ದೇಶಾದ್ಯಂತ ಕರೋನಾ ವೈರಸ್ ಸೃಷ್ಟಿಸಿರುವ ತಲ್ಲಣ ಒಂದು ರೀತಿಯ ಭಯಾನಕ ವಾತಾವರಣ ಸೃಷ್ಟಿ ಮಾಡಿದೆ. ಅನಿವಾರ್ಯವಾಗಿ ಲಾಕ್ಡೌನ್ ಮಾಡುವ ಮೂಲಕ ದೇಶದ ಸುರಕ್ಷತೆಯನ್ನು ಕಾಪಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ಕಳೆದ ಗುರುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 22 ರ ಭಾನುವಾರದಂದು ‘ಜನತಾ ಕರ್ಫ್ಯೂʼಆಚರಿಸಿ ಚಪ್ಪಾಳೆ ತಟ್ಟುವಂತೆ ಕೇಳಿದ್ದರು. ಅಂದು ದೇಶದ ಮುಕ್ಕುಮೂಲೆಗಳಿಂದಾನು ಕರೋನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ದಾದಿಯರಿಗಾಗಿ ದೇಶದ ಮಂದಿ ಚಪ್ಪಾಳೆ ತಟ್ಟಿ ಅಭಿನಂದಿಸಿದ್ದರು.
ಆದರೆ ಈ ಚಪ್ಪಾಳೆ ಅದೆಷ್ಟರ ಮಟ್ಟಿಗೆ ವೈದ್ಯಲೋಕವನ್ನು ತಲುಪಿದೆಯೋ ಗೊತ್ತಿಲ್ಲ. ಆದರೆ ಅವರ ಬೇಡಿಕೆಯಂತೂ ಈಡೇರಿಲ್ಲ ಅನ್ನೋದು ಸ್ಪಷ್ಟ. ಆದರೆ ಇದೀಗ ಮತ್ತೊಮ್ಮೆ ದೇಶವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಪಮಟ್ಟಿಗೆ ವೈದ್ಯಲೋಕದ ಬೇಡಿಕೆಗೆ ಸ್ಪಂದಿಸಿದ್ದಾರೆ. ವೈದ್ಯಕೀಯ ವ್ಯವಸ್ಥೆಗಳಿಗಾಗಿ 15 ಸಾವಿರ ಕೋಟಿ ಮಂಜೂರು ಮಾಡಿದ್ದಾರೆ. ಈ ಹದಿನೈದು ಸಾವಿರ ಕೋಟಿಯಲ್ಲಿ ವ್ಯಕ್ತಿ ಸುರಕ್ಷತಾ ಸಲಕರಣೆ, ಟೆಸ್ಟಿಂಗ್ ಲ್ಯಾಬ್ಗಳು ಹಾಗೂ ಅದಕ್ಕೆ ಬೇಕಾದ ವ್ಯವಸ್ಥೆ, ಐಸೋಲೇಷನ್ ವಾರ್ಡ್, ವೆಂಟಿಲೇಟರ್ಸ್ ಹಾಗೂ ಇತರೆ ಅಗತ್ಯ ಸಲಕರಣೆ ಒದಗಿಸುವ ಭರವಸೆ ನೀಡಿದ್ದಾರೆ. ಅಲ್ಲದೇ ಪ್ರತೀ ರಾಜ್ಯ ಸರಕಾರವು ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಲಿ ಅಂತಾನೂ ಕರೆ ನೀಡಿದ್ದಾರೆ. ಇನ್ನು ಬಡವರ ಪರ ದೇಶದ ಜನ ನಿಲ್ಲುವಂತೆಯೂ ಕರೆ ನೀಡಿದ್ದಾರೆ.
ಕಳೆದ ಭಾಷಣದಲ್ಲಿ ಯಾವುದೇ ರೀತಿಲೂ ವೈದ್ಯಕೀಯ ಸೇವೆಗೆ ಬೇಕಾಗಿ ಹಾಗೂ ವೈದ್ಯರ ಸುರಕ್ಷತೆಗೆ ಬೇಕಾಗಿ ಯಾವುದೇ ಹಣಕಾಸು ಬಿಡುಗಡೆ ಮಾಡಿರಲಿಲ್ಲ. ಬರೇ ಮಾರ್ಚ್ 22 ರ ಭಾನುವಾರ ಸಂಜೆ ʼಚಪ್ಪಾಳೆʼತಟ್ಟುವಂತಷ್ಟೇ ಕೇಳಿಕೊಂಡಿದ್ದರು. ಆದರೆ ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಏಕಾಏಕಿ ಸುರಕ್ಷತಾ ಕಿಟ್ಗಳನ್ನ ನೀಡದಿರುವುದರ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತವಾಗಿತ್ತು. ಸ್ವತಃ ವೈದ್ಯರೇ ಒಬ್ಬರು ಅದನ್ನು ಬರೆದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದರು. ಅಲ್ಲದೇ ಪ್ರಧಾನ ಮಂತ್ರಿಯವರ ವೈಯಕ್ತಿಕ ಹಾಗೂ ಕಚೇರಿ ಖಾತೆಗೂ ಟ್ಯಾಗ್ ಮಾಡಿದ್ದರು.
ʼನಿಮ್ಮ ಚಪ್ಪಾಳೆ ಬೇಡ, ಅಗತ್ಯವಿರುವ ವೈದ್ಯಕೀಯ ಸಲಕರಣೆ ಒದಗಿಸಿʼಅಂತಾ ಜಾಲತಾಣದ ಮೂಲಕ ಪ್ರಧಾನಿ ಅವರಿಗೆ ಮನವಿ ಮಾಡಿದ್ದರು. ಅದರಲ್ಲೂ ಹರ್ಯಾಣದ ವೈದ್ಯೆಯೊಬ್ಬರು ʼಪ್ಲೀಸ್… ನಮ್ಮನ್ನು ಶಸ್ತಾಸ್ತ್ರವಿಲ್ಲದೇ ಯುದ್ಧಕ್ಕೆ ಕಳುಹಿಸಬೇಡಿʼ ಎಂದು ಪ್ರಧಾನಿ ಕಚೇರಿಯ ಟ್ವೀಟ್ ಖಾತೆ PMOIndia ಖಾತೆಗೆ ಹ್ಯಾಷ್ ಟ್ಯಾಗ್ ಮಾಡಿದ್ದರು. ಕ್ಷಣಮಾತ್ರದಲ್ಲೇ ಅದನ್ನ ಅನುಸರಿಸಿದ್ದ ನೂರಾರು ವೈದ್ಯರು ಅಂತಹದ್ದೇ ಕಾಮೆಂಟ್ ಮಾಡಿದ್ದರು. ನೋಡು ನೋಡುತ್ತಿದ್ದಂತೆ 10 ಸಾವಿರದಷ್ಟು ಶೇರ್ ಪಡೆಯಿತು. ಅಲ್ಲದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅದೇ ಟ್ವೀಟ್ ಉಲ್ಲೇಖಿಸಿ ಪ್ರತಿಕ್ರಿಯಿಸಿದ್ದರು.

ಇದು ದೇಶದಲ್ಲೇ ಗಮನಸೆಳೆಯುತ್ತಿದ್ದಂತೆ ಮೋದಿ ಮತ್ತೊಮ್ಮೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ಈ ಬಾರಿ ಸ್ಪಂದಿಸುವ ಪ್ರಯತ್ನ ಮಾಡಿದ್ದಾರೆ. N-95 ಮಾಸ್ಕ್, ಸುರಕ್ಷಾ ಉಡುಪು, ವೈಯಕ್ತಿಕ ಸುರಕ್ಷಾ ಸಲಕರಣೆ (PPE)ಗಳನ್ನು ನೀಡುವ ಭರವಸೆ ನೀಡಿದ್ದಾರೆ. ಇದನ್ನೇ ಹರ್ಯಾಣದ ವೈದ್ಯೆ ಡಾ. ಕಾಮ್ನಾ ಕಕ್ಕರ್ ಟ್ವೀಟ್ ಮೂಲಕ ತಿಳಿಸಿದ್ದರು. ವಿಶೇಷ ಅಂದ್ರೆ ಇವರು ಹರ್ಯಾಣ ರಾಜ್ಯದ ಸರಕಾರಿ ವೈದ್ಯೆಯೂ ಆಗಿದ್ದಾರೆ ಎಂದು ಅವರು ತಮ್ಮ ಟ್ವೀಟ್ ಖಾತೆಯಲ್ಲಿ ಉಲ್ಲೇಖಿಸಿಕೊಂಡಿದ್ದರು. ಅದರ ಜತೆಗೆ ಪಾಕಿಸ್ತಾನದ ಯುವ ವೈದ್ಯ ಡಾ. ಉಸಮಾ ರಿಯಾಝ್ ಎಂಬಾತ ಕರೋನಾ ವೈರಸ್ ರೋಗಿಗಳ ಆರೈಕೆ ಸಂದರ್ಭ ಸುರಕ್ಷತಾ ಕವಚಗಳು ಇಲ್ಲದೇ ಸಾವನ್ನಪ್ಪಿರುವ ಕುರಿತು ಮಾಡಲಾದ ಟ್ವೀಟ್ನ್ನು ಉಲ್ಲೇಖಿಸಿದ್ದರು. ಇದರಿಂದಾಗಿ ಸಹಜವಾಗಿಯೇ ಡಾ. ಕಾಮ್ನಾ ಕಕ್ಕರ್ ಟ್ವೀಟ್ ಸಾಕಷ್ಟು ವೈರಲ್ ಆಗಿತ್ತು. ಆದರೆ ಆ ಬಳಿಕ ಅವರು ತಮ್ಮ ಖಾತೆಯಲ್ಲಿ ಕ್ಷಮೆಯಾಚಿಸಿದ್ದಾರೆ. ಅಲ್ಲದೇ ತಮ್ಮ ಖಾತೆಯನ್ನೇ ಬರ್ಖಾಸ್ತುಗೊಳಿಸಿದ್ದಾರೆ. ಅಲ್ಲದೇ ತಾನು ಹಂಚಿಕೊಂಡಿರುವ ಮಾಹಿತಿ ತಪ್ಪಾಗಿದೆ ಅಂತಾನೂ ತಿಳಿಸಿದ್ದಾರೆ. ಆದರೆ ಈ ಮಧ್ಯೆ ಅಸ್ಸಾಂ ನ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಸಂಪೂರ್ಣ ಸುರಕ್ಷತಾ ಉಡುಪು ಇಲ್ಲದ ಕಾರಣ ಪ್ಲಾಸ್ಟಿಕ್ ಬ್ಯಾಗ್ ಅಳವಡಿಸಿಕೊಂಡಿರುವ ಫೋಟೋ ಕೂಡಾ ವೈರಲ್ ಆಗಿ ಸದ್ದು ಮಾಡಿತ್ತು. ಆ ವೈರಲ್ ಟ್ವೀಟ್ಗಳ ಹೊರತಾಗಿಯೂ ಭಾರತದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳು ಇಲ್ಲ ಅನ್ನೋದು ಅಷ್ಟೇ ಸತ್ಯ.


ಇನ್ನು ಇದಾದ ಕೆಲವೇ ಗಂಟೆಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಿದ್ದು, ವೈದ್ಯಕೀಯ ಸೌಲಭ್ಯ ಹಾಗೂ ಸೇವೆಯಲ್ಲಿ ನಿರತರಾದವರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಆದರೆ ವಾಸ್ತವದಲ್ಲಿ ವರದಿಯೊಂದರ ಪ್ರಕಾರ, ಭಾರತದಲ್ಲಿ ಎದುರಾಗಬಹುದಾದ ಕರೋನಾ ತಡೆಗಟ್ಟಲು ಮುಂದಿನ ಎರಡು ತಿಂಗಳ ಮಟ್ಟಿಗೆ ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ನಿರತರಾದವರಿಗೆ 10 ಮಿಲಿಯನ್ ಸರ್ಜಿಕಲ್ ಮಾಸ್ಕ್, 7.25 ಲಕ್ಷ ಸಂಪೂರ್ಣ ಮೈ ಮುಚ್ಚುವ ಉಡುಗೆ, ೬೦ ಲಕ್ಷ N-95 ಮಾಸ್ಕ್, 1 ಕೋಟಿಯಷ್ಟು ಮುಖಗವಸುಗಳ ಅಗತ್ಯತೆ ಇದೆ. ಆದರೆ ಸದ್ಯ ದೇಶದ ಬೆಂಗಳೂರು, ಗುರ್ಗಾಂವ್ ಹಾಗೂ ವಡೋದರಗಳಲ್ಲಿ ತಯಾರಾಗುತ್ತಿರುವ ಅಧಿಕೃತ ಕಂಪೆನಿಯಿಂದ ತಿಂಗಳಿಗೆ ಕೇವಲ ಒಂದು ಲಕ್ಷವಷ್ಟೇ ಉತ್ಪಾದನೆ ಸಾಧ್ಯ.
ವಾಸ್ತವದಲ್ಲಿ ಭಾರತ ಕರೋನಾ ವಿರುದ್ಧದ ಯುದ್ಧ ಗೆಲ್ಲಲು ಆರಂಭಿಕ ಪ್ರಯತ್ನದಲ್ಲಷ್ಟೇ ಇದೆ. ಆದರೂ ಲಾಕ್ಡೌನ್ ಮಾಡುವ ಮೂಲಕ ಇನ್ನೊಂದು ಚೀನಾವಾಗುವುದಾಗಲೀ, ಇಟಲಿಯಾಗುವುದನ್ನಾಗಲೀ ತಡೆಗಟ್ಟುವ ಪ್ರಯತ್ನ ಮಾಡಿದೆ. ಅದಕ್ಕಾಗಿಯೇ ಕೇಂದ್ರ, ರಾಜ್ಯ ಸರಕಾರಗಳೆಲ್ಲ ಲಾಕ್ಡೌನ್ ಮೊರೆ ಹೋಗಿದ್ದಾವೆ. ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಇದಕ್ಕಿಂತ ಭಿನ್ನವಾದ ಮಾರ್ಗ ಇನ್ನೊಂದಿಲ್ಲ ಅನ್ನೋದನ್ನು ಇಟಲಿ, ಚೀನಾದಿಂದ ಕಲಿತಿದ್ದೇವೆ.
ಒಟ್ಟಿನಲ್ಲಿ ಡಾ. ಕಾಮ್ನಾ ಕಕ್ಕರ್ ಟ್ವೀಟ್ ಸಾಕಷ್ಟು ಸುದ್ದು ಮಾಡಿರುವುದು ಸುಳ್ಳಲ್ಲ. ಆದರೆ ಕೆಲವೇ ಹೊತ್ತಿನಲ್ಲಿ ಖಾತೆ ಡಿಲಿಟ್ ಆಗಿದ್ದು, ಖಾತೆಯಯ ಬಗ್ಗೆ ಅನುಮಾನ ಕೂಡಾ ಟ್ವಿಟ್ಟಿಗರು ವ್ಯಕ್ತಪಡಿಸಿದ್ದಾರೆ.ಆದರೂ ವಾಸ್ತವದಲ್ಲಿ ಆಕೆ ಹೇಳಿದ ಪರಿಸ್ಥಿತಿ ದೇಶದಲ್ಲಿ ಇರುವುದು ನಿಜವೇ. ಆದ್ದರಿಂದ ಕರೋನಾ ವಿರುದ್ಧ ʼಸರ್ಜಿಕಲ್ ಸ್ಟ್ರೈಕ್ʼಮಾದರಿಯಲ್ಲಿ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಅಗತ್ಯ ಸುರಕ್ಷತೆ ಬೇಕಿರುವುದು ಸುಳ್ಳಲ್ಲ.