ಕರೋನಾ ಸೋಂಕಿನ ಭೀಕರತೆ ದೇಶದಲ್ಲಿ ಆತಂಕ ಹುಟ್ಟಿಸಿದೆ. ಕಳೆದ 24 ಗಂಟೆಯಲ್ಲಿ 200ಕ್ಕೂ ಅಧಿಕ ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿ ದಾಟಿದೆ. ಸಾವಿನ ಸಂಖ್ಯೆ ಕೂಡ ದುಪ್ಪಟ್ಟಾಗಿದ್ದು, ಒಟ್ಟಾರೆ ಈವರೆಗೆ ಸಾವು ಕಂಡವರ ಸಂಖ್ಯೆ 50ಕ್ಕೆ ಏರಿದೆ.
ಈ ನಡುವೆ ಮುಂಬೈನ ಧಾರಾವಿಯ ಜನದಟ್ಟಣೆಯ ಕೊಳಗೇರಿಯ 56 ವರ್ಷದ ವ್ಯಕ್ತಿಯೊಬ್ಬರು, ರೋಗಕ್ಕೆ ಬಲಿಯಾಗಿದ್ದು, ಆತ ಕೊಳಗೇರಿಯಿಂದ ಹೊರಹೋಗಿರಲೇ ಇಲ್ಲ ಎನ್ನಲಾಗಿದೆ. ಹಾಗಿದ್ದರೂ ಆತನಲ್ಲಿ ದಿಢೀರ್ ರೋಗ ಲಕ್ಷಣ ಕಾಣಿಸಿಕೊಂಡು ಸಾವಿಗೀಡಾಗಿರುವುದು ದೇಶದಲ್ಲಿ ಕೋವಿಡ್-19 ಮಹಾಮಾರಿ ಸಾಮೂಹಿಕ ಸಾಂಕ್ರಾಮಿಕವಾಗಿ ಹರಡುತ್ತಿರುವ ಅನುಮಾನಗಳನ್ನು ಹುಟ್ಟಿಸಿದೆ. ಇನ್ನೊಂದು ಕಡೆ ದೆಹಲಿಯ ನಿಜಾಮುದ್ದೀನ್ ಮರ್ಕಜ್ ತಬ್ಲೀಖ್ ಜಮಾತ್ ಗೆ ಹೋಗಿದ್ದ ಸಾವಿರಾರು ಜನರಿಗೆ ಸೋಂಕು ತಗಲಿರುವ ಆತಂಕದ ಹಿನ್ನೆಲೆಯಲ್ಲಿ ಸರ್ಕಾರ ವ್ಯಾಪಕ ತಪಾಸಣೆ ಆರಂಭಿಸಿದೆ. ಈ ಸೋಂಕಿತರು ಈಗಾಗಲೇ ಕರ್ನಾಟಕವೂ ಸೇರಿದಂತೆ ದೇಶದ ಮೂಲೆಮೂಲೆಯಲ್ಲಿ ಜನಸಮುದಾಯದ ನಡುವೆ ಬೆರೆತುಹೋಗಿದ್ದು, ಕಳೆದ ಹತ್ತು-ಹದಿನೈದು ದಿನಗಳಿಂದ ಅವರಿಂದ ಸಾವಿರಾರು ಜನರಿಗೆ ಸೋಂಕು ಹರಡಿರುವ ಸಾಧ್ಯತೆ ಇದೆ.
ಈ ನಡುವೆ, ದೇಶದಲ್ಲಿ ದಿಢೀರ್ ಏರಿಕೆಯಾಗುತ್ತಿರುವ ಸೋಂಕಿತರು ಮತ್ತು ಸಾವಿನ ಸಂಖ್ಯೆಗಳು, ಮರ್ಕಜ್ ತಬ್ಲೀಗ್, ವಿವಿಧ ಮಸೀದಿ ಪ್ರಾರ್ಥನೆಗಳು, ವಿವಿಧ ಹಿಂದೂ ಆಶ್ರಮಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ಈಗಾಗಲೇ, ಸೋಂಕನ್ನು ವ್ಯಕ್ತಿಗಳ ಮಟ್ಟದಿಂದ ಸಮುದಾಯದ ಮಟ್ಟಕ್ಕೆ ವಿಸ್ತರಿಸುವ ಭೀತಿ ಹುಟ್ಟಿಸಿವೆ. ಇಂತಹ ಹೊತ್ತಲ್ಲಿ; ಕರೋನಾ ಸೋಂಕಿತರ ಪತ್ತೆ, ಪರೀಕ್ಷೆ, ಪ್ರತ್ಯೇಕಗೊಳಿಸುವಿಕೆ, ಚಿಕಿತ್ಸೆ ಸೇರಿ ಎಲ್ಲಾ ಹಂತಗಳಲ್ಲಿ ಆರೋಗ್ಯ ಸೇನಾನಿಗಳು ಮತ್ತು ಸರ್ಕಾರದ ಮುಂದೆ ದೊಡ್ಡ ಸವಾಲು ಎದುರಾಗಿದೆ. ಈ ಪ್ರತಿಹಂತದಲ್ಲೂ ಆರೋಗ್ಯ ಮತ್ತು ಸ್ವಯಂಸೇವಾ ಸಿಬ್ಬಂದಿ ಸೋಂಕಿಗೆ ತೆರೆದುಕೊಳ್ಳುವ ಅಪಾಯವಿದ್ದೇ ಇದೆ. ಆ ಹಿನ್ನೆಲೆಯಲ್ಲಿ ರೋಗಿಗಳ ಮತ್ತು ವೈದ್ಯಕೀಯ ಸಿಬ್ಬಂದಿಯ ಹಿತ ಕಾಯುವುದು ಈಗ ಬಹಳ ಜರೂರಾಗಿ ಆಗಬೇಕಾದ ಕಾರ್ಯ.
ಆದರೆ, ಸರ್ಕಾರಗಳು ವೈದ್ಯಕೀಯ ಸಿಬ್ಬಂದಿಯ ಜೀವರಕ್ಷಣೆಗೆ ನಿಜವಾಗಿಯೂ ಗಂಭೀರ ಪ್ರಯತ್ನಗಳೂ ನಡೆಸುತ್ತಿವೆಯೇ? ದೇಶದಲ್ಲಿ ಮೊದಲ ಪ್ರಕರಣ ಕಾಣಿಸಿಕೊಂಡ(ಜನವರಿ 30) ಬಳಿಕ ಬರೋಬ್ಬರಿ ಎರಡು ತಿಂಗಳಲ್ಲಿ ಇಂತಹದ್ದೊಂದು ಭೀಕರ ಮಹಾಮಾರಿಯ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡಬೇಕಾದ ಆರೋಗ್ಯ ಇಲಾಖೆಯ ಸಿಬ್ಬಂದಿಯ ಜೀವ ರಕ್ಷಣೆಗೆ ಏನೆಲ್ಲಾ ಕ್ರಮಕೈಗೊಂಡಿದೆ? ಯಾವ ಪೂರ್ವತಯಾರಿ ಮಾಡಿಕೊಂಡಿದೆ? ಮಾಸ್ಕ್, ಕವರಾಲ್, ಗಾಗಲ್ಸ್, ಗ್ಲೋಸ್ ಮತ್ತಿತರ ಜೀವರಕ್ಷಕ ಸೌಲಭ್ಯ(ಪಿಪಿಇ) ಒದಗಿಸುವಲ್ಲಿ ಸರ್ಕಾರ ಯಾವೆಲ್ಲಾ ಪ್ರಯತ್ನ ಮಾಡಿದೆ? ಎಂಬ ಪ್ರಶ್ನೆಗಳಿಗೆ ಸರ್ಕಾರ ಇಷ್ಟು ದಿನ ನೀಡುತ್ತಿದ್ದ ಸಮಜಾಯಿಷಿಗಳು, ಉತ್ತರಗಳ ಅಸಲಿಯತ್ತು ಈಗ ಬಯಲಾಗಲಿದೆ.
ಹಾಗೆ ನೋಡಿದರೆ ಈಗಾಗಲೇ ದೆಹಲಿ, ಉತ್ತರಪ್ರದೇಶ, ಹರ್ಯಾಣ, ಪಶ್ಚಿಮಬಂಗಾಳ ಮುಂತಾದ ಕಡೆ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ, ಪ್ರತಿರೋಧದ ಮೂಲಕ ಜೀವರಕ್ಷಕ ಸಲಕರಣೆಗಳನ್ನು ಒದಗಿಸುವಲ್ಲಿ ಸರ್ಕಾರದ ಉದಾಸೀನ ಧೋರಣೆಯ ವಿರುದ್ಧ ದನಿ ಎತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಮಂಗಳವಾರ ಬರೋಬ್ಬರಿ 4700 ಮಂದಿ ಸರ್ಕಾರಿ ಆ್ಯಂಬುಲೆನ್ಸ್ ಚಾಲಕರು ಪ್ರತಿಭಟನೆ ನಡೆಸಿ, ಪಿಪಿಇ ನೀಡುವವರೆಗೆ ತಾವು ತಮ್ಮ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದಿದ್ದಾರೆ. ಹರ್ಯಾಣದಲ್ಲಿ ಪಿಪಿಇಗಳ ಕೊರತೆಯಿಂದಾಗಿ ಕಂಗೆಟ್ಟಿರುವ ಸರ್ಕಾರಿ ಆಸ್ಪತ್ರೆಗಳ ವೈದ್ಯರು, ಸರ್ಕಾರಕ್ಕೆ ಮೊರೆಯಿಟ್ಟು ಹೈರಾಣಾಗಿ ತಾವೇ ಸ್ವತಃ ತಲಾ ಒಂದು ಸಾವಿರ ರೂ. ದೇಣಿಗೆ ಹಾಕಿ ಪ್ರತ್ಯೇಕ ನಿಧಿ ಮಾಡಿಕೊಂಡು ಅಗತ್ಯ ಪಿಪಿಇ ಸಲಕರಣೆ ಖರೀದಿ ಮಾಡಿದ್ದಾರೆ! ದೆಹಲಿಯಲ್ಲಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿ ತಮ್ಮ ಜೀವಕ್ಕೆ ಸೋಂಕಿನಿಂದ ರಕ್ಷಣೆ ಇಲ್ಲ ಎಂದು ತಮ್ಮ ಕೆಲಸಕ್ಕೇ ರಾಜೀನಾಮೆ ನೀಡುತ್ತಿದ್ದಾರೆ. ಹಾಗಾಗಿ ಅಲ್ಲಿ ಕಳೆದ ಒಂದೆರಡು ದಿನಗಳಿಂದ ಈಚೆಗೆ ಸುಮಾರು 450 ಮೊಹಲ್ಲಾ ಕ್ಲಿನಿಕ್ ಗಳನ್ನು ಮುಚ್ಚಲಾಗಿದೆ.
ಈ ನಡುವೆ, ಸುರಕ್ಷಿತ ವೈಯಕ್ತಿಕ ಸುರಕ್ಷಾ ಸೌಲಭ್ಯ ಮತ್ತು ಸಲಕರಣೆಗಳ ಲಭ್ಯತೆ ಇಲ್ಲದ ಕಾರಣಕ್ಕೆ, ಇರುವ ಸೌಲಭ್ಯಗಳನ್ನೇ ಬಳಸಿ ರೋಗಿಗಳ ಜೀವ ರಕ್ಷಣೆಗೆ ಮುಂದಾದ ಹಲವು ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿ ಸ್ವತಃ ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ದಿನದಿಂದ ದಿನಕ್ಕೆ ಹೀಗೆ ಸೋಂಕಿಗೆ ಗುರಿಯಾಗುತ್ತಿರುವ ಸೇನಾನಿಗಳ ಸಂಖ್ಯೆ ಹೆಚ್ಚುತ್ತಿದ್ದು, ಈಗಾಗಲೇ ಕೆಲವು ವೈದ್ಯರು ಸಾವು ಕಂಡ ವರದಿಗಳೂ ಇವೆ. ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಯ ರೆಸಿಡೆಂಟ್ ವೈದ್ಯರಿಗೇ ಕರೋನಾ ಸೋಂಕು ಧೃಡಪಟ್ಟಿದೆ. ಜೊತೆಗೆ ಇತರ ಬೇರೆ ಬೇರೆ ಆಸ್ಪತ್ರೆಗಳ ಒಟ್ಟು ಮೂವರು ವೈದ್ಯರಿಗೂ ಸೋಂಕು ಇರುವುದು ಪತ್ತೆಯಾಗಿದೆ. ಈವರೆಗೆ ದೆಹಲಿಯೊಂದರಲ್ಲೇ ಸುಮಾರು 10 ಮಂದಿ ವೈದ್ಯರು ಸೋಂಕಿತರಾಗಿದ್ದಾರೆ ಎಂದು ವರದಿಗಳು ಹೇಳಿವೆ. ಜೊತೆಗೆ ಚಂಡೀಗಢದ ಒಬ್ಬ ವೈದ್ಯರು, ಮುಂಬೈನ ಇಬ್ಬರು ದಾದಿಯರಿಗೂ ಗುರುವಾರ ಸೋಂಕು ದೃಢಪಟ್ಟಿದೆ.
ಅಂದರೆ, ದೇಶದಲ್ಲಿ ಕರೋನಾ ಸೋಂಕಿನ ವಿರುದ್ಧದ ಸಮರದ ಭಾಗವಾಗಿ ಆದ್ಯತೆಯಾಗಿ ಆಗಲೇಬೇಕಾಗಿದ್ದದ್ದು, ಈ ಮಹಾಮಾರಿಯ ವಿರುದ್ಧದ ಮುಂಚೂಣಿ ಯೋಧರಿಗೆ ಸರಿಯಾದ ಶಸ್ತ್ರಾಸ್ತ್ರಗಳನ್ನು ನೀಡುವುದು. ಆದರೆ, ಸರ್ಕಾರ ಮುಂಚೂಣಿ ಯೋಧರಾದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಕರೋನಾ ವಿರುದ್ಧದ ಹೋರಾಟದ ನಿರ್ಣಾಯಕ ಅಸ್ತ್ರಗಳಾದ ಪಿಪಿಇಗಳನ್ನೇ ಈವರೆಗೆ ಅಗತ್ಯ ಪ್ರಮಾಣದಲ್ಲಿ ಸರಬರಾಜು ಮಾಡಿಲ್ಲ ಎಂಬುದು ಈ ಘಟನೆಗಳಿಂದ ಸಾಬೀತಾಗುತ್ತಿದೆ. ಹಾಗೆ ನೋಡಿದರೆ, ಈ ಎರಡು ತಿಂಗಳಲ್ಲಿ ಸರ್ಕಾರ ದೇಶದ ವೈದ್ಯಕೀಯ ವ್ಯವಸ್ಥೆಯನ್ನು ಕರೋನಾ ವಿರುದ್ಧ ಬಲಪಡಿಸಲು ಮೊದಲ ಮಾಡಬೇಕಿದ್ದ ಕೆಲಸವೇ ಈ ಪಿಪಿಇ ಮತ್ತಿತರ ಮೂಲಭೂತ ಸೌಲಭ್ಯ ಕಲ್ಪಿಸುವುದಾಗಿತ್ತು.
ಆದರೆ, ಅದು ಆಗಿಲ್ಲ ಎಂಬುದಕ್ಕೆ ಸಾಲುಸಾಲು ವೈದ್ಯರು ಚಿಕಿತ್ಸೆಯಿಂದ ಜೀವಕ್ಕೆ ಅಪಾಯ ತಂದುಕೊಂಡಿರುವುದು ಮತ್ತು ಹಲವರು ತಮ್ಮ ಕೆಲಸಕ್ಕೇ ರಾಜೀನಾಮೆ ನೀಡಿ ಜೀವರಕ್ಷಣೆಗೆ ಮುಂದಾಗುತ್ತಿರುವುದು ನಿದರ್ಶನ. ಈ ನಡುವೆ, ಕರೋನಾ ಲಾಕ್ ಡೌನ್ ಘೋಷಣೆಗೆ ಮುನ್ನ ಪ್ರಧಾನಿ ಮೋದಿಯವರು 15 ಸಾವಿರ ಕೋಟಿಯಷ್ಟು ಮೊತ್ತವನ್ನು ಕರೋನಾ ನಿಯಂತ್ರಣ ಮತ್ತು ರೋಗ ಚಿಕಿತ್ಸೆಗೆ ಅಗತ್ಯವಾದ ಪ್ರತ್ತೇಕ ಆಸ್ಪತ್ರೆ, ಪಿಪಿಸಿ, ವೆಂಟಿಲೇಟರು, ಆಕ್ಸಿಜನ್ ಸಿಲಿಂಡರು ಮುಂತಾದ ಸೌಲಭ್ಯಕ್ಕಾಗಿಯೇ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದರು. ಬಳಿಕ ಲಾಕ್ ಡೌನ್ ಘೋಷಿಸಿದ ಮಾರನೇ ದಿನವೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕರೋನಾ ವಿರುದ್ಧದ ಹೋರಾಟಕ್ಕೆ ಮತ್ತು ಲಾಕ್ ಡೌನ್ನಿಂದಾಗಿ ಸಂತ್ರಸ್ತರಾದವರ ನೆರವಿಗೆ ಬರೋಬ್ಬರಿ 1.70 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದರು.
ಆದರೆ ಆ ಎಲ್ಲಾ ಹೇಳಿಕೆಗಳ ಬಳಿಕ ಹತ್ತು ದಿನಗಳು ಉರುಳಿದರೂ ಈವರೆಗೆ ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ತಲುಪಬೇಕಾದಷ್ಟು ಪಿಪಿಇಗಳು ತಲುಪಿಲ್ಲ ಎಂಬುದನ್ನು ವೈದ್ಯರ ಸರಣಿ ರಾಜೀನಾಮೆ ಮತ್ತು ಸೋಂಕು ಪ್ರಕರಣಗಳೇ ಹೇಳುತ್ತಿವೆ. ಸದ್ಯದ ಸ್ಥಿತಿಯಲ್ಲೇ ಪರಿಸ್ಥಿತಿ ಹೀಗಾದರೆ, ತಜ್ಞರು ಅಂದಾಜಿಸುತ್ತಿರುವಂತೆ ಮೇ ಮಧ್ಯಭಾಗದ ಹೊತ್ತಿಗೆ ದೇಶದ ಸೋಂಕಿತರ ಸಂಖ್ಯೆ ಒಂದು ಲಕ್ಷಕ್ಕೆ ತಲುಪಿದರೆ ಪರಿಸ್ಥಿತಿ ಏನಾಗಬಹುದು? ಎರಡು ತಿಂಗಳಲ್ಲಿ ಬಹಳ ಸೀಮಿತ ಸಂಖ್ಯೆಯ(ದೇಶದ ಜನಸಂಖ್ಯೆಗೆ ಹೋಲಿಸಿದರೆ) ಸೋಂಕಿತರಿರುವಾಗ ಮತ್ತು ಸೋಂಕು ಬಹಳ ನಿಧಾನಗತಿಯಲ್ಲಿ ಹರಡುತ್ತಿರುವಾಗಲೇ ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ಸೌಲಭ್ಯ ನೀಡಲಾಗಿಲ್ಲ. ಇನ್ನು ಮುಂದಿನ ಎರಡು ತಿಂಗಳಲ್ಲಿ ರೋಗ ಸಮುದಾಯದ ಮಟ್ಟದಲ್ಲಿ ವ್ಯಾಪಕವಾಗಿ ಹರಡಿದರೆ ಪರಿಸ್ಥಿತಿಯನ್ನು ಸರ್ಕಾರ ನಿಭಾಯಿಸಲಿದೆಯೇ ಎಂಬ ಪ್ರಶ್ನೆಗಳೂ ಎದ್ದಿವೆ.
ದೇಶದಲ್ಲಿ ಪ್ರತಿದಿನ ಅಂದಾಜು 5 ಲಕ್ಷ ಪಿಪಿಇಗಳ ಅಗತ್ಯವಿದೆ ಎಂದು ಆರೋಗ್ಯ ಕ್ಷೇತ್ರದ ಪರಿಣಿತರು ಹೇಳಿದ್ದರೆ, ವಾಸ್ತವವಾಗಿ ಸರ್ಕಾರದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿಗಳ ಹೇಳಿಕೆಯ ಪ್ರಕಾರ, ಸದ್ಯ ಒಟ್ಟಾರೆ ಲಭ್ಯವಿರುವುದೇ 3.34 ಲಕ್ಷ ಪಿಪಿಇಗಳು. ಹೆಚ್ಚುವರಿಯಾಗಿ 60 ಸಾವಿರ ಪಿಪಿಇ ಸರಬರಾಜಿಗೆ ಬೇಡಿಕೆ ಸಲ್ಲಿಸಲಾಗಿದೆ ಮತ್ತು ರೆಡ್ ಕ್ರಾಸ್ ಸಂಸ್ಥೆ 10 ಸಾವಿರ ಪಿಪಿಇ ದೇಣಿಗೆ ನೀಡಲಿದೆ ಎಂದು ಹೇಳಲಾಗಿದೆ. ಜೊತೆಗೆ ಚೀನಾ ಮತ್ತು ದಕ್ಷಿಣ ಕೊರಿಯಾದಿಂದ ಸಗಟು ಖರೀದಿ ಮಾಡುವುದಾಗಿಯೂ ಸಚಿವಾಲಯ ಹೇಳಿದೆ.
ಹಾಗಂತ ಸರ್ಕಾರದ ಬಳಿ ಅನುದಾನದ ಕೊರತೆಯಾಗಲೀ, ದೇಶದಲ್ಲಿ ಪಿಪಿಇ ಮುಂತಾದ ವೈದ್ಯಕೀಯ ಸುರಕ್ಷಾ ಸಾಧನಗಳ ಉತ್ಪಾದನೆಯ ಬಿಕ್ಕಟ್ಟಾಗಲೀ ಇಲ್ಲ! ಏಕೆಂದರೆ, ವಾರದಿಂದ ಈಚೆಗೆ ಭಾರತ, ದೂರದ ಸೆರ್ಬಿಯಾಕ್ಕೆ ಬರೋಬ್ಬರಿ 90 ಟನ್ ನಷ್ಟು ಕರೋನಾ ಸಂಬಂಧಿತ ವೈದ್ಯಕೀಯ ಸಲಕರಣೆ ಮತ್ತು ಪಿಪಿಇಗಳನ್ನು ಕಳಿಸಿಕೊಟ್ಟಿದೆ! ತನ್ನದೇ ನೆಲದಲ್ಲಿ ಭಯಾನಕವಾಗಿ ಹರಡುತ್ತಿರುವ ರೋಗದ ವಿರುದ್ಧ ಹೋರಾಡಲು ವೈದ್ಯರು, ಜೀವರಕ್ಷಕ ಸುರಕ್ಷಾ ಸಾಧನಗಳಿಲ್ಲದೆ, ಪರಿಪರಿಯಾಗಿ ಬೇಡಿದರೂ ಸರ್ಕಾರಗಳು ಸರಬರಾಜು ಮಾಡಿಲ್ಲ ಎಂಬ ಕಾರಣಕ್ಕೆ ಮಾಮೂಲಿ ರೈನ್ ಕೋಟು, ಹೆಲ್ಮೆಟ್ ಬಳಸಿ ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವಾಗ, ವೈದ್ಯಕೀಯ ವಲಯದ ಆರ್ತನಾದಕ್ಕೆ ಕಿವುಡಾದ ಸರ್ಕಾರ ದೂರದ ದೇಶಕ್ಕೆ ಟನ್ ಗಟ್ಟಲೆ ಸಲಕರಣೆ ರಫ್ತು ಮಾಡಿದೆ!
ಇನ್ನು ದೇಶದಲ್ಲಿ ರೋಗ ಸಮುದಾಯದ ಸೋಂಕಾಗಿ ಬದಲಾಗಿಲ್ಲ ಎಂದು ಐಸಿಎಂಆರ್ ವಾದಿಸುತ್ತಲೇ ಇದೆ. ಆದರೆ, ದಿನದಿಂದ ದಿನಕ್ಕೆ ದಿಢೀರ್ ಏರುತ್ತಿರುವ ಸೋಂಕಿತರ ಸಂಖ್ಯೆ ಮತ್ತು ಧಾರಾವಿಯಂತಹ ಪ್ರದೇಶದ ಸೋಂಕು ಪ್ರಕರಣಗಳು ವಾಸ್ತವ ಬೇರೆಯೇ ಇದೆ ಎಂಬ ಅನುಮಾನ ಹುಟ್ಟಿಸುತ್ತಿವೆ. ಈ ದಿಸೆಯಲ್ಲಿ ಅಸಲೀ ಸಂಗತಿ ಏನು? ಸೋಂಕು ಈಗಲೂ ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಹರಡುವ ಸೋಂಕಿನ ಎರಡನೇ ಹಂತದಲ್ಲಿಯೇ ಇದೆಯೇ, ಅಥವಾ ಸಾಮೂಹಿಕವಾಗಿ ಹರಡುವ ಮೂರನೇ ಹಂತಕ್ಕೆ ತಲುಪಿದೆಯೇ ಎಂಬುದನ್ನು ಕಂಡುಕೊಳ್ಳಲು ವ್ಯಾಪಕ ಪ್ರಮಾಣದಲ್ಲಿ ವೈರಾಣೂ ಪರೀಕ್ಷೆಗಳಾಗಬೇಕಾಗುತ್ತದೆ. ಕನಿಷ್ಠ ಒಬ್ಬ ಸೋಂಕಿತ ಕಂಡುಬಂದರೆ, ಆತನ ವಾಸಸ್ಥಳದ ಇಡೀ ಪ್ರದೇಶದಲ್ಲಿ, ಆತನ ಮನೆಗೆ ಅಥವಾ ಆತ ಭೇಟಿ ಮಾಡಿದ ಸ್ಥಳಗಳಿಗೆ ಭೇಟಿ ನೀಡಿದರೆಲ್ಲರ ಸಾಮೂಹಿಕ ಪರೀಕ್ಷೆಯಾದರೂ ಆಗಬೇಕಿದೆ. ಆದರೆ, ಸರ್ಕಾರ ಸದ್ಯ ನಡೆಸುತ್ತಿರುವುದು ನೇರವಾಗಿ ಸ್ವಯಂ ಪ್ರೇರಿತರಾಗಿ ಸೋಂಕಿತರೇ ತಮ್ಮ ರೋಗಲಕ್ಷಣ ಹೇಳಿಕೊಂಡಲ್ಲಿ ಅಥವಾ ಚಿಕಿತ್ಸೆಗೆ ಬಂದವರಿಗೆ ಮಾತ್ರ ವೈರಾಣು ಪರೀಕ್ಷೆ ನಡೆಸುತ್ತಿದೆ. ಹಾಗಾಗಿ ದೇಶದಲ್ಲಿ ದಿನವೊಂದಕ್ಕೆ 12 ಸಾವಿರಕ್ಕೂ ಅಧಿಕ ವೈರಾಣು ಪರೀಕ್ಷೆ ಮಾಡುವ ಸಾಮರ್ಥ್ಯವಿದ್ದರೂ ಸದ್ಯ ನಡೆಯುತ್ತಿರುವುದು ಕೆಲವು ನೂರು ಪ್ರಕರಣಗಳ ಪರೀಕ್ಷೆ ಮಾತ್ರ!

ಅದರಲ್ಲೂ ಕರ್ನಾಟಕ ಸರ್ಕಾರ ಸರ್ಕಾರಿ ಪ್ರಯೋಗಾಲಯಗಳಲ್ಲಿ ನಡೆಸುವ ಪರೀಕ್ಷೆಗಳು ಮಾತ್ರ ಉಚಿತ. ಆದರೆ, ರಾಜ್ಯದಲ್ಲಿ ಹೊಸದಾಗಿ ಅನುಮತಿ ನೀಡಿರುವ ಎರಡು ಖಾಸಗೀ ಪ್ರಯೋಗಾಲಯಗಳಲ್ಲಿ ಕರೋನಾ ಪರೀಕ್ಷೆಗೆ ಒಟ್ಟು 4500 ರೂ. ಶುಲ್ಕ ತೆರಬೇಕು ಎಂದು ಸುತ್ತೋಲೆ ಹೊರಡಿಸಿದೆ. ಅಂದರೆ; ಕರೋನಾ ಸೋಂಕಿತರಿಗೆ ಉಚಿತವಾಗಿ ಪರೀಕ್ಷೆ ನಡೆಸುವಷ್ಟರಮಟ್ಟಿಗೂ ಸರ್ಕಾರ ತಯಾರಿ ಮಾಡಿಕೊಂಡಿಲ್ಲ. ಆ ಮಟ್ಟಿಗಿನ ಹಣಕಾಸು ವ್ಯವಸ್ಥೆಯನ್ನೂ ಸರ್ಕಾರ ಮಾಡಿಕೊಂಡಿಲ್ಲ ಎಂದಾದರೆ, ನಿತ್ಯ ಸರ್ಕಾರಕ್ಕೆ ಬರುತ್ತಿರುವ ದೇಣಿಗೆ, ‘ಪಿಎಂ ಕೇರ್ಸ್’ ಗೆ ಬರುತ್ತಿರುವ ದೇಣಿಗೆ, ಸರ್ಕಾರವೇ ಘೋಷಿಸಿರುವ 15 ಸಾವಿರ ಕೋಟಿ ಕರೋನಾ ವೈದ್ಯಕೀಯ ಅನುದಾನ ಮತ್ತು 1.70 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಹಣ ಯಾವುದಕ್ಕೆ ಬಳಕೆಯಾಗುತ್ತಿದೆ ಮತ್ತು ಬಳಕೆಯಾಗಲಿದೆ? ಎಂಬ ಪ್ರಶ್ನೆ ಏಳುವುದು ಸಹಜ.
ಈ ನಡುವೆ ಸರ್ಕಾರ ದೇಣಿಗೆಯಾಗಿ ಸಂಗ್ರಹವಾಗಿರುವ ಒಟ್ಟು ಹಣವೆಷ್ಟು? ಅದನ್ನು ಯಾವ ಉದ್ದೇಶಗಳಿಗೆ, ಹೇಗೆ ಬಳಸಲಾಗುತ್ತಿದೆ? ವಿಶೇಷ ವೈದ್ಯಕೀಯ ಅನುದಾನ ಬಿಡುಗಡೆಯಾದ ಹಣದಲ್ಲಿ ರಾಜ್ಯವಾರು ಎಷ್ಟು ಹಂಚಿಕೆಯಾಗಿದೆ ಮತ್ತು ಯಾವೆಲ್ಲಾ ಉದ್ದೇಶಕ್ಕೆ ಬಳಸಲು ಮಾರ್ಗಸೂಚಿ ನೀಡಲಾಗಿದೆ? ಕರೋನಾ ವಿಶೇಷ ಪ್ಯಾಕೇಜ್ ಸ್ಥಿತಿಗತಿ ಏನಾಗಿದೆ? ಎಂಬ ಯಾವ ಮಾಹಿತಿಯನ್ನೂ ಸಾರ್ವಜನಿಕವಾಗಿ ಪ್ರಕಟಿಸುತ್ತಿಲ್ಲ! ಹಾಗಾಗಿ, ನಿತ್ಯ ಸಾವಿರಾರು ಕೋಟಿ ರೂಪಾಯಿಯ ಮಾತುಗಳು ಕೇಳಿಬರುತ್ತಿದ್ದರೂ, ವೈದ್ಯರು ಹರಿದ ರೈನ್ ಕೋಟ್ ಹಾಕಿಕೊಂಡು ಕರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಚಿತ್ರಗಳ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ. ರೋಗದ ವಿರುದ್ಧದ ಹೋರಾಟದ ವಿಷಯದಲ್ಲಿ ಶಂಖ-ಜಾಗಟೆಯ ‘ತಟ್ಟು ಚಪ್ಪಾಳೆ’ ಘೋಷಣೆಯ ಆಚೆಗೆ ದೇಶದ ಚುಕ್ಕಾಣಿ ಹಿಡಿದವರ ಅಸಲೀ ಬದ್ಧತೆ ಎಷ್ಟರಮಟ್ಟಿಗೆ ಇದೆ ಎಂಬುದು ಕೂಡ ಬೆತ್ತಲಾಗುತ್ತಿದೆ!