ಇಂದು ವಿಶ್ವ ಹುಲಿಗಳ ದಿನ. ಹುಲಿಗಳ ಸಂರಕ್ಷಣೆ ಹಾಗೂ ಅವುಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. 21ನೇ ಶತಮಾನದ ಆರಂಭದಲ್ಲಿ ಯಾವಾಗ ಹುಲಿಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿರುವುದು ಕಂಡು ಬಂದಿತೋ, ಅಂದು ವಿಶ್ವ ಹುಲಿಗಳ ದಿನವನ್ನು ಆಚರಿಸಬೇಕೆಂಬ ನಿರ್ಧಾರವನ್ನು ತಾಳಲಾಯಿತು.
ಸದ್ಯದ ಪರಿಸ್ಥಿತಿಯಲ್ಲಿ ಜಾಗತೀಕರಣದ ಹಪಾಹಪಿಗೆ ಬಿದ್ದು ಮನುಷ್ಯರೆನಿಸಿಕೊಂಡ ನಾವು ವಿಶ್ವದಲ್ಲಿ ಹುಲಿಗಳ 90% ವಾಸಸ್ಥಾನವನ್ನು ಆಕ್ರಮಿಸಿಕೊಂಡಿದ್ದೇವೆ. ನವೆಂಬರ್ 2010ರಲ್ಲಿ ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ನಡೆದ ಸಮ್ಮೇಳನದಲ್ಲಿ ವಿಶ್ವ ಹುಲಿಗಳ ದಿನವನ್ನು ಆಚರಿಸಬೇಕೆಂಬ ಆಶಯ ವ್ಯಕ್ತವಾಯಿತು. ಜನರಲ್ಲಿ ಹುಲಿಗಳ ಕುರಿತು ಜಾಗೃತಿ ಮೂಡಿಸಲು, ಹುಲಿಗಳ ವಾಸಸ್ಥಾನವನ್ನು ಸಂರಕ್ಷಿಸಲು ಹಾಗೂ ಹುಲಿಗಳ ಸಂರಕ್ಷಣೆಗೆ ಬೆಂಬಲವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಹುಲಿಗಳ ಸಂರಕ್ಷಣೆಯಲ್ಲಿ ಭಾರತೀಯರು ನಿಜಕ್ಕೂ ಹೆಮ್ಮೆ ಪಡುವಂತಹ ಸಾಧನೆ ಈವರೆಗ ದಾಖಲಾಗಿದೆ. ಪರಿಸರ ಖಾತೆಯ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಅವರು ಮಂಗಳವಾರ ಬಿಡುಗಡೆಗೊಳಿಸಿದ 2018ರ ಹುಲಿಗಳ ಜನಗಣತಿ ವರದಿಯ ಪ್ರಕಾರ ವಿಶ್ವದ ಹುಲಿಗಳ ಒಟ್ಟು ಸಂಖ್ಯೆಯಲ್ಲಿ ಶೇಕಡಾ 70 ಭಾರತದಲ್ಲಿ ಇವೆ. ʼಪ್ರಾಜೆಕ್ಟ್ ಟೈಗರ್ʼ ಎಂಬ ಯೋಜನೆಯನ್ನು 1973ರಲ್ಲಿ ಕೇವಲ 9 ಸಂರಕ್ಷಿತ ವಲಯಗಳನ್ನು ಗುರುತಿಸಿ ಆರಂಭಿಸಲಾಗಿತ್ತು.
ಇಂದು ಅದೇ ಯೋಜನೆಯಡಿಯಲ್ಲಿ 50 ರಕ್ಷಿತಾರಣ್ಯಗಳಲ್ಲಿ 2,967 ಹುಲಿಗಳಿವೆ. ಉತ್ತರಾಖಂಡ್ನ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಅತ ಹೆಚ್ಚು ಅಂದರೆ 231 ಹುಲಿಗಳಿವೆ. 2006ರಲ್ಲಿ ಇಲ್ಲಿ 137, 2010ರಲ್ಲಿ 174 ಮತ್ತು 2014ರಲ್ಲಿ ಒಟ್ಟು 215 ಹುಲಿಗಳು ಇಲ್ಲಿದ್ದವು ಎಂದು ಅಧ್ಯಯನ ಹೇಳುತ್ತದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜಿಮ್ ಕಾರ್ಬೆಟ್ ನಂತರ ನಾಗರಹೊಳೆಯಲ್ಲಿ 127, ಬಂಡೀಪುರದಲ್ಲಿ 126 ಮತ್ತು ಮಧ್ಯಪ್ರದೇಶದ ಬಂಧಾವ್ಘಡ್ನಲ್ಲಿ ಹಾಗೂ ಅಸ್ಸಾಂನ ಕಾಝೀ಼ರಂಗದಲ್ಲಿ ತಲಾ 104 ಹುಲಿಗಳಿವೆ. ಇನ್ನು ಅತೀ ಹೆಚ್ಚು ಹುಲಿಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಮಧ್ಯಪ್ರದೇಶ (526) ಮೊದಲ ಸ್ಥಾನದಲ್ಲಿದೆ. 524 ಹುಲಿಗಳೊಂದಿಗೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಈ ಹಿಂದಿನ ಗಣತಿಯಲ್ಲಿ ಮಧ್ಯಪ್ರದೇಶದಲ್ಲಿ 308 ಮತ್ತು ಕರ್ನಾಟಕದಲ್ಲಿ 406 ಹುಲಿಗಳಿದ್ದವು.
ಹುಲಿ ಕಾರಿಡಾರ್ ಅಗತ್ಯತೆ:
ಈಗ ಹೆಚ್ಚುತ್ತಿರುವ ಹುಲಿ ಸಂತತಿ ಖುಷಿಯ ವಿಚಾರವೇನೋ ಸರಿ. ಆದರೆ, ಈ ಸಂಖ್ಯೆಯನ್ನು ಉಳಿಸಿ ಇನ್ನಷ್ಟು ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ. ಕೇವಲ ಹುಲಿಗಳ ಸಂಖ್ಯೆಯಲ್ಲಿನ ಏರಿಕೆಯನ್ನು ತೋರಿಸಿ ಅಭಿವೃದ್ದಿಯ ಪಟ್ಟವನ್ನು ಕಟ್ಟಿಕೊಳ್ಳುವುದರಿಂದ ಹುಲಿ ಸಂರಕ್ಷಣೆಯ ಆಶಯ ಪರಿಪೂರ್ಣವಾಗದು. ಇದರೊಂದಿಗೆ ಹುಲಿಗಳ ವಾಸಸ್ಥಾನದ ಅಭಿವೃದ್ದಿಯೂ ಆಗಬೇಕಿದೆ, ಅದರ ಸಂರಕ್ಷಣೆಯೂ ಆಗಬೇಕಿದೆ.
ಆನೆಗಳು ಹೆಚ್ಚಾಗಿ ಓಡಾಡುವ ಪ್ರದೇಶಗಳನ್ನು ಗುರುತಿಸಿ, ಅವುಗಳನ್ನು ಆನೆಗಳ ಕಾರಿಡಾರ್ ಎಂದು ಗುರುತಿಸಿದ ರೀತಿಯಲ್ಲೇ, ಹುಲಿಗಳುಓಡಾಡುವಂತಹ ಪ್ರದೇಶಗಳನ್ನು ಕೂಡಾ ಗುರುತಿಸಬೇಕಾಗಿದೆ. ಅಂತಹ ಪ್ರದೇಶಗಳಲ್ಲಿ ಜನವಸತಿಯನ್ನು ನಿಯಂತ್ರಿಸಬೇಕು.
ಇದಕ್ಕಿಂತ ಮಿಗಿಲಾಗಿ, ಕೈಗಾರಿಕೆ ಹಾಗೂ ಆರ್ಥಿಕತೆಯನ್ನು ಚೇತರಿಸಿಕೊಳ್ಳುವ ಹಿನ್ನೆಲೆಯಲ್ಲಿ ಕಾಡುಗಳ ಸರ್ವನಾಶ ಮಾಡುವಂತಹ ಕೈಗಾರಿಕೆ, ವಿದ್ಯುತ್ ಸ್ಥಾವರ ನಿರ್ಮಾಣ ಯೋಜನೆಗಳು ಕೂಡಾ ನಿಲ್ಲಬೇಕು. ಹುಲಿಗಳ ವಾಸಸ್ಥಾನಕ್ಕೆ ಯೋಗ್ಯವಾದಂತಹ ಹುಲಿ ಕಾರಿಡಾರ್ ನಿರ್ಮಾಣವಾಗಬೇಕು.

ಈಗಿರುವ ಹುಲಿ ಗಣತಿಯ ವರದಿಯ ಪ್ರಕಾರ ಒಟ್ಟಿರುವ ಹುಲಿಗಳಲ್ಲಿ ಬಹಳಷ್ಟು ಹುಲಿಗಳು ಸಂರಕ್ಷಿತವಾದ ಸಣ್ಣ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಕೆಲವು ಹುಲಿಗಳು ನಿರ್ದಿಷ್ಟ ಪ್ರದೇಶಗಳಲ್ಲಿ ಸಂಚರಿಸುವುದು ಕಂಡುಬಂದಿದೆ. ಈಗಿನ ಹೆಚ್ಚಿನ ಹುಲಿ ಕಾರಿಡಾರ್ಗಳು ಸುರಕ್ಷಿತವಲ್ಲ. ಮನುಷ್ಯರ ಅತಿಕ್ರಮಣ ಮತ್ತು ಅಭಿವೃದ್ದಿ ಯೋಜನೆಗಳ ನೆಪದಲ್ಲಿ ಈ ಕಾರಿಡಾರ್ಗಳು ಅಪಾಯದಲ್ಲಿವೆ ಎಂದು ಹೇಳಿದೆ.
ಒಟ್ಟಿನಲ್ಲಿ ವಿಶ್ವ ಹುಲಿಗಳ ದಿನದಂದು ಭಾರತವು ವಿಶ್ವಕ್ಕೇ ಮಾದರಿ ಎಂಬಂತೆ ಹುಲಿಗಳ ಸಂಖ್ಯೆಯಲ್ಲಿ ಅಭಿವೃದ್ದಿಯನ್ನು ಕಂಡಿದೆ. ಆದರೆ, ಈ ಸಂಖ್ಯೆಯನ್ನು ಇನ್ನಷ್ಟು ವೃದ್ದಿಸಿ ಅವುಗಳ ವಾಸಸ್ಥಾನದ ಅಭಿವೃದ್ದಿಯನ್ನೂ ಮಾಡಬೇಕಾದ ಅನಿವಾರ್ಯತೆ ಇದೆ.






