ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಬೆಂಬಲ ಕೋರಿ ಅಖಿಲ ಭಾರತ ವರ್ತಕರ ಒಕ್ಕೂಟ (CAIT) ಮುಖೇಶ್ ಅಂಬಾನಿ, ರತನ್ ಟಾಟಾ, ಅಜೀಂ ಪ್ರೇಮ್ ಜಿ, ರಾಹುಲ್ ಬಜಾಜ್, ಗೌತಮ್ ಅದಾನಿ, ಆನಂದ್ ಮಹೀಂದ್ರ ಸೇರಿದಂತೆ ದೇಶದ 50 ಇತರೆ ಉದ್ಯಮಿಗಳಿಗೆ ಪತ್ರ ಬರೆದಿದೆ. ಪತ್ರದಲ್ಲಿ ʼಭಾರತೀಯ ಸಾಮಾನ್-ಹಮಾರ ಅಭಿಯಾನʼದಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಂಡಿದೆ.
ಚೀನಾ ಪ್ರಾಬಲ್ಯ ಕಡಿಮೆ ಮಾಡಿ ಭಾರತ ಜಾಗತಿಕ ಸೂಪರ್ಪವರ್ ರಾಷ್ಟ್ರವಾಗುವ ಹಾದಿಯಲ್ಲಿ ಚೀನಾ ಸರಕು ಬಹಿಷ್ಕರಿಸುವ ಆಂದೋಲನ ನಿರ್ಣಾಯಕವಾಗಲಿದೆ ಎಂದು ವರ್ತಕರ ಒಕ್ಕೂಟ ನಂಬಿದೆ. ಸಿಎಐಟಿಯಲ್ಲಿ ಭಾರತದ ಸುಮಾರು 6 ಕೋಟಿಯಷ್ಟು ವರ್ತಕರು ಸದಸ್ಯರಾಗಿದ್ದಾರೆ.
ಭಾರತ ಚೀನಾದಿಂದ ಸಿದ್ಧ ಸರಕು, ಕಚ್ಚಾ ವಸ್ತುಗಳು, ಭಾರತದಲ್ಲಿ ಜೋಡಿಸಲು ಬಿಡಿಭಾಗಗಳು ಹಾಗೂ ತಂತ್ರಜ್ಞಾನ ಆಧಾರಿತ ವಸ್ತುಗಳನ್ನು ಆಮದು ಮಾಡುತ್ತಿದೆ. ಹಂತ ಹಂತವಾಗಿ ಚೀನಾ ಸರಕು ಆಮದು ಪ್ರಕ್ರಿಯೆ ಬಹಿಷ್ಕರಿಸಲು ಸಿಎಐಟಿ ಬಯಸಿದೆ. 450 ಬಗೆಯ ಸಿದ್ಧ ವಸ್ತುಗಳನ್ನು ಚೀನಾದಿಂದ ತರಿಸಿಕೊಳ್ಳಲಾಗುತ್ತಿದ್ದು, ಅವುಗಳು ಸುಮಾರು 3,000 ವಸ್ತುಗಳನ್ನು ಒಳಗೊಂಡಿರುತ್ತವೆ. ಭಾರತದಲ್ಲಿ ಈಗಾಗಲೇ ಸಿದ್ಧವಾಗುತ್ತಿರುವ ವಸ್ತುಗಳನ್ನು ಆಧರಿಸಿ ಮೊದಲ ಹಂತದಲ್ಲಿ ಆಮದು ನಿಲ್ಲಿಸಬಹುದಾದ ಪಟ್ಟಿ ಸಿದ್ಧಪಡಿಸಲಾಗಿದೆ.