ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸುವುದಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳು ಮಾಡಿರುವ ಘೋಷಣೆಯನ್ನು ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಶನ್ಸ್ ಫಾರ್ ಜಸ್ಟಿಸ್(AILAJ) ಖಂಡಿಸಿದೆ.
ಬಿಜೆಪಿ ಆಡಳಿತವಿರುವ ರಾಜ್ಯಗಳು ಲವ್ ಜಿಹಾದ್ ವಿರುದ್ಧ ಕಾನೂನು, ಅಂತರ್-ಧರ್ಮೀಯ ವಿವಾಹಗಳಿಗೆ ವಿರುದ್ಧವಾಗಿದೆ, ಕಾನೂನಾತ್ಮಕವಾಗಿ ಯಾವುದೇ ಆಧಾರ ಇಲ್ಲ, ಅಂತರ್-ಧರ್ಮೀಯ ವಿವಾಹವನ್ನು ಕೋಮುಧ್ವೇಷಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು AILAJ ಆರೋಪಿಸಿದೆ. ಭಾರತದ ಸಂವಿಧಾನದ ಅಡಿಯಲ್ಲಿ, ಪ್ರತಿಯೊಬ್ಬರಿಗೂ ತನ್ನ ಸಂಗಾತಿ ಯಾರಾಗಿರಬೇಕೆಂದು ನಿರ್ಧರಿಸುವ ಸ್ವಾತಂತ್ರ್ಯವಿದೆ. ಸರ್ಕಾರಗಳು ಈ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಬದಲು ಸುಪ್ರೀಂ ಕೋರ್ಟ್[AIR 2018 SC 1601] ನಿರ್ದೇಶಿಸಿರುವಂತೆ ʼಮರ್ಯಾದ ಹತ್ಯೆʼಯಂತಹಾ ಕೃತ್ಯಗಳಿಗೆ ಕಡಿವಾಣ ಹಾಕಲು ಕಾನೂನು ರೂಪಿಸಲಿ ಎಂದು AILAJ ಆಗ್ರಹಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇತ್ತೀಚೆಗೆ, ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಕರ್ನಾಟಕ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ಸರ್ಕಾರಗಳು ಮತಾಂತರದ ಕಾರಣವಿಟ್ಟುಕೊಂಡು ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸುವುದಾಗಿ ಹೇಳಿತ್ತು. ಆದರೆ, ಲವ್ ಜಿಹಾದ್ ಅನ್ನೋದು ಒಂದು ಕಲ್ಪಿತ ಸಂಗತಿಯಾಗಿದ್ದು, ಅಲ್ಪಸಂಖ್ಯಾತ ಮುಸ್ಲಿಮರನ್ನು ಅವಹೇಳನ ಮಾಡಲು ಹಾಗೂ ರಾಜಕೀಯ ದುರುದ್ದೇಶಕ್ಕಾಗಿ ಬಲಪಂಥೀಯ ಉಗ್ರ ಸಂಘಟನೆಗಳು ಮುಸ್ಲಿಮರ ಮೇಲೆ ಆರೋಪಿಸಿರುವ ವ್ಯವಸ್ಥಿತ ಷಡ್ಯಂತ್ರ. ಇದುವರೆಗೂ ಭಾರತದ ಯಾವ ನ್ಯಾಯಲಯವೂ, ಸಂಸತ್ತೂ ಲವ್ ಜಿಹಾದ್ ಇರುವುದರ ಕುರಿತು ಸ್ಪಷ್ಟ ಪಡಿಸಿಲ್ಲ. ಕೇಂದ್ರ ತನಿಖಾ ಸಂಸ್ಥೆ ಎನ್ಐಎ ತನಿಖೆ ನಡೆಸಿದ್ದರೂ, ಬಲಪಂಥೀಯರ ಆರೋಪವನ್ನು ಪುಷ್ಟೀಕರಿಸುವ ಯಾವ ಪುರಾವೆಗಳೂ ಸಿಕ್ಕಿಲ್ಲ.
ಅಂತರ್-ಧಾರ್ಮಿಕ ವಿವಾಹಗಳ ಪರಿಕಲ್ಪನೆಯನ್ನು ‘ಲವ್ ಜಿಹಾದ್’ ಎಂದು ಕಾನೂನುಬಾಹಿರ ಬಿಜೆಪಿಯ ಹೇಳಿಕೆಗಳು ಭಾರತೀಯ ಸಂವಿಧಾನದ 14, 21 ಮತ್ತು 25 ನೇ ವಿಧಿಗಳ ಮೂಲತತ್ವಕ್ಕೆ ವಿರುದ್ಧವಾಗಿದೆ. ಭಾರತ ಸಂವಿಧಾನ ನೀಡಿರುವ ʼಸಮಾನತೆಯ, ಮುಕ್ತವಾಗಿ ಧಾರ್ಮಿಕ ಹಕ್ಕು ಚಲಾಯಿಸುವ, ಪ್ರಚಾರ ಪಡಿಸುವ, ಘನತೆಯಿಂದ ಬದುಕುವ, ಮದುವೆಗೆ ತನ್ನ ಸಂಗಾತಿಯ ಆಯ್ಕೆ ಮಾಡುವ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು AILAJ ಅಭಿಪ್ರಾಯಪಟ್ಟಿದೆ.
Also Read: ಲವ್ ಜಿಹಾದ್ ತಡೆಗೆ ಕಾನೂನು ಜಾರಿ; ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಒಮ್ಮತದ ನಿರ್ಧಾರ
ʼಒಬ್ಬರ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು ಸಂವಿಧಾನದ 21 ನೇ ಪರಿಚ್ಛೇದದ ಅವಿಭಾಜ್ಯ ಭಾಗವಾಗಿದೆ ಮತ್ತು ಧರ್ಮ ಮತ್ತು ನಂಬಿಕೆಯನ್ನು ಪಾಲಿಸುವ ಹಕ್ಕನ್ನು ಸಂವಿಧಾನ ನೀಡುತ್ತದೆ. ತಮ್ಮ ಸಂಗಾತಿಯನ್ನು ನಿರ್ಧರಿಸುವುದರಲ್ಲಿ ಸಮಾಜಕ್ಕೆ ಯಾವ ಪಾತ್ರವೂ ಇಲ್ಲʼ ಎಂದು ಕೇರಳದ ಹಾದಿಯಾ ಪ್ರಕರಣದಲ್ಲಿ [(2018)16 SCC 368] ನ್ಯಾಯಾಲಯ ನೀಡಿರುವ ತೀರ್ಪನ್ನು AILAJ ಉಲ್ಲೇಖಿಸಿದೆ.
ಅಂತರ-ಧರ್ಮ ವಿವಾಹದ ಪ್ರತಿಯೊಂದು ಪ್ರಕರಣವನ್ನು ಲವ್ ಜಿಹಾದ್ ಅಥವಾ ಘರ್ ವಪ್ಸಿ ಎಂದು ಸಂವೇದನಾಶೀಲಗೊಳಿಸುವ ರಾಜ್ಯದ ಇತ್ತೀಚಿನ ಪ್ರವೃತ್ತಿಯನ್ನು ಕಂಡು ನಾವು ದಿಗಿಲುಗೊಂಡಿದ್ದೇವೆ. ದೇಶದ ಹಲವಾರು ಭಾಗಗಳಲ್ಲಿ ಅಂತರ್ಜಾತಿ ವಿವಾಹಕ್ಕೆ ಒಳಗಾಗುವ ಯುವಕ-ಯುವತಿಯರಿಗೆ ಹಿಂಸಾಚಾರ ಅಥವಾ ಹಿಂಸಾಚಾರದ ಬೆದರಿಕೆ ಇರುವ ಗೊಂದಲದ ಸುದ್ದಿ ಬರುತ್ತಿದೆ. ನಮ್ಮ ಅಭಿಪ್ರಾಯದಲ್ಲಿ, ಇಂತಹ ಹಿಂಸಾಚಾರ ಅಥವಾ ಬೆದರಿಕೆಗಳು ಅಥವಾ ಕಿರುಕುಳಗಳು ಸಂಪೂರ್ಣವಾಗಿ ಕಾನೂನುಬಾಹಿರ ಮತ್ತು ಅವುಗಳನ್ನು ಎಸಗುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇದು ಮುಕ್ತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರ, ವಯಸ್ಕ ವ್ಯಕ್ತಿಯು ಆತ/ಆಕೆ ಇಷ್ಟಪಡುವವರನ್ನು ಮದುವೆಯಾಗಬಹುದು ಎಂದು ಅನೀಸ್ ಹಮೀದ್ Vs ಕೇರಳ ರಾಜ್ಯದ ಪ್ರಕರಣದಲ್ಲಿ ILR 2017(4) Kerala 389 ಕೇರಳ ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ತೀರ್ಪನ್ನು ಉಲ್ಲೇಖಿಸಿದೆ.
Also Read: ಯಾವ ಕಾನೂನು ಕೂಡಾ ಲವ್ ಜಿಹಾದ್ ಅನ್ನು ವ್ಯಾಖ್ಯಾನಿಸಿಲ್ಲ- ಸಿದ್ದರಾಮಯ್ಯ
ಲವ್ ಜಿಹಾದ್ ಕುರಿತ ಪ್ರಶ್ನೆಗಳಿಗೆ ಉತ್ತರಸಿದ್ದ ಗೃಹ ಇಲಾಖೆಯ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ, ʼʼಸಂವಿಧಾನದ 25 ನೇ ವಿಧಿಯು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ಒಳಪಟ್ಟು ಧರ್ಮವನ್ನು ಪ್ರಚಾರ ಮಾಡಲು, ಅನುಸರಿಸಲು ಮತ್ತು ಪ್ರಚಾರ ಮಾಡಲು ಸ್ವಾತಂತ್ರ್ಯವನ್ನು ಒದಗಿಸುತ್ತದೆ. ಕೇರಳ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ಈ ಅಭಿಪ್ರಾಯವನ್ನು ಎತ್ತಿಹಿಡಿದಿವೆ. ‘ಲವ್ ಜಿಹಾದ್’ ಎಂಬ ಪದವನ್ನು ಈಗಿರುವ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ. ‘ಲವ್ ಜಿಹಾದ್’ ಪ್ರಕರಣವನ್ನು ಯಾವುದೇ ಕೇಂದ್ರ ಏಜೆನ್ಸಿಗಳು ವರದಿ ಮಾಡಿಲ್ಲ. ಆದಾಗ್ಯೂ, ಅಂತರ್-ಧರ್ಮೀಯ ವಿವಾಹಗಳ ಎರಡು ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ಮಾಡಿದೆ” ಎಂದು ಹೇಳಿರುವುದನ್ನು ಉಲ್ಲೇಖಿಸಿದೆ.
ಬಿಜೆಪಿ ಸರ್ಕಾರಗಳು ಹೊಸ ಸಮಸ್ಯೆಗಳನ್ನು ಸೃಷ್ಟಿಸುವುದುಬಿಟ್ಟು, ಅಂತರ್-ಜಾತಿಯ ವಿವಾಹಗಳು ನಡೆದರೆ ನಡೆಯುವ ʼಸೊ-ಕಾಲ್ಡ್ ಮರ್ಯಾದ ಹತ್ಯೆʼಗಳನ್ನು ನಿಯಂತ್ರಿಸಲು ಶ್ರಮಿಸಬೇಕು ಎಂದು ನಾವು ಆಗ್ರಹಿಸುತ್ತೇವೆ. ಸರ್ಕಾರಗಳು ಇದನ್ನು ನಿಭಾಯಿಸಲು ಸಂಪೂರ್ಣ ವಿಫಲವಾಗಿದೆ ಎಂದು AILAJ ಹೇಳಿದೆ.
Also Read: ಅಸ್ತಿತ್ವದಲ್ಲೇ ಇಲ್ಲದ ಲವ್ ಜಿಹಾದ್ ವಿರುದ್ದ ಕಾನೂನು ರೂಪಿಸಲು ಮುಂದಾದ ಯೋಗಿ
ಪ್ರಸ್ತಾವಿತ ಕಾನೂನು ಸಮಸ್ಯಾತ್ಮಕವಾಗಿದೆ. ಯಾಕೆಂದರೆ, ಜಾತಿ, ಧರ್ಮದ ರಚನೆಗಳು ಅರೇಂಜ್ಡ್ ಮದುವೆಗಳ ರಚನೆಯಲ್ಲಿ ಇರಿಸಲಾಗಿದೆ. ವಾಸ್ತವವಾಗಿ, ಜಾತಿ-ಧರ್ಮ-ಲಿಂಗ ಮೀರಿ ತಮ್ಮ ಪ್ರೀತಿಸುವ ಹಕ್ಕನ್ನು ಚಲಾಯಿಸುವಾಗ ಸಹಜವಾಗಿ ಸಾಮಾಜಿಕ ಕಟ್ಟುಪಾಡುಗಳನ್ನು ತಮ್ಮ ವೈಯಕ್ತಿಕ ರಿಸ್ಕ್ ನಿಂದ ದಾಟುತ್ತಿದ್ದಾರೆ. ಆದ್ದರಿಂದ, ಪ್ರೀತಿಸುವ ಹಕ್ಕು ಕೇವಲ ವೈಯಕ್ತಿಕ ಸ್ವಾತಂತ್ರ್ಯ ಮಾತ್ರವಲ್ಲದೆ, ಜಿಡ್ಡುಗಟ್ಟಿದ ಸಾಮಾಜಿಕ ರಚನೆಗಳಿಗೆ ಒಡ್ಡುವ ಸವಾಲೂ ಹೌದು ಎಂದಿರುವ AILAJ ಅಂತರ್-ಧರ್ಮೀಯ ವಿವಾಹಗಳನ್ನು ಪ್ರೋತ್ಸಾಹಿಸಿದೆ.
ತಮ್ಮ ಜಾತಿ ಹಾಗೂ ಧರ್ಮದ ಹೊರಗಿನ ಸಂಗಾತಿಯನ್ನು ಆಯ್ಕೆ ಮಾಡುವವರ ಪ್ರಜಾಪ್ರಭುತ್ವ ಹಕ್ಕನ್ನು ರಾಜ್ಯಗಳು ಕಾಪಾಡಬೇಕು ಎಂದು ಆಗ್ರಹಿಸಿರುವ AILAJ, ಅನ್ಯ ಧರ್ಮೀಯ ಪುರುಷನನ್ನು ಮದುವೆಯಾಗುವುದರಿಂದ ತಡೆಯುವ ಪ್ರಯತ್ನಗಳು ಮೂಲತಃ ಮಹಿಳೆಯನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಆಯ್ಕೆಯನ್ನು, ಸ್ವತಂತ್ರ ನಿರ್ಧಾರ ತೆಗೆಯುವ ಹಕ್ಕನ್ನು ನಿರಾಕರಿಸುತ್ತದೆ. ಇದು ಮಹಿಳೆಯನ್ನು ನಿಯಂತ್ರಿಸುವ ʼಪಿತೃ ಪ್ರಧಾನʼ ಮನಸ್ಥಿತಿಯ ಷಡ್ಯಂತ್ರ, ಇದು ಮಹಿಳೆಯ ಸ್ವಾತಂತ್ರ್ಯವನ್ನು ತಡೆಹಿಡಿಯುವ ಇನ್ನೊಂದು ವಿಧಾನ ಎಂದು ಹೇಳಿದೆ.
Also Read: ರಾಜ್ಯಪಾಲರೊಂದಿಗೆ ಲವ್ ಜಿಹಾದ್ ಕುರಿತು ಚರ್ಚಿಸಿ ವಿವಾದ ಸೃಷ್ಟಿಸಿದ ಮಹಿಳಾ ಆಯೋಗದ ಅಧ್ಯಕ್ಷೆ






