ಕೋವಿಡ್-19 ಲಾಕ್ ಡೌನ್ ಮತ್ತು ಕರೋನಾ ವೈರಾಣು ಭೀತಿ ದೇಶದ ಉದ್ಯಮ, ಕೃಷಿ, ಸೇವಾ ವಲಯಗಳಲ್ಲಿ ಸೃಷ್ಟಿಸಿರುವ ಅಲ್ಲೋಲಕಲ್ಲೋಲದ ಅಂದಾಜು ಇನ್ನೂ ಸಿಕ್ಕಿಲ್ಲ. ದಿನಕ್ಕೊಂದು ವಲಯದಿಂದ, ದಿನಕ್ಕೊಂದು ಉದ್ಯಮದಿಂದ ಲಾಕ್ ಡೌನ್, ಲೇಆಫ್ ಸುದ್ದಿಗಳು ಬರುತ್ತಲೇ ಇವೆ. ಕೆಲಸ ಕಳೆದುಕೊಂಡವರು, ಸಂಬಳ ಕಳೆದುಕೊಂಡವರ ನೋವಿನ, ಹತಾಶೆಯ ವರದಿಗಳು ಕೂಡ. ವಿಪರ್ಯಾಸವೆಂದರೆ, ಇಂಥ ಆತಂಕದ ವಿದ್ಯಮಾನಗಳನ್ನು ವರದಿ ಮಾಡುವ ಪತ್ರಕರ್ತರು ಕೂಡ ಈ ಕೋವಿಡ್-19 ದಾಳಿಯಿಂದ ಹೊರತಾಗಿಲ್ಲ!
ನೋಟು ರದ್ದತಿಯಂತಹ ವಿವೇಚನಾಹೀನ ತರಾತುರಿಯ ಕ್ರಮದಿಂದಾಗಿ ದೇಶದ ಉದ್ಯಮದ ದಿಢೀರ್ ಸಂಕಷ್ಟಕ್ಕೆ ಸಿಲುಕಿದ ಬಳಿಕ ಆರಂಭವಾದ ಸರಣಿ ಅನಾಹುತಗಳಿಂದ ಮಾಧ್ಯಮ ಕ್ಷೇತ್ರ ಕೂಡ ಹೊರತಾಗಿರಲಿಲ್ಲ. ಅಲ್ಲಿಂದಲೇ ಆರಂಭವಾದ ಮಾಧ್ಯಮಗಳ ಆರ್ಥಿಕ ಮುಗ್ಗಟ್ಟಿನ ಸರಣಿ, ಬಳಿಕ ಅದೇ ನೋಟು ಬಂಧಿ, ಆ ಬಳಿಕದ ಜಿಎಸ್ ಟಿ ಜಾರಿ ಕ್ರಮಗಳಿಂದ ಮತ್ತೆ ಮುಂದುವರಿಯಿತು. ಇನ್ನಷ್ಟು ತೀವ್ರವಾಯಿತು. ಹೀಗೆ ಸರಣಿ ಆಘಾತಕ್ಕೆ ಸಿಲುಕಿ ನಜ್ಜುಗುಜ್ಜಾಗಿದ್ದ ಮಾಧ್ಯಮದ ಪಾಲಿಗೆ ಕರೋನಾ ವೈರಾಣು ಸೊಂಕು ತಡೆಯ ಲಾಕ್ ಡೌನ್ ಹೇರಿಕೆ ಬಹುತೇಕ ಶವಪೆಟ್ಟಿಗೆಯ ಕೊನೆಯ ಮೊಳೆಯಾಗಿ ಪರಿಣಮಿಸಿತು!
ಈಗ ದೇಶದ ಪ್ರತಿಷ್ಟಿತ ಸುದ್ದಿಮನೆಯಿಂದ ಸಣ್ಣಪುಟ್ಟ ಪತ್ರಿಕೆ, ಸುದ್ದಿ ವಾಹಿನಿಗಳವರೆಗೆ ಮಾಧ್ಯಮದ ಪಡಸಾಲೆಯಿಂದ ದಿನಕ್ಕೊಂದು ಸೂತಕದ ಸುದ್ದಿ ಬರತೊಡಗಿದೆ. ದೇಶದ ಅತ್ಯಂತ ಶ್ರೀಮಂತ ಮಾಧ್ಯಮಸಂಸ್ಥೆ ಬೆನೆಟ್ ಅಂಡ್ ಕೋಲ್ಮನ್ ಸಮೂಹ(ಟೈಮ್ಸ್ ಇಂಡಿಯಾ ಸಮೂಹ)ದಿಂದ ಸ್ಥಳೀಯ ಸುದ್ದಿವಾಹಿನಿಯವರೆಗೆ ಲಾಕ್ ಡೌನಿನ ಈ 90 ದಿನಗಳಲ್ಲಿ ನೂರಾರು ಪತ್ರಕರ್ತರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಸರಣಿಗೆ ಈಗ, ವೃತ್ತಿಪರತೆ ಮತ್ತು ಮಾಧ್ಯಮ ಸ್ವಾತಂತ್ರ್ಯಕ್ಕೆ ಹೆಸರಾಗಿದ್ದ ಮತ್ತು ಉದ್ಯೋಗ ಭದ್ರತೆಗಾಗಿಯೇ ಮಾಧ್ಯಮ ವಲಯದಲ್ಲಿ ಗುರುತಿಸಿಕೊಂಡಿದ್ದ’ ದ ಹಿಂದೂ’ ಮಾಧ್ಯಮ ಸಮೂಹ ಹೊಸ ಸೇರ್ಪಡೆಯಾಗಿದೆ.
ಸುಮಾರು 140 ವರ್ಷಗಳ ಇತಿಹಾಸ ಹೊಂದಿರುವ ದ ಹಿಂದೂ ಸಮೂಹ, ಕೇವಲ ಐದು ವರ್ಷಗಳ ಹಿಂದಷ್ಟೇ ದ ಹಿಂದೂ ಪತ್ರಿಕೆಯ ಮುಂಬೈ ಆವೃತ್ತಿಯನ್ನು ಆರಂಭಿಸಿತ್ತು. ಮುಂಬೈನ ಪ್ರತಿಷ್ಟಿತ ಚರ್ಚ್ ಗೇಟ್ ಪ್ರದೇಶದಲ್ಲಿ ಸ್ವಂತ ಕಟ್ಟಡದಲ್ಲಿ ಆರಂಭವಾಗಿದ್ದ ಬ್ಯೂರೋ ಕಚೇರಿಯಲ್ಲಿ ಸುಮಾರು ಅರ್ಧ ಡಜನ್ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಇದೀಗ ಸೋಮವಾರ(ಜೂನ್ 22) ಪತ್ರಕರ್ತರಿಗೆ ಲಿಖಿತ ನೋಟೀಸ್ ನೀಡಿರುವ ದ ಹಿಂದೂ ಸಮೂಹದ ಆಡಳಿತ ಮಂಡಳಿ, ಮುಂಬೈ ಆವೃತ್ತಿಯನ್ನು ಬಹುತೇಕ ಸ್ಥಗಿತಗೊಳಿಸುತ್ತಿರುವುದಾಗಿ ಹೇಳಿದ್ದು, ಸುಮಾರು 20 ಮಂದಿ ಪತ್ರಕರ್ತರಿಗೆ ‘ಜುಲೈ 1ರಿಂದ ನಿಮ್ಮ ಸೇವೆಯನ್ನು ಪಡೆಯುವ ಸ್ಥಿತಿಯಲ್ಲಿ ನಾವಿಲ್ಲ’ ಎಂದು ಹೇಳಿದೆ. ಆ ಮೂಲಕ ಪರೋಕ್ಷವಾಗಿ ಆ ಎಲ್ಲಾ ಪತ್ರಕರ್ತರನ್ನೂ ಮೂರು ತಿಂಗಳ ವೇತನದೊಂದಿಗೆ ಕೆಲಸದಿಂದ ಕೈಬಿಡಲಾಗುವುದು, ಇಲ್ಲವೇ ಅವರಾಗಿಯೇ ರಾಜೀನಾಮೆ ನೀಡಬಹುದು ಎಂದೂ ಹೇಳಲಾಗಿದೆ.
ಹಾಗೆ ನೋಡಿದರೆ, ದ ಹಿಂದೂ ಕೇವಲ ಮುಂಬೈನಷ್ಟೇ ಅಲ್ಲ; ಕರ್ನಾಟಕ, ತೆಲಂಗಾಣದಲ್ಲೂ ತನ್ನ ಸಿಬ್ಬಂದಿ ಕಡಿತ ಮುಂದುವರಿಸಿದ್ದು, ಕರ್ನಾಟಕ ಮತ್ತು ತೆಲಂಗಾಣದಲ್ಲಿ ತಲಾ ಹತ್ತು ಮಂದಿ ಪತ್ರಕರ್ತರಿಗೆ ಈಗಾಗಲೇ ನೋಟೀಸ್ ನೀಡಿ, ರಾಜೀನಾಮೆ ನೀಡಿ, ಇಲ್ಲವೇ ಜುಲೈ 1ರಿಂದ ಕೆಲಸದಿಂದ ಕೈಬಿಡಲಾಗುವುದು ಎಂದು ಹೇಳಿದೆ ಎನ್ನಲಾಗಿದೆ.
‘ದ ಹಿಂದೂ’ನಂತಹ ಪ್ರತಿಷ್ಠಿತ ಸಮೂಹದಲ್ಲೇ ಪತ್ರಕರ್ತರ ಸ್ಥಿತಿ ಹೀಗಾಗಿದ್ದರೆ, ಇನ್ನು ಉಳಿದ ಮಾಧ್ಯಮಗಳ ಸ್ಥಿತಿಗತಿಯನ್ನು ಯಾರಾದರೂ ಊಹಿಸಬಹುದು. ದೇಶದ ಅತ್ಯಂತ ಶ್ರೀಮಂತ ಮಾಧ್ಯಮ ‘ಟೈಮ್ಸ್ ಆಫ್ ಇಂಡಿಯಾ’ ಸಮೂಹ, ‘ದ ಟೆಲಿಗ್ರಾಫ್’, ‘ದ ಹಿಂದೂಸ್ತಾನ್ ಟೈಮ್ಸ್’, ‘ದ ಇಂಡಿಯನ್ ಎಕ್ಸ್ ಪ್ರೆಸ್’, ‘ಸಕಾಲ್ ಟೈಮ್ಸ್’, ‘ಇಂಡಿಯಾ ಟಿವಿ’, ‘ದ ಕ್ವಿಂಟ್’, ಕನ್ನಡದಲ್ಲಿ ‘ಪ್ರಜಾವಾಣಿ’, ‘ವಿಜಯಕರ್ನಾಟಕ’, ‘ವಿಜಯವಾಣಿ’ ಸೇರಿ ಬಹುತೇಕ ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳು,.. ಹೀಗೆ ಪತ್ರಕರ್ತರನ್ನು ಸಂಕಷ್ಟದ ಹೊತ್ತಲ್ಲಿ ಬೀದಿಗೆ ತಳ್ಳಿದ ಮಾಧ್ಯಮ ಸಂಸ್ಥೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಒಂದು ಅಂದಾಜಿನ ಪ್ರಕಾರ, ಈ ಕನ್ನಡದ ಮುಂಚೂಣಿ ಮೂರು ಮುದ್ರಣ ಮಾಧ್ಯಮಗಳಿಂದ ಸುಮಾರು 200 ಮಂದಿ ಪತ್ರಕರ್ತರು ಲಾಕ್ ಡೌನ್ ಸಂಕಷ್ಟದ ನೆಪದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಈ ಪತ್ರಿಕೆಗಳ ಅರ್ಧದಷ್ಟು ಬ್ಯೂರೋಗಳನ್ನು ಇನ್ನು ಒಂದು ತಿಂಗಳಲ್ಲಿ ಮುಚ್ಚಲಾಗುತ್ತಿದೆ ಎಂದು ಮಾಧ್ಯಮದ ಮೂಲಗಳು ಹೇಳುತ್ತಿವೆ.
ಕೆಲಸದಿಂದ ತೆಗೆದುಹಾಕುವುದು, ಅವರಾಗಿಯೇ ರಾಜೀನಾಮೆ ಕೊಡುವಂತೆ ಒತ್ತಡ ಹೇರುವುದು, ಬ್ಯೂರೋ ಅಥವಾ ಪ್ರಾದೇಶಿಕ ಕಚೇರಿಗಳನ್ನು ಮುಚ್ಚುವುದು, ಕೆಲವು ನಿರ್ದಿಷ್ಟ ಆವೃತ್ತಿಗಳನ್ನು ಮುಚ್ಚುವುದು ಮುಂತಾದ ಕ್ರಮಗಳ ಮೂಲಕ ದೊಡ್ಡದೊಡ್ಡ ಮಾಧ್ಯಮ ಸಂಸ್ಥೆಗಳು ಪತ್ರಕರ್ತರು ಮತ್ತು ಪತ್ರಕರ್ತರಲ್ಲದ ಇತರ ವಿಭಾಗಗಳ ಸಿಬ್ಬಂದಿಯನ್ನು ಕೋವಿಡ್-19 ಲಾಕ್ ಡೌನ್ ಆರ್ಥಿಕ ಸಂಕಷ್ಟದ ನೆಪದಲ್ಲಿ ಸಾಲುಸಾಲಾಗಿ ಮನೆಗೆ ಕಳಿಸುತ್ತಿವೆ. ಜೊತೆಗೆ, ಉಳಿದ ಸಿಬ್ಬಂದಿಗಳಿಗೂ ಭಾರೀ ವೇತನ ಕಡಿತ ಮತ್ತು ಹೆಚ್ಚುವರಿ ಕೆಲಸದ ಹೊರೆ ಹೊರಿಸಲಾಗುತ್ತಿದೆ. ಈ ಹಿಂದೆ ವೇತನ ಆಯೋಗದ ಶಿಫಾರಸು ಪ್ರಕಾರ ಭಾರೀ ವೇತನ ಹೆಚ್ಚಳ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕನ್ನಡದ ಪ್ರಮುಖ ಪತ್ರಿಕೆಯೊಂದರಲ್ಲಿ ಈಗ ದಿಢೀರನೇ ಶೇ.50ರಷ್ಟು ವೇತನ ಕಡಿತ ಮಾಡಲಾಗಿದೆ!
ಹೀಗೆ ಆಘಾತಕಾರಿ ವಿದ್ಯಮಾನಗಳಿಗೆ ಕೊನೆ ಇಲ್ಲ. ಲಾಕ್ ಡೌನ್ ಅವಧಿಯಲ್ಲಿ ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಬಾರದು, ವೇತನ ಕಡಿತ ಮಾಡಬಾರದು ಮತ್ತು ಹೆಚ್ಚುವರಿ ಅವಧಿ ಕೆಲಸ ನೀಡಬಾರದು ಎಂಬೆಲ್ಲಾ ಪ್ರಧಾನಿ ಮೋದಿ ಅವರ ಸರ್ಕಾರದ ಆದೇಶಗಳು, ಸುಪ್ರೀಂಕೋರ್ಟ್ ಸೂಚನೆಗಳನ್ನು ದೇಶದ ಮೂಲೆಮೂಲೆಗೆ ತಲುಪಿಸಿದ ಮಾಧ್ಯಮಗಳ ನಡುಮನೆಯಲ್ಲೇ ಆ ಆದೇಶ-ಸೂಚನೆಗಳಿಗೆ ಕಿಮ್ಮತ್ತಿನ ಬೆಲೆ ಇಲ್ಲದ ವಿಪರ್ಯಾಸಕರ ಸನ್ನಿವೇಶ ಇದು.
ಹಾಗೆ ನೋಡಿದರೆ, ಮಾಧ್ಯಮಗಳ ಈ ಬಗೆಯ ವೆಚ್ಚ ಕಡಿತದ ಕ್ರಮಗಳ ಹಿಂದೆ ನಿಜವಾಗಿಯೂ ಲಾಕ್ ಡೌನ್ ಆರ್ಥಿಕ ಸಂಕಷ್ಟವಿದೆಯೇ? ನಿಜವಾಗಿಯೂ ಮಾಧ್ಯಮಗಳ ಆದಾಯಕ್ಕೆ ಲಾಕ್ ಡೌನ್ ಅಷ್ಟೊಂದು ಭೀಕರ ಪೆಟ್ಟು ನೀಡಿದೆಯೇ? ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿ ನೋಡಿದರೆ; ಈ ಪರಿಸ್ಥಿತಿಗೆ ಭಾಗಶಃ ಮಾತ್ರ ಲಾಕ್ ಡೌನ್ ಪರಿಣಾಮ ಕಾರಣ, ಉಳಿದಂತೆ ವೇತನ ವೆಚ್ಚ ಕಡಿತದ ಮೂಲಕ ಲಾಭಾಂಶ ಹೆಚ್ಚು ಮಾಡಿಕೊಳ್ಳುವ ಹುನ್ನಾರ ಕೂಡ ಈ ನಡೆಯ ಹಿಂದಿದೆ ಎಂಬ ಅಭಿಪ್ರಾಯ ಕೂಡ ಕೇಳಿಬರುತ್ತಿದೆ. ಏಕೆಂದರೆ; ಉದಾಹರಣೆಗೆ, ‘ಟೈಮ್ಸ್ ಆಫ್ ಇಂಡಿಯಾ’ದಂತಹ ಬೃಹತ್ ಮಾಧ್ಯಮ ಸಂಸ್ಥೆ ಕೇವಲ ಒಂದೂವರೆ ತಿಂಗಳ ಲಾಕ್ ಡೌನ್ ನಷ್ಟಕ್ಕೆ ಹತ್ತಾರು ವರ್ಷಗಳ ಕಾಲ ತನಗಾಗಿ ದುಡಿದ ಪತ್ರಕರ್ತರನ್ನು ಏಕಾಏಕಿ ಬೀದಿಗೆ ತಳ್ಳುವ ಮಟ್ಟಕ್ಕೆ ದಿವಾಳಿಯಾಗುವುದು ಹೇಗೆ ಸಾಧ್ಯ? ದಶಕಗಳ ಭಾರತದ ಮಾಧ್ಯಮ ಜಾಹೀರಾತು(ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ) ವಲಯದ ಸ್ಪರ್ಧಾತೀತ ಫಲಾನುಭವಿಯಾದ ಆ ಸಂಸ್ಥೆಯ ಅಷ್ಟು ವರ್ಷಗಳ ಲಾಭಾಂಶವನ್ನು ಕೊಚ್ಚಿಹಾಕುವಷ್ಟು ಲಾಕ್ ಡೌನ್ ನಷ್ಟ ತೀವ್ರವಾಗಿತ್ತು ಎಂಬುದನ್ನು ಹೇಗೆ ನಂಬುವುದು?
ಕನ್ನಡದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳ ಕಥೆ ಕೂಡ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಅರ್ಧಶತಮಾನ, ಕಾಲು ಶತಮಾನ ಕಾಲ ರಾಜ್ಯದ ಜಾಹೀರಾತು ವಲಯದಲ್ಲಿ ಪಾರುಪತ್ಯ ಮೆರೆದ ಪತ್ರಿಕೆಗಳು ಹೀಗೆ ಕೇವಲ 45 ದಿನಗಳಲ್ಲೇ ಬೊಕ್ಕಸ ಬರಿದಾಗಿ ಶೇ.30-40ರಷ್ಟು ಸಿಬ್ಬಂದಿಯನ್ನು ಮನೆಗೆ ಕಳಿಸುವ ಮಟ್ಟಿಗೆ ಕುಸಿದು ಹೋದವು ಎಂದರೆ ನಂಬಲು ಸಾಧ್ಯವೆ?
ಆ ಹಿನ್ನೆಲೆಯಲ್ಲಿ ಈ ವಿದ್ಯಮಾನವನ್ನು ನೋಡುವುದೇ ಆದರೆ; ಮಲಗುವವರಿಗೆ ಹಾಸಿಗೆ ಹಾಸಿಕೊಟ್ಟಂತೆ ಈ ಕೋವಿಡ್- ಲಾಕ್ ಡೌನ್ ಒದಗಿಬಂದಂತಿದೆ. ಮಾಧ್ಯಮವನ್ನು ಲಾಭದ ಉದ್ದಿಮೆಯಾಗಿ ಮಾತ್ರ ನೋಡುವ ಆಡಳಿತ ಮಂಡಳಿಗಳು ಎಲ್ಲ ಕಾಯ್ದೆ, ಕಾನೂನು ಗಾಳಿಗೆ ತೂರಿ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಹಿಂಡುವ ವರಸೆಗೆ ಇಳಿದಿದ್ದು, ಲಾಕ್ ಡೌನ್ ಅದಕ್ಕೊಂದು ನೆಪವಾಗಿ ಒದಗಿ ಬಂದಿದೆ. ಕಡಿಮೆ ಸಿಬ್ಬಂದಿಯಲ್ಲಿಯೇ ಹೆಚ್ಚಿನ ಕೆಲಸ ಮಾಡಿಸುವುದು, ಕಡಿಮೆ ಪುಟಗಳಲ್ಲಿ ಹೆಚ್ಚಿನ ಲಾಭಾಂಶ ಪಡೆಯುವುದು ಸೇರಿದಂತೆ ಹಲವು ಕ್ರಮಗಳಿಗೆ ಸದ್ಯದ ಪರಿಸ್ಥಿತಿ ರಹದಾರಿಯಾಗಿದೆ. ಹಾಗಾಗಿ ಇದು ವಾಸ್ತವವಾಗಿ ವೆಚ್ಚ ಕಡಿತದ ಕ್ರಮಕ್ಕಿಂತ ಲಾಭಾಂಶ ಹೆಚ್ಚಳದ ತಂತ್ರಗಾರಿಕೆ ಎಂಬುದೇ ಸರಿ ಎಂಬ ವಾದವೂ ಇದೆ. ಈ ಮಾತು ಇಡಿಯಾಗಿ ಎಲ್ಲಾ ಮಾಧ್ಯಮಗಳಿಗೂ ಅನ್ವಯವಾಗದೇ ಇದ್ದರೂ ವ್ಯಾಪಾರಿ ಹಿತಾಸಕ್ತಿಯೊಂದನ್ನೇ ಧ್ಯೇಯವಾಗಿ ಹೊಂದಿರುವ ಕೆಲವು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳ ಮಟ್ಟಿಗಂತೂ ನೂರಕ್ಕೆ ನೂರರಷ್ಟು ನಿಜ.
ಆದರೆ, ಇಂತಹ ಹೊತ್ತಲ್ಲಿ ಪತ್ರಕರ್ತರ ಹಿತ ಕಾಯಬೇಕಾದ ಮತ್ತು ಅದೇ ಉದ್ದೇಶಕ್ಕಾಗಿ ಹುಟ್ಟಿಕೊಂಡಿರುವ ಪತ್ರಕರ್ತರ ಸಂಘಟನೆಗಳು ಮತ್ತು ಪ್ರೆಸ್ ಕೌನ್ಸಿಲ್ ನಂತಹ ಸಂಸ್ಥೆಗಳು ಯಾಕೆ ಮುಗುಮ್ಮಾಗಿ ಕೂತಿವೆ? ಎಂಬುದು ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ.