ ಸೇರಿ ಅವರೊಡನೆ ಸಂಪರ್ಕಕ್ಕೆ ಬಂದ 23 ಪೋಲೀಸರನ್ನೂ ಕ್ವಾರಂಟೈನಲ್ಲಿಟ್ಟು ಪರೀಕ್ಷಿಸಲಾಗುವುದು ಎಂದು ಸಿವಿಲ್ ಸರ್ಜನ್ ಡಾ. ಕಾಂಚನ್ ವಾನೆರೆ ಹೇಳಿದ್ದಾರೆ.
![](https://pratidhvani.in/wp-content/uploads/2021/02/pratidhvani_2020_04_65a1bf32_9b30_4fc4_94d9_a3e0625f1839_pratidhvani_student_corner-43.jpg)
ಎಪ್ರಿಲ್ 18 ರಂದು ಬಂಧಿಸಿದ ಎಲ್ಲಾ ಆರೋಪಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಯಾರಲ್ಲಿಯೂ ಕರೋನಾ ಪಾಸಿಟಿವ್ ಪತ್ತೆಯಾಗಿರಲಿಲ್ಲ, ಶುಕ್ರವಾರ ಎರಡನೇ ಬಾರಿ ಪರೀಕ್ಷಿಸಿದಾಗ 55 ವರ್ಷದ ಆರೋಪಿಯಲ್ಲಿ ಕರೋನಾ ಪಾಸಿಟಿವ್ ಇರುವುದು ಪತ್ತೆಯಾಗಿದೆಯೆಂದು ಮೂಲಗಳು ತಿಳಿಸಿವೆ. ಪಾಲ್ಘರ್ ಜಿಲ್ಲೆಯಲ್ಲಿ ಇದುವರೆಗೂ 170 ಕರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು 59 ಮಂದಿ ಗುಣಮುಖರಾಗಿದ್ದಾರೆಂದು ವರದಿಗಳು ಹೇಳಿವೆ.
ಎಪ್ರಿಲ್ 16 ರಂದು ಮುಂಬೈಯಿಂದ ಸೂರತ್ಗೆ ಹೋಗುತ್ತಿದ್ದ ಎರಡು ಹಿಂದೂ ಸಾಧುಗಳನ್ನು ಮಕ್ಕಳ ಕಳ್ಳರು ಎಂದು ಭಾವಿಸಿ ಉದ್ರಿಕ್ತ ಗುಂಪು ಭೀಕರವಾಗಿ ಹಲ್ಲೆ ನಡೆಸಿತ್ತು. ಪೋಲೀಸರ ಸಮ್ಮುಖದಲ್ಲೇ ನಡೆದ ಈ ಹಲ್ಲೆಯಲ್ಲಿ ಕಾರ್ ಡ್ರೈವರ್ ಹಾಗೂ ಸಾಧುಗಳು ಸೇರಿ ಮೂರು ಮಂದಿ ಸಾವನ್ನಪ್ಪಿದ್ದರು. ಈ ಸಂಬಂಧ ಇಬ್ಬರು ಪೋಲೀಸ್ ಅಧಿಕಾರಿಗಳನ್ನು ವಜಾಗೊಳಿಸಲಾಗಿತ್ತು.