ಒಂದು ಕಡೆ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ ಡೌನ್ ಮುಂದುವರೆಯಲಿ ಎಂದಿದ್ದಾರೆ. ಇನ್ನೊಂದೆಡೆ ಕರೋನಾ ಸೋಂಕು ಹರಡುವಿಕೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಮತ್ತೊಂದೆಡೆ ಲಾಕ್ ಡೌನ್ ಮುಂದುವರೆಸಿದರೆ ದೇಶದ ಆರ್ಥಿಕತೆ ಮೇಲೆ ಭಾರೀ ಪೆಟ್ಟುಬೀಳಬಹುದು ಎಂಬ ಆತಂಕ ಕಾಡುತ್ತಿದೆ. ಇದೆಲ್ಲದರ ಪರಿಣಾಮವಾಗಿ ಲಾಕ್ ಡೌನ್ ಅನ್ನು ತೆರವುಗೊಳಿಸಬೇಕೋ ಅಥವಾ ಮುಂದುವರೆಸಬೇಕೋ ಎಂಬ ಬಗ್ಗೆ ಕೇಂದ್ರ ಸರ್ಕಾರ ಜಿಜ್ಞಾಸೆಗೆ ಸಿಲುಕಿದೆ.
ಈಗಾಗಲೇ 21 ದಿನ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಲಾಕ್ ಡೌನ್ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಆದರೂ ಕರೋನಾ ಸೋಂಕು ಹರಡುವಿಕೆ ಮಾತ್ರ ನಿಯಂತ್ರಣ ಆಗುತ್ತಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ತ್ವರಿತಗೊಳ್ಳುತ್ತಿದೆ. ಇದರಿಂದಾಗಿ ಸಹಜವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆತಂಕಕ್ಕೀಡಾಗಿವೆ. ಇದೇ ಹಿನ್ನೆಲೆಯಲ್ಲಿ ಕರೋನಾ ಸೋಂಕು ವೇಗವಾಗಿ ಹರಡುತ್ತಿರುವ ರಾಜ್ಯಗಳಾದ ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಜಾರ್ಖಂಡ್, ಛತ್ತೀಸ್ಘಡ, ಅಸ್ಸಾಂ ಮತ್ತು ತೆಲಾಂಗಣ ರಾಜ್ಯಗಳು ಲಾಕ್ ಡೌನ್ ವಿಸ್ತರಣೆ ಮಾಡುವುದೇ ಒಳಿತು ಎಂಬ ತೀರ್ಮಾನಕ್ಕೆ ಬಂದಿವೆ.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪ್ರಧಾನಿ ಮೋದಿ ಜೊತೆ ದೂರವಾಣಿಯಲ್ಲಿ ಮಾತನಾಡಿ ಲಾಕ್ ಡೌನ್ ಅನ್ನು ಮುಂದುವರೆಸಿ ಎಂದು ಸ್ಪಷ್ಟದನಿಯಲ್ಲಿ ತಿಳಿಸಿದ್ದಾರೆ. ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಭಗೇಲ್, ‘ಲಾಕ್ ಡೌನ್ ಮುಂದುವರೆಸಿ, ಕಡೆಪಕ್ಷ ಅಂತರ ರಾಜ್ಯ ವಾಹನ ಸಂಚಾರವನ್ನಾದರೂ ನಿಷೇಧಿಸಿ’ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಲಾಕ್ ಡೌನ್ ಮುಂದುವರೆಸಿ ಅಂತಾ ಬಾಯಿ ಬಿಟ್ಟು ಹೇಳುತ್ತಿರುವವರೆಲ್ಲಾ ಬಿಜೆಪಿಯೇತರ ಪಕ್ಷಗಳ ಆಳ್ವಿಕೆ ಇರುವ ರಾಜ್ಯಗಳ ಮುಖ್ಯಮಂತ್ರಿಗಳು. ಇವರೊಂದಿಗೆ ದೇಶದ ದೊಡ್ಡ ರಾಜ್ಯವಾದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದನಿಗೂಡಿಸಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ‘ಏಪ್ರಿಲ್ 14ರಂದು ಪರಿಸ್ಥಿತಿ ನೋಡಿಕೊಂಡು ಲಾಕ್ ಡೌನ್ ಅನ್ನು ಮುಂದುವರೆಸಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು’ ಎಂದು ಹೇಳುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ. ಬಿಜೆಪಿ ಆಡಳಿತ ಇರುವ ಇತರೆ ರಾಜ್ಯಗಳ ಮುಖ್ಯಮಂತ್ರಿಗಳೂ ಏನನ್ನೂ ಹೇಳದೆ ತಮ್ಮ ನಿಲುವನ್ನು ಕತ್ತಲಲ್ಲಿ ಇಟ್ಟಿದ್ದಾರೆ. ದಿನದಿಂದ ದಿನಕ್ಕೆ ಸೋಂಕು ಪೀಡಿತರ ಸಂಖ್ಯೆ ವೇಗವಾಗಿ ಬೆಳೆಯುತ್ತಿರುವ ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಕ್ವಾರಂಟೈನ್ ಅವಧಿಯನ್ನೇ 14 ದಿನದಿಂದ 28 ದಿನಗಳಿಗೆ ವಿಸ್ತರಿಸಿ ಲಾಕ್ ಡೌನ್ ವಿಸ್ತರಣೆಯ ಸುಳಿವು ನೀಡಿದ್ದಾರೆ. ನಿರ್ದಾಕ್ಷಿಣ್ಯ ನಿಲುವು ಹೊಂದುವ ಛಾತಿಯುಳ್ಳ ಕೇರಳ, ದೆಹಲಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಇನ್ನೂ ಏನನ್ನೂ ಹೇಳಿಲ್ಲ.
ಸ್ಥಳೀಯ ಮಟ್ಟದಲ್ಲಿ ಸಮಸ್ಯೆಯನ್ನು ಹುಟ್ಟಡಗಿಸಬೇಕಿರುವ ಮುಖ್ಯಮಂತ್ರಿಗಳು ಭಿನ್ನ ನಿಲುವು ಹೊಂದಿರುವುದರಿಂದ ಕೇಂದ್ರ ಸರ್ಕಾರ ಏನೊಂದು ತೀರ್ಮಾನಕ್ಕೂ ಬರಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳನ್ನು ಹೇಗೋ ಮನವೊಲಿಸಬಹುದು, ಅಥವಾ ಬಾಯಿ ಮುಚ್ಚಿಸಬಹುದು. ಆದರೆ ಉಳಿದವರನ್ನು ಈ ಹಂತದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ರಾಜ್ಯಗಳ ಸಲಹೆ ಪಡೆಯದೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳುವ ಧೈರ್ಯವನ್ನು ಕೇಂದ್ರ ಸರ್ಕಾರ ತೋರಲಾರದು.
ಕೇಂದ್ರ ಸರ್ಕಾರದ ರಚಿಸಿರುವ ವಿವಿಧ ಕಮಿಟಿಗಳು ಕೂಡ ಲಾಕ್ ಡೌನ್ ಅನ್ನು ಮುಕ್ತಾಯಗೊಳಿಸಬೇಕು ಅಥವಾ ಮುಂದುವರೆಸಬೇಕು ಎಂಬ ಸ್ಪಷ್ಟ ಮಾಹಿತಿ ನೀಡಿಲ್ಲ. ಈ ಕಮಿಟಿಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕ್ಯಾಬಿನೆಟ್ ಕಾರ್ಯದರ್ಶಿ ಅಜಯ್ ಭಲ್ಲಾ ನಡೆಸಿದ ಸಭೆಯಲ್ಲಿ ಲಾಕ್ ಡೌನ್ ಬಳಿಕ ಯಾವುದೇ ತೊಂದರೆ ಇಲ್ಲದ, ಸೋಂಕು ಕಾಣಿಸಿಕೊಳ್ಳದ ಪ್ರದೇಶಗಳನ್ನು ಹಸಿರು ವಲಯವೆಂದು, ಕನಿಷ್ಠ ಪ್ರಕರಣಗಳು ದಾಖಲಾಗಿರುವ ಪ್ರದೇಶಗಳನ್ನು ಹಳದಿ ವಲಯವೆಂದು ಮತ್ತು ಗರಿಷ್ಠ ಸಂಖ್ಯೆಯಲ್ಲಿ ಸೋಂಕು ಕಾಣಸಿಕೊಂಡಿರುವ ಪ್ರದೇಶಗಳನ್ನು ಕೆಂಪು ವಲಯ ಎಂದು ಗುರುತಿಸಬೇಕು. ಆಯಾ ವಲಯಗಳಿಗೆ ಅನುಗುಣವಾಗಿ ಲಾಕ್ ಡೌನ್ ತೆರವು ಮಾಡುವ, ನಿಯಮಗಳನ್ನು ಸಡಿಲಿಸುವ, ವಾರದ ಬೇರೆ ಬೇರೆ ದಿನಗಳಲ್ಲಿ ಅಗಂಡಿ ತೆಗೆಯುವ, ಅಥವಾ ದಿನದ ಕೆಲವು ಗಂಟೆ ಮಾತ್ರ ಅಂಗಡಿ ತೆಗೆಯುವ, ಕಾರ್ಮಿಕರ ಓಡಾಟಕ್ಕೆ ಬಸ್ ರೈಲು ಸಂಚಾರ ಆರಂಭಿಸುವ ಪ್ರತ್ಯೇಕ ನಿರ್ಧಾರಗಳನ್ನು ಮಾಡಬೇಕು ಎಂದು ಸಲಹೆ ನೀಡಿದೆ. ಅಂತರಾಷ್ಟ್ರೀಯ ವಿಮಾನಗಳ ಹಾರಾಟ ಮತ್ತಷ್ಟು ದಿನ ನಿಷೇಧಿಸುವಂತೆ ಶಿಫಾರಸು ಮಾಡಿದೆ.
ಇದಲ್ಲದೆ ಲಾಕ್ ಡೌನ್ ಮುಂದುವರೆಸಿದರೆ ದೇಶದ ಆರ್ಥಿಕತೆ ಮೇಲೆ ಭಾರೀ ಹೊಡೆತ ಬೀಳಲಿದೆ ಎಂದು ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ನೀತಿ ಆಯೋಗಗಳು ಕೂಡ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಬೇರಾವುದಾದರೂ ರೀತಿಯಲ್ಲಿ ಪ್ರಯತ್ನಿಸಿ, ಲಾಕ್ ಡೌನ್ ಅನ್ನು ಮಾತ್ರ ಹೇರಬೇಡಿ. ಲಾಕ್ ಡೌನ್ ಮತ್ತೂ ಮುಂದುವರೆದರೆ ಆರ್ಥಿಕತೆ ಸದ್ಯಕ್ಕೆ ಚೇತರಿಸಿಕೊಳ್ಳಲಾಗದ ಸ್ಥಿತಿ ತಲುಪಲಿದೆ ಎಂಬ ಮಾತುಗಳನ್ನು ಹೇಳಿವೆ.
ಹೀಗೆ ನಿರ್ಣಾಯಕರಾದವರೆಲ್ಲರೂ ಭಿನ್ನ ಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದರಿಂದ ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಸ್ವತಃ ಕೇಂದ್ರ ಸರ್ಕಾರವೇ ಜಿಜ್ಞಾಸೆಯಲ್ಲಿ ಮುಳುಗಿಹೋಗಿರುವುದರಿಂದ ಲಾಕ್ ಡೌನ್ ಮುಂದುವರೆಯುವುದೋ ಮುಕ್ತಾಯವಾಗುವುದೋ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಲಾಕ್ ಡೌನ್ ಅನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಕೆಲವು ಷರತ್ತುಗಳನ್ನು ವಿಧಿಸಿ ತೆರವುಗೊಳಿಸಬಹುದು. ಕೆಲವು ಪ್ರದೇಶಗಳಲ್ಲಿ ಮಾತ್ರ ಮುಂದುವರೆಸಬಹುದು. ಒಟ್ಟಿನಲ್ಲಿ ಈಗ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ಅತ್ಯಂತ ಮಹತ್ವವೂ ನಿರ್ಣಾಯಕವೂ ಆಗಿರಲಿದೆ. ಆ ತೀರ್ಮಾನದ ಮೇಲೆ ಕರೋನಾ ಸೋಂಕು ಹರಡುವಿಕೆ ಮತ್ತು ದೇಶದ ಆರ್ಥಿಕತೆ ನಿರ್ಧಾರವಾಗಲಿದೆ.