ಹೊಸ ಶತಮಾನದ ಮೊದಲ ದಶಕ ಪೂರೈಸುವ ಹೊತ್ತಿಗೆ ಹಿಂದಿರುಗಿ ನೋಡಿದರೆ, ಇಡೀ ದಶಕದಲ್ಲೇ 2019ನೇ ಸಾಲು ಸರಣಿ ವಿಷೇಶಗಳ ವರ್ಷವಾಗಿ ಇತಿಹಾಸ ಸೇರುತ್ತಿದೆ. ಮತ್ತು ಅತ್ಯಂತ ಮಹತ್ವದ ಬೆಳವಣಿಗೆಗಳನ್ನು ಹೊಸ ವರ್ಷಕ್ಕಷ್ಟೇ ಅಲ್ಲಾ ಹೊಸದೊಂದು ದಶಕಕ್ಕೂ ಕೊಂಡೊಯ್ಯುತ್ತಿದೆ. ಈ ಹೊತ್ತಿನಲ್ಲಿ ಹಿಂತಿರುಗಿ ನೋಡಿದಾಗ ದಾಖಲು ಮಾಡಬೇಕಾದ ಹಲವಾರು ಸಂಗತಿಗಳಿವೆ. ‘ಪ್ರತಿಧ್ವನಿ’ ದಾಖಲಿಸಿದ ದೇಶದ ಆರ್ಥಿಕತೆಯ ಪಾಲಿಗೆ ನಿರ್ಣಾಯಕ ಎನಿಸಿದ ಆಯ್ದ ಪ್ರಮುಖ ಘಟನೆಗಳ ಎರಡನೇ ಭಾಗ ಇಲ್ಲಿದೆ.
ಎರಡನೇ ಅವಧಿಗೆ ಗದ್ದುಗೆ ಏರಿದ ನರೇಂದ್ರ ಮೋದಿ: 2014ರಲ್ಲಿ ಅಧಿಕಾರಕ್ಕೆರಿದ್ದ ನರೇಂದ್ರ ಮೋದಿ ಸರ್ಕಾರ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ದೇಶದ ಆರ್ಥಿಕತೆ ಸುಧಾರಿಸಲಿಲ್ಲ. ಅಪನಗದೀಕರಣ, ಸರಕು ಮತ್ತು ಸೇವಾ ತೆರಿಗೆ ಇತ್ಯಾದಿ ಸುಧಾರಣಾ ಕ್ರಮಗಳು ಆರ್ಥಿಕತೆಗೆ ಚೇತರಿಕೆ ನೀಡುವ ಬದಲು ನಿಧಾನಗತಿ ಬೆಳವಣಿಗೆಗೆ ಕಾರಣವಾದವು. ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಅವ್ಯವಹಾರದ ಆರೋಪದ ನಡುವೆಯೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ದಾಖಲಿಸಿತು. ತತ್ಪರಿಣಾಮ ದೇಶದ ಆರ್ಥಿಕತೆಗೆ ಚೇತರಿಕೆ ಬಾರದಿದ್ದರೂ, ಷೇರುಪೇಟೆಯಲ್ಲಿ ಚೇತರಿಕೆ ಕಂಡು ಬಂತು. ಒಂದೇ ದಿನ ಸೆನ್ಸೆಕ್ಸ್ 1422 ಅಂಶಗಳಷ್ಟು ಜಿಗಿದು ದಾಖಲೆ ಮಾಡಿತು. ಅದಾದ ನಂತರ ಷೇರುಪೇಟೆ ವಿಸ್ತೃತ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಹೊಸ ಹೊಸ ದಾಖಲೆ ಮಾಡುತ್ತಾ ಸರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ. ದೇಶದ ಆರ್ಥಿಕತೆ ಕುಸಿಯುತ್ತಿದ್ದರೂ ಷೇರುಪೇಟೆ ಜಿಗಿಯುತ್ತಿರುವುದು ಜಾಗತಿಕ ಆರ್ಥಿಕ ತಜ್ಞರಿಗೂ ಬಿಡಿಸಲಾಗದ ಒಗಟಾಗಿದೆ.
ಚೀನಾ- ಅಮೆರಿಕ ವ್ಯಾಪಾರ ಸಮರ: ಜಾಗತಿಕ ಮಟ್ಟದಲ್ಲಿ ಮೇಲುಗೈ ಸಾಧಿಸುವ ಉಮೇದಿನಿಂದ ಚೀನ- ಅಮೆರಿಕ ಪರಸ್ಪರ ತೆರಿಗೆ ಹೇರುತ್ತಾ ವ್ಯಾಪಾರ ಸಮರ ಸಾರಿದ್ದರ ನೇರ ಪರಿಣಾಮ ದೇಶದ ಆರ್ಥಿಕತೆ ಮೇಲೂ ಆಗಿದೆ. ಬೃಹತ್ ಪ್ರಮಾಣದ ವ್ಯಾಪಾರ ಸಮರವು ಭಾರತದ ಅಂಗಳಕ್ಕೂ ಕಾಲಿಟ್ಟಿತು. ಟ್ರಂಫ್ ಭಾರತದ ಹಲವು ಸರಕುಗಳ ಮೇಲೆ ತೆರಿಗೆ ಹೇರಲು ಮುಂದಾದರು, ಅಷ್ಟೇ ಅಲ್ಲಾ ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯರ ನಿದ್ದೆಯನ್ನೂ ಕೆಡಿಸಿದರು. ಭಾರತವೂ ಅಮೆರಿಕದ ಸರಕುಗಳ ಮೇಲೆ ತೆರಿಗೆ ಹೇರುವುದಾಗಿ ಘೋಷಿಸಿತು. ಭಾರತದ ಒಟ್ಟಾರೆ ರಫ್ತು ಪ್ರಮಾಣವು ಆಮದು ಪ್ರಮಾಣಕ್ಕೆ ಹೋಲಿಸಿದರೆ ಕಡಮೆ ಇದ್ದರೂ, ಅಮೆರಿಕ- ಭಾರತದ ವ್ಯಾಪಾರದಲ್ಲಿ ರಫ್ತು ಪ್ರಮಾಣವೇ ಹೆಚ್ಚಿದೆ. ಸದ್ಯಕ್ಕೆ ಮಾತುಕತೆಯ ಮೂಲಕ ತೆರಿಗೆ ಹೇರಿಕೆ ಸಮಸ್ಯೆ ಬಗೆಹರಿಸಿಕೊಳ್ಳಲು ಉಭಯ ರಾಷ್ಟ್ರಗಳೂ ಒಪ್ಪಿವೆ. ಆದರೆ, ಜಾಗತಿಕ ಆರ್ಥಿಕ ದಿಗ್ಗಜಗಳ ನಡುವಿನ ವ್ಯಾಪಾರ ಸಮರವು ಆ ದೇಶಗಳ ಹಣಕಾಸು ಮಾರುಕಟ್ಟೆಯನ್ನಷ್ಟೇ ಅಲ್ಲದೇ ಜಾಗತಿಕ ಹಣಕಾಸು ಮಾರುಕಟ್ಟೆಯ ಮೇಲೂ ಅನಿಶ್ಛಿತತೆಯ ಕರಿನೆರಳನ್ನು ದಟ್ಟವಾಗಿ ಚೆಲ್ಲಿತು.
Also Read: ದೇಶದ ಆರ್ಥಿಕ ಸ್ಥಿತಿ ಬದಲಿಸಿದ ವರ್ಷದ ಹನ್ನೆರಡು ವಿದ್ಯಮಾನಗಳೇನು ಗೊತ್ತಾ ?
ಕಾರ್ಪೊರೆಟ್ ವಲಯಕ್ಕೆ ಬೃಹತ್ ತೆರಿಗೆ ಕಡಿತದ ಉಡುಗೊರೆ: ದೇಶದ ಆರ್ಥಿಕ ಬೆಳವಣಿಗೆ ಹಿಂಜರಿತದತ್ತ ದಾಪುಗಾಲು ಹಾಕುವ ಹೊತ್ತಿಗೆ ಕೇಂದ್ರ ಸರ್ಕಾರವು ಕಾರ್ಪೊರೆಟ್ ತೆರಿಗೆಯನ್ನು ಸರಾಸರಿ ಶೇ.35ರಿಂದ ಶೇ.25ಕ್ಕೆ ತಗ್ಗಿಸುವ ನಿರ್ಧಾರ ಪ್ರಕಟಿಸಿತು. ಅಮೆರಿಕದಲ್ಲಿ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೂ ಎರಡೂ ದಿನ ಮುಂಚಿತವಾಗಿ ಘೋಷಣೆ ಮಾಡಲಾದ ಕಾರ್ಪೊರೆಟ್ ತೆರಿಗೆ ಕಡಿತದಿಂದಾಗಿ ಕೇಂದ್ರದ ಬೊಕ್ಕಸಕ್ಕೆ ವಾರ್ಷಿಕವಾಗಿ ಬೀಳುವ ಹೊರೆಯು 1.40 ಲಕ್ಷ ಕೋಟಿ ರುಪಾಯಿಗಳು. ಕಾರ್ಪೊರೆಟ್ ತೆರಿಗೆ ಘೋಷಣೆಯಿಂದಾಗಿ ಜಾಗತಿಕ ಕಾರ್ಪೊರೆಟ್ ವಲಯವು ಮೋದಿ ಸರ್ಕಾರವನ್ನು ಕೊಂಡಾಡಿದರೂ, ದೇಶೀಯ ಆರ್ಥಿಕತಜ್ಞರು ಮಾತ್ರ, ಜನಸಾಮಾನ್ಯರ ಖರೀದಿ ಶಕ್ತಿ ಕುಂದಿರುವ ಹೊತ್ತಿನಲ್ಲಿ ಕಾರ್ಪೊರೆಟ್ ಕುಳಗಳಿಗೆ ತೆರಿಗೆ ಉಡುಗೊರೆ ನೀಡುವುದರ ಔಚಿತ್ಯವನ್ನು ಪ್ರಶ್ನಿಸಿದರು. ಕೊರತೆ ಬೀಳುವ 1.40 ಲಕ್ಷ ಕೋಟಿ ರುಪಾಯಿ ತೆರಿಗೆಯನ್ನು ಹೇಗೆ ಸರಿದೂಗಿಸಲಾಗುತ್ತದೆ ಎಂಬುದನ್ನು ಸದ್ಯಕ್ಕೆ ವಿತ್ತ ಸಚಿವರು ತಿಳಿಸಿಲ್ಲ. ಆದರೆ, ಇದು ದೀರ್ಘಕಾಲದಲ್ಲಿ ಭಾರಿ ಹೊರೆ ಆಗಬಹುದಾದ ದುಬಾರಿ ನಿರ್ಧಾರವಂತೂ ಹೌದು!
ಪ್ರಾದೇಶಿಕ ಸಮಗ್ರ ಆರ್ಥಿಕ ಸಹಕಾರ (ಆರ್ಸಿಇಪಿ) ಒಪ್ಪಂದ ತಿರಸ್ಕಾರ: ದೇಶದ ಕೃಷಿ ಮತ್ತು ಹೈನುಗಾರಿಕೆಯ ಬೆನ್ನುಮೂಳೆಯನ್ನೇ ಮುರಿಯುವ ಆಶಯ ಹೊಂದಿದ್ದ ಆರ್ಸಿಇಪಿಯಿಂದ ಹೊರಗುಳಿಯುವ ಕೇಂದ್ರದ ಸರ್ಕಾರದ ನಿರ್ಧಾರ ಮಹತ್ವದ್ದು. ಪ್ರಾದೇಶಿಕ ಸಮಗ್ರ ಆರ್ಥಿಕ ಸಹಕಾರ ಸಮೂಹ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಲು ನರೇಂದ್ರಮೋದಿ ನೇತೃತ್ವದ ಎನ್ಡಿಎ ಸರ್ಕಾರ ತುದಿಗಾಲಲ್ಲಿ ನಿಂತಿರುವಂತೆಯೇ, ದೇಶವ್ಯಾಪಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಆರ್ಸಿಇಪಿ ವಿರುದ್ಧ ಅಸಮಾಧಾನದ ಕಿಡಿಗಳು ಅಂತರ್ಗತವಾಗಿ ಪ್ರವಹಿಸತೊಡಗಿದ್ದವು. ಆಸಕ್ತ ಜನ ಸಮುದಾಯಗಳು ಆರ್ಸಿಪಿಇ ವಿರುದ್ಧ ಸಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದ್ದ ಪ್ರಚಾರಾಂದೋಲನ ಯಶಸ್ವಿಯಾಯಿತು. ಬಾಂಕಾಂಕ್ ನಲ್ಲಿ ಆರ್ಸಿಇಪಿ ಸಮೂಹ ರಾಷ್ಟ್ರಗಳ ಜತೆಗೆ ಮುಕ್ತ ವ್ಯಾಪಾರಕ್ಕೆ ಒಪ್ಪಂದಕ್ಕೆ ಸಹಿ ಹಾಕುವ ಪೂರ್ವಭಾವಿ ಪ್ರಕ್ರಿಯೆ ಅಕ್ಟೋಬರ್ 23ಕ್ಕೆ ಪೂರ್ಣಗೊಂಡಿತ್ತು. ನವೆಂಬರ್ 1ರಂದು ಮೊದಲ ಹಂತದಲ್ಲಿ ಅಂತಿಮ ಸುತ್ತಿನ ಷರತ್ತುಗಳು, ಒಪ್ಪಂದಗಳು ಪೂರ್ಣಗೊಂಡಿದ್ದವು, ಆದಾಗಲೇ ಮಧ್ಯಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದ ಮೋದಿ ಸರ್ಕಾರ ರೈತ ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿ ಹೆಜ್ಜೆಹಾಕದಿರಲು ನಿರ್ಧರಿಸಿತು. ನವೆಂಬರ್ 4 ರಂದು ಆರ್ಸಿಇಪಿಯಿಂದ ಹೊರಗುಳಿಯುವ ನಿರ್ಣಾಯಕ ನಿರ್ಧಾರವನ್ನು ಮೋದಿ ಸರ್ಕಾರ ಪ್ರಕಟಿಸಿತು.
ಖಾಸಗಿ ವಲಯದ ಬ್ಯಾಂಕುಗಳ ಹಿನ್ನಡೆ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ಬಿ)ನಲ್ಲಿ ನಡೆದ 14,500 ಕೋಟಿ ಹಗರಣದ ನಂತರ ಸಾರ್ವಜನಿಕ ವಲಯದ ಬ್ಯಾಂಕುಗಳ ಬಗ್ಗೆ ಇದ್ದ ವಿಶ್ವಾಸವನ್ನು ಖಾಸಗಿ ವಲಯದ ಬ್ಯಾಂಕುಗಳು ನಿಧಾನವಾಗಿ ಕೊಲ್ಲುತ್ತಾ ಬಂದಿದ್ದವು. ಅಲ್ಲದೇ ಕಾರ್ಪೊರೆಟ್ ವಲಯವೂ ಖಾಸಗಿ ಬ್ಯಾಂಕುಗಳೇ ಶ್ರೇಷ್ಠವೆಂಬ ವಾದ ಮಂಡಿಸಲಾರಂಭಿಸಿದ್ದವು. ಹೊಸ ತಲೆಮಾರಿನ, ತಾಂತ್ರಿಕ ಉನ್ನತಿಯ ಬ್ಯಾಂಕ್ ಆಗಿರುವ ‘ಯೆಸ್ ಬ್ಯಾಂಕ್’ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಪತ್ತೆ ಹಚ್ಚಿದ್ದ ಭಾರತೀಯ ರಿಸರ್ವ್ ಬ್ಯಾಂಕು, ಯೆಸ್ ಬ್ಯಾಂಕ್ ಸ್ಥಾಪಕ ಸಿಇಒ ರಾಣಾ ಕಪೂರ್ ಅವರನ್ನು ಮತ್ತೊಂದು ಅವಧಿಗೆ ಸಿಇಒ ಆಗಿ ನೇಮಕ ಮಾಡುವುದಕ್ಕೆ ಅನುಮತಿ ನೀಡಲಿಲ್ಲ. ಆಂತರಿಕ ಲೆಕ್ಕಪರಿಶೋಧನೆ ನಂತರ ಇಡೀ ಯೆಸ್ ಬ್ಯಾಂಕ್ ತನ್ನ ನಿಷ್ಕ್ರಿಯ ಸಾಲಗಳನ್ನು ಸಕಾಲದಲ್ಲಿ ಘೋಷಣೆ ಮಾಡದೇ, ಅಂಕಿ ಅಂಶಗಳನ್ನು ತಿರುಚಿ ಉತ್ಪ್ರೇಕ್ಷಿತ ಲಾಭವನ್ನು ಘೋಷಣೆ ಮಾಡುತ್ತಲೇ ಬಂದಿರುವುದು ಪತ್ತೆ ಆಯಿತು. ಇದಕ್ಕೆ ಕಡಿವಾಣ ಹಾಕಿದ ನಂತರ ಹೂಡಿಕೆದಾರರ ಡಾರ್ಲಿಂಗ್ ಎನಿಸಿದ್ದ ಯೆಸ್ ಬ್ಯಾಂಕ್ ಷೇರು ಶೇ.80ರಷ್ಟು ಕುಸಿಯಿತು. ಹೂಡಿಕೆದಾರರಿಗೆ ಭಾರಿ ನಷ್ಟವನ್ನುಂಟು ಮಾಡಿತು. ಯೆಸ್ ಬ್ಯಾಂಕ್ ಹಗರಣವೂ ಖಾಸಗಿ ಬ್ಯಾಂಕುಗಳ ಕರಾಳ ಅಧ್ಯಾಯವೊಂದನ್ನು ಬಹಿರಂಗ ಪಡಿಸಿತು.
ಸರಕು ಸೇವಾ ತೆರಿಗೆ ಸುಧಾರಣೆ: 2017ರಲ್ಲಿ ತರಾತುರಿಯಲ್ಲಿ ಜಾರಿ ಮಾಡಲಾಗಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಆರಂಭದಲ್ಲಿದ್ದ ತಾಂತ್ರಿಕ ಅಡಚಣೆ ಮತ್ತು ತೆರಿಗೆದಾರರಲ್ಲಿದ್ದ ಆತಂಕಗಳನ್ನು ನಿವಾರಿಸಿಕೊಳ್ಳುವತ್ತಾ ದಿಟ್ಟ ಹೆಜ್ಜೆ ಇಟ್ಟಿದೆ. ಆದರೆ, ಕೇಂದ್ರ ಸರ್ಕಾರವು ನೀಡಬೇಕಾಗಿರುವ ತೆರಿಗೆ ಪರಿಹಾರ ಮೊತ್ತವು ರಾಜ್ಯಸರ್ಕಾರಗಳಿಗೆ ತಲುಪಿಲ್ಲ. ತೆರಿಗೆ ಸಂಗ್ರಹ ಕುಗ್ಗಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಜಿಎಸ್ಟಿ ಮಂಡಳಿಯು ಪದೇ ಪದೇ ತೆರಿಗೆ ಮಾರ್ಪಾಡು ಮಾಡದಿರಲು ಮತ್ತು ಕೇವಲ ಮೂರು ಹಂತಗಳ ತೆರಿಗೆ ದರವನ್ನು ಉಳಿಸಿಕೊಳ್ಳುವ ಪ್ರಸ್ತಾಪ ಮಾಡಿದೆ. ಮಂಡಳಿ ಸದಸ್ಯರಾಗಿರುವ ಎಲ್ಲಾ ರಾಜ್ಯಗಳ ಹಣಕಾಸು ಸಚಿವರು ಈ ಪ್ರಸ್ತಾಪದ ಬಗ್ಗೆ ಮುಕ್ತಮನಸ್ಸಿನಿಂದಿದ್ದಾರೆ. ಬರುವ ದಿನಗಳಲ್ಲಿ ಅದು ಸಾಧ್ಯವಾಗಬಹುದು. ಜಿಎಸ್ಟಿ ಮೂಲ ಆಶಯಕ್ಕೆ ವಿರುದ್ಧವಾಗಿ ಆರು ಹಂತಗಳ ತೆರಿಗೆ ದರ ಜಾರಿ ಮಾಡಿದ್ದರಿಂದಾದ ಗೊಂದಲಗಳು ಕಾಲಕ್ರಮೇಣ ನಿವಾರಣೆಯಾಗುತ್ತಿವೆ. ಎರಡೂವರೆ ವರ್ಷದಲ್ಲಿ ತೆರಿಗೆದಾರರು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಆಗದೇ ಇರುವುದು ಒಂದು ದೊಡ್ಡ ಸವಾಲಾಗಿದೆ. ಈ ಹಂತದಲ್ಲಿ ಜಿಎಸ್ಟಿ ತೆರಿಗೆ ದರ ಮಾರ್ಪಾಡುವ ಮಾಡುವ (ಹೆಚ್ಚಿಸುವ) ಕೇಂದ್ರದ ಪ್ರಸ್ತಾಪಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸುಮ್ಮನಾಗಿದೆ. ಆ ಅಧಿಕಾರವನ್ನು ಜಿಎಸ್ಟಿ ಮಂಡಳಿಗೆ ಬಿಟ್ಟಿದೆ.